spot_img
spot_img

ಸಂಘಟನಾ ಚತುರೆ ಸಹೃದಯ ಲೇಖಕಿ ಶಿಕ್ಷಕಿ ನಂದಿನಿ ಸನಬಾಳ್

Must Read

- Advertisement -

೨೦೨೨ರ ಸಪ್ಟೆಂಬರ್ ತಿಂಗಳಲ್ಲಿ ನನ್ನ ಸಂಪಾದಿತ ಕೃತಿ ಅಭಿಪ್ರೇರಣೆ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜರುಗಿತು. ಅದು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿತ್ತು. ನಾಡಿನ ವಿವಿಧ ಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವಾರು ಶಿಕ್ಷಕ ಶಿಕ್ಷಕಿಯರು ತಮ್ಮ ತರಗತಿ ಕೊಠಡಿಯಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನು ನನಗೆ ಒದಗಿಸಿದ್ದರು.ಕೃತಿ ಬಿಡುಗಡೆ ದಿನದಂದು ಅವರಿಗೆ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಆ ಕೃತಿಯನ್ನು ನೀಡಿದ್ದೆವು.

ಕಾರ್ಯಕ್ರಮ ಮುಗಿದ ಎರಡು ದಿನಗಳ ನಂತರ ಗುರು ಮಾತೆ ನಂದಿನಿ ಸನಬಾಲ್ ಕರೆ ಮಾಡಿ ಅವರು ನನಗೆ ಮೇಲ್ ಕಳಿಸಿದ್ದ ಚಟುವಟಿಕೆಗಳನ್ನು ಬಳಸಿಕೊಂಡಿಲ್ಲ ಅಂತ ಹೇಳಿದರು. ಹೌದಾ ಯಾವ ಚಟುವಟಿಕೆಗಳು ಅಂತ ಮತ್ತೆ ನನಗೆ ಕಳಿಸಿ ಅಂತ ಹೇಳಿ ದಾಗ ಅವರು ಕಳಿಸಿದರು. ಅದು ಪಿಡಿಎಫ್ ಪೈಲ್ ಆಗಿರುವುದರಿಂದ ನುಡಿಯಲ್ಲಿ ಕಳಿಸಿದ ಚಟುವಟಿಕೆಗಳನ್ನು ಮಾತ್ರ ಬಳಸಿಕೊಂಡಿರುವೆ. ಅದೇ ಕೃತಿಯನ್ನು ಇನ್ನೂ ಹಲವು ಶಿಕ್ಷಕ ಶಿಕ್ಷಕಿಯರ ಚಟುವಟಿಕೆಗಳನ್ನು ಬಳಸಿಕೊಂಡು ಮತ್ತೆ ಮುದ್ರಣ ಮಾಡುತ್ತಿರುವೆ ಆ ಸಂದರ್ಭದಲ್ಲಿ ಬಳಸಿಕೊಳ್ಳುವ ಕುರಿತು ತಿಳಿಸಿದೆ.

- Advertisement -

ಅಂದಿನಿಂದ ಅವರು ತಮ್ಮ ದೈನಂದಿನ ತರಗತಿ ನಿರ್ವಹಣೆ ಹಲವು ಚಟುವಟಿಕೆಗಳನ್ನು ನನಗೆ ವ್ಯಾಟ್ಸಪ್ ನಲ್ಲಿ ಕಳಿಸತೊಡಗಿದರು. ತುಂಬಾ ಖುಷಿ ಆಗುತ್ತಿತ್ತು. ಜೊತೆಗೆ ತಮ್ಮ ಸಾಮಾಜಿಕ ಸೇವೆ ಕುರಿತು ಅವರು ಮಾಹಿತಿ ಕಳಿಸುತ್ತಿದ್ದರು.

೨೦೨೨ ರ ನವೆಂಬರ್ ತಿಂಗಳಲ್ಲಿ ನಾನು ನನ್ನ ಸ್ನೇಹಿತರಾದ ಮಹಾದೇವ ಸತ್ತೀಗೇರಿ ಅವರ ಮಗ,ಋತ್ವಿಕ್ ಅಭಿನಯದ ಅಮ್ಮಾ ನಾನು ಶಾಲೆಗೆ ಹೋಗುವೆ ಕಿರುಚಿತ್ರ ಚಿತ್ರೀಕರಣಕ್ಕಾಗಿ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮಕ್ಕೆ ಹೋಗಿದ್ದೆ. ಅಲ್ಲಿ ಶಿಕ್ಷಕಿಯ ಪಾತ್ರದ ಚಿತ್ರೀಕರಣ ನಡೆದಿತ್ತು. ದೂರದ ಗುಲ್ಬರ್ಗ ಜಿಲ್ಲೆಯ ಶಿಕ್ಷಕಿ ಅಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದರು. ಅವರ ಅಭಿನಯ ಗಮನಿಸಿದೆ. ನಂತರ ಪ್ರಭಾತಫೇರಿ ದೃಶ್ಯ ನಾನು ಕೂಡ ನಿರ್ದೇಶಕರ ಕೋರಿಕೆ ಮೇರೆಗೆ ಪಾಲ್ಗೊಂಡು ಚಿತ್ರೀಕರಣ ಬಿಡುವಾದಾಗ ಗುರುಮಾತೆ ಮಾತಿಗಿಳಿದರು ಅವರೇ ನಂದಿನಿ ಸನಬಾಳ್.

