ಸವದತ್ತಿ – 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ವಿನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ farmers crop survey app 2021-22 ನ್ನು ಡೌನ್ಲೋಡ್ ಮಾಡಿಕೊಂಡು ರೈತರು ತಾವೇ ಸ್ವತಃ ಸಂಬಂಧಿಕರು ರೈತರ ಪರವಾಗಿ ಅವರ ಮೊಬೈಲ್ ನಂಬರನ್ನು ದಾಖಲಿಸಿ ಒಟಿಪಿ ಪಡೆದುಕೊಳ್ಳಬೇಕು.
ನಂತರ ಬೆಳೆ ಸಮೀಕ್ಷೆ ಮಾಡಬೇಕಾದ ಗ್ರಾಮದ ಸರ್ವೇ ನಂಬರ ದಾಖಲಿಸಿ ಸರ್ವೆ ನಂಬರ ನಕ್ಷೆಯನ್ನು ಡೌನಲೋಡ್ ಮಾಡಿಕೊಂಡು ಹಿಸ್ಸಾವಾರು ಜಮೀನಿನಲ್ಲಿ ಬೆಳೆದಂತಹ ಬೆಳೆಗಳ ಛಾಯಾಚಿತ್ರವನ್ನು ಸೆರೆಹಿಡಿದು ಅಪಲೋಡ್ ಮಾಡಬೇಕು. ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರಿಗೆ ಅನಾನುಕೂಲವಾದರೆ ಸ್ಥಳೀಯವಾಗಿ ನೇಮಿಸಿರುವ ಖಾಸಗಿ ನಿವಾಸಿಗಳ ಮಾರ್ಗದರ್ಶನ ಪಡೆದು ದಿನಾಂಕ: 15/07/2021ರ ಒಳಗಾಗಿ ಬೆಳೆ ಸಮಿಕ್ಷೆ ಕೈಗೊಳ್ಳಬಹುದಾಗಿದೆ.
ಸದರಿ ಬೆಳೆ ಸಮೀಕ್ಷೆಯಿಂದ ಕನಿಷ್ಠ ಬೆಂಬಲ ಬೆಲೆ, ಬೆಳೆ ಪರಿಹಾರ, ಬೆಳೆವಿಮೆ, ಬೆಳೆಸಾಲ ಹಾಗೂ ಕೃಷಿ, ತೋಟಗಾರಿಕೆ ಇಲಾಖೆಯ ಯೋಜನೆಗಳ ಸವಲತ್ತುಗಳನ್ನು ಪಡೆಯಲು ರೈತರಿಗೆ ಅನುಕೂಲವಾಗಲಿದೆ. ರೈತರು ದಾಖಲಿಸಿದ ಮಾಹಿತಿಯನ್ನು ಕೃಷಿ, ಕಂದಾಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ನಿಯೋಜನೆಗೊಂಡ ಅಧಿಕಾರಿಗಳು ಪರಿಶೀಲಿಸಿ ಸರಿಯಾದ ಮಾಹಿತಿಯನ್ನು ಧೃಢೀಕರಿಸಿ ಸರ್ಕಾರಕ್ಕೆ ಸಲ್ಲಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಸವದತ್ತಿ ಸಹಾಯಕ ಕೃಷಿ ನಿರ್ದೇಶಕರಾದ ಕೆ ಎನ್ ಮಹಾರಡ್ಡಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