ಸಾಹಿತ್ಯ ಬಳಗಗಳು ಎಂದಾಕ್ಷಣ ನಮ್ಮ ಆಲೋಚನೆಗೆ ಮೊದಲು ಬರುವುದು. ಯುವ ಸಾಹಿತಿಗಳ ವೇದಿಕೆ. ಕವನ ಸಂಕಲನ ಬಿಡುಗಡೆ ಮಾಡದ,ಯಾವುದೇ ಕವಿ ಗೋಷ್ಠಿಯಲ್ಲಿ ಭಾಗವಹಿಸದ ಕವಿಗಳ ಸಂಗಮ. ಇದರ ಜೊತೆಗೆ ನಾಡಿನ ಪ್ರಬುದ್ಧ ಸಾಹಿತಿಗಳ ಕೂಟವು ಹೌದು. ಸಾಹಿತ್ಯ ಬಳಗಗಳನ್ನು ಕಟ್ಟಿದ ಮುಖ್ಯ ಉದ್ದೇಶ,ಯುವ ಸಾಹಿತಿಗಳನ್ನು ಬೆಳೆಸುವುದು. ಯುವ ಸಾಹಿತಿಗಳು ರಚಿಸಿದ ಸಾಹಿತ್ಯಿಕ ಅಂಶಗಳನ್ನು ತಿದ್ದಿ ತೀಡಿ ಸರಿಪಡಿಸುವ ಕಾರ್ಯದಲ್ಲಿ ತೊಡಗಬೇಕು.
ಜೊತೆಗೆ ಇನ್ನೊಬ್ಬ ಸಾಹಿತಿ ಪ್ರಸ್ತುತ ಪಡಿಸಿದ ಸಾಹಿತ್ಯ ಪ್ರಕಾರವನ್ನು ಅಭಿವ್ಯಕ್ತಿಗೊಳಿಸಬೇಕು. ಅಂದಾಗ ಅದೊಂದು ಪ್ರಬುದ್ಧ ಬಳಗವಾಗುತ್ತದೆ. ಪ್ರತಿದಿನ ಬಳಗದಲ್ಲಿ ಹತ್ತಾರು ಹೊಸ ಅಲೆಯ ಸಾಹಿತ್ಯ ಪ್ರಕಾರಗಳನ್ನು ಅನಾವರಣಗೊಳಿಸಲಾಗುತ್ತದೆ.ಅದರ ನೈಜತೆಯನ್ನು ಅರಿಯುವುದು ಪ್ರಬುದ್ಧ ಸಾಹಿತಿಗಳ ಕಾರ್ಯವಾಗಿದೆ.
ಬಳಗಗಳ ಕಾರ್ಯ
ಸಾಹಿತ್ಯ ಬಳಗಗಳನ್ನು ಕಟ್ಟಿದ ಮಾತ್ರಕ್ಕೆ ಅದು ಬೆಳೆಯುವುದಿಲ್ಲ. ಜೊತೆಗೆ ಪ್ರತಿದಿನ ನಾವು ಕಟ್ಟಿದ ಬಳಗಗಳಲ್ಲಿ ಏನಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.ಏಕೆಂದರೆ ಬಳಗದಲ್ಲಿ ಇದ್ದವರೆಲ್ಲ ಉದ್ದಾಮ ಸಾಹಿತಿಗಳಲ್ಲ. ಅವರ ಸಾಹಿತ್ಯ ಪ್ರಕಾರಗಳಲ್ಲಿ ವ್ಯಾಕರಣ ದೋಷ ಸರಿಪಡಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಬಳಗದಲ್ಲಿ ನಡೆಯುತ್ತಿರಬೇಕು.
ಹೊಸ ಬಗೆಯ ಸಾಹಿತ್ಯ ಪ್ರಕಾರದ ರಚನೆಯಾದಲ್ಲಿ ಅದರ ಪೂರ್ಣ ವಿವರಗಳನ್ನು ನೀಡಬೇಕು.ಯಾರೋ ಒಬ್ಬ ಹೊಸ ಸಾಹಿತ್ಯ ಪ್ರಕಾರವನ್ನು ತಿಳಿದು ಅದರಲ್ಲಿ ಕಾವ್ಯವನ್ನು ರಚಿಸಿದ್ದಾನೆ ಎಂದಾದರೆ ಅದರ ಸಂಪೂರ್ಣ ಅರಿವು ಅವನಿಗಿದೆ ಎಂದರ್ಥ.
