HomeUncategorizedದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 

ಕೊಳದಲ್ಲಿ ಬೆಳೆದಿರುವ ಮರವೇರಿ ಹೋಗುತಿರೆ
ಇಳಿದಂತೆ ಕಾಣುವುದು ಪ್ರತಿಬಿಂಬದಿ
ಇಳಿದು ಬಂದರೆ ಕೆಳಗೆ‌ ಏರಿದಂತೆನಿಸುವುದು
ಹಾಗೆ ಜ್ಞಾನಜ್ಞಾನ‌- ಎಮ್ಮೆತಮ್ಮ 

ಶಬ್ಧಾರ್ಥ
ಕೊಳ = ಸರೋವರ

ತಾತ್ಪರ್ಯ
ಸರೋವರದ ಮಧ್ಯದಲ್ಲಿ‌ ಒಂದು ಮರ ಬೆಳೆದಿದ್ದರೆ‌ ಅದರ
ಪ್ರತಿಬಿಂಬ‌ ತಲೆಕೆಳಗಾಗಿ ಕಾಣಿಸುತ್ತದೆ. ಆ ಗಿಡವನ್ನು‌ ಹಿಡಿದು
ಏರುತ್ತಹೋದರೆ ಪ್ರತಿಬಂಬದಲ್ಲಿ‌ ಇಳಿದಂತೆ‌ ಕಾಣಿಸುತ್ತದೆ.
ಮತ್ತೆ ಇಳಿಯುತ್ತಾ ಬಂದರೆ ನೀರಿನ ಪ್ರತಿಬಿಂಬದಲ್ಲಿ ಏರಿದಂತೆ
ಕಾಣಿಸುತ್ತದೆ. ಹಾಗೆ ಜ್ಞಾನ ಹೆಚ್ಚುತ್ತಾ ಹೋದಂತೆ‌ ಅಜ್ಞಾನ
ಇಳಿಯುತ್ತ ಹೋಗುತ್ತದೆ. ಮತ್ತೆ ಜ್ಞಾನ ಕಡಿಯಾಗುತ್ತ‌ ಬಂದರೆ
ಅಜ್ಞಾನ ಹೆಚ್ಚುತ್ತಹೋಗುತ್ತದೆ. ಹೊರಗೆ ಕಣ್ಣಿಗೆ‌ ಕಾಣುವ ಮರ
ಸತ್ಯವಾದರೆ ನೀರಿನಲ್ಲಿ ಕಾಣುವ ಪ್ರತಿಬಿಂಬದ ಮರ ಮಿಥ್ಯ.
ಇದೆ ತೆರನಾಗಿ‌ ಬೆಳಕು‌ ಕತ್ತಲು, ಸಿರಿತನ ಬಡತನ,ಸದ್ಗುಣ‌ ದುರ್ಗುಣ ,ಲೌಕಿಕ‌ ಪಾರಮಾರ್ಥಿಕ ಹೆಚ್ಚು‌ ಕಡಿಮೆಯಾಗುತ್ತವೆ ಯಾವ ರೀತಿ ತಕ್ಕಡಿಯಲ್ಲಿ ಪರಡಿಗಳು ಭಾರಕ್ಕೆ‌ ತಕ್ಕಂತೆ ಮೇಲೆ‌ ಕೆಳಗೆ‌ ಬರುತ್ತವೆ‌ ಹಾಗೆ‌‌ ಮೇಲೆ ತಿಳಿಸಿದ ವಿಷಯಗಳು ಹೆಚ್ಚು ಕಡಿಮೆಯಾಗುತ್ತವೆ.ಆದಕಾರಣ‌ ಸತ್ಯವಾದ ಮರವನ್ನು
ಏರುತ್ತ ಹೋಗೋಣ ಅಂದರೆ ಆತ್ಮಜ್ಞಾನವನ್ನು‌ ಹೆಚ್ಚಿಸೋಣ.
ಮಿಥ್ಯವಾದ ಪ್ರತಿಬಂಬದಲ್ಲಿ‌ ಕಾಣುವ ಮರವನ್ನು ಇಳಿಯುತ್ತಾ ಮಾಯೆ ಮೋಹಾಂಧಕಾರವನ್ನು‌ ಕಡಿಮೆ‌ಮಾಡಿಕೊಳ್ಳೋಣ.
ಲೌಕಿಕದಲ್ಲಿದ್ದರು ಅದನ್ನು‌ ಕಡಿಮೆ ಮಾಡಿ‌‌‌ ಪಾರಮಾರ್ಥಿಕ
ಅನುಭವವನ್ನು ಹೆಚ್ಚು ಹೆಚ್ಚಾಗಿ ಪಡೆದುಕೊಳ್ಳೋಣ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990

RELATED ARTICLES

Most Popular

error: Content is protected !!
Join WhatsApp Group