ಪೋನ್‌ನಲ್ಲಿ ತಮ್ಮ ಚಟುವಟಿಕೆಗಳನ್ನು ಬಳಸಿಕೊಂಡಿಲ್ಲ ಅಂತ ಕರೆ ಮಾಡಿದ್ದ ಶಿಕ್ಷಕಿ. ಹೆಬ್ಬಳ್ಳಿಯ ಲೂಸಿ ಸಾಲ್ಡಾನಾ ಮಾನಸಪುತ್ರ ಎಂದು ಕರೆಯಲ್ಪಡುವ ಎಲ್. ಐ. ಲಕ್ಕಮ್ಮನವರ ಶಿಕ್ಷಕರೇ ಈ ಪರಿಚಯಕ್ಕೆ ಕಾರಣ ಹಾಗೂ ಅವರಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಗಮನಿಸಿ ನನಗೆ ಅವರು ಮೇಲ್ ಮೂಲಕ ಚಟುವಟಿಕೆಗಳನ್ನು ಕಳಿಸಲು ಹೇಳಿದವರು ಅಂದರೆ ಅತಿಶಯೋಕ್ತಿ ಆಗದು. ಅವರ ಸೇವೆಯನ್ನು ಗುರುತಿಸಿ ಸಂಘಟನೆಯೊಂದು ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿತು ಆ ಸಂದರ್ಭದಲ್ಲಿ ನನಗೆ ವ್ಯಾಟ್ಸಪ್ ಮೂಲಕ ತಮ್ಮ ಸಂತೋಷದ ಕ್ಷಣªನ್ನು ನನಗೆ ತಿಳಿಸಿದ್ದರು. ಅಭಿನಂದಿಸಿದೆ. ಜೊತೆಗೆ ಅವರ ಪರಿಚಯ ಕೇಳಿದಾಗ ತಿಳಿಸಿದರು., ಅವರಲ್ಲಿ ಪ್ರಗತಿಪರ ಚಿಂತನೆಗಳನ್ನು ಕಂಡಾಗ ಇವರ ಕುರಿತು ಕಿರು ಬರಹ ರೂಪಿಸಬೇಕು ಎಂದುಕೊಂಡು ಈ ಬರಹ ರೂಪಿಸಿದೆ.

- Advertisement -

ಶಾಲೆಯಲ್ಲಿ ಮಕ್ಕಳಿಗೆ ನಿರಂತರ ಪಾಠ ಜೊತೆಗೆ ಸಹಪಠ್ಯಗಳ ಆಟ… ಅದರೊಂದಿಗೆ ಕಲಿಕಾ ಚಟುವಟಿಕೆಗಳ ಮೂಲಕ ಬೋಧನೆ ಮಾಡುತ್ತಾ ಬರುತ್ತಿರುವ ಇವರು, ಶೈಕ್ಷಣಿಕವಾಗಿ ಆದರ್ಶ ಸಂಘಟನೆಗಳ ಮೂಲಕ ಅಕ್ಷರದ ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದರೆ ಅತಿಯಶೋಕ್ತಿ ಆಗಲಾರದು.

ಬಿಸಿಲು ನಾಡಿನ ಭರವಸೆಯ ಶಿಕ್ಷಕಿ ನಂದಿನಿ ಸನಬಾಳ್ ರವರು. ಕಳೆದ ೨೦ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಸಾಹಿತ್ಯ ಸಂಸ್ಕೃತಿ ಹಾಗೂ ಸಮಾಜ ಸೇವೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ.

ಬಾಲ್ಯ ಹಾಗೂ ಶಿಕ್ಷಣ

ಶ್ರೀಮತಿ ನಂದಿನಿ ಸನಬಾಳ್ ಇವರು ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾರೆ, ತಂದೆ ದಿವಂಗತ ಪುಟ್ಟರಾಜ್ ಶಂಭುಶಂಕರ ಹಾಗೂ ತಾಯಿ ಶ್ರೀಮತಿ ರಾಜೇಶ್ವರಿ. ಪಿ. ಇವರ ನೆಚ್ಚಿನ ಕುವರಿಯಾಗಿ ೨೧-೩-೧೯೮೧ ರಂದು ಬೀದರ್ ಜಿಲ್ಲೆಯ ಹುಮನಾಬಾದ ಎಂಬ ಗ್ರಾಮದಲ್ಲಿ ಜನಿಸಿದರು. ೭ ಜನ ಮಕ್ಕಳಲ್ಲಿ ಹಿರಿಯವರು. ೫ ಜನ ಸಹೋದರಿಯರು. ಇಬ್ಬರು ಸಹೋದರರು. ತಮ್ಮ ಮಗಳು ಭವಿಷ್ಯದಲ್ಲಿ ವೈದ್ಯ ಆಗಬೇಕು ಎಂದು ಕನಸು ಕಂಡ ನಂದಿನಿ ಅವರ ತಂದೆ ಪುಟ್ಟರಾಜ ಶಂಭುಶಂಕರ್ ಅವರು ನಾಡಿನ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮ ಮಗಳನ್ನು ಸಂಪೂರ್ಣವಾಗಿ ತೊಡಗಿಸಬೇಕೆಂಬ ಕನಸನ್ನು ಕಂಡಿದ್ದರು. ಶ್ರೀಮತಿ ನಂದಿನಿ ಸನಬಾಳ್ ಅವರು ತಮ್ಮ ಪ್ರಾಥಮಿಕ ಶಿಕ್ಷಣ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕು ರಾಜೇಶ್ವರ್ ಗ್ರಾಮದ ಪಾರ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. ಚಿಕ್ಕಂದಿನಲ್ಲಿ ಅಕ್ಷರದ ರುಚಿ ಕಂಡ ಇವರು ಪ್ರತಿ ಹಂತದಲ್ಲಿ ಒಬ್ಬ ಕ್ರಿಯಾತ್ಮಕ ವಿದ್ಯಾರ್ಥಿಯಾಗಿ ಜೊತೆಗೆ ಸರ್ವ ಶಿಕ್ಷಕರ ಪ್ರೀತಿಯ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದರು.