ಅವನು ಅದನ್ನು ಬಳಗಗಳಲ್ಲಿ ಹಂಚಿಕೊಂಡು ಅದರ ಛಂದಸ್ಸು ಯಾವುದೆಂದು ಎಲ್ಲರಿಗೂ ತಿಳಿಸಿದರೆ.ಅದು ಇತರರಿಗೆ ಸಹಾಯ ಮಾಡುತ್ತದೆ. ಇದು ಬಿಟ್ಟು ಕೇವಲ ನಾನೊಬ್ಬನೇ ಅದಕ್ಕೆ ಧೀಮಂತ ಸಾಹಿತಿ ಎನ್ನುವುದಾದರೆ ಅವನು ಬಳಗದಲ್ಲಿ ಇದ್ದು ಏನು ಪ್ರಯೋಜನ.
ಸ್ವಾರ್ಥಪರ ಚಿಂತನೆಗಳು
ಬಳಗದಲ್ಲಿ ಇರುವವರೆಲ್ಲರೂ ಒಂದೇ ಎಂಬ ಮನೋಭಾವ ಇರಬೇಕು. ಕಾರಣ ಒಂದು ಬಳಗದಲ್ಲಿ ಯಾರೋ ಒಬ್ಬ ಯುವ ಸಾಹಿತಿ ಅಥವಾ ಪ್ರಬುದ್ಧ ಸಾಹಿತಿ ಒಂದು ಸಾಹಿತ್ಯ ಪ್ರಕಾರವನ್ನು ಅನಾವರಣಗೊಳಿಸಿದಾಗ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದಿಲ್ಲ. ಬದಲಾಗಿ ಅದರಲ್ಲಿ ಇರುವ ಅಂಶಗಳ ಕುರಿತು ಬರೆದು ಅವನಿಗೆ ಹೇಳಿದರೆ ತಪ್ಪಾಗಲಾರದು. ಮತ್ತೊಮ್ಮೆ ಕಾವ್ಯ ರಚನೆ ಮಾಡುವಾಗ ತಾನು ಮಾಡಿದ ತಪ್ಪುಗಳನ್ನು ಸರಿಪಡಿಸುವ ಮೂಲಕ ಅವನು ಒಬ್ಬ ಧೀಮಂತ ಸಾಹಿತಿಯಾಗುತ್ತಾನೆ.
ಇದನ್ನು ಬಿಟ್ಟು ಬಳಗಗಳಲ್ಲಿ ಒಬ್ಬ ಸಾಹಿತಿ ಬರೆದದ್ದನ್ನು ಅವನಿಗೆ ತುಂಬಾ ಹತ್ತಿರ ಇರುವ ಒಂದೆರಡು ಜನ ಸಾಹಿತಿಗಳು ಅವಲೋಕನ, ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ. ಕಾರಣ ತಾನು ಅವರು ಬರೆದುದಕ್ಕೆ ಇವನು ವ್ಯಕ್ತಪಡಿಸಿದ್ದರ ಅನಿವಾರ್ಯತೆಗಾಗಿ.ಯುವ ಕವಿಗಳು ಪ್ರತಿದಿನ ತಮ್ಮ ಸಾಹಿತ್ಯ ಪ್ರಕಾರದ ಮೇಲೆ ಯಾರಾದರೂ ತಿದ್ದುಪಡಿ ಮಾಡುತ್ತಾರೋ? ಇಲ್ಲವೋ? ಎನ್ನುವ ಧಾವಂತದಲ್ಲಿ ಇಡೀ ದಿನ ಕಳೆಯುತ್ತಾರೆ.
ಅವರಿಗೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ನಾನು ಬರೆದದ್ದೆ ಸರಿ ಎನ್ನುವ ವಾದಕ್ಕಿಳಿಯುತ್ತಾರೆ.ಮುಂದೊಂದು ದಿನ ಈ ಸಾಹಿತಿಗಳನ್ನು ಯಾರು ಗಮನಿಸಿರುವುದಿಲ್ಲ.ಆಗ ಅವರಿಗೊಂದು ಹಣೆಪಟ್ಟಿ ನೀಡಲಾಗುತ್ತದೆ. ಇವರು ಎಡಪಂಥೀಯ ಸಾಹಿತಿಗಳು. ಇವರು ಬಲಪಂಥೀಯ ಸಾಹಿತಿಗಳು. ಇವರು ಬಂಡಾಯ ಸಾಹಿತಿಗಳು ಎಂದು.
