ಅವರವರ ಅರಿವಿಗೆ ತಕ್ಕಂತೆ ಗಾಂಧಿ ದಕ್ಕುತ್ತಾರೆ. ಗಾಂಧೀಜಿಯವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದಷ್ಟೂ ಓದಿ. ಯಾವುದೇ ಕಾರಣಕ್ಕೂ ಅಪಾರ್ಥ ಮಾಡಿಕೊಳ್ಳಬೇಡಿ – ಎಂದು ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಗಾಂಧೀ ಭಾರತ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜಗತ್ತೇ ಶಾಂತಿ ಸ್ಥಾಪನೆಯ ಕಾರ್ಯದಲ್ಲಿ ಗಾಂಧೀ ತತ್ವಗಳ ಔಚಿತ್ಯವನ್ನು ಒಪ್ಪುತ್ತಿರುವ ಈ ದಿನಗಳಲ್ಲಿ ನಮ್ಮ ದೇಶದ ಯುವಜನರನ್ನು ಗಾಂಧೀ ವಿಚಾರ ಗಳಿಂದ ವಿಮುಖಗೊಳಿಸುವ ಪ್ರಯತ್ನಗಳ ಬಗ್ಗೆ ಎಚ್ಚರಿರುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ವಿಶ್ವ ವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ದಾಕ್ಷಾಯಿಣಿ ಮಹಿಳೆಯರ ಶೋಷಣೆ ಹಾಗೂ ಸಬಲೀಕರಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪರೀಕ್ಷಾಂಗ ವಿಭಾಗದ ಕುಲ ಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಗಾಂಧೀಜಿ ಯವರು ನಮ್ಮ ಪರಂಪರಾನುಗತ ಸಾಮಾಜಿಕ ಮೌಲ್ಯಗಳನ್ನು ತಮ್ಮ ನಡೆ ನುಡಿಗಳ ಮೂಲಕ ಕಾರ್ಯಾನ್ವಿತ ಗೊಳಿಸಿ ತಮ್ಮ ಸರಳತೆಯಿಂದಲೇ ಶ್ರೇಷ್ಠತೆ ಪಡೆದರು ಎಂದು ಅಭಿಪ್ರಾಯಪಟ್ಟರು.
ಪ್ರೊ. ಟಿ. ಎನ್. ಹರಿಪ್ರಸಾದ್ ಅಧ್ಯಕ್ಷರು,ಗಾಂಧೀ ಭಾರತ ಕಾರ್ಯಕ್ರಮ ಸಮಿತಿ, ಕಾರ್ಯಕ್ರಮದ ಮಹತ್ವವನ್ನು ಕುರಿತು ಮಾತನಾಡಿದರು.