ನಿಮ್ಮ ಮನೆಯ ಮಗನೆಂದು ಮತ ಹಾಕಿ; ಮತದಾರರಿಗೆ ಮನವಿ
ಮೂಡಲಗಿ: ಬಾಲಚಂದ್ರ ಜಾರಕಿಹೊಳಿಯವರೇ ಎಂದಾದರೂ ನೀವು ಕುರುಬರು,ಲಿಂಗಾಯತರು, ಅಂಬಿಗರು, ಪಂಚಮಸಾಲಿಗಳು, ಉಪ್ಪಾರರು ಇವರೆಲ್ಲರ ಅಭಿವೃದ್ಧಿ ಗಾಗಿ ವಿಧಾನಸಭೆಯಲ್ಲಿ ದನಿಯೆತ್ತಿದ್ದೀರಾ ? ಮುಸಲ್ಮಾನರ ಮೀಸಲಾತಿ ರದ್ದು ಮಾಡುವಾಗ ನೀವು ದನಿಯೆತ್ತಿದ್ದೀರಾ? ದನಿಯೆತ್ತಿದ್ದರೆ ಸಾಕ್ಷಿ ತೋರಿಸಿದರೆ ನಾನು ಚುನಾವಣಾ ಕಣದಿಂದ ನಿವೃತ್ತನಾಗುತ್ತೇನೆ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಸವಾಲು ಹಾಕಿದರು.
ಸಮೀಪದ ಕಲ್ಲೋಳಿ ಗ್ರಾಮದ ಶ್ರೀ ಬಸವೇಶ್ವರ ಮಂಟಪದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗಡಾದ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಆರಂಭಿಸಿ, ಗಡಾದ ಅವರು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಗೆ ಬಂದವರು. ಯಾರೋ ರಸ್ತೆಯಲ್ಲಿ ಹೋಗುವವರಿಗೆ ಟಿಕೆಟ್ ಕೊಡಲು ಇದೇನು ಬಸ್ ಟಿಕೆಟ್ಟಾ ಎಂದು ಪ್ರಶ್ನೆ ಮಾಡಿದರು.
ಕಳೆದ ಹಲವಾರು ವರ್ಷಗಳಿಂದ ನಾನು ಅಧಿಕಾರದಲ್ಲಿ ಇರದಿದ್ದರೂ ಕಲ್ಮಡ್ಡಿ ಏತ ನೀರಾವರಿ, ಅಲ್ಲದೆ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಬಾಲಚಂದ್ರ ಜಾರಕಿಹೊಳಿ ಇಪ್ಪತ್ತು ವರ್ಷಗಳಿಂದ ಶಾಸಕರಾದರೂ ದಂಡಿನ ಮಾರ್ಗದಲ್ಲಿ ನೀರಿನ ವ್ಯವಸ್ಥೆ ಆಗಿಲ್ಲ. ಒಂದು ಶಾಶ್ವತ ಪುನರ್ವಸತಿ ಕಲ್ಪಿಸಲು ಆಗಿಲ್ಲ. ಮತ್ತೆ ಯಾವುದೇ ಅಭಿವೃದ್ಧಿ ಆಗಿಲ್ಲ. ಇದನ್ನೆಲ್ಲ ಮುಚ್ಚಿಹಾಕಲು ಬಾಲಚಂದ್ರ ಜಾರಕಿಹೊಳಿ ಜಾತಿಗಳ ಸಭೆಗಳನ್ನು ಮಾಡುತ್ತಿದ್ದಾರೆ ಅವರ ಈ ನಾಟಕಕ್ಕೆ ಮೇ ೧೦ ರಂದು ಕೊನೆಯ ತೆರೆ ಎಳೆಯಬೇಕು ಎಂದರು.
ಕ್ಷೇತ್ರದಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದ ಅವರು, ಜಾರಕಿಹೊಳಿಯವರೇ, ಮೊನ್ನೆ ವಡೇರಹಟ್ಟಿ ಗ್ರಾಮದಲ್ಲಿ ನೀವು ಸಾಕಿದ ಕೆಲವು ನಾಯಿಗಳು ಹಾಲುಮತದ ಸಮಾಜದ ಮುಖಂಡರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ನಾವು ರಾಯಣ್ಣನ ವಂಶಸ್ತರು ನಿಮ್ಮ ನಾಯಿಗಳನ್ನು ನಿಮ್ಮ ಮನೆಯಲ್ಲಿ ಕಟ್ಟಿಕೊಳ್ಳಿ ಇಲ್ಲದಿದ್ದರೆ ಹುಚ್ಚುನಾಯಿಗೆ ಕಲ್ಲು ಹೊಡೆದಂತೆ ಹೊಡೆದೋಡಿಸಬೇಕಾಗುತ್ತದೆ. ನನಗೆ ವಯಸ್ಸಾಗಿದ್ದರೂ ಕೆಚ್ಚು ಕಡಿಮೆಯಾಗಿಲ್ಲ. ಹುಲಿ ಮುಪ್ಪಾದರೂ ಹುಲಿಯೇ ಎಂದು ಗರ್ಜನೆ ಮಾಡಿದರು.
