ಗೋಕಾಕ- ಭೌಗೋಳಿಕವಾಗಿ ದೊಡ್ಡದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ತಾಲ್ಲೂಕು ಕೇಂದ್ರಗಳನ್ನು ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಸುಮಾರು 40 ವರ್ಷಗಳಿಂದ ಗೋಕಾಕ ಜಿಲ್ಲಾ ರಚನೆಗಾಗಿ ನಮ್ಮವರು ಅನೇಕ ಹೋರಾಟಗಳನ್ನು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಜಿಲ್ಲಾ ರಚನೆಗಾಗಿ ನೇಮಿಸಿದ್ದ ನಾಲ್ಕೂ ಆಯೋಗಗಳು ಸಹ ಆಡಳಿತದ ಹಿತದೃಷ್ಟಿಯಿಂದ
ಬೆಳಗಾವಿಯನ್ನು ವಿಭಜಿಸಿ ಹೊಸ ಜಿಲ್ಲೆಗಳನ್ನು ರಚನೆ ಮಾಡುವಂತೆಯೂ ಅಂದಿನ ಸರ್ಕಾರಗಳಿಗೆ ಶಿಫಾರಸ್ಸು ಮಾಡಿದ್ದವು. ಗೋಕಾಕ ಜಿಲ್ಲಾ ರಚನೆಗಾಗಿ ಹಲವು ಬಾರಿ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಅನೇಕ ಹೋರಾಟಗಳನ್ನು ಸಹ ಮಾಡುತ್ತಿದ್ದೇವೆ.ಅವಿಭಜಿತ ಗೋಕಾಕ ತಾಲೂಕಿನ ಮಠಾಧೀಶರು, ವಕೀಲರು, ವರ್ತಕರು, ವಿವಿಧ ಸಂಘಟನೆಗಳ ಪ್ರಮುಖರು, ರಾಜಕೀಯ ಮುಖಂಡರು ಸೇರಿಕೊಂಡು ನಿಯೋಜಿತ ಗೋಕಾಕ ಜಿಲ್ಲಾ ಚಾಲನಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಹೋರಾಟವನ್ನು ಪಕ್ಷಾತೀತವಾಗಿ ಮಾಡುತ್ತ ಬರುತ್ತಿದ್ದೇವೆ. ಜನರಿಗೆ ಉತ್ತಮ ಆಡಳಿತವನ್ನು ನೀಡಲು ಬೆಳಗಾವಿಯನ್ನು ವಿಂಗಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ಬರುವ ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವು ನಡೆಯಲಿರುವದರಿಂದ ಕುಂದಾ ನಗರಿಗೆ ಇಡೀ ಸರ್ಕಾರವೇ ಆಗಮಿಸಲಿದ್ದು, ಆ ಸಂದರ್ಭದಲ್ಲಿ ಗೋಕಾಕ ಮತ್ತು ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಮುಖ್ಯಮಂತ್ರಿಗಳು ಘೋಷಿಸಬೇಕ ಎಂದು ಅವರು ಒತ್ತಾಯಿಸಿದ್ದಾರೆ.
ಗೋಕಾಕ ಜಿಲ್ಲಾ ಕೇಂದ್ರವನ್ನು ರಚಿಸುವಂತೆ ಗೋಕಾಕ ವಕೀಲರ ಸಂಘದ ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ಜತೆಗೂ ವಿವಿಧ ಮಠಾಧೀಶರು ಭೇಟಿಯಾಗಿ ಚರ್ಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ನಾವು ಕೂಡ ಮನವಿಯನ್ನು ಮಾಡಿಕೊಂಡಿದ್ದೇವೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿಯನ್ನು ನೂತನ ಜಿಲ್ಲಾ ಕೇಂದ್ರಗಳನ್ನಾಗಿ ರಚಿಸಿ ಗೋಕಾಕ ಜನತೆಗೆ ಸಿಹಿ ಸುದ್ದಿಯನ್ನು ನೀಡುವಂತೆ ಬಾಲಚಂದ್ರ ಜಾರಕಿಹೊಳಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ.
*ಫೋಟೋ-*
ಬಾಲಚಂದ್ರ ಜಾರಕಿಹೊಳಿಯವರು
ಶಾಸಕರು ಮತ್ತು ಬೆಮುಲ್ ಅಧ್ಯಕ್ಷರು

