spot_img
spot_img

ಕಬೀರನಾದ ಕುಬೇರ: ಕಾರ್ನಾಡ್‌ ಸದಾಶಿವರಾಯರು

Must Read

- Advertisement -

ದಕ್ಷಿಣ ಕನ್ನಡ ಜಿಲ್ಲೆಯನ್ನು ಗೌರವಾನ್ವಿತ ಜಿಲ್ಲೆಯನ್ನಾಗಿ ಪರಿವರ್ತಿಸಿದ ಹಿರಿಯ ಮಹನೀಯರಲ್ಲಿ ಕಾರ್ನಾಡ್‌ ಸದಾಶಿವರಾಯರೂ ( ೧೮೮೧-೧೯೩೭) ಒಬ್ಬರು. ʼ ದೇಶಭಕ್ತ ಕಾರ್ನಾಡ್‌ ಸದಾಶಿವ ರಾಯʼರೆಂದೇ ಪ್ರಸಿದ್ಧರಾಗಿದ್ದ ಅವರನ್ನು ‘ದಕ್ಷಿಣದ ಗಾಂಧಿ’ ಎಂದೂ ಕರೆಯಲಾಗಿದೆ.

ದಕ ಜಿಲ್ಲೆಯ ಮುಲ್ಕಿ ಸಮೀಪದ ಕಾರ್ನಾಡ್‌ ಎಂಬಲ್ಲಿ ಶ್ರೀಮಂತರ  ಕುಟುಂಬದಲ್ಲಿ, ಜನಿಸಿದ ಅವರು ದೇಶಕ್ಕಾಗಿ ಎಲ್ಲವನ್ನೂ ಕಳಕೊಂಡು ಮುಂಬೈಯ ಬೀದಿ ಬದಿಯಲ್ಲಿ ನಿರ್ಗತಿಕರಂತೆ ಬಿದ್ದು ತೀರಿಕೊಂಡದ್ದನ್ನು ಓದುವಾಗ ಯಾರ ಹೃದಯವಾದರೂ ಕರಗೀತು. ಶ್ರೀ ಅರವಿಂದ ಚೊಕ್ಕಾಡಿಯವರು ಕಾರ್ನಾಡರನ್ನು ʼ ಕಬೀರನಾದ ಕುಬೇರʼ ಎಂಬ ರೂಪಕದಲ್ಲಿ ಹಿಡಿದಿಟ್ಟಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೆ ಕುದ್ಮುಲ್ ರಂಗರಾಯರ “ದಲಿತೋದ್ಧಾರ” ಚಳುವಳಿಯಿಂದ ಪ್ರೇರಿತರಾದ ಕಾರ್ನಾಡರು, ತಮ್ಮ  ಪುಸ್ತಕ, ಬಟ್ಟೆ, ಚೀಲ ಎಲ್ಲವನ್ನೂ ದಲಿತರಿಗೆ ಹಂಚಿ ಬಿಡುತ್ತಿದ್ದರು. ಮಂಗಳೂರಿನ ದೇರೆಬೈಲಿನ ತಮ್ಮ ಸ್ವಂತ ಜಮೀನಿನಲ್ಲಿ ಸ್ವಂತ ಖರ್ಚಿನಲ್ಲಿ ದಲಿತರಿಗೆ ಒಂದು ಕಾಲನಿಯನ್ನೆ ಮಾಡಿಕೊಟ್ಟರು. ದಲಿತರ ಶಿಕ್ಷಣಕ್ಕೆ ಸಹಾಯ ಮಾಡಲು ‘ತಿಲಕ್ ವಿದ್ಯಾಲಯ’  ಸ್ಥಾಪನೆ ಮಾಡಿದರು. ಮನೆಯ ಅಂಗಳಕ್ಕೆ ಬರಲು ಕೂಡ ಹಿಂಜರಿಯುತ್ತಿದ್ದ ದಲಿತರನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದರು. 

- Advertisement -

ಮಹಿಳೆಯರ ಶ್ರೇಯಸ್ಸಿಗಾಗಿ “ಮಹಿಳಾ ಸಭಾ” ಎಂಬ ಒಂದು ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಬಾಲ ವಿಧವೆಯರಿಗೆ ಮತ್ತು ಬಡ ಹೆಣ್ಮಕ್ಕಳಿಗೆ ಉಚಿತವಾಗಿ ನೂಲುವ ಮತ್ತು ನೇಯುವ ಕಲೆಯನ್ನು ಕಲಿಸಿ ಅವರನ್ನು ಸ್ವಾವಲಂಬಿಯಾಗಿ ಮಾಡಿದರು.

ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮಂಗಳೂರಿಗೆ ವ್ಯಾಪಿಸಿದಾಗ ಕಾರ್ನಾಡರು ಗಾಂಧೀಜಿಯ ದಟ್ಟ ಪ್ರಭಾವಕ್ಕೆ ಒಳಗಾಗಿ ತನ್ನ ಮನೆಯಲ್ಲಿದ್ದ ಅಷ್ಟೂ ಚಿನ್ನ, ಭೂಮಿ, ವಸ್ತ್ರಗಳು, ಎಲ್ಲವನ್ನೂ ಬಡವರಿಗೆ ಧಾರೆ ಎರೆದರು. ತಾವೇ ತಯಾರಿಸಿದ ಖಾದಿ ಬಟ್ಟೆ ತೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು.

ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಕಠಿಣವಾದ ಜೈಲುವಾಸ ಕೂಡ ಅನುಭವಿಸಿದರು. ಗಾಂಧಿ, ಕಸ್ತೂರ್ಬಾ, ನೆಹರೂ ಮೊದಲಾದ ಕಾಂಗ್ರೆಸ್ ಹಿರಿಯ ನಾಯಕರು ಮಂಗಳೂರಿಗೆ ಬಂದಾಗ ಕಾರ್ನಾಡರ  ಮನೆಯಲ್ಲಿಯೇ ಉಳಿದು ಕೊಳ್ಳುತ್ತಿದ್ದರು. ಅವರ ಮನೆ ಕಾಂಗ್ರೆಸ್ ಕಾರ್ಯಕರ್ತರ ಧರ್ಮಛತ್ರವೆ ಆಗಿತ್ತು. 

- Advertisement -

ಕಾರ್ನಾಡರು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದ ವೈವಿಧ್ಯಗಳೆಲ್ಲವೂ ಕರಾವಳಿ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದ್ದುವು. ಶ್ರೀಗಳಾದ ಎಂ. ಲೋಕಯ್ಯ ಶೆಟ್ಟರು ನೇತಾಜಿ ಸುಭಾಶ್ಚಂದ್ರ ಬೋಸರಿಂದ ಪ್ರಭಾವಿತರಾಗಿದ್ದರು.

ಅತ್ತಾವರ ಎಲ್ಲಪ್ಪನವರು ಅಜಾದ್‌ ಹಿಂದ್‌ ಬ್ಯಾಂಕ್‌ ಸ್ಥಾಪನೆ ಮಾಡುವುದರ ಜೊತೆಗೆ ನೇತಾಜಿಯವರ ಆಝಾದ ಹಿಂದ್ ಸರಕಾರದ ಸದಸ್ಯರೂ ಆಗಿದ್ದರು. ಕೆ ಕೆ ಶೆಟ್ಟಿ, ಕೆ ಆರ್‌ ಆಚಾರ್‌, ವಿ ಎಸ್‌ ಕುಡ್ವ, ಕಡೆಂಗೊಡ್ಲು ಶಂಕರ ಭಟ್ಟ ಮೊದಲಾದವರು ಪತ್ರಿಕೋದ್ಯಮಕ್ಕಿಳಿದು ಬ್ರಿಟಿಷ್‌ ಪ್ರಭುತ್ವದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು.

ಬಿವಿ ಕಕ್ಕಿಲ್ಲಾಯ, ಕೆ ಅರ್‌ ಕಾರಂತ ಮೊದಲಾದವರು ರಾಷ್ಟ್ರೀಯ ಹೋರಾಟದ ಜೊತೆಗೆ ಕರ್ನಾಟಕ ಏಕೀಕರಣದ ಕೆಲಸಗಳನ್ನು ಮಾಡುತ್ತಾ, ಅವೆರಡರ ನಡುವೆ ಸಂಘರ್ಷ ಏರ್ಪಡದ ಹಾಗೆ ಚಳುವಳಿಗಳನ್ನು ರೂಪಿಸುವ ಹೊಣೆ ಹೊತ್ತಿದ್ದರು. 

ಶ್ರೀ ಅರವಿಂದ ಚೊಕ್ಕಾಡಿಯವರು ಪ್ರಸ್ತುತ ಪುಸ್ತಕದಲ್ಲಿ ಮೇಲಿನ ಕೆಲಸಗಳಿಗೆ ಪೂರಕವಾಗಿ, ಆದರೆ ಅವುಗಳಿಗಿಂತ ಹೆಚ್ಚು ವಿಸ್ತಾರವಾಗಿ ಶ್ರೀ ಕಾರ್ನಾಡ ಸದಾಶಿವರಾಯರು ಹೇಗೆ ಕೆಲಸ ಮಾಡಿದರು ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.

ಅವರು ಸಮರ್ಪಕವಾಗಿ ಗುರುತಿಸಿದಂತೆ, ಗಾಂಧೀಜಿ ಸತ್ಯಾಗ್ರಹ ಚಳವಳಿ ಸುರು ಮಾಡಿದಾಗ, ಅದರ ಪ್ರತಿಜ್ಞೆಗೆ ಸಹಿ ಹಾಕಿದವರಲ್ಲಿ ಕಾರ್ನಾಡರೇ ಕರ್ನಾಟಕದಲ್ಲಿ ಮೊದಲಿಗರು.

ಅಲ್ಲಿಂದ ಮುಂದೆ ಗಾಂಧೀಜಿಯ ಆಪ್ತ ವಲಯದಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದ ಅವರು ಕರಾವಳಿಯ ಸ್ವಾತಂತ್ರ್ಯ ಚಳವಳಿಯನ್ನು ರಾಷ್ಟ್ರೀಯ ಧಾರೆಗೆ ಸೇರಿಸುವ ಮಹತ್ವದ ಕೆಲಸ ಮಾಡಿದರು. ರಾಷ್ಟ್ರನಾಯಕರೊಡನೆ ಕಾರ್ನಾಡರು ಬೆಳೆಸಿಕೊಂಡಿದ್ದ ಸೌಹಾರ್ದ ಸಂಬಂಧಗಳ ಬಗ್ಗೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ. 

ದೇಶಭಕ್ತಿ ಮತ್ತು ತ್ಯಾಗದ ಈ ಕಥನವು ವರ್ತಮಾನದ ಅಗತ್ಯವೊಂದನ್ನು ಪೂರೈಸಿದೆ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group