ನಮಸ್ಕಾರ ಎಲ್ಲರಿಗೂ….
ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ
ಸರ್ವ ಕಾರ್ಯೇಷು ಸರ್ವದಾ ||
ಬೆಂಗಳೂರಿನ ನನ್ನ ಹಿತೈಷಿಯೊಬ್ಬರ ಸಲಹೆಯಂತೆ ಶ್ರೀ ಗಣಪತಿಯ ಶ್ಲೋಕದೊಂದಿಗೆ ಈ ಚಿಕ್ಕ ಬರಹ ಆರಂಭಿಸುತ್ತಿದ್ದೇನೆ.
ಆರೋಗ್ಯವೆಂಬುದು ಕೈಕೊಟ್ಟರೆ ಏನಿದ್ದರೂ ಏನೂ ಇಲ್ಲದಂತೆ. ಯಾಕೆಂದರೆ ಎಲ್ಲಕ್ಕಿಂತ ಶ್ರೇಷ್ಠ ಸಂಪತ್ತೆಂದರೆ ಆರೋಗ್ಯ ಸಂಪತ್ತು. ಮನುಷ್ಯ ಕೋಟಿ ಕೋಟಿ ಗಳಿಕೆ ಮಾಡಿ ಇಟ್ಟುಕೊಳ್ಳಬಹುದು ಆದರೆ ಅದನ್ನು ಉಣ್ಣುವ ವೇಳೆಗೇ ಆರೋಗ್ಯ ಕೈಕೊಟ್ಟರೆ ಅಷ್ಟು ಗಳಿಸಿದ್ದೆಲ್ಲ ವ್ಯರ್ಥ ವ್ಯರ್ಥ.
ಆರೋಗ್ಯ ಯಾವುದೇ ರೂಪದಲ್ಲಾದರೂ ಹದಗೆಡಬಹುದು. ಸುಮ್ಮನೆ ಇದ್ದವರಿಗೆ ಸಣ್ಣಗೆ ನೆಗಡಿ ಆರಂಭವಾಗಿ ತಲೆಗೆ ವ್ಯಾಪಿಸಿಕೊಂಡು ಮನಸನ್ನೆ ಹೈರಾಣ ಮಾಡಿಬಿಡಬಹುದು. ಯಾವುದಾದರೂ ಅಪಘಾತವಾಗಬಹುದು ಅಥವಾ ಸುಮ್ಮನೆ ಕುಳಿತಾಗಲೇ ಬೆನ್ನು ನೋವು ಎಂದು ಆರಂಭವಾಗಿ ಅದು ಕುತ್ತಿಗೆಯ ನರಗಳಿಗೆ ಹಬ್ಬಿಕೊಂಡು ಸರ್ವಿಕಲ್ ಸ್ಪೈನ್ ಎಂಬ ನರಕಯಾತನೆಗೆ ಮುನ್ನುಡಿ ಹಾಕಬಹದು. ಯಾವುದೇ ಆದರೂ ಆಸ್ಪತ್ರೆಗೆ ಸೇರಿದ ಮನುಷ್ಯನಿಗೆ ಮಾತ್ರ ಜೀವನ ನರಕ ಎನ್ನಿಸಿಬಿಡುವುದರಲ್ಲಿ ಸಂದೇಹವಿಲ್ಲ.
ಆಸ್ಪತ್ರೆಗೆ ಸೇರಿದಾಗಲೇ ಮಾನವನ ಅಹಂ, ಮೆರವಣಿಗೆಗಳೆಲ್ಲ ಮಣ್ಣುಗೂಡಿ ಆಸ್ಪತ್ರೆಯಲ್ಲಿರುವ ವೈದ್ಯರುಗಳು, ಕಿರಿಯ ವೈದ್ಯರುಗಳು ಅಷ್ಟೇ ಯಾಕೆ ಅತಿ ಚಿಕ್ಕ ವಯಸ್ಸಿನ ಸಿಸ್ಟರ್ ಗೆ ಕೂಡ ನಾವು ಚಿಕ್ಕ ಮಗುವಿನಂತೆ ಆಗಿಬಿಡುತ್ತೇವೆ. ಅಲ್ಲಿ ಇದ್ದಾಗ ನಮ್ಮೆಲ್ಲ ಗತ್ತು ಅಹಂಕಾರಗಳು ಮಣ್ಣುಗೂಡಿ ನಾವು ನಾವೆಂಬ ಸತ್ಯ ಕಾಣುವುದು ಮಾತ್ರ ನಿಜ.
ಇಷ್ಟೇ ಸಾಕು. ಕೆಲವು ದಿನಗಳ ಆಸ್ಪತ್ರೆಯ ದರ್ಶನಕ್ಕೇ ಬ್ರಹ್ಮಾಂಡ ದರ್ಶನ ಕೈಗೊಂಡ ನಾನು ಅದರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಕೆಲವು ದಿನ ನಮ್ಮ Times of ಕರ್ನಾಟಕ ಸ್ಥಗಿತಗೊಂಡಿತ್ತು. ಹಲವಾರು ಮಿತ್ರರ ಆಶಯಗಳೊಂದಿಗೆ ಮತ್ತೆ ಆರಂಭವಾಗಿದೆ. ತಮ್ಮ ಸಲಹೆ ಸಹಕಾರಗಳು ಎಂದೆಂದಿಗೂ ಇರಬೇಕೆಂದು ಬಯಸುತ್ತೇವೆ.
ಸಂಪಾದಕರು