spot_img
spot_img

“ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ದೇಶ ಉಳಿಯಲು ಸಾಧ್ಯ”- ಡಾ.ಹರೀಶ್ ಅರೋರಾ

Must Read

spot_img
- Advertisement -

ಸವದತ್ತಿ: ಒಂದು ರಾಷ್ಟ್ರ ವಿಕಾಸವಾಗಬೇಕಾದರೆ ಅಲ್ಲಿನ ಸ್ಥಳೀಯ ಭಾಷೆಗಳು ಜೀವಂತವಾಗಿರಬೇಕು. ಭಾಷೆ ಜೀವಂತವಾಗಿದ್ದರೆ ಆ ಜನಾಂಗದ ಸಂಸ್ಕೃತಿ ಜೀವಂತವಾಗಿರುತ್ತದೆ. ಆ ಜನಾಂಗದ ಸಂಸ್ಕೃತಿ ಜೀವಂತವಾಗಿದ್ದರೆ ಅಲ್ಲಿನ ಸಾಮಾಜಿಕ ಪರಿಸರ ಉತ್ತಮವಾಗಿರುತ್ತದೆ.

ಅದಕ್ಕಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ಮಾತ್ರ ಪ್ರಾದೇಶಿಕ ಭಾಷೆಗಳು ಉಳಿಯಲು ಸಾಧ್ಯ ಎಂದು ನವದೆಹಲಿಯ ಪಿಜಿಡಿಎವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಹರೀಶ್ ಅರೋರಾ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ಹುಬ್ಬಳ್ಳಿಯ ಬಹು ಭಾಷಾ ಸಂಗಮ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ “ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತ ಅಭಿವೃದ್ಧಿಯ ಚಿಂತನೆಗಳು” ಎಂಬ ಬಹುಶಿಸ್ತೀಯ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದಿನ ಐವತ್ತು ವರ್ಷಗಳಲ್ಲಿ ಭಾರತದ ಒಂದು ಸಾವಿರಕ್ಕಿಂತಲೂ ಹೆಚ್ಚು ಭಾಷೆಗಳು ನಾಶವಾಗಲಿವೆ. ಆ ಭಾಷೆಗಳು ನಾಶವಾದರೆ ಆ ಜನಾಂಗದ ಮಾತು, ಜೀವನ ಶೈಲಿ, ಸಂಪ್ರದಾಯಗಳು, ನಂಬಿಕೆಗಳು, ಆಹಾರ ಪದ್ಧತಿಗಳು ನಾಶವಾಗುವದರ ಮೂಲಕ ಆ ಜನಾಂಗವೇ ನಾಶವಾಗುತ್ತದೆಂದು ಕಳವಳ ವ್ಯಕ್ತಪಡಿಸಿದರು.

- Advertisement -

ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಕಟ್ಟಡ, ಉದ್ಯಾನಗಳು, ಹೊಟೇಲುಗಳನ್ನು ಕಟ್ಟುವುದಲ್ಲ. ಭಾರತವು ಪುರಾತನ ಜ್ಞಾನ ಮತ್ತು ಪರಂಪರೆಗಳಲ್ಲಿ ಶ್ರೀಮಂತವಾಗಿದೆ. ಇದನ್ನು ಉಳಿಸುವದೇ ನಿಜವಾದ ಅಭಿವೃದ್ಧಿಯಾಗಬಲ್ಲದು ಎಂದು ಹೇಳಿದರು.

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಪತ್ರಕರ್ತೆಯಾಗಿರುವ ಡಾ.ಅನಿತಾ ಕಪೂರ್ ಮಾತನಾಡಿ, ಭಾರತ ದೇಶವು ಬ್ರಿಟೀಷರ ಆಳ್ವಿಕೆಯಲ್ಲಿ ಗುಲಾಮತನದ ಕಹಿ ಅನುಭವಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಇತರ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಹು ಶ್ರಮಿಸಿದರು. ಸ್ವಾತಂತ್ರ್ಯ ನಂತರ ಭಾರತ ದೇಶವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಗಾಂಧೀಜಿಯವರ ಹತ್ಯೆ, ದೇಶ ವಿಭಜನೆ, ಭಾಷಾವಾರು ಪ್ರಾಂತ್ಯಗಳ ವಿಭಜನೆ ಮುಂತಾದ ಸಮಸ್ಯೆಗಳ ಜೊತೆಯಲ್ಲಿ ಭಾರತವು ೫೦೦ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತ ಇಂದು ಡಿಜಿಟಲ್ ಭಾರತವಾಗಿ ರೂಪುಗೊಂಡಿದೆ ಎಂದರು.

- Advertisement -

ಈ ಸಂದರ್ಭದಲ್ಲಿ ವಿಚಾರ ಸಂಕಿರಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ೧೩೦ಜನ ಪ್ರಾಧ್ಯಾಪಕರು ಮತ್ತು ಸಂಶೋಧಕರು ಪ್ರಬಂಧ ಮಂಡಿಸಿದರು. ಇದನ್ನು ಸಂಕಲಿಸಿದ್ದ ಅಂತಾರಾಷ್ಟ್ರೀಯ ಸಿಎಸ್‌ಐಆರ್‌ಎಸ್ ಜರ್ನಲ್‌ನ ವಿಶೇಷ ಸಂಚಿಕೆಯ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ಮಾರುತಿ ಎ. ದೊಂಬರ, ವಹಿಸಿದ್ದರು. ಪ್ರೀತಿ ಪಾಟೀಲ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಡಾ.ಎ.ಎಫ್.ಬದಾಮಿ ಸ್ವಾಗತಿಸಿದರು, ಡಾ.ವಿದ್ಯಾವತಿ ರಜಪೂತ ಮತ್ತು ಪ್ರೊ.ವಿ.ಎಸ್.ಮೀಶಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಎನ್.ಆರ್.ಸವತೀಕರ ವಂದಿಸಿದರು, ಪ್ರೊ. ಆಫ್ರಿನ್ ಹಳ್ಳೂರ ನಿರ್ವಹಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯದಿಂದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group