Homeಲೇಖನದುರಾಚಾರಿಗಳ ಮುಖವ ನೋಡಲಾಗದು.

ದುರಾಚಾರಿಗಳ ಮುಖವ ನೋಡಲಾಗದು.

“ನಾನು ಭಕ್ತ ನಾನು ಪ್ರಸಾದಿ” ಎಂದು,

ವಿಪ್ರ ಕರ್ಮವ ಮಾಡುವೆ ಕರ್ಮಿ:

ಲಿಂಗದೇವನ ಮುಟ್ಟಿ ಮಜ್ಜನಕ್ಕೆರಗುವ ಕೈಯಲು.

ವಿಪ್ರನ ಕಾಲು ತೊಳೆವೊಡೆ
ಲಿಂಗೋದಕ ಹೃದಯದಲ್ಲಿ.
ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ !
ಶ್ರುತ್ಯತ್ಕಟದುರಾಚಾರಿ ಯಜ್ಞ ಕೂಪಸ ಘಾತಕ: !
ಉದ್ರೇಕೆಣ ಕೃತೇ ಶಾಂತೇ ವಿಪ್ರ ರೂಪೆಣ ರಾಕ್ಷಸ ;!!
ಇದು ಕಾರಣ ಕೂಡಲ ಸಂಗಮದೇವ .
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.
ಬಸವಣ್ಣನವರು. ವಚನ ಸಂಪುಟ 1 -ಪುಟ -149 ವಚನ ಸಂಖ್ಯೆ -593

ಶರಣ ಸಂಸ್ಕೃತಿ ಲಿಂಗಾಯತ ಧರ್ಮದಲ್ಲಿ ಒಮ್ಮೆ ಭಕ್ತ ಪ್ರಸಾದಿಯಾದವನು ವಿಪ್ರರ ಬ್ರಾಹ್ಮಣರ ಕಾರ್ಯಕ್ಕೆ ತೊಡಗುವವ ,ಲಿಂಗದೇವನ ಪೂಜಿಸಿ ಮಜ್ಜನಕ್ಕೆರೆದ ಕೈಯಿಂದಾ ವಿಪ್ರರ ಕಾಲು ತೊಳೆವುದು ಇಂತಹ ನ್ಯಾಯ ? ಇದು ಘೋರ ಅಪಚಾರವೆಂದು ಬಸವಣ್ಣನವರು ಹೇಳಿದ್ದಾರೆ.

ಲಿಂಗೋದಕ ಹೃದಯದಲ್ಲಿದ್ದರೂ ವಿಪ್ರರ ಕಾಲು ತೊಳೆದು, ತೊಳೆದ ನೀರನ್ನು ಪವಿತ್ರವೆಂದು ವ್ಯಕ್ತಿ ಭಕ್ತ ತನ್ನ ತಲೆಯ ಮೇಲೆ ಹಾಕಿ ಕೊಳ್ಳುವುದು ಎಷ್ಟೊಂದು ವಿಪರ್ಯಾಸದ ಸಂಗತಿ. ಇಂತಹ ಶ್ರುತ್ಯತ್ಕಟ ದುರಾಚಾರಿ ಮಾಡುವ ಯಜ್ಞ ಕೂಪಸವು ಘಾತುಕತನದ್ದು.

ಉದ್ರೇಕದಲ್ಲಿ ಶಾಂತ ಮೂರ್ತಿಯಾಗಿ ಕಾಣುವ ವಿಪ್ರ ರೂಪದ ರಾಕ್ಷನಂತೆ.ಕಾರಣ ಒಳಗೊಂದು ಹೊರಗೊಂದು ಭಾವ ಇರುವ ದುರಾಚಾರಿಗಳನ್ನು ನೋಡಲಾಗದು. ಲಿಂಗವಿದ್ದಲ್ಲಿ ವಿಪ್ರರ ಕಾಲು ತೊಳೆಯೋದು ದುರಾಚಾರ. ಲಿಂಗೋದಕ ಹೃದಯದಲ್ಲಿದೆ. ಇಂತಹ ಬಾಹ್ಯ ಮಡಿವಂತಿಕೆ ತತ್ವ ಬಾಹಿರ.

