ಮೂಡಲಗಿ: ನಮ್ಮ ದೇಶದ ಅಸ್ತಿತ್ವ ಉಳಿಯಲು ನಮ್ಮ ಧಾರ್ಮಿಕ ಪರಂಪರೆ, ಸಂಪ್ರದಾಯಗಳ ಆಚರಣೆ ಅತ್ಯವಶ್ಯಕವಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.
ರವಿವಾರ ಅ.30 ರಂದು ಅರಭಾವಿ ಮತಕ್ಷೇತ್ರದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಮಾತಾ ಭದ್ರಕಾಳಿದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಜಾತ್ರಾ ಮಹೋತ್ಸವಗಳು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿವೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಾಮರಸ್ಯದ ಪರಂಪರೆಯನ್ನು ಇಂತಹ ಗ್ರಾಮೀಣ ಭಾಗದ ಜಾತ್ರೆಗಳು ಬೆಳೆಸುತ್ತಿವೆ ಎಂದರು.
ಜನರು ಇಂತಹ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನೋಲ್ಲಾಸವನ್ನು ಪಡೆಯುತ್ತಾರೆ. ಭಕ್ತಿಭಾವದಿಂದ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡು ಮನಶ್ಶಾಂತಿಯನ್ನು ಸಾಧಿಸಿ ಸಮಾಜದಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾರೆ ಎಂದರು.
ಗ್ರಾಮೀಣ ಜನತೆ ಪಂಚಭೂತಗಳಲ್ಲಿ, ತಂದೆ-ತಾಯಿ, ಗುರುಹಿರಿಯರಲ್ಲಿ ದೇವರನ್ನು ಕಂಡು ಭಕ್ತಿಯಿಂದ ನಮಸ್ಕರಿಸುವ ಸಂಸ್ಕೃತಿಯನ್ನು ಜಗತ್ತಿಗೆ ಆದರ್ಶವಾಗಿ ನೀಡಿದ ಹಿರಿಮೆ ಭಾರತೀಯರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಹುಡೇದ, ಅಜೀತ ಪಾಟೀಲ, ಬಾಳಪ್ಪ ನೇಸರಗಿ, ಕಲ್ಲಗೌಡ ಪಾಟೀಲ, ಬಸವಣ್ಣಿ ಜಾಗನೂರ, ರಾಮನಾಯಿಕ ನಾಯಿಕ, ಚಂದ್ರಗೌಡ ಪಾಟೀಲ, ಗಂಗಪ್ಪ ಡಬ್ಬನವರ, ಸಿದ್ದಾರ್ಥ ಅಥಣಿ, ಹಣಮಂತ ಶೆಕ್ಕಿ ಸೇರಿದಂತೆ ಜಾತ್ರಾ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.