ಹಾಗಾದರೆ ಇವರಿಗೆ ಈ ಹಣೆಪಟ್ಟಿ ಕಟ್ಟಿದವರು ನಾವೇ ಅಲ್ಲವೇ? ಒಂದು ವೇಳೆ ಅಂದು ಇವರು ಹಾಕಿದ ಸಾಹಿತ್ಯ ಪ್ರಕಾರವನ್ನು ತಿದ್ದುಪಡಿ ಮಾಡಿ ಸರಿಯಾದ ಮಾರ್ಗದಲ್ಲಿ ಅವರನ್ನು ತಂದಿದ್ದರೆ, ಇವತ್ತು ಯಾವ ಪಂಥದ ಸಾಹಿತಿಗಳು ಇರುತ್ತಿರಲಿಲ್ಲ. ಬರಬರುತ್ತ ಈ ಸಾಹಿತಿಗಳು ಸ್ವಾರ್ಥಪರ ಚಿಂತನೆ ಮಾಡುತ್ತ ನಾನು ಸರಿ.ಉಳಿದವರು ತಪ್ಪು ಎನ್ನುವ ಮನೋಭಾವ ಮೂಡುತ್ತದೆ.
ಪತ್ರಿಕೆಗಳಲ್ಲಿ ರಾರಾಜಿಸುವ ಸಾಹಿತಿಗಳು
ಸ್ಥಳೀಯ ಅಥವಾ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಸಾಹಿತ್ಯ ಪ್ರಕಾರವನ್ನು ಇತರರಿಗೆ ಓದಲು ಬಳಗಳಲ್ಲಿ ಪ್ರಚುರಪಡಿಸಬೇಕು.ಜೊತೆಗೆ ಇತರ ಯುವ ಕವಿಗಳಿಗೆ ಸ್ಫೂರ್ತಿ ನೀಡಲು ಆ ಪತ್ರಿಕೆಯವರ ದೂರವಾಣಿ ಸಂಖ್ಯೆ, ಅಥವಾ ಈ ಮೇಲ್ ಐಡಿ ಇನ್ನಿತರ ತಾಂತ್ರಿಕ ಅಂಶಗಳನ್ನು ನೀಡಬೇಕು. ಇದು ಬಿಟ್ಟು ಯುವ ಸಾಹಿತಿಗಳು ಈ ಕುರಿತಾಗಿ ಕೇಳಿದಾಗ ಹಾರಿಕೆ ಉತ್ತರಗಳನ್ನು ಇಲ್ಲವೆ ಉಡಾಫೆಯ ಕಾರಣಗಳನ್ನು ನೀಡುವುದು. ಅದರ ಕುರಿತು ಭಯಂಕರವಾದ ಕತೆ ಹೇಳುವುದು.
ಆಗ ಈ ಯುವ ಸಾಹಿತಿ ನನ್ನ ಸಾಹಿತ್ಯ ಪ್ರಕಾರ ಈ ಜೀವಮಾನದಲ್ಲಿ ಅಲ್ಲ ಇನ್ನೆಂದೂ ನನ್ನ ಸಾಹಿತ್ಯ ಪ್ರಕಾರ ಪತ್ರಿಕೆಯಲ್ಲಿ ಪ್ರಕಟವಾಗಲಾರದು ಎನ್ನುವ ಜಿಗುಪ್ಸೆ ಮೂಡಿ ಸಾಹಿತ್ಯದ ಸನ್ಯಾಸತ್ವ ತೆಗೆದುಕೊಳ್ಳುವಂತಾಗುತ್ತದೆ. ತಮ್ಮ ಬಳಗಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಸಾಹಿತ್ಯ ಪ್ರಕಾರವನ್ನು ಹಂಚಿಕೊಳ್ಳುವಾಗ,ಪ್ರಕಟವಾದ ಸಾಹಿತ್ಯ ಪ್ರಕಾರಕ್ಕಿಂತ ಹೆಚ್ಚಾಗಿ ಕೆಳಗಿನ ವಿವರಣೆಯೇ ಹೆಚ್ಚಾಗಿರುತ್ತದೆ.
