ಅಭಿವೃದ್ಧಿ ಗೆಲ್ಲುತ್ತೋ ಅಥವಾ ವೈಯಕ್ತಿಕ ವರ್ಚಸ್ಸು ಗೆಲ್ಲುತ್ತೋ…
ಸಿಂದಗಿ: ರಾಜ್ಯದ ಕೊನೆಯ ಕ್ಷೇತ್ರವಾಗಿದ್ದ ಈ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಹಬ್ಬಿಸಿ ಕಾಶಿಯಾಗಿ ಹೆಸರುವಾಸಿ ಕ್ಷೇತ್ರವಾಗಿದ್ದು ಕಳೆದ ಉಪಚುನಾವಣೆಯಲ್ಲಿ ಇಡೀ ಸರಕಾರವೇ ಈ ಕ್ಷೇತ್ರದಲ್ಲಿ ಬೀಡು ಬಿಟ್ಟು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು ಆದರೆ ಈ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಚುನಾವಣಾ ಕಣದಲ್ಲಿ 9 ಜನ ಕಣದಲ್ಲಿದ್ದರೂ ಕೂಡ ಬಿಜೆಪಿ-ಕಾಂಗ್ರೆಸ್ ನೇರ ಸ್ಪರ್ಧೆ ಏರ್ಪಟ್ಟಿರುವುದು ಕಂಡು ಬಂದರು ಕೂಡಾ ಮತದಾರರು ಯಾರ ಕೊರಳಿಗೆ ಮಾಲೆ ಹಾಕುತ್ತಾರೆ ಎಂಬುದು ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥೀಗಳಲ್ಲಿ ಯಾರನ್ನು ಗೆಲ್ಲಿಸುತ್ತಾರೆ ಎಂಬುದು ರಹಸ್ಯವಾಗಿದೆ
ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಭೂಸನೂರ ಮತ್ತು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಗಾಣಿಗ ಸಮುದಾಯದ ಇಬ್ಬರು ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು ಆದರೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪಂಚಮಸಾಲಿ ಸಮುದಾಯದವರು. ಆದರೆ ಇಲ್ಲಿ ಗಾಣಿಗ ಸಮುದಾಯದ ಮತಗಳು ಇಬ್ಬಾಗವಾಗುವ ಸಾಧ್ಯತೆ ಹೆಚ್ಚಿವೆ. ಅಶೋಕ ಮನಗೂಳಿ ಅವರಿಗೆ ಅವರ ತಂದೆ ಶಾಸಕ ದಿ. ಎಂ.ಸಿ.ಮನಗೂಳಿ ಅವರ ಅಭಿವೃದ್ಧಿ ಕಾರ್ಯಗಳು, ಉಪ ಚುನಾವಣೆಯಲ್ಲಿ ಸೋಲಿನ ಅನುಕಂಪ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ ಎಂಬುದು ಕಾಂಗ್ರೆಸ್ ಅಭ್ಯರ್ಥಿಗೆ ಆತ್ಮವಿಶ್ವಾಸ ಹುಟ್ಟಿಸಿದೆ.
ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 4ನೇ ಬಾರಿ ಆದೃಷ್ಟ ಪರೀಕ್ಷೆಗಿಳಿದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ಆಸೆಯಲ್ಲಿದ್ದಾರೆ.
