ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ: ಸಾಹಿತಿ ಇಂಗಳಗಿ ದಾವಲಮಲೀಕ

Must Read

ಕಾಮನ ಹಳ್ಳಿ – ೭೫ನೇ ಸ್ವಾತಂತ್ರ್ಯ ದಿನದ ಸಮಯದಲ್ಲಿ ನಾವು ಭಾರತೀಯ ಪ್ರಜೆಗಳು ಮುಖ್ಯವಾಗಿ ತಿಳಿಯಬೇಕಾದದ್ದು,ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಾಗಿ ಬದುಕುವುದಲ್ಲ.ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಇದೊಂದು ಪ್ರಶ್ನೆ ಏಳುತ್ತದೆ. ಹೌದು ಸ್ವಾತಂತ್ರ್ಯ ಸಿಕ್ಕಿದ್ದೆ ಆದರೆ ಯಾವುದಕ್ಕೆ ಸಿಕ್ಕಿದ್ದು? ಯಾರಿಗೆ ಸಿಕ್ಕಿದ್ದು?ಯಾವಾಗ ಸಿಕ್ಕಿದ್ದು? ಎಲ್ಲಿ ಸಿಕ್ಕಿದ್ದು? ಹೇಗೆ ಸಿಕ್ಕಿದ್ದು? ಕೊಟ್ಟವರು ಯಾರು?ಪಡೆದುಕೊಂಡವರು ಯಾರು?ಸ್ವಾತಂತ್ರ್ಯ ಕೊಡುವಾಗ ಮತ್ತು ಪಡೆದುಕೊಳ್ಳುವಾಗ ಯಾರಿದ್ದರು? ಸ್ವಾತಂತ್ರ್ಯ ಎಂಬುದು ನೋಡಲು ಹೇಗಿದೆ? ಇವೆಲ್ಲವುಗಳಿಗೆ ಉತ್ತರ ಸಿಕ್ಕಾಗ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದೆ ಎಂದರ್ಥ ಎಂದು ಸಾಹಿತಿ ಶಿಕ್ಷಕ ಇಂಗಳಗಿ ದಾವಲಮಲೀಕ ಹೇಳಿದರು.

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕಾಮನ ಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ಜಗತ್ತು ಕಣ್ಣು ಬಿಡುವ ಮೊದಲು ಹೆಣ್ಣನ್ನು ದೇವರೆಂದು ಪೂಜಿಸಿದ ನಾಡು ನಮ್ಮದು. ಇಂದು ಕೇವಲ ಭೋಗದ ವಸ್ತುವನ್ನಾಗಿ ಬಳಸಿಕೊಳ್ಳಲು ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ನಾವು ನಮ್ಮ ಸಂಸ್ಕ್ರತಿಯ ಭವ್ಯ ಪರಂಪರೆಯನ್ನು ಹಾಳು ಮಾಡಿ ಹೊರಟಿರುವ ನಮಗೆ ಸ್ವಾತಂತ್ರ್ಯ ಬೇಕಾ?ಬದುಕನ್ನು ಸ್ವೇಚ್ಛೆಯಾಗಿ ಹರಿದಾಡಲು ಬಿಟ್ಟು ಕಾನೂನಿನ ಕಟ್ಟಳೆಗಳನ್ನು ವಿಧಿಸಿದ್ದೇವೆ.ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಿಕ್ಕಿದೆಯಾ? ಸಾವಿರಾರು ಜನರ ಪಾಲಿನ ಒಬ್ಬ ಕ್ರೂರಿ ನಿರಪರಾಧಿಯಾಗಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಡುತ್ತದೆ ಇದೇ ಅಲ್ಲವೇ ಸ್ವಾತಂತ್ರ್ಯ? ದೇಶದಲ್ಲಿ ದೇಶದ್ರೋಹಿ ಕಾರ್ಯಗಳನ್ನು ಮಾಡಲು ಅವಕಾಶ ನೀಡುವ ನಮಗೆ ಅಲ್ಲವೇ ಸ್ವಾತಂತ್ರ್ಯ ಸಿಕ್ಕಿದ್ದು ? ಹಣವೆಂಬ ಹೊಳೆ ಯಾರ ಮನೆಯಲ್ಲಿ ಹರಿಯುತ್ತದೆಯೋ ಅವರಿಗೆ ಸಿಕ್ಕಿದ್ದು ಸ್ವಾತಂತ್ರ್ಯ. ಒಂದು ಹೊತ್ತಿನ ಊಟಕ್ಕೆ ಗತಿಯಿರದ ಎಷ್ಟೋ ಬೀದಿ ಬೀದಿಗಳಲ್ಲಿ ಮೆರವಣಿಗೆ ಹೊರಟಿರುವ ಹೊಟ್ಟೆಗಳಲ್ಲಿ ಸ್ವಾತಂತ್ರ್ಯ ಇದೆಯಾ ಎಂದು ಪ್ರಶ್ನಿಸಿದರು.

ರಾಷ್ಟ್ರ ಧ್ವಜಾರೋಹಣವನ್ನು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಆನವಟ್ಟಿ ಅವರು ನೆರವೇರಿಸಿದರು.

ಸಭೆಯಲ್ಲಿ ಊರಿನ ಹಿರಿಯರು ಶಿಕ್ಷಣ ಪ್ರೇಮಿಗಳಾದ ಚಿಕ್ಕಪ್ಪ ಹೊಸಮನಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಾಲೆಯ ಅಭಿವೃದ್ಧಿ ಯೋಜನೆ ಕುರಿತು ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯರುಗಳಾದ ಚಂದ್ರಪ್ಪ ಆನವಟ್ಟಿ ಹಾಗೂ ಶ್ರೀಮತಿ ಅಂಬವ್ವ ಲಮಾಣಿ ಹಾಜರಿದ್ದರು. ಊರಿನ ಯುವ ಮುಖಂಡರಾದ ಮಾಲತೇಶ ಆನವಟ್ಟಿ, ನಾರಾಯಣ ಕಿಳ್ಳಿಕ್ಯಾತರ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶ್ರೀದೇವಿ ಕೊಪ್ಪರಸಿಕೊಪ್ಪ,ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಮ್ಮ ದೇಸಾಯಿ,ಶಾಲಾ ಬಿಸಿಯೂಟ ಸಿಬ್ಬಂದಿಗಳಾದ ಶ್ರೀಮತಿ ಮಂಜುಳಾ ದೇಸಾಯಿ, ಶ್ರೀಮತಿ ಮಲ್ಲಮ್ಮ ಕಿಳ್ಳಿಕ್ಯಾತರ ಹಾಗೂ ಶ್ರೀಮತಿ ಶಾಂತವ್ವ ಕಿಳ್ಳಿಕ್ಯಾತರ ಹಾಜರಿದ್ದರು.

ಶಾಲೆಯ ಆಡಳಿತಾತ್ಮಕ ವಿಷಯಗಳ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರಾದ ಎಸ್ ಎನ್ ಸೂಡಂಬಿ ಮಾಹಿತಿ ಒದಗಿಸಿದರು. ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಆರ್ ಪಿ ಕುಂಬಾರ ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಕೊನೆಯಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಡಿ ಹೆಚ್ ಮಾದರ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group