ಧಾರವಾಡ : ಸಹಕಾರ ತತ್ವವೆಂದರೆ ಅದು ಬದುಕಿನ ನಿರ್ವಹಣೆಯ ಕೊರತೆಗಳಿಗೆ ಆಸರೆ ಒದಗಿಸುವುದೇ ಆಗಿದೆ. ಪಡೆದ ಸಾಲವು ನಿಖರ ನೆಲೆಯಲ್ಲಿ ಸದುಪಯೋಗವಾದಾಗ ಎಲ್ಲರೂ ಸಹಕಾರ ಸಂಘಗಳಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಸವ ಬೆಳಕು ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಹಕಾರಿ ತತ್ವವು ಪರಸ್ಪರ ನಂಬಿಕೆ, ಬದ್ಧತೆ, ವಿಶ್ವಾಸ, ಪಾರದರ್ಶಕತೆಯನ್ನು ಪ್ರಮುಖವಾಗಿ ಪ್ರತಿಪಾದಿಸುತ್ತದೆ. ಸಹಕಾರಿ ಸಂಘದಿಂದ ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಸಹಕಾರಿ ಸಂಘಗಳು ಬಲವರ್ಧನೆಗೊಂಡು ಅವು ಹೆಚ್ಚೆಚ್ಚು ಆರ್ಥಿಕ ಸಹಾಯ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದೂ ಯರಗಂಬಳಿಮಠ ಹೇಳಿದರು.
ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಜಾನಕೂನವರ ಮಾತನಾಡಿ, ಭಾರತದ ಪ್ರಪ್ರಥಮ ರೈತರ ಸಹಕಾರಿ ಸಂಘ ಹುಟ್ಟಿಕೊಂಡದ್ದು ಗದಗ ಜಿಲ್ಲೆ ಕಣಗಿನಹಾಳ ಗ್ರಾಮದಲ್ಲಿ ಎನ್ನುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷೆ ಪೂಜಾ ಗೋಪ ಅಧ್ಯಕ್ಷತೆ ವಹಿಸಿದ್ದರು. ಅಮ್ಮಿನಬಾವಿ ಗ್ರಾ.ಪಂ. ಅಧ್ಯಕ್ಷೆ ನೀಲವ್ವ ತಿದಿ, ಸಹಕಾರಿ ಸಂಘದ ಉಪಾಧ್ಯಕ್ಷ ಕಿರಣ ಜಾಧವ, ಗ್ರಾಮದ ಗಣ್ಯರುಗಳಾದ ಭೀಮಣ್ಣ ಸೂರ್ಯವಂಶಿ, ಶಿವಪ್ಪ ಹಂಚಿನಾಳ, ಚೆನ್ನಬಸಪ್ಪ ಪೂಜಾರ, ಮುದಕಪ್ಪ ಚವ್ಹಾಣ, ಮಹಾಂತೇಶ ಹುಲ್ಲೂರ, ರಾಮಣ್ಣ ಹುಲ್ಲೂರ, ಗುರುನಾಥ ಗುಡದೂರ, ಮಹೇಶ ಕೋಳಿವಾಡ, ರಾಮಚಂದ್ರ ದೇಶಪಾಂಡೆ, ರೇಣುಕಾ ಪೇತೂನವರ, ಸವಿತಾ ಅಂಗಡಿ, ಮಡಿವಾಳೆಪ್ಪ ಜಾಧವ ಇದ್ದರು.