ಪ್ರೌಢ ಶಿಕ್ಷಣವನ್ನು ಸತ್ಯಾಶ್ರಯ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ರ ರಾಜೇಶ್ವರ್ ಗ್ರಾಮದಲ್ಲಿ ಪೂರೈಸಿದರು. ಈ ಹಂತದಲ್ಲಿ ವೈಜ್ಞಾನಿಕ ಮನೋಭಾವ ಹೊಂದಿದ ಇವರು ಅಜ್ಞಾನಕ್ಕೆ ವಿಜ್ಞಾನವೇ ಮದ್ದು ಎಂದು ಅರ್ಥೈಸಿಕೊಂಡಿದ್ದರು.

ಪದವಿಪೂರ್ವ ಶಿಕ್ಷಣವನ್ನು ಬೀದರ ಜಿಲ್ಲೆಯ ಹುಮನಾಬಾದನ ಶ್ರೀ ವೀರಭದ್ರೇಶ್ವರ ಪದವಿಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು. ಶಿಕ್ಷಕರ ಶೈಕ್ಷಣಿಕ ತರಬೇತಿಯನ್ನು ಕಲಬುರ್ಗಿ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಪಡೆಯುವ ಮೂಲಕ. ಮುಂದೆ ಶಿವಮೊಗ್ಗದ ಕುವೆಂಪು ಮುಕ್ತ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪಡೆದರು. ಇಷ್ಟು ಮಾತ್ರವಲ್ಲದೆ ಮನೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ರೂಢಿಸಿಕೊಂಡರು. ಅಂದರೆ ಮುಂದೆ ನೌಕರಿ ಬದುಕು ಆರಂಭವಾದರೆ ಅದು ತಮಗೆ ರೂಢಿಯಾಗಿ ಉಳಿಯಲಿ ಎಂಬುದು ಅವರ ಇಚ್ಛೆಯಾಗಿತ್ತು. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಇವರಿಗೆ ನೌಕರಿ ಭಾಗ್ಯ ಕೂಡ ಒಲಿದು ಬಂದಿತು.

ಸಹೃದಯಿ/ವೈಚಾರಿಕ ಮನೋಭಾವ

ಶ್ರೀಮತಿ ನಂದಿನಿ ಸನಬಾಳ್ ಅವರು ಒಬ್ಬ ಪ್ರಾಥಮಿಕ ಶಿಕ್ಷಕಿ ಆಗಿದ್ದರೂ ಒಬ್ಬ ಅಪ್ಪಟ ಪ್ರಗತಿಪರ ಚಿಂತಕರು ಸ್ವಾಮಿ ವಿವೇಕಾನಂದ ಮದರ್ ತೆರೇಸಾ, ಬಸವಣ್ಣ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಅಕ್ಷರದ ಅವ್ವ ಮಾತೆ ಸಾವಿತ್ರಿ ಫುಲೆ ಸೇರಿದಂತೆ ಅನೇಕ ರಾಷ್ಟ್ರ ನಾಯಕರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ.ಅವರ ನುಡಿ ಮುತ್ತುಗಳನ್ನು ಪ್ರತಿ ನಿತ್ಯ ಹಲವಾರು ವಿವಿಧ ರಂಗಗಳಲ್ಲಿ ತೊಡಗಿರುವ ತಮ್ಮ ಪರಿಚಯದ ಮನಸುಗಳಿಗೆ ಕಳಿಸುವುದು ಅವರ ಹವ್ಯಾಸಗಳಲ್ಲೊಂದು. ಇವರು ವ್ಯಾಟ್ಸಪ್ ಸಂದೇಶಗಳ ಜೊತೆಗೆ ಕುಟುಂಬ ಎಂಬ  ಆ್ಯಪ್ ಬಳಕೆ ಮಾಡುತ್ತಿದ್ದು ಅವುಗಳಲ್ಲಿ ತಮ್ಮ ಬರವಣಿಗೆ ಮೂಲಕ ನಾಡಿನಾದ್ಯಂತ ತಮ್ಮದೇ ಆದ ಸಹೃದಯ ಬಳಗವನ್ನು ಹೊಂದಿರುವ ಇವರು ಇತ್ತೀಚಿಗೆ ತಮ್ಮ ಶಾಲೆಯ ಮಗುವೊಂದು ಹೃದಯಸಂಬಂಧಿ ಚಿಕಿತ್ಸೆ ಪಡೆಯಬೇಕಾದ ಸಂದರ್ಭದಲ್ಲಿ ಅವರ ತಾಯಿಯಿಂದ ವಿಷಯ ತಿಳಿದು ಅವರ ಬಡತನಕ್ಕೆ ಮರುಕಪಟ್ಟು ತಮ್ಮ ಶಿಕ್ಷಕ ಬಳಗದ ಮೂಲಕ ಹಣ ಸೇರಿಸಿ ತಮ್ಮಿಂದ ಉಳಿದ ಹಣ ಹಾಕುವ ಮೂಲಕ ಆ ಬಡ ಕುಟುಂಬದ ಮಗುವಿನ ಹೃದಯಸಂಬಂಧಿ ಚಿಕಿತ್ಸೆಗೆ ನೆರವಾಗುವ ಮೂಲಕ ಸಹೃದಯಿ ಶಿಕ್ಷಕಿಯಾಗಿ ಪ್ರೀತಿ ತೋರಿರುವರು. ಶಾಲೆಯಲ್ಲಿ ಎಲ್ಲ ಮಕ್ಕಳು ಇವರನ್ನು ಕಂಡ ತಕ್ಷಣ ಇವರ ಬಳಿ ಬರುವದು.ಅವರ ವ್ಯಕ್ತಿಗತ ಬದುಕನ್ನು ಕೇಳಿ ತಿಳಿಯುವ ಜೊತೆಗೆ ಸಹಶಿಕ್ಷಕರ ರಜೆಯ ಸಂದರ್ಭದಲ್ಲಿ ಆ ತರಗತಿಯನ್ನು ತಾವು ತೆಗೆದುಕೊಳ್ಳುವ ಮೂಲಕ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಅವರ ಜೀವನ ಹೇಗೆ ಸಾಗಿದೆ ಎಂಬುದನ್ನು ತಿಳಿದುಕೊಂಡು ತಮ್ಮಿಂದ ಕೈಲಾದ ಮಟ್ಟಿಗೆ ಸಹಾಯ ನೀಡುವ ಇವರ ಮನೋಭಾವ ನಿಜಕ್ಕೂ ಮೆಚ್ಚುವಂತಹದ್ದು. ಇವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಮಾಜಮುಖಿಯಾಗಿ ತಮ್ಮದೇ ಚಟುವಟಿಕೆಗಳಲ್ಲಿ ನಿರತರಾಗಿರುವುದನ್ನು ಕಂಡು ಅವರ ಬದುಕಿಗೆ ಅನುಕೂಲವಾಗುವ ಸಲಹೆಗಳನ್ನು ನೀಡುವುದಲ್ಲದೇ ಅವರ ಮಕ್ಕಳು ತಮ್ಮ ಕೈಯಲ್ಲಿ ಕಲಿಯುತ್ತಿರುವುದನ್ನು ಕಂಡಾಗ ತುಂಬಾ ಸಂತೋಷ ಪಡುವ ಮನೋಭಾವ ಇವರದು.