ಹುಟ್ಟು ಹಬ್ಬದ ಶುಭಾಶಯಗಳು
ಸಾಹಿತ್ಯ ಬಳಗದಲ್ಲಿ ಪ್ರತಿದಿನ ರವಾನಿಸುವ ಸಾಹಿತ್ಯ ಚಟುವಟಿಕೆಗಳನ್ನು ಯಾರು ಗಮನಿಸಿಯೂ ಗಮನಿಸಿದಂತೆ ಇರುತ್ತಾರೆ. ಹುಟ್ಟಿದ ದಿನ ಅಂತ ಒಂದು ಸಂದೇಶ ರವಾನೆ ಮಾಡಿದರೆ ಸಾಕು ಎರಡು ಮೂರು ದಿನಗಳ ಕಾಲ ಸಾಹಿತ್ಯ ಬಳಗಗಳು ತುಂಬುತ್ತವೆ.ಒಂದೇ ಬಳಗ ಮಾತ್ರವಲ್ಲದೇ ನಾವು ಯಾವೆಲ್ಲ ಬಳಗದಲ್ಲಿ ಇರುತ್ತೇವೆಯೋ ಆ ಬಳಗಗಳಲ್ಲಿ ರಾರಾಜಿಸುತ್ತೇವೆ.
ಅದೇ ನಮ್ಮ ನಾಡಿನ ಹಿರಿಯ ಸಾಧಕರ ಕುರಿತು ಯಾವುದೇ ಚರ್ಚೆಯಾಗುವುದಿಲ್ಲ.ಹಾಗಾದರೆ ನಮ್ಮ ನಾಡಿನ ಸಾಧಕರ ಬದುಕು ನಮ್ಮ ಹುಟ್ಟಿದ ಹಬ್ಬಕ್ಕಿಂತ ಕಡಿಮೆಯೇ?ಅಥವಾ ಅವರ ಸಾಧನೆ ನಮ್ಮ ಹುಟ್ಟು ಹಬ್ಬಕಿಂತ ಚಿಕ್ಕದಾ? ಯಾವುದು ತಿಳಿಯುತ್ತಿಲ್ಲ.
ಅವರ ಕಾಲದಲ್ಲಿ ಸಾಮಾಜಿಕ ಜಾಲತಾಣ ಇರಲಿಲ್ಲ. ಹಾಗಾಗಿ ಅವರು ದೊಡ್ಡವರಲ್ಲವೇ? ನಾಡಿನ ಹಿರಿಯ ಚೇತನಗಳ ಹುಟ್ಟಿದ ಹಬ್ಬಗಳು ಇಲ್ಲ ಅಂತಲ್ಲ.ಅವರು ಯಾರೂ ಇವತ್ತಿನ ಹಾಗೆ ಬಯಸಲಿಲ್ಲ. ಅವರು ಮಾಡಿದ ಸಾಧನೆ ಆ ಚಂದ್ರಾರ್ಕ ಇರುವವರಿಗೆ ಸ್ಥಿರ.
ಮದುವೆ ವಾರ್ಷಿಕೋತ್ಸವ
ಇದೊಂದು ಇತ್ತೀಚಿನ ವರ್ಷಗಳಲ್ಲಿ ಆದ ಬೆಳವಣಿಗೆ.ಪ್ರತಿದಿನ ಒಬ್ಬರದಾದರೂ ಮದುವೆಯ ವಾರ್ಷಿಕೋತ್ಸವ ಇದ್ದೇ ಇರುತ್ತದೆ.ಅವೆಲ್ಲವನ್ನೂ ಹಂಚಿಕೊಳ್ಳಲು ಸಾಹಿತ್ಯ ಬಳಗಗಳೆ ಬೇಕಾ?ಹಾಗಾದರೆ ಸಾಹಿತ್ಯ ಎಲ್ಲಿ ಹೋಯಿತು? ಪ್ರತಿದಿನ ಇವುಗಳನ್ನೆ ಹಂಚಿಕೊಳ್ಳುವುದಾದರೆ ಸಾಹಿತ್ಯ ಬಳಗಗಳೇಕೆ ಬೇಕು?
