Homeಸುದ್ದಿಗಳುಸಡಗರ ಸಂಭ್ರಮದಿಂದ ಜರುಗಿದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ

ಸಡಗರ ಸಂಭ್ರಮದಿಂದ ಜರುಗಿದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ

ಮೂಡಲಗಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಐತಿಹಾಸಿಕ ಹಾಗೂ ಜಾಗೃತ ದೇವಸ್ಥಾನವಾದ ಶ್ರೀ ಬಲಭೀಮದೇವರ ನೂತನ ಬೆಳ್ಳಿ ಪಲ್ಲಕ್ಕಿ ಉತ್ಸವ, ರಥೋತ್ಸವ ಹಾಗೂ ಕಾರ್ತಿಕೋತ್ಸವವು ದೇವಸ್ಥಾನದ ಪ್ರಧಾನ ಅರ್ಚಕರಾದ ಹನಮಂತ ರಾಮಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಸಾವಿರಾರು ಭಕ್ತವೃಂದದೊಂದಿಗೆ, ಸಡಗರ ಸಂಭ್ರಮದಿಂದ ಜರುಗಿತು.

ಶನಿವಾರ ಬೆಳಗ್ಗೆ 5 ಗಂಟೆಗೆಯಿಂದಲೇ ಭಕ್ತರು ದೀಡ್ ನಮಸ್ಕಾರ ಹಾಕುವುದರೊಂದಿಗೆ ಆರಂಭವಾದ ಕಾರ್ತಿಕೋತ್ಸವವು, 8ಗಂಟೆಗೆ ಕ್ಷೇತ್ರದ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಹೋಮದಲ್ಲಿ ಭಾಗಿಯಾಗಿ ಕ್ಷೇತ್ರದ ಜನತೆಗೆ ಸುಖ ಶಾಂತಿ ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸಿದರು. 11ಗಂಟೆಗೆ ನೂರಾರು ಸಂಖ್ಯೆಯಲ್ಲಿ ಶ್ರೀರಾಮಜಪ ಮಾಲಾಧಾರಿಗಳು ವಿಶಿಷ್ಟ ಪೂಜೆ, ಹೋಮ ಕೈಗೊಳ್ಳುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು. ಸಂಜೆ 5ಗಂಟೆಗೆ ನೂತನವಾಗಿ ನಿರ್ಮಾಣವಾದ 28 ಅಡಿಯ ಭವ್ಯ ಶ್ರೀ ರಾಮನ ರಥೋತ್ಸವ ಕುಂಭಮೇಳದೊಂದಿಗೆ ದೇವಸ್ಥಾನದಿಂದ ಹೊರಟು ಗ್ರಾಮದ ಪಾದಗಟ್ಟೆಯವರೆಗೆ ಸಾಗುತ್ತ, ರಸ್ತೆ ಇಕ್ಕೆಲದಲ್ಲಿ ನಿಂತ ಸಾವಿರಾರು ಸಂಖ್ಯೆಯ ಭಕ್ತ ಸಮೂಹ ಬೆಂಡು ಬತ್ತಾಸು, ಖಾರೀಕು ಹಾರಿಸಿದರು. ರಾತ್ರಿ 9:00ಕ್ಕೆ ದೇವಸ್ಥಾನ ಆವರಣದಲ್ಲಿ ಹೊಸದಾದ 9 ಅಡಿಯ ಶ್ರೀ ಬಲ ಭೀಮದೇವರ ರಥೋತ್ಸವ ಭಕ್ತರ ಉದ್ಘೋಷದ ಮಧ್ಯೆ ಭಕ್ತಿ ಸಡಗರದಿಂದ ನಡೆಯಿತು.

ರವಿವಾರ ಬೆಳಗ್ಗೆ 10 ಗಂಟೆಗೆ ಶ್ರೀ ಬಲಭೀಮ ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವ ದೇವಸ್ಥಾನವನ್ನು ಐದು ಪ್ರದಕ್ಷಿಣೆ ಹಾಕುವುದರೊಂದಿಗೆ ಸಾವಿರಾರು ಭಕ್ತವೃಂದ ಮಧ್ಯದಲ್ಲಿ ಕರಡಿಮಜಲು, ಡೊಳ್ಳು ಕುಣಿತದೊಂದಿಗೆ ನಡೆಯಿತು. ಅನೇಕ ಭಕ್ತರು ರಾಮನ ಹಾಗೂ ಬಲಭೀಮ ದೇವರ  ಸ್ತುತಿಗಳನ್ನು ಸ್ತುತಿಸುತ್ತ ಸಾಗಿದ ಬೆಳ್ಳಿ ಪಲ್ಲಕ್ಕಿಗೆ ಸುತ್ತೆಲ್ಲ ನಿಂತಿದ್ದ ಸಾವಿರಾರು ಭಕ್ತರು, ಬೆಂಡು ಬೆತ್ತಾಸು ಹಾರಿಸಿ ಬಲ ಭೀಮ ದೇವರ ಕೃಪೆಗೆ ಪಾತ್ರರಾದರು. ನೂರಾರು ಮಕ್ಕಳನ್ನು ಶ್ರೀ ಬಲಭೀಮ ದೇವರ ಪಲ್ಲಕ್ಕಿ ಕೆಳಗೆ ಹಾಯಿಸಿ ಹರಕೆ ತೀರಿಸಿದರಲ್ಲದೆ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬೇಡಿಕೊಂಡರು. ಪಲ್ಲಕ್ಕಿ ಉತ್ಸವದ ನಂತರ ಮಹಾಪೂಜೆ ಹಾಗೂ ಮಂಗಳಾರತಿ ನಡೆಯಿತು.

ಭಕ್ತಾದಿಗಳಿಗೆ ಎರಡು ದಿನವೂ  ಅನ್ನದಾಸೋಹ ಕಲ್ಪಿಸಲಾಗಿತ್ತು. ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ನೂರಾರು ಜನ ಪ್ರಯೋಜನ ಪಡೆದುಕೊಂಡರು. ರಾತ್ರಿ 10 ಗಂಟೆಗೆ “ಗರತಿಗೆ ಬಂದ ಅಗ್ನಿಪರೀಕ್ಷೆ” ಎಂಬ ಸುಂದರ ಸಾಮಾಜಿಕ ನಾಟಕದೊಂದಿಗೆ  ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ ಸಂಪನ್ನವಾಯಿತು.

RELATED ARTICLES

Most Popular

error: Content is protected !!
Join WhatsApp Group