ಸಿಂದಗಿ: ಪಟ್ಟಣದ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವದಕ್ಕಾಗಿ ನಿಗದಿ ಪಡಿಸಿದ ಜಾಗೆಯನ್ನು ಸುಧಾರಣೆ ಮಾಡಿ ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಸಂಘ ಅಧ್ಯಕ್ಷ ಅಬುಬಕರ ಡೋಣಿ ಮಾತನಾಡಿ, ಕಳೆದ 2 ವರ್ಷಗಳಿಂದ ರಾಜ್ಯವ್ಯಾಪಿ ಕೋವಿಡ್ ಸೋಂಕು ಆವರಿಸಿ ಬೀದಿ ವ್ಯಾಪಾರಿಗಳ ಸ್ಥಿತಿ ಗಂಭೀರವಾಗಿತ್ತು ಸರಕಾರ ಜನದಟ್ಟಣೆ ಮಾಡದೇ ಆಯಾ ಬಡಾವಣೆಗಳಿಗೆ ಅನುಕೂಲವಾಗುವಂತೆ ಬೀದಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿತ್ತು.
ಅದರನ್ವಯ ಮೋರಟಗಿ ನಾಕಾ, ಟಿಪ್ಪು ಸುಲ್ತಾನ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ ಹಾಗೂ ಸೊಂಫುರ ರಸ್ತೆ, ಬಸವೇಶ್ವರ ವೃತ್ತ ಸೇರಿದಂತೆ ಕೆಲ ವಿಂಗಡಣೆ ಮಾಡಿ ವ್ಯಾಪಾರ ಮಾಡಿಕೊಳ್ಳಿ ಇನ್ನುಳಿದ ಬೀದಿ ವ್ಯಾಪಾರಸ್ಥರು ಆಯಾ ಬಡಾವಣೆಗಳಲ್ಲಿ ಒತ್ತುವ ಗಾಡಿಯ ಮೂಲಕ ಮನೆ ಮನೆ ತೆರಳಿ ಹಣ್ಣು, ತರಕಾರಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ತುಂಬಾ ಅನುಕೂಲವಾಗಿದೆ.
ಇದೀಗ ಬಂದ ಮುಖ್ಯಾಧಿಕಾರಿಗಳು ಬೀದಿ ವ್ಯಾಪಾರಿಗಳ ಸ್ಥಿತಿಗತಿಗಳನ್ನು ಅರಿತುಕೊಳ್ಳದೆ ದಿಢೀರನೇ ಸ್ವಾಮಿ ವಿವೇಕಾನಂದ ವೃತ್ತದ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳನ್ನು ಇಲ್ಲಿ ವ್ಯಾಪಾರ ಮಾಡುವುದು ಕಂಡರೆ ಪುರಸಭೆ ಟ್ಯಾಕ್ಟರ ಮೂಲಕ ತಮ್ಮಲ್ಲಿರುವ ತರಕಾರಿಯನ್ನು ಒಯ್ಯಲಾಗುವುದು ಎಂದು ಎಚ್ಚರಿಸಿದ್ದಾರೆ ಇದು ತುಘಲಕ್ ದರ್ಬಾರವೇ. ನಾವು ಬೀದಿ ವ್ಯಾಪಾರಿಗಳಿದ್ದರು ಕೂಡಾ ಪುರಸಭೆಗೆ ಟ್ಯಾಕ್ಸ ಕಟ್ಟುತ್ತೇವೆ ನಮಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡುವುದು ಅವರ ಆದ್ಯ ಕರ್ತವ್ಯ ಅದನ್ನು ಮರೆತಂತೆ ಕಾಣುತ್ತಿದೆ ಇನ್ನಾದರು ಬೀದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಅನುವು ಮಾಡಿಕೊಡಬೇಕು ವಿನಾಕಾರಣ ತೊಂದರೆ ಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸಂಘಟಿತ ಕಾರ್ಮಿಕರ ತಾಲೂಕು ಬ್ಲಾಕ್ ಅಧ್ಯಕ್ಷ ಬಂದೇನವಾಜ ಶಹಾಪುರ ಮಾತನಾಡಿ, ಪುರಸಭೆಗೆ ಟ್ಯಾಕ್ಸ ರೂಪದಲ್ಲಿ ಹಣ ಸಂದಾಯ ಮಾಡುತ್ತಿದ್ದರು ಕೂಡಾ ಅವರನ್ನು ಎತ್ತಂಗಡಿ ಮಾಡುತ್ತಿರುವುದು ಯಾವ ನ್ಯಾಯ ಹಾಗಿದ್ದರೆ ಬೀದಿ ವ್ಯಾಪಾರಿಗಳಿಗೆ ಸರಕಾರ ನಿಗದಿ ಪಡಿಸಿದ 15 ಗುಂಟೆ ಜಾಗೆಯನ್ನು ಸುಧಾರಣೆ ಮಾಡಿಕೊಟ್ಟರೆ ಈ ದುಃಸ್ಥಿತಿ ಎದುರಾಗುತ್ತಿರಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರದ ನಿಯಮಾನುಸಾರ ಪುರಸಭೆ ಮುಖ್ಯಾಧಿಕಾರಿ ಕಾನೂನು ಪಾಲನೆ ಮಾಡಬೇಕು ವಿನಾಕಾರಣ ಯಾರ ಮಾತಿಗೆ ಕಟ್ಟು ಬೀಳದೇ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ಮಾತನಾಡಿ, ಬೀದಿ ವ್ಯಾಪಾರ ಮಾಡಲು ನಮ್ಮ ಅಭ್ಯಂತರವಿಲ್ಲ ಆದರೆ ವ್ಯಾಪಾರ ಮಾಡಿ ಉಳಿದ ಹಣ್ಣು ತರಕಾರಿ ಅಲ್ಲಿಯೇ ಬಿಸಾಕದೇ ಸ್ವಚ್ಚತೆಯನ್ನು ಕಾಪಾಡಿ ಎನ್ನುವುದು ನಮ್ಮ ವಾದ ಅವರನ್ನು ಎತ್ತಂಗಡಿ ಮಾಡುವ ಉದ್ದೇಶವಿಲ್ಲ. ಅವರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಬ್ದುಲವಾಹಿದ ಬಾಗವಾನ, ಉಶಾ ಸಂಜು ಗುಡಿಮಠ, ಗಂಗಾಧರ ರಾಚಯ್ಯ ಪಟೇದ, ಸರಸ್ವತಿ ಶರಣಪ್ಪ ಬೇಡರ, ಶಫಿಯಾ ಬಾಗವಾನ, ಸಂತೋಷಕುಮಾರ ಪೂಜಾರಿ, ಸೂರ್ಯಬಾನು ಗೊಳಸಾರ, ಗಾಲಿಬ ಬಾಗವಾನ, ಮೈಬೂಬ ಬಾಗವಾನ ಸೇರಿದಂತೆ ಅನೇಕರಿದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