ನಕ್ಕನೇ ನಮ್ಮ ಬುದ್ಧ
ವೈಶಾಖ ಪೂರ್ಣಿಮೆಯ ದಿನ
ಮುಕ್ತಿಯ ಹುಡುಕಾಟದಲ್ಲಿ
ಕಪಿಲವಸ್ತುವನ್ನು ಬಿಟ್ಟು
ಹೊರಟು ಜ್ಞಾನೋದಯದ
ಮಾರ್ಗ ಕಂಡುಕೊಂಡ
ನಮ್ಮ ಬುದ್ಧ
ಪ್ರಾಣಿಬಲಿಯ ವಿರೋಧಿಸಿ
ಮೂಢನಂಬಿಕೆಯ ಖಂಡಿಸಿ
ಜಾತೀಯತೆಯ ಅಜ್ಞಾನವನ್ನು
ತೊಲಗಿಸಿದ ನಮ್ಮ ಬುದ್ಧ
ಆದರೇನು ತಮ್ಮ ತಮ್ಮಲ್ಲೇ
ಕಾದಾಡುವವರನ್ನು
ಕಚ್ಚಾಡುವವರನ್ನು
ಮೂಢನಂಬಿಕೆಯ ಹೊತ್ತು
ತಿರುಗುವವರನ್ನು
ಪ್ರಾಣಿ ಹತ್ಯೆ ಮಾಡುವವರನ್ನು
ನೋಡಿ ನಕ್ಕನೇ ನಮ್ಮ ಬುದ್ಧ
ನಿರ್ವಾಣದ ಪಥವ ಬೋಧಿಸುತ
ಮುಕ್ತಿಯ ದಾರಿಯ ತೋರಿಸುತ
ಇಂದ್ರಿಯಗಳ ನಿಯಂತ್ರಣ,
ಮಿತ ಆಹಾರ, ಅಷ್ಟಾ0ಗ ಯೋಗ ಎನ್ನುವ ಮಾರ್ಗದಿ
ಕೊಂಡೊಯ್ದರೂ
ತಮ್ಮದಲ್ಲದ ವಸ್ತುವಿಗೆ
ಹಪಹಪಿಸುವ ಜನರ
ಕಂಡು ನಕ್ಕನೇ ನಮ್ಮ ಬುದ್ಧ
ಯಾವುದೇ ಪವಾಡಗಳನ್ನು
ಮಾಡದೇ ಸತ್ಯ, ಸುಖ,ಶಾಂತಿ
ನೆಮ್ಮದಿ, ಮೋಕ್ಷದ ಮಾರ್ಗದರ್ಶನ ಮಾಡಿದ್ದು
ಬದಿಗಿಟ್ಟು
ಪವಾಡಸದೃಶ ಘಟನೆಗಳ
ಹಿಂದೆ ಬೆನ್ನತ್ತಿ ತಮ್ಮನ್ನು ತಾವೇ
ಮೂರ್ಖರನ್ನಾಗಿ ಮಾಡಿಕೊಳ್ಳುವುದನ್ನು ನೋಡಿ
ನಕ್ಕನೇ ನಮ್ಮ ಬುದ್ಧ
ಕಳಂಕಿತರನ್ನು ಕ್ರೂರರನ್ನು
ಮನಃಪರಿವರ್ತನೆ ಮಾಡಿ
ಸಮಾಜದಲ್ಲಿ ಒಂದಾಗುವಂತೆ
ಮಾಡಿದರೂ
ಮತ್ತೆ ಮತ್ತೆ ಅದೇ ದಾರಿಯಲ್ಲಿ
ಪಯಣಿಸುವವರನು ನೋಡಿ
ನಕ್ಕನೇ ನಮ್ಮ ಬುದ್ಧ.
ಸುಧಾ ಪಾಟೀಲ್ ( ಸುಶಿ )
ಬೆಳಗಾವಿ