ಮೂಡಲಗಿ: ತಾಲೂಕಿನ ಕಲ್ಲೋಳಿ ಹಾಗೂ ತುಕ್ಕಾನಟ್ಟಿ ಗ್ರಾಮಗಳಲ್ಲಿ ಕೃಷಿ ಪರಿಕರ ರಸಗೊಬ್ಬರ,ಬೀಜ,ಕೀಟನಾಶಕ ಮಳಿಗೆಗಳ ಮೇಲೆ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಹಾಗೂ ಕೃಷಿ ಅಧಿಕಾರಿ ವಿನಾಯಕ ತುರಾಯಿದಾರ ನೇತೃತ್ವದಲ್ಲಿ ದಾಳಿ ಮಾಡಿ ರಸಗೊಬ್ಬರ, ಬೀಜಗಳ ದಾಸ್ತಾನು ಮತ್ತು ವಿತರಣೆ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.
ರಸಗೊಬ್ಬರ ಮತ್ತು ಬೀಜಗಳನ್ನು ಹೆಚ್ಚಿನ ದರಕ್ಕೆ ರೈತರಿಗೆ ಮಾರಾಟ ಮಾಡಿದರೆ ಅಂತವರ ವಿರುದ್ದ ಶಿಸ್ತು ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಪರವಾನಿಗೆಯನ್ನು ರದ್ದು ಮಾಡಲಾಗುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕರಾದ ಎಮ್.ಎಮ್.ನದಾಫ ಎಚ್ಚರಿಕೆ ನೀಡಿದರು.
ಮಾರಾಟಗಾರರು ಸರ್ಕಾರದ ಹಾಗೂ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ದರಪಟ್ಟಿ ಮತ್ತು ರಸಗೊಬ್ಬರ ದಾಸ್ತಾನು ಲಭ್ಯತೆ ಬಗ್ಗೆ ಮಾಹಿತಿ ಫಲಕಗಳನ್ನು ಮಳಿಗೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ರಸಗೊಬ್ಬರವನ್ನು ಪಿ ಓ ಎಸ್ ಮಶೀನ್ ಮೂಲಕವೇ ವಿತರಿಸಬೇಕು ಅಂತ ಹೇಳಿದರು.
ಈವರ್ಷ ಮುಂಗಾರು ಹಂಗಾಮು ಉತ್ತಮ ಮಳೆಯಿಂದ ಪ್ರಾರಂಭವಾಗಿದ್ದರಿಂದ ರೈತರಿಗೆ ಗುಣಮಟ್ಟದ ಬೀಜ ಪೂರೈಸಬೇಕು ಹಾಗೂ ಕಡ್ಡಾಯವಾಗಿ ರೈತರಿಗೆ ರಶೀದಿಗಳನ್ನು ನೀಡಬೇಕು. ಕೃಷಿ ಇಲಾಖೆಯಿಂದ ಪ್ರತಿಯೊಂದು ರಸಗೊಬ್ಬರ ಮಳಿಗೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ,ಅವರು ಮಳಿಗೆಗೆಗಳಿಗೆ ಭೇಟಿ ನೀಡಿ ಬೀಜ, ಇತರೆ ಕೃಷಿ ಪರಿಕರಗಳ ಗುಣಮಟ್ಟ ಹಾಗೂ ಯೂರಿಯಾ, ಡಿಎಪಿ ರಸಗೊಬ್ಬರಗಳ ದಾಸ್ತಾನು, ಭೌತಿಕ ದಾಸ್ತಾನು ಪರಿಶೀಲಿಸುವರು.ರೈತರಿಂದ ಯಾವುದೇ ದೂರುಗಳು ಬಂದರೆ ರಸಗೊಬ್ಬರ ಮೇಲೆ ಅಗತ್ಯ ವಸ್ತುಗಳ ಅಧಿನಿಯಮ 1955ರ ಅಡಿಯಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಯಾವುದೇ ರೀತಿ ಮೋಸ ಮಾಡದಂತೆ ಇಲಾಖೆಯ ಅಧಿಕಾರಿಗಳು ರಸಗೊಬ್ಬರ ವ್ಯಾಪಾರಸ್ಥರಿಗೆ ಮನವಿ ಮಾಡಿದರು