ಬೀದರ : ಗಡಿ ಜಿಲ್ಲೆ ಬೀದರ ನಲ್ಲಿ ಸೋನು ಸೂದ್ ಹವಾ ನಗರದ ಗುರುನಾನಕ ಪಬ್ಲಿಕ್ ಸ್ಕೂಲ್ ಸ್ಥಾಪನೆಯ ಸುವರ್ಣ ಮಹೋತ್ಸವ ಅಂಗವಾಗಿ ನಗರದಲ್ಲಿ ರವಿವಾರ (ಜ.12) ಆಯೋಜಿಸಿದ್ದ ‘ಬೀದರ್ ಮ್ಯಾರಥಾನ್ʼಗೆ ಖ್ಯಾತ ಬಾಲಿವುಡ್ ನಟ, ನಿರ್ದೇಶಕ ಸೋನು ಸೂದ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಚಾಲನೆ ನೀಡಿದರು.
ಇಲ್ಲಿನ ನೆಹರೂ ಕ್ರೀಡಾಂಗಣದಿಂದ 21 ಕಿ.ಮೀ, 10 ಕಿ.ಮೀ, 5 ಕಿ.ಮೀ. ಮತ್ತು 3 ಕಿ.ಮೀ. ಪ್ರತ್ಯೇಕ ಮ್ಯಾರಾಥಾನ್ ನಡೆದವು. ಕ್ರೀಡಾಂಗಣದಿಂದ ಶುರುವಾದ ಓಟವು ಮಡಿವಾಳ ವೃತ್ತ, ಬಹುಮನಿ ಕೋಟೆ, ಗವಾನ್ ಚೌಕ್, ಚೌಬಾರಾ, ಕರ್ನಾಟಕ ಕಾಲೇಜು, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರು ಕ್ರಾಸ್, ಜಿಎನ್ಡಿ ಇಂಜಿನಿಯರಿಂಗ್ ಕಾಲೇಜ್ ಮತ್ತು ರಿಂಗ್ ರಸ್ತೆ ಮಾರ್ಗವಾಗಿ ಪುನ: ನೆಹರೂ ಕ್ರೀಡಾಂಗಣಕ್ಕೆ ಬಂದು ಮುಕ್ತಾಯಗೊಂಡಿತು.
ಈ ವೇಳೆ ಮಾತನಾಡಿದ ನಟ ಸೋನು ಸೂದ್, ಕ್ರೀಡೆ ಮತ್ತು ಆರೋಗ್ಯದಿಂದ ಭಾರತ ಸದೃಢವಾಗುತ್ತದೆ. ಶಿಕ್ಷಣದೊಂದಿಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ ಮಾಡಿ ಆರೋಗ್ಯ ಸದೃಢವಾಗಿ ಇಟ್ಟುಕೊಳ್ಳಬೇಕು. ಮ್ಯಾರಾಥಾನ್ನಂತ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಬೇರೆಯವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾನು ಬೇರೆಯವರಿಗೆ ಸಹಾಯ ಮಾಡಿದ್ದು ವ್ಯರ್ಥ ಹೋಗುವುದಿಲ್ಲ. ದೇವರು ಅದರ ಹಲವು ಪಟ್ಟು ನಮಗೆ ಕೊಡುತ್ತಾನೆ ಎಂದು ಹೇಳಿದರು.
ಸಾಧನೆ ಮಾಡಬೇಕು ಎನಿಸಿದರೆ ಇಂದೇ ಉತ್ಸಾಹದಿಂದ ಪ್ರಾರಂಭ ಮಾಡಬೇಕು. ನಾಳೆಯವರೆಗೆ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಉಳಿಸಿಕೊಳ್ಳಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕೆಂದು ಮಕ್ಕಳಿಗೆ ಕರೆ ನೀಡಿದರು.