ಪ್ರಶಸ್ತಿ ಪತ್ರ
ನಾಡಿನ ಅನೇಕ ಕನ್ನಡಪರ ಸಂಘಟನೆಗಳು ತಮ್ಮ ಬಳಗದಲ್ಲಿ ಒಂದಿಲ್ಲೊಂದು ರೀತಿಯ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತದೆ. ಅದರಲ್ಲಿ ವಿಜೇತರಾದವರಿಗೆ ಆ ಸಾಹಿತ್ಯ ಬಳಗಗಳು ಅಂತರ್ಜಾಲಾಧಾರಿತ ಪ್ರಮಾಣ ಪತ್ರ ನೀಡಿರುತ್ತವೆ. ಅದು ಅವರ ಸಾಹಿತ್ಯ ಸೇವೆಗೆ ಸಂದ ಗೌರವ. ಅದನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ.
ಆದರೆ ಪ್ರತಿನಿತ್ಯವೂ ಅವುಗಳನ್ನು ನೋಡುತ್ತ ಹೋದರೆ,ಅದೂ ಎಲ್ಲಾ ಬಳಗಗಳಲ್ಲಿಯೂ ನೋಡಬೇಕು. ಒಂದು ಅರ್ಥದಲ್ಲಿ ಹೇಳುವುದಾದರೆ ಇದು ಒಳ್ಳೆಯದು. ಏಕೆಂದರೆ ಹಲವಾರು ಯುವ ಮನಸ್ಸುಗಳಿಗೆ ಸ್ಪೂರ್ತಿ ನೀಡುತ್ತದೆ. ಹಾಗಂತ ಹೇಳಿ ಅದರದ್ದೇ ಜಾತ್ರೆಯಾಗಬಾರದು.
ಓಂ ಶಾಂತಿ
ಸಾಹಿತ್ಯ ಬಳಗದಲ್ಲಿನ ಯಾರಾದರೂ ಒಬ್ಬರ ಆಪ್ತರು ನಮ್ಮನ್ನಗಲಿದ್ದು ನಿಜ.ಅವರ ಅಗಲಿಕೆ ನಮಗೆ ನೋವು ತಂದಿದೆ. ಯಾರಾದರೂ ಒಬ್ಬರು ಹಾಕಿದರೆ ನಾವೆಲ್ಲರೂ ಓಂ ಶಾಂತಿ ಎಂದು ಹಾಕುವ ಬದಲಿಗೆ ನೇರವಾಗಿ ಅವರೊಂದಿಗೆ ಮಾತನಾಡೋಣ.
ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ.ಎಂದು ನೇರವಾಗಿ ಮಾತನಾಡಿದರೆ ಅವರ ಮನಸ್ಸಿಗೂ ಮುದ ನೀಡುತ್ತದೆ. ಜೊತೆಗೆ ಮಾನಸಿಕ ಧೈರ್ಯ ತುಂಬಿದಂತಾಗುತ್ತದೆ.
ಮುಂಬರುವ ದಿನಗಳಲ್ಲಿ ಸಾಹಿತ್ಯ ಬಳಗಗಳ ಜೊತೆಗೆ ಹೀಗೆ ಬಳಗಗನ್ನು ಹೀಗೆ ವಿಂಗಡಿಸಬಹುದು.
(ಅಂತಾರಾಷ್ಟ್ರೀಯ ಮಟ್ಟದಿಂದ ಗ್ರಾಮ ಘಟಕದವರೆಗೆ)
- ಹುಟ್ಟು ಹಬ್ಬದ ಬಳಗ !
- ಹುಡುಗ/ಹುಡುಗಿಯನ್ನು ನೋಡಿದ ಬಳಗ !
- ನಿಶ್ಚಿತಾರ್ಥ ಬಳಗ !
- ಮೊದಲ ರಾತ್ರಿ ಬಳಗ !
- ಮದುವೆ ವಾರ್ಷಿಕೋತ್ಸವ ಬಳಗ !
- ಮೊದಲ ಮಗು ಹುಟ್ಟಿದ ಬಳಗ ……….!!
ಹೀಗೆ ಮುಂದುವರೆದ ಮೇಲೆ ಅದೆಷ್ಟೋ ಬಳಗಗಳು ಹುಟ್ಟಿಕೊಳ್ಳುವ ದಿನಗಳು ತುಂಬಾ ಹತ್ತಿರದಲ್ಲಿವೆ !
ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು, ಹತ್ತಿಮತ್ತೂರು