ಶಿಕ್ಷಕ ವೃತ್ತಿ

೨೦೦೩ರಲ್ಲಿ ತಮ್ಮ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ್ದು ಕಲಬುರಗಿ ತಾಲೂಕಿನ ಪಾಳಾ ಎನ್ನುವ ಗ್ರಾಮದಲ್ಲಿ. ಒಂದೇ ಶಾಲೆಯಲ್ಲಿ ಸತತ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಪಾಳಾ ಗ್ರಾಮದ ಪ್ರತಿಯೊಬ್ಬ ಪಾಲಕರ ಮನೆ ಮಾತಾಗಿರುವ ಶಿಕ್ಷಕಿ ಶ್ರೀಮತಿ ನಂದಿನಿ ಸನ್‌ಬಾಳ ರವರು ಮಕ್ಕಳ ನಿರಂತರ ಕಲಿಕೆಗೆ ಪೂರಕವಾದ ಬೋಧನೆಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಕೌಟುಂಬಿಕ ಜೀವನ

ಶ್ರೀಮತಿ ನಂದಿನಿ ಸನಾಬಾಲ್ ಅವರದ್ದು ಆದರ್ಶ ಕುಟುಂಬ…. ಜೊತೆಗೆ ಸಂತಸದ ಸಂಸಾರ ಇವರು ೨೦೦೨ ರಲ್ಲಿ ಆದರ್ಶ ಪ್ರಾಯವಾಗಿರುವ ಮತ್ತು ಚಿಂತನಶೀಲರಾಗಿರುವ ಶ್ರೀ ಸುರೇಂದ್ರ ಸನಬಾಳ್ ಅವರನ್ನು ಕೈ ಹಿಡಿದಿದ್ದಾರೆ, ಇವರ ಪತಿಯ ಪ್ರೋತ್ಸಾಹ ಕೂಡ ಇವರಿಗೆ ದೊರೆಯುವ ಮೂಲಕ ತಮ್ಮ ಉತ್ತಮ ಹವ್ಯಾಸ ಮುಂದುವರೆದಿದೆ ಎಂದು ಹೆಮ್ಮೆ ಯಿಂದ ಹೇಳುವ ಶ್ರೀಮತಿ ನಂದಿನಿ ಸನಬಾಳ್ ದಂಪತಿಗಳು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿರುವರು. ಸನಬಾಳ್ ದಂಪತಿಗಳು ಚಿಕ್ಕ ಸಂಸಾರದೊಂದಿಗೆ ಸಂತಸದ ಸಮಯವನ್ನು ಸದ್ವಿನಿಯೋಗದಿಂದ ಕಳೆಯುತ್ತಾ ಬರುತ್ತಿದ್ದಾರೆ.

ಕುಮಾರಿ ಶ್ರದ್ಧಾ ಮತ್ತು ಕನಿಷ್ಕ ಮತ್ತು ಕುಮಾರ ರೀಯಾಂಶ ಸನ್ಬಾಳ್ ಎಂಬ  ಮೂವರು ಮುದ್ದು ಮಕ್ಕಳ ಜೊತೆ ಸದಾ ಶೈಕ್ಷಣಿಕವಾಗಿ ಒಂದಿಲ್ಲ ಒಂದು ಕಾರ್ಯನಿರ್ವಸುತ್ತ ಬರುತ್ತಿರುವ ಈ ದಂಪತಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸುರೇಂದ್ರ ಸನಬಾಳ್ ಅವರು ಕಲ್ಬುರ್ಗಿ ನಗರ ಸರಕಾರಿ ಆಸ್ಪತ್ರೆ ವೈದ್ಯಕೀಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಸಂದರ್ಭದಲ್ಲಿ ಪತಿಯೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಕರೋನಾ ಸಂದರ್ಭದಲ್ಲಿ ಬಡವರಿಗೆ ಸಂದರ್ಭದಲ್ಲಿ ಅಲ್ಪಸಲ್ಪ ಧನ ಸಹಾಯ ಮಾಡಿದ್ದಾರೆ. ಹಿರಿಯ ಮಗಳು ಬಿ.ಇ.ಸಿವ್ಹಿಲ್ ಮೂರನೆಯ ಸೆಮಿಸ್ಟರ್ ಓದುತ್ತಿದ್ದಾಳೆ. ಎರಡನೆಯವಳು ನಾಲ್ಕನೆಯ ತರಗತಿ ಓದುತ್ತಿರುವಳು. ಮೂರನೆಯವನು ಬರುವ ವರ್ಷ ಒಂದನೆಯ ತರಗತಿಗೆ ದಾಖಲಾಗುವನು.ಈ ರೀತಿಯ ಮಕ್ಕಳ ಶೈಕ್ಷಣಿಕ ಬದುಕನ್ನು ಕೂಡ ಕಾಳಜಿಯಿಂದ ಓದಿಸುತ್ತಿರುವರು.

ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲ ಶಿಕ್ಷಕಿ

ನಮ್ಮ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತಾ ಸಾಗಿದರೆ ಅದಕ್ಕೆ ದೇವರು ಪ್ರತಿಫಲ ನೀಡುತ್ತಾನೆ ಎಂಬುದಕ್ಕೆ ನಂದಿನಿ ಸನಬಾಳ್ ನಿದರ್ಶನ.ಇವರು ಶಿಕ್ಷಣ ಇಲಾಖೆಯ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರು ಮಾತೆ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕದ ಕಲಬುರಗಿ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕಲಬುರಗಿ ಜಿಲ್ಲಾ ಪಿ ಎಸ್ ಟಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವರು. ಅದೇ ರೀತಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ರಾಜ್ಯ ಘಟಕ ಕಲಬುರ್ಗಿ ಜಿಲ್ಲಾ ಘಟಕ ಕಲಬುರ್ಗಿ (SKUPS) ) ಹಾಗೂ ಕಲಬುರ್ಗಿ ತಾಲೂಕು, ದಕ್ಷಿಣ ವಲಯದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರ್ಕಾರಿ,ಅರೆ ಸರ್ಕಾರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನೌಕರರ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಿದ್ದಾರೆ.

ಇವರ ಚಟುವಟಿಕೆಗಳನ್ನು ವಿವಿಧ ಇಲಾಖೆಯವರನ್ನು ಗುರುತಿಸಿ ಅವರ ಕಾರ್ಯ ಸಾಧನೆಯನ್ನು ಕಂಡು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಗುರುತಿಸಿ, ಸಂಘಟನೆ ಪರವಾಗಿ ಪ್ರಶಸ್ತಿಗಳನ್ನು ಕೂಡ ನೀಡುತ್ತಿದ್ದಾರೆ. ಶಿಕ್ಷಣ ಶಿಸ್ತು ಸಂಘಟನೆ ಹೋರಾಟ ಮತ್ತು ಪ್ರಶಸ್ತಿ ಈ ಆದರ್ಶಗಳನ್ನು ಒಳಗೊಂಡು ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ, ಹೆಣ್ಣು ಮಕ್ಕಳಿಗಾಗಿ ಸಮಾನ ಅವಕಾಶ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ, ಹೆಣ್ಣು ಮಕ್ಕಳು ಶಿಕ್ಷಣಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ. ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘಟನೆಯಲ್ಲಿ ಅಂಗನವಾಡಿಯಿಂದ ಪದವಿ ಶಿಕ್ಷಣದವರೆಗೂ ಬೋಧನಾ ವರ್ಗದವರು ಇರುವುದರಿಂದ, ಎಲ್ಲಾ ಹಂತದಲ್ಲಿಯೂ ಮಕ್ಕಳಿಗೆ ಇವರ ಸಂಘಟನೆ ಪರವಾಗಿಹೊಸ ಹೊಸ ಕಾರ್ಯ ಚಟುವಟಿಕೆಗಳನ್ನು ಹಾಕಿಕೊಂಡಿದ್ದಾರೆ, ಎಸ್ ಎಸ್ ಎಲ್ ಸಿ ಮಕ್ಕಳ ಉತ್ತಮ ಫಲಿತಾಂಶ ಫಲಿತಾಂಶಕ್ಕಾಗಿ ೨೦೨೨ ರಲ್ಲಿ ವರ್ಷ SKUPS ಸಂಘಟನೆ ಆನ್ಲೈನ್ ನಲ್ಲಿ ಲೈವ್ ಕಾರ್ಯಕ್ರಮ ಕೂಡ ಕೊಟ್ಟಿದ್ದಾರೆ.