ಸ್ವಾಭಿಮಾನದಿಂದ ಬದುಕಬೇಕು ಎಂದು ಕಾಂಗ್ರೆಸ್ ಸೇರಿದ್ದೇನೆ. ಕೊರೋನಾ ಕಾಲದಲ್ಲಿ ಬಾಲಚಂದ್ರ ಜಾರಕಿಹೊಳಿಯವರಿಂದ ಗಡಾದ ಅವರು ಕಿಟ್ ಪಡೆದುಕೊಂಡಿದ್ದಾರೆ ಆದರೆ ನಾನೇ ಕಿಟ್ ಕೊಟ್ಟಿದ್ದೇನೆ ಹೊರತು ಪಡೆದುಕೊಂಡಿಲ್ಲ. ಹೀಗಾಗಿ ನಾನು ಬಿಜೆಪಿಗೆ ನೆರವಾಗಲು ನಿಂತಿದ್ದೇನೆ ಎಂಬ ಅಪಪ್ರಚಾರ ನಿಲ್ಲಿಸಬೇಕು ಎಂದ ದಳವಾಯಿಯವರು, ಶಾಸಕನಾಗಿ ಆಯ್ಕೆಯಾದರೆ ಎಲ್ಲಾ ಸಮಾಜಗಳ ಮೀಸಲಾತಿಗಾಗಿ ಹೋರಾಟ ಮಾಡುತ್ತೇನೆ.
ಎಲ್ಲ ಸಮಾಜದವರ ಸೇವೆ ಮಾಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಬಸವಣ್ಣ, ಕನಕದಾಸರ ಸಂಸ್ಕೃತಿ ಮಿಂಚಬೇಕು. ನಾನೂ ಒಬ್ಬ ಮನೆಯ ಮಗ ಎಂದು ತಿಳಿದು ಮತದಾರರು ನನಗೆ ಆಶೀರ್ವಾದ ಮಾಡಬೇಕು ಎಂದರು.
ಬಿಹಾರದ ಕಿಶನ್ ಗಂಜ್ ಸಂಸದ ಡಾ.ಮಹ್ಮದ ಜಾವೇದ ಮಾತನಾಡಿ, ನಿಮ್ಮ ಅಭ್ಯರ್ಥಿಗಾಗಿ ಕೆಲಸ ಮಾಡಲು ರಾಹುಲ್ ಗಾಂಧಿ ಹಾಗೂ ಖರ್ಗೆಯವರು ನನ್ನನ್ನು ಕರೆಸಿದ್ದಾರೆ. ಇಪ್ಪತ್ತು ವರ್ಷಗಳಲ್ಲಿ ಎಲ್ಲಾ ಕಡೆ ಅಭಿವೃದ್ಧಿ ಆಗಿದೆ ಆದರೆ ನಿಮ್ಮಲ್ಲಿ ಆಗಿಲ್ಲ. ಮೋದಿಯವರು ಹಾಗೂ ಅವರ ಮಂತ್ರಿಗಳು ಕೇಂದ್ರದಲ್ಲಿ ಕೆಲಸ ಮಾಡಬೇಕಿತ್ತು ಆದರೆ ಪ್ರಚಾರ ಮಾಡುತ್ತಿದ್ದಾರೆ ಎಂದರು.
ರಾಜದೀಪ ಕೌಜಲಗಿ, ಸುರೇಖಾ ಅರವಿಂದ ದಳವಾಯಿ, ವಿಜಯಪುರದ ಅಪ್ಪಾಸಾಬ ಯರನಾಳ, ಸಮಾಜವಾದಿ ನಾಯಕಿ ಅಂಬಿಕಾ ಬೆಂಗಳೂರ ಮಾತನಾಡಿದರು.
ವೇದಿಕೆಯ ಮೇಲೆ ವೆಂಕನಗೌಡಾ ಪಾಟೀಲ, ಸುಭಾಸ ಪೂಜೇರಿ, ರಮೇಶ ಬೆಳಕೂಡ, ಎಸ್ ಆರ್ ಸೋನವಾಲಕರ, ಈರಪ್ಪ ಬೆಳಕೂಡ, ಮಹೇಶ ಕೌಜಲಗಿ, ಗುರುನಾಥ ಉಪ್ಪಾರ, ವಿ ಪಿ ನಾಯಕ, ಅಶೋಕ ಜಂಜಿ, ಯಲ್ಲಪ್ಪ ಕಪ್ಪಲಗುದ್ದಿ, ಕೆ ಟಿ ಗಾಣಿಗೇರ, ಇಮಾಮ ಹುಲ್ಲೂರ, ಮಲೀಕ ಲಾಡಖಾನ, ನೂರಹ್ಮದ ಪೀರಜಾದೆ, ಇರ್ಷಾದ ಪೈಲವಾನ,ಅಶೋಕ ಹಂಜಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ: ಉಮೇಶ ಬೆಳಕೂಡ, ಮೂಡಲಗಿ