ರಣಾಂಗಣ ಬಯಸಿದ್ದ ದಿ. ಶಿವಾನಂದ ಪಾಟೀಲರು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷದ ಸಂಘಟನೆ ಮಾಡಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ಯೋಜನೆ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಯಶಸ್ವಿಯಾಗಿಸಿದ್ದರು. ಆ ಕಾರಣಕ್ಕೆ ಶಿವಾನಂದ ಪಾಟೀಲ ಸೋಮಜಾಳರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದರು. ಆದರೆ ಹೃದಯಾಘಾತದಿಂದ ಮೃತಪಟ್ಟರು. ನಂತರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಪತ್ನಿ ವಿಶಾಲಾಕ್ಷಿ ಪಾಟೀಲ ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಅವರಿಗೆ ರಾಜಕೀಯ ಅನುಭವ ಕಡಿಮೆ. ಪತಿ ದಿ. ಶಿವಾನಂದ ಪಾಟೀಲ ಸೋಮಜಾಳ ಅವರ ಶಾಸಕರಾಗುವ ಕನಸು ನನಸು ಮಾಡಲು ಚುನಾವಣೆ ಕಣದಲ್ಲಿ ಧುಮುಕ್ಕಿದ್ದಾರೆ ಒಟ್ಟಾರೆ ಇಲ್ಲಿ ಅಭ್ಯರ್ಥಿಗಳ ಗೆಲುವಿಗೆ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತವೋ ಅಥವಾ ಅಭ್ಯರ್ಥಿಗಳ ವರ್ಚಸ್ಸು ಗೆಲ್ಲುತ್ತೋ ಎಂಬುದು ಮೇ. 10 ರಂದು ಮತದಾರರು ನಿಜ ಮಾಡಿ ತೋರಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.
ಸಿಂದಗಿ ಕ್ಷೇತ್ರದಲ್ಲಿ ಒಟ್ಟು ಮತದಾರರು: 231766
- ಪುರುಷರು: 119950
- ಮಹಿಳೆಯರು: 111789
- ಇತರೆ: 27.
2021ರ ಉಪಚುನಾವಣೆಯಲ್ಲಿ ರಮೇಶ ಭೂಸನೂರ. (ಬಿಜೆಪಿ) 93865, ಅಶೋಕ ಮನಗೂಳಿ (ಕಾಂಗ್ರೆಸ್) 62680, ನಾಝಿಯಾ ಅಂಗಡಿ (ಜೆಡಿಎಸ್) 4353 ಮತಗಳನ್ನು ಪಡೆದುಕೊಂಡಿದ್ದರು.
ಉಪಚುನಾವಣೆ ನಂತರ ಸಿಕ್ಕ 15 ತಿಂಗಳ ಅಲ್ಪಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸರಕಾರದಿಂದ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಬಯಸುವ ಜನರು ನನ್ನನ್ನೂ ಎಂದಿಗೂ ಕೈ ಬಿಡಲ್ಲ. ಎನ್ನುವ ಆತ್ಮವಿಶ್ವಾಸ ನನ್ನಲಿದೆ.
–ರಮೇಶ ಭೂಸನೂರ ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್ ಸಿದ್ಧಾಂತ, ನನ್ನ ತಂದೆ ಸಚಿವರಾಗಿದ್ದ ಎಂ.ಸಿ. ಮನಗೂಳಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ. ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು, ಪ್ರಾದೇಶಿಕ ಸಾರಿಗೆ ಕಛೇರಿ ಸ್ಥಾಪಿಸುವುದು ಸೇರಿದಂತೆ ಬಂಟನೂರ, ಗುತ್ತರಗಿ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡುವುದು ಪ್ರಮುಖ ವಿಷಯವಾಗಿದೆ.
–ಅಶೋಕ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್-ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಪ್ರಾದೇಶಿಕ ಪಕ್ಷದ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ. ಮಹಿಳೆಯರಿಗೆ ಉದ್ಯೋಗ ಸೃಷ್ಟಿ, ಗ್ರಾಮೀಣ ಭಾಗದಲ್ಲಿ ಜನತೆಗೆ ಅನುಕೂಲವಾಗುವಂತೆ ಆಸ್ಪತ್ರೆ ಪ್ರಾರಂಭಿಸುವುದು, ರೈತರ ಆರ್ಥಿಕತೆ ಹೆಚ್ಚಿಸುವುದು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನನ್ನ ಉದ್ದೇಶವಾಗಿದೆ.
ವಿಶಾಲಾಕ್ಷಿ ಪಾಟೀಲ ಜೆಡಿಎಸ್ ಅಭ್ಯರ್ಥಿ.