130 ಕೋವಿಡ್ ಶವಗಳಿಗೆ ಅಂತ್ಯಸಂಸ್ಕಾರ; ಮಾನವೀಯತೆ ಮೆರೆದ ಸಮಾಜ ಸೇವಕರಿಗೆ ಸತ್ಕಾರ

Must Read

ಮೂಡಲಗಿ: ‘ಕೊರೋನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಸಾವನಪ್ಪಿದ್ದ ನೂರಾರು ಶವಗಳನ್ನು ತಮ್ಮ ಜೀವದ ಹಂಗು ತೊರೆದು ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದು ಮಾದರಿಯಾಗಿರುವ ಸಮಾಜ ಸೇವಕರನ್ನು ಗೌರವಿಸುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ತಾಲ್ಲೂಕು ಪ್ರೆಸ್ ಅಸೋಸಿಯೇಶನ್ ಕಾರ್ಯಾಲಯದಲ್ಲಿ ಯುವ ಜೀವನ ಸೇವಾಸಂಸ್ಥೆ ಹಾಗೂ ಪ್ರೆಸ್‍ಕ್ಲಬ್ ವತಿಯಿಂದ ಹಮ್ಮಿಕೊಂಡ ಸಮಾಜ ಸೇವಕರಿಗೆ ಸತ್ಕಾರ ಹಾಗೂ ಪ್ರಶಂಸೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸತ್ಕಾರ ನೆರವೇರಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಆಯಾ ಧರ್ಮದ ವಿಧಿವಿಧಾನದಂತೆ ಶವ ಸಂಸ್ಕಾರ ಮಾಡಿದ ಅಂಜುಮನ್ ಹಾಗೂ ಖಿದ್ಮತ್ ವೆಲ್‍ಫೇರ ಕಮಿಟಿ ಸದಸ್ಯರ ಕಾರ್ಯ ಅನುಪಮವಾಗಿದೆ ಎಂದರು.

ಕೋವಿಡ್‍ದಿಂದ ಸಾವನಪ್ಪಿದ್ದ 130 ಜನರ ಶವಗಳಿಗೆ ಅಂತ್ಯಸಂಸ್ಕಾರ ಮಾಡಿರುವುದು ದಾಖಲೆಯಾಗಿದೆ. ಬಡ ವಿದ್ಯಾರ್ಥಿಗಳಿಗೆ, ಕಡು ಬಡವರಿಗೆ ಸಹಾಯ ಮತ್ತು ಬಡ ಕುಟುಂಬಕ್ಕೆ ಮದುವೆಗೆ ಸಹಾಯ ಮಾಡುವ ಮೂಲಕ ಖಿದ್ಮತ್ ಸಮಿತಿಯ ಯುವಕರ ನಿಸ್ವಾರ್ಥ ಸೇವೆಯು ನಿಜವಾದ ಸಮಾಜ ಸೇವೆಯಾಗಿದೆ. ಸಂಘ, ಸಂಸ್ಥೆ ಮತ್ತು ಸರ್ಕಾರದಿಂದ ಸಮಿತಿಯವರಿಗೆ ಪ್ರೋತ್ಸಾಹ ದೊರೆಯಬೇಕು ಎಂದರು.

ಪ್ರೆಸ್‍ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ಮಾತನಾಡಿ, ಕೊರೋನಾದಿಂದ ಮೃತಪಟ್ಟವರ ಮನೆಯಲ್ಲಿ ಯಾರೂ ಹತ್ತಿರಕ್ಕೂ ಹೋಗದ ಸಮಯದಲ್ಲಿ ಯಾವುದನ್ನೂ ಲೆಕ್ಕಿಸದೇ ‘ನಾವಿದ್ದೇವೆ ಹೆದರದಿರಿ’ ಎಂದು ಅನೇಕ ಶವಗಳಿಗೆ ಮುಕ್ತಿ ದೊರಕಿಸಿದ ಮಾನವೀಯತೆ,ನೊಂದವರ ಕಣ್ಣೀರೊರಸುವ ಕಾರ್ಯ ಮಹಾ ಕಾರ್ಯವಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ, ಸಮಾಜ ಸೇವಕ ಈರಪ್ಪ ಢವಳೇಶ್ವರ ಹಾಗೂ ಶವ ಸಂಸ್ಕಾರ ತಂಡದ ಪ್ರಮುಖ ಶಕೀಲ ಬೇಪಾರಿ ಮತ್ತು ತಂಡದ ಸದಸ್ಯರಿಗೆ ಪ್ರಶಂಸನಾ ಪತ್ರ ನೀಡಿ ಸತ್ಕರಿಸಲಾಯಿತು.

ಪ್ರೆಸ್‍ಕ್ಲಬ್‍ನ ಸಂಸ್ಥಾಪಕ ಅಧ್ಯಕ್ಷ ವಿ ಎಚ್ ಬಾಲರಡ್ಡಿ, ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ,ಅಕಬರ ಪೀರಜಾದೆ, ಸುಧಾಕರ ಉಂದ್ರಿ, ಶಿವಾನಂದ ಮರಾಠೆ, ಮಹಾದೇವ ನಡುವಿನಕೇರಿ, ಶಿವಾನಂದ ಹಿರೇಮಠ ಯುವ ಜೀವನ ಸಂಸ್ಥೆಯ ಸದಸ್ಯರು ಮತ್ತು ಅಂಜುಮನ ಹಾಗೂ ಖಿದ್ಮತ್ ವೆಲ್ಫೇರ ಕಮಿಟಿ ಸದಸ್ಯರು ಇದ್ದರು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group