ಮೂಡಲಗಿ: ಪಟ್ಟಣದ ಉಪನೋಂದಣಿ ಕಚೇರಿ ಅಧಿಕಾರಿಯ ಅಸಭ್ಯ ವರ್ತನೆ ಖಂಡಿಸಿ ಸೋಮವಾರದಂದು ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪನೋಂದಣಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶೀಘ್ರವಾಗಿ ಉಪನೋಂದಣಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ತಹಶೀಲ್ದಾರ ಮಹಾದೇವ ಸನ್ನಮುರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಶಿವರಡ್ಡಿ ಹುಚರಡ್ಡಿ ಮಾತನಾಡಿ, ಸಾರ್ವಜನಿಕರು ಕಚೇರಿಗೆ ಬಂದು ಮಾಹಿತಿ ಕೇಳಿದರೇ ಸಾಕು ಬಾಂಡ್ ಬರಹಗಾರರ ಕಡೆಗೆ ಹೋಗಿ ಅಂತ ಹೇಳಿ ಕಳಿಸುತ್ತಾರೆ. ಕಚೇರಿಯ ಕಂಪ್ಯೂಟರಗಳ ಮುಂದೆ ಖಾಸಗಿ ವ್ಯಕ್ತಿಗಳು ಕುಳಿತು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಹಾಗಾದರೇ ಕಚೇರಿಯ ಸಿಬ್ಬಂದಿಗಳು ಕಚೇರಿಯಲ್ಲಿ ಇರುವುದು ಯಾಕೆ ಎಂದು ನೋಂದಣಿ ಅಧಿಕಾರಿಯನ್ನು ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರ ಕೊಡುವುದಲ್ಲದೇ ಅಸಭ್ಯ ವರ್ತನೆ ತೋರುತ್ತಾರೆ ಎಂದು ಅಧಿಕಾರಿಯ ವಿರುದ್ಧ ದೂರಿದರು.
ಪಟ್ಟಣದಲ್ಲಿ ಉಪನೋಂದಣಿ ಕಚೇರಿ ಪ್ರಾರಂಭವಾದಾಗಿನಿಂದ ಸಹ ಇದೇ ರೀತಿಯಲ್ಲಿ ಅಧಿಕಾರಿಗಳು, ಕಚೇರಿಯ ಸಿಬ್ಬಂದಿಗಳು ಸಾರ್ವಜನಿಕರ ಜೊತೆಗೆ ಅಸಭ್ಯ ವರ್ತನೆ ಮಾಡುತ್ತಾರೆ ಬಂದಿದ್ದಾರೆ. ಅದೂ ಅಲ್ಲದೇ ಯಾವಾಗಲೂ ಕಚೇರಿಯಲ್ಲಿ ಏಜೆಂಟರೇ ತುಂಬಿರುತ್ತಾರೆ. ಸಾರ್ವಜನಿಕರು ಬಂದು ತಮ್ಮ ಕೆಲಸ ಮಾಡಿಕೊಳ್ಳಲು ಮುಂದಾದರೇ ಅದು ಸರಿ ಇಲ್ಲ ಇದು ಸರಿ ಇಲ್ಲಾ ಎಂದು ಅಲೆದಾಡಿಸುತ್ತಾರೆ ಇದರಿಂದ ಬೇಸತ್ತು ದಾರಿ ಇಲ್ಲದೇ ಸಾರ್ವಜನಿಕರು ಏಜೆಂಟರ ಬಳಿ ಹೋಗುವಂತೆ ಇಲ್ಲಿಯ ಅಧಿಕಾರಿ ಹಾಗೂ ಸಿಬ್ಬಂದಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಹುಚರಡ್ಡಿ ಆರೋಪಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ನಂಜುಂಡಿ ಸರ್ವಿ, ಲಕ್ಷ್ಮಣ ಮೆಳ್ಳಿಗೇರಿ, ಸಂಜು ಯಕ್ಷಂಬಿ, ಕರ್ನಾಟಕ ನವನಿರ್ಮಾಣ ಸೇನೆ ತಾಲೂಕಾ ಅಧ್ಯಕ್ಷ ಸಚಿನ್ ಲೆಂಕೆನ್ನವರ, ಸುರೇಶ ಎಮ್ಮಿ,ಬಸು ಸಾಲಾಪೂರ, ಸುನೀಲ ಗಸ್ತಿ, ಸುಭಾಷ ಕಡಾಡಿ, ಶಿವನಗೌಡ ಪಾಟೀಲ, ಶಿವಬಸು ಮೋರೆ, ಶಿವಬಸು ಗಾಡವಿ, ಮಹಾಲಿಂಗ ನಂದಗಾಮಠ, ಹಣಮಂತ ಪೂಜೇರಿ, ಪ್ರದೀಪ ದಳ್ಳೂರ, ಪ್ರವೀಣ ಡೊಳ್ಳಿ ಹಾಗೂ ಅನೇಕರು ಇದ್ದರು.