ಹುನಗುಂದ:- ಮುರ್ತುಜಾಬೇಗಂ ಕೊಡಗಲಿಯವರು ಕಾವ್ಯದ ಆರಾಧಕಿಯಾಗಿದ್ದಾರೆಂದು ಬ.ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ರುದ್ರೇಶ ಅಳ್ಳೊಳ್ಳಿ ಹೇಳಿದರು.
ಹುನಗುಂದದ ಹೊನ್ನಕುಸುಮ ವೇದಿಕೆಯ ಆಶ್ರಯದಲ್ಲಿ ತಿಂಗಳ ಬೆಳಕು ೧೮ರ ಇಲಕಲ್ಲಿನ ಕವಿಯತ್ರಿ ಮುರ್ತುಜಾಬೇಗಂ ಕೊಡಗಲಿಯವರ ‘ರಾಬಿಯಾ; ಬಿರುಗಾಳಿಯ ಹಾಡು’ ಎಂಬ ಕೃತಿಯನ್ನ ಪಟ್ಟಣದ ವಿಜಯ ಮಹಾಂತೇಶ ಪದವಿ ಪೂರ್ವ ಕಾಲೇಜಿನಲ್ಲಿ ದಿ. ೨೫ರಂದು ರವಿವಾರದಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃತಿಯನ್ನು ಪರಿಚಯಿಸಿ ಮಾತನಾಡಿದ ಅವರು, ಭಾರತೀಯ ಸಾಹಿತ್ಯವು ಅನುಭಾವ ಸಾಹಿತ್ಯವಾಗಿದೆ ಎಂದ ಅವರು ಮಹಿಳಾ ಪರಚಿಂತನೆಯುಳ್ಳ ಈ ಕೃತಿಯು ವಿವಿಧ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡಿದೆ ಎಂದು ಅವರು ದೇವರನ್ನು ಪ್ರೀತಿಸಿದಳು ರಾಬಿಯಾ.
ಮುಂದುವರೆದು ಸೂಫಿ ಪರಂಪರೆಯಲ್ಲಿ ಬಹುದೊಡ್ಡ ತಾಳ್ಮೆ ಮತ್ತು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತ ಏಕಾಂಗಿಯಾಗಿ ಆತ್ಮಧಾನ್ಮದ ಮೂಲಕ ನನ್ನ ಮನಸು ಮೈದೇವರಿಗೆ ಮೀಸಲು ಎಂದೇ ಹಗಲು ಕತ್ತಲು ವ್ಯತ್ಯಾಸದ ಪರಿವೇ ಇಲ್ಲದೆ ಸೂಫಿ ಸಾಹಿತ್ಯದಲ್ಲಿ ಎಂದೂ ಮರೆಯಲಾರದ ಹೆಸರು ಎಂದರೆ ರಾಬಿಯಾ ಎಂದು ಅವರು ತಿಳಿಸಿದರು.
ಈ ಸಮಾಜದಲ್