ಒಂದು ಸ್ಪಷ್ಟವಾದ ವಿಷಯ ಇಲ್ಲಿ ತಿಳಿಯುವದೇನೆಂದರೆ ಪಾದೋದಕ ಪಾದ ಪೂಜೆ ವಿಪ್ರರ ಸನಾತನಿಗಳ ಶೈವಿಗಳ ಕೃತ್ಯ .ಇಂತಹ ಮೂಢ ಸಂಪ್ರದಾಯವನ್ನು ಬಸವಣ್ಣನವರು ಅಂದೆ ಖಂಡಿಸಿ ಪ್ರತಿಭಟಿಸಿದ್ದಾರೆ. ಗುರುವಿನ ಕಾಲು ತೊಳೆಯುವುದು ವಿಪ್ರರ ಜಂಗಮರ ಕಾಲು ತೊಳೆದ ನೀರನ್ನು ಪವಿತ್ರವೆಂದು ಭಾವಿಸುವುದು ಲಿಂಗ ತತ್ವಕ್ಕೆ ಅಪಚಾರವಾಗಿದೆ.

ಇಂತಹ ಆಚರಣೆಗಳು ಶ್ರುತದಿಂದ ಉತ್ಕಟವಾಗಿ ಬಂದಿವೆ ,ಇಂತಹ ಅರ್ಥವಿಲ್ಲದ ಆಚರಣೆ ಯಜ್ಞಗಳು ಘಾತಕತನದ್ದು ಎಂದು ಎಚ್ಚರಿಸಿದ್ದಾರೆ. ವಿಷಯಾದಿಗಳಿಂದ ಒಳಗೆ ಉದ್ರೇಕಗೊಂಡಿದ್ದರೂ ಹೊರಗೆ ಶಾಂತವಾಗಿ ಕಾಣುವ ವಿಪ್ರ ರೂಪದ ರಾಕ್ಷಸನು. ಇಂತಹ ವಿಪ್ರರ ಕರ್ಮಕ್ಕೆ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಳ್ಳುವ ದುರಾಚಾರಿಗಳು ಜಂಗಮ ಸಮಾಜಕ್ಕೆ ಹೊರತಾಗುತ್ತಾರೆ.

ಶರಣರ ಪಾದೋದಕವು ಅಂತರಂಗಕ್ಕೆ ಸಂಬಂಧ ಪಟ್ಟದ್ದು.. ಬಸವಣ್ಣನವರ ಕಾಲದಲ್ಲೂ ಭಕ್ತನಂತೆ ನಟಿಸಿ ಮತ್ತೆ ವಿಪ್ರರ ಕಾಲಿಗೆ ಎರಗುವ ಜನರಿದ್ದರು. ಇಂತಹ ಆಷಾಢ ಭೂತಿಗಳನ್ನು ನೇರವಾಗಿ ಬಸವಣ್ಣನವರು ತರಾಟೆಗೆ ತೆಗೆದುಕೊಂಡಿದ್ದಾರೆ..ಇಲ್ಲಿ ಲಿಂಗ ನಿಷ್ಠತೆಗೆ ಆದ್ಯತೆ ನೀಡಬೇಕೆ ಹೊರತು ಅಸಮಾನತೆ ಶ್ರೇಣೀಕೃತ ವ್ಯವಸ್ಥೆಗೆ ಮತ್ತೆ ತಲೆ ಬಾಗುವವರನ್ನು ಶರಣರು ಧಿಕ್ಕರಿಸಿದ್ದಾರೆ.
—————————————-
ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ ಪೂನಾ

RELATED ARTICLES

Most Popular

error: Content is protected !!
Join WhatsApp Group