ಮೂಡಲಗಿ – ಮೂಡಲಗಿಯಲ್ಲಿ ಸಮರ್ಪಕ ರಸ್ತೆಯಿಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಎಲ್ಲಿ ನೋಡಿದಲ್ಲಿ ಹಂದಿಗಳ ಕಾರುಬಾರು ಅಲ್ಲದೆ ಇಲ್ಲಿನ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಪಂಚಮಸಾಲಿ ಸಮಾಜದ ಮುಖಂಡ ಹೊಳೆಪ್ಪ ಶಿವಾಪೂರ ಆರೋಪ ಮಾಡಿದ್ದಾರೆ.
ನಗರದ ಮಧ್ಯದಲ್ಲಿ ಇರುವ ಹಳ್ಳದ ಸೇತುವೆ ಹದಗೆಟ್ಟಿದೆ. ಇದನ್ನು ಪುರಸಭೆಯವರು ದುರಸ್ತಿ ಮಾಡುತ್ತಿಲ್ಲ. ಶಾಸಕರೂ ಇತ್ತ ಗಮನಹರಿಸುತ್ತಿಲ್ಲ. ಮುಖ್ಯ ಗೋಕಾಕ ರಸ್ತೆ ಸೇರಿದಂತೆ ನಗರದಲ್ಲಿನ ರಸ್ತೆಗಳು ತಗ್ಗು ದಿನ್ನೆಗಳಿಂದ ರಾರಾಜಿಸುತ್ತಿವೆ. ನಗರದಲ್ಲಿ ಅಪಘಾತಗಳು ಆಗುತ್ತಿವೆ. ಒಳಚರಂಡಿಗಳು ಗಬ್ಬು ನಾರುತ್ತಿವೆ ಈ ಬಗ್ಗೆ ಪುರಸಭೆಯವರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮೂಡಲಗಿಯು ತಾಲೂಕಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳು ಜನತೆಗೆ ಸರಿಯಾಗಿ ಸಿಗುತ್ತಿಲ್ಲ. ತಾಲೂಕಿನ ಕಚೇರಿಗಳಲ್ಲಿ, ಪಂಚಾಯಿತಿ ಗಳಲ್ಲಿ ಕೂಡ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ಶಾಸಕರು ತೀವ್ರ ಗಮನಹರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೊಳೆಪ್ಪ ಶಿವಾಪೂರ ಆಗ್ರಹಿಸಿದ್ದಾರೆ.