ನೇರ ನುಡಿಯ ದಿಟ್ಟಗಾರ್ತಿ

ಇವರು ತಮ್ಮೆದುರಿಗೆ ಏನಾದರೂ ಭಾವನಾತ್ಮಕ ಘಟನೆಗಳನ್ನು ಕಂಡುಬಂದಾಗ ನೇರವಾಗಿ ಸ್ಪಂದನೆ ಮಾಡುವ ಜೊತೆಯಲ್ಲಿ ತಮ್ಮಿಂದ ಏನು ಹೇಳಬೇಕೋ ಅದನ್ನು ಹೇಳುವ ಇವರ ಸ್ವಭಾವವನ್ನು ಕಂಡು ಇವರನ್ನು ಕಂಡ ಸಹವರ್ತಿಗಳು ಬಹಳ ಬೋಲ್ಡ ಇದ್ದಾರೆ ಇವರು ಎಂದುಕೊಳ್ಳುವ ಜನರುಂಟು. ಆದರೆ ಇವರು ತಮ್ಮಷ್ಟಕ್ಕೆ ತಾವು ತಮ್ಮ ಕಾರ್ಯ ಮಾಡುತ್ತ ಮಾಡುತ್ತ ಹೊರಟಿರುವ ಇವರ ಬಗ್ಗೆ ಅನೇಕರು ತಾತ್ಸಾರ ಪಟ್ಟಿದ್ದು ಉಂಟು.ಆದರೂ ಇಂತಹ ಘಟನೆಗಳಿಗೆ ಸಂದರ್ಭಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕರ್ತವ್ಯ ನಿರ್ವಹಿಸುತ್ತಿರುವರು. ಇದು ಕೂಡ ಇವರ ಬದುಕಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಈ ರೀತಿಯ ಇವರ ವ್ಯಕ್ತಿತ್ವವನ್ನು ಬೋಲ್ಡ ಎಂದು ಕರೆದವರು ಬಹಳ ಜನ.ಇವರ ಧ್ವನಿಯನ್ನು ವೈಭವ ಚಾನೆಲ್ ದವರು ಇವರ ಪರಿಚಯದ ಕುರಿತು ಸಂದರ್ಶನ ಮಾಡಿರುವರು.ಇದರ ಜೊತೆಗೆ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೂಡ ಇವರು ಕಾರ್ಯನಿರ್ವಹಿಸುವರು. 

ಪಡೆದ ಗೌರವಗಳು

ಇವರ ಸೇವೆಯನ್ನು ಗುರುತಿಸಿ ಸಣ್ಣೂರ್ ಕ್ಲಸ್ಟರ್ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ನಂತರ ಕರ್ನಾಟಕ ಸರ್ಕಾರ ನೀಡುವ ಕಲಬುರ್ಗಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, ಇತ್ತೀಚೆಗೆ ಲೂಸಿ ಸಾಲ್ದಾನ್ ದತ್ತಿ ಸೇವಾ ಸಂಸ್ಥೆ ಧಾರವಾಡ ನೀಡಿದ ಶಿಕ್ಷಕರತ್ನ ಪ್ರಶಸ್ತಿ, ನಾಡಿನ ಸಮಾಚಾರ ಗೋಕಾಕ್ ಇವರು ಕನ್ನಡ ವಿಭೂಷಣ ರಾಜ್ಯ ಪ್ರಶಸ್ತಿ ಹಾಗೂ ಕಲಬುರ್ಗಿಯ ಜೈ ಕನ್ನಡಿಗರ ಸೇನೆ ಇವರಿಂದ ರಾಜೋತ್ಸವ ಪ್ರಶಸ್ತಿಯನ್ನು. ಅಪ್ನಾದೇಶ ಸಂಘಟನೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಬರವಣಿಗೆ ಕುರಿತು ಕುವೆಂಪು ರತ್ನ  ಪ್ರಶಸ್ತಿ ಕಲಬುರ್ಗಿಯ ಸಾಹಿತ್ಯ ಸಂಘಟನೆಯವರು ನೀಡಿರುವರು. ಮಹಿಳಾ ದಿನಾಚರಣೆ ದಿನದಂದು ಮಹಿಳಾ ದಿನಾಚರಣೆಯಂದು ಕೂಡ ಸಂಘಟನೆಯವರು ಇವರನ್ನು ಸಂಘಟನೆಯವರು ಸನ್ಮಾನ ಮಾಡಿರುವರು. ಇವರು ಅನೇಕ  ಗೌರವ ಪ್ರಶಸ್ತಿಗಳನ್ನು ಪಡೆದಿರುವರು.

ಕಿರುಚಿತ್ರದಲ್ಲಿ ಅಭಿನಯ

ಇವರು ಅಮ್ಮ ನಾನು ಶಾಲೆಗೆ ಹೋಗುವೆ ಕನ್ನಡ ಕಿರುಚಿತ್ರದಲ್ಲಿ ಅಭಿನಯಿಸಿ ಎಲ್ಲರೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿತ್ರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಹಾಗೂ ೨೦೨೩ ಜನವರಿಯಲ್ಲಿ ಬ್ಯಾಂಕಾಕ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಕಿರುಚಿತ್ರ ಪ್ರದರ್ಶನಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಅಪ್ಪ ನನ್ನ ಹೊಡಿಬೇಡಪ್ಪೋ ಕಿರು ಚಿತ್ರದಲ್ಲಿ ಅಭಿನಯಿಸಿದ್ದು. ಇದು ಕೂಡ ಬಿಡುಗಡೆಗೊಂಡು ಉತ್ತಮ ಹೆಸರು ಪಡೆಯಿತು. ೨೦೨೪ ರ ಮಾರ್ಚ ೧೯ ರಂದು ಅಂತರ್ಜಾಲ ತಾಣದಲ್ಲಿ ಬಿಡುಗಡೆಗೊಂಡ ಇವರ ಅಭಿನಯದ ನಾನು ಲೂಸಿ ಲಕ್ಷಾಂತರ ವೀಕ್ಷಕರನ್ನು ಕೇವಲ ಒಂದು ವಾರದಲ್ಲಿ ಪಡೆದಿದೆ.ಜೀವಂತ ದಂತಕತೆ ಶಿಕ್ಷಕಿ ಲೂಸಿ ಸಾಲ್ಡಾನಾ ಅವರ ಬದುಕನ್ನು ಆಧರಿಸಿದ ಚಿತ್ರ ಇದಾಗಿದ್ದು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಈ ಚಿತ್ರದ ಚಿತ್ರಕಥೆಯನ್ನು ಬರೆದಿರುವರು.

ಪ್ರಗತಿಪರ ಚಿಂತಕಿ ಹಾಗೂ ಲೇಖಕಿ

ಗ್ರಾಮೀಣ ಶಾಲೆಯ ಮಕ್ಕಳ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡು, ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಂದಿನಿ ಸನಾಬಾಳ್ ಬಡ ಮಕ್ಕಳ ಸೇವೆ ಹಾಗೂ ಅವರ ಶಿಕ್ಷಣ ಕ್ಕೆ ಪ್ರೋತ್ಸಾಹ ನೀಡಬೇಕು ಎನ್ನುವ ಕನಸು ಅಭಿನಂದನಾರ್ಹ. ತಮಗೆ ಶಿಕ್ಷಣ ನೀಡಿದ ಗುರುಗಳ ಕುರಿತು ಇವರು ಬರಹಗಳನ್ನು ಬರೆದಿರುವರು. ಆ ಬರಹಗಳನ್ನು ನನಗೆ ಕಳಿಸಿದ್ದಾರೆ. ಇವುಗಳನ್ನು ಒಂದು ಪುಸ್ತಕ ಮಾಡಿ ಎಂದು ಸಲಹೆ ನೀಡಿರುವೆನು. ಇತ್ತೀಚಿಗಷ್ಟೇ ಕಲಬುರಗಿಯ ಆಕಾಶವಾಣಿಯ ವನಿತಾ ವಿಹಾರದಲ್ಲಿ ಡಾ.ಸದಾನಂದ ಪೆರ್ಲ ಅವರು ನಂದಿನಿ ಅವರ ಅರ್ಥಪೂರ್ಣ ಸಂದರ್ಶನ ಮಾಡಿದ್ದು ಅದು ಕೂಡ ರಾಜ್ಯವ್ಯಾಪಿ ಪ್ರಸಾರ ಮಾಡಿದ್ದು ಇವರ ಪ್ರತಿಭೆಗೆ ಮತ್ತೊಂದು ರೀತಿಯ ಪ್ರೋತ್ಸಾಹ ಕೂಡ ದೊರೆತಂತಾಯಿತು.

ಲೇಖನಗಳು/ಕವನಗಳು

  1. ಮಾತೃ ದೇವೋಭವ
  2. ಕಳವಳ ಯಾಕೆ ಹೀಗೆ? ಕ್ರೀಡಾಪಟುಗಳ ಕುರಿತು
  3. ಹೇ ಗುರುವರ್ಯ(ಕವನ) ಸರ್ವಿ ಗುರುಗಳ ಸ್ಮರಣ ಸಂಚಿಕೆ(ಬೆಳಕಿನೆಡೆಗೆ)ಯಲ್ಲಿ ಪ್ರಕಟಣೆ
  4. ಪತ್ರಕರ್ತ (ಕವನ)
  5. ಗೆಳೆತನ ಸುವಿಶಾಲ ಆಲದ ಮರದಡಿ ಅರಳಲಿ
  6. ಪ್ರಗತಿಯ ಪಥ (ಕವನ)
  7. ಮಕ್ಕಳ ಮನಸ್ಸು ಅರಳಿಸುವ ಶಿಕ್ಷಕ ವೃತ್ತಿ
  8. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ.
  9. ಕಾಯಕ ಜೀವಿ ಅಪ್ಪ
  10. ನನ್ನ ಪ್ರೀತಿಯ ಅಪ್ಪ
  11. ಪುನೀತ್ ರಾಜಕುಮಾರ್ ಅವರ ಸ್ಮರಣೆ ನೀಳ್ಗವನ
  12. ಅಪ್ಪು ಅಭಿಮಾನಿಗಳ ಪಾಲಿಗೆ ದೇವರ ಸ್ವರೂಪಿ
  13. ಮಕ್ಕಳ ದಿನಾಚರಣೆ ಕುರಿತು ಲೇಖನ
  14. ಅಮ್ಮ ಜಗದಗಲ ಮುಗಿಲಗಳ,(ತಾಯಿಯ ಕುರಿತು)
  15. ಅಮ್ಮ ಎಂದರೆ ಏನೊ ಹರುಷ
  16. ಡಿಸೆಂಬರ್ ೬ ಮಹಾನಿರ್ವಹಣಾ ದಿನ ಕುರಿತು
  17. ಒಳಗಿರುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ..
  18. ತಂದೆಗೆ ತಾಯಿಯಾದ ಮಗಳು
  19. ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ
  20. ಅಪ್ಪ ಐ ಲವ್ ಯು ಪ
  21. ದೇಶದ ಅಭಿವೃದ್ಧಿ ಯುವಕರಿಂದ ಮಾತ್ರ ಸಾಧ್ಯ
  22. ಜನೇವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ
  23. ಎಲ್ಲರೂ ಓದುತ್ತಿರುವಾಗ ನೀನ್ಯಾಕೆ ಓದು ನಿಲ್ಲಿಸಿದಿ….?
  24. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಲೇಖ
  25. ನಾನಿರುವಾಗ ಇನ್ನೊಂದು ಮದುವೆ ಯಾಕೆ? ಹೆಣ್ಣು ಮಾತ್ರ ಬಂಜೇನಾ.?
  26. ಮಹೇಶ ಹುಬ್ಬಳಿ ವ್ಯಕ್ತಿ ಪರಿಚಯ
  27. ವೈ.ಬಿ.ಕಡಕೋಳ ಅವರ ಶಿಕ್ಷಣದ ಕೀರ್ತಿ ಕೀರ್ತಿವತಿ ಕೃತಿಗೆ ಬೆನ್ನುಡಿ ಬರೆದಿರುವರು.
  28. ಸಾಮಾಜಿಕ ಸೇವಕ ಆದಿನಾಥ್ ಕುರಿತು ಬರಹ.

ಇವರ ಬರಹಗಳು ಕವನಗಳು ಅಂತರ್ಜಾಲ ತಾಣಗಳಾದ ಪಬ್ಲಿಕ ಟುಡೇ ಮತ್ತು Times of ಕರ್ನಾಟಕ ಇವುಗಳಲ್ಲಿ ಪ್ರಕಟವಾಗುತ್ತಿವೆ. ದಿನಪತ್ರಿಕೆಗಳಾದ ಹಂಪಿ ಟೈಮ್ಸ ಮತ್ತು ವೇಗವಾಹಿನಿ ಪತ್ರಿಕೆಯಲ್ಲಿ ಕೂಡ ಪ್ರಕಟವಾಗಿವೆ.

ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿ

ಇವರು ನಟ ಪುನೀತ್ ಅವರ ಕಟ್ಟಾಭಿಮಾನಿ.ಅವರ ನಿಧನರಾದಾಗ ಭಾವನಾತ್ಮಕವಾಗಿ ಮನಸ್ಸಿಗೆ ಹಚ್ಚಿಕೊಂಡು ಹಲವು ದಿನಗಳ ಕಾಲ ಖಿನ್ನ ಮನಸ್ಕರಾಗಿ ಇದ್ದುಬಿಟ್ಟಿದ್ದನ್ನು ನೆನಪಿಸಿಕೊಳ್ಳುವ ಇವರನ್ನು ಪತಿ ಸಂತೈಸಿ ಮತ್ತೆ ಮೊದಲಿನ ಸ್ಥಿತಿಗೆ ಬರುವಂತೆ ಮಾಡಿದರು. ಆ ನೆನಪಿನಲ್ಲಿ ಪುನೀತ ಕುರಿತು ಕವನ ರೂಪದಲ್ಲಿ ಬರಹವನ್ನು ಬರೆದಿರುವರು. ಇವರ ಈ ಭಾವನಾತ್ಮಕ ಬದುಕನ್ನು ಕಂಡು ಇವರಿಗೆ ಪುನೀತ್ ಅವರ ಸ್ಮರಣಿಕೆಯನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಇವರು ನೀಡಿರುವರು.

ನ್ಯೂಸ್ ಪಸ್ಟ ಚಾನೆಲ್ ದವರು ಹಲವು ನಾಡಿನ ಪ್ರಮುಖ ದಿನಗಳ ಸಂದರ್ಭದಲ್ಲಿ ಇವರ ಅಭಿಪ್ರಾಯಗಳನ್ನು ಪ್ರಸಾರ ಮಾಡಿರುವರು. ವಿಶೇಷವಾಗಿ ಚಂದ್ರಯಾನ ಸಂದರ್ಭದಲ್ಲಿ ಹಾಗೂ ಭಾರತ ವಿಶ್ವಕಪ್ ಗೆಲ್ಲಲಿ ಎಂದು ದೇವಾಲಯದಲ್ಲಿ ಪ್ರಾರ್ಥಿಸಿರುವ ಸಂದರ್ಭದಲ್ಲಿ ಪ್ರಸಾರ ಮಾಡಿರುವರು.

ಹೀಗೆ ಕೇವಲ ಶಿಕ್ಷಕಿ ಎನಿಸಿಕೊಳ್ಳದ ಬಹುಮುಖ ಪ್ರತಿಭೆಯ ನಂದಿನಿ ಇವರ ಹುಟ್ಟು ಹಬ್ಬ ಗುರುವಾರ ಮಾರ್ಚ ೨೧ ರಂದು.ಇವರು ತಮ್ಮ ಹುಟ್ಟು ಹಬ್ಬವನ್ನು ಕೂಡ ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವುದು ವಿಶೇಷ, ಕಳೆದ ಹಲವು ವರ್ಷಗಳಿಂದ ತಮ್ಮ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸುವ ಜೊತೆಗೆ ಪುಟ್ಟ ಕಾಣಿಕೆಗಳನ್ನು ನೋಟ ಪುಸ್ತಕ. ಪೆನ್. ಕಂಪಾಸು ಪುಸ್ತಕ. ಮೌಲ್ಯಯುತ ಪುಸ್ತಕ(ತರಗತಿಗಳಿಗನುಸಾರ) ಮಕ್ಕಳಿಗೆ ವಿತರಿಸುವ ಮೂಲಕ ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವರು. ಸಮಯ ಸಿಕ್ಕಾಗ ವೃದ್ಧಾಶ್ರಮಗಳಿಗೆ ಹೋಗಿ ಭಾವನಾತ್ಮಕವಾಗಿ ವೃದ್ಧರ ಬದುಕಿಗೆ ಸಾಂತ್ವನ ಹೇಳಿ ಬರುತ್ತಿರುವರು. ಮಕ್ಕಳ ದಿನಾಚರಣೆ ಮತ್ತು ಹೊಸ ವರ್ಷದಲ್ಲಿ ಕೂಡ ಮಕ್ಕಳಿಗೆ ಪುಟ್ಟ ಕಾಣಿಕೆ ನೀಡುವರು.

ದೇವರು ಮುಂಬರುವ ದಿನದಲ್ಲಿ ಶೈಕ್ಷಣಿಕ ಚಿಂತನೆಯ ಕೃತಿ ಇವರ ಲೇಖನಗಳ ಮೂಲಕ ಮೂಡಿ ಬರಲಿ ಇವರ ಮುಂದಿನ ಭವಿಷ್ಯ ಮತ್ತು ಶೈಕ್ಷಣಿಕ ಸೇವೆ ನಿರಂತರವಾಗಿ ಪ್ರಜ್ವಲಿಸಲಿ ಹಾಗೂ ಶುಭವಾಗಲಿ ಎಂದು ಹಾರೈಸುತ್ತೇನೆ.


ವೈ. ಬಿ. ಕಡಕೋಳ

- Advertisement -

1 COMMENT

Comments are closed.

- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group