ಹುನಗುಂದ: ಪ್ರಾಚೀನ ಭವ್ಯ ಪರಂಪರೆ ಮತ್ತು ಇತಿಹಾಸವುಳ್ಳ ಕನ್ನಡ ಭಾಷೆಯ ಅಸ್ಮಿತೆಗೆ ಕುಂದು ಉಂಟಾಗದಿರಲಿ ಎಂದು ಹಿರಿಯ ಲೇಖಕ ಹಾಗೂ ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಈಚೆಗಂತೂ ಪರ ಭಾಷೆ ಮೋಹ ಹೆಚ್ಚುತ್ತಿದೆ. ಹೀಗೆ ಆದರೆ ನಾಡುನುಡಿ ಪರಂಪರೆಗೆ ಧಕ್ಕೆ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿ ಭಾಷೆ ಉಳಿಸಿ ಬೆಳೆಸಲು ಸಂಘಟಿತ ಪ್ರಯತ್ನ ಅಗತ್ಯ ಎಂದರು.
ಕನ್ನಡ ಉಪನ್ಯಾಸಕ ವೀರಭದ್ರಯ್ಯ ಶಶಿಮಠ ಕನ್ನಡ ಭಾಷೆಯ ಹಿರಿಮೆ ಕುರಿತು ಮಾತನಾಡಿದರು. ಪ್ರಾಚಾರ್ಯ ಶರಣಪ್ಪ ಹೂಲಗೇರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಸಿ.ಎಂ.ಪುರಂದರೆ ಕನ್ನಡದ ಗೀತೆ ಹಾಡಿದರು.
ಡಾ.ಎನ್.ವೈ.ನದಾಫ ಸ್ವಾಗತಿಸಿದರು. ಎಚ್.ಟಿ.ಅಗಸಿಮುಂದಿನ ವಂದಿಸಿದರು. ಆರಂಭದಲ್ಲಿ ನಾಡಗೀತೆ ಗಾಯನ ಮತ್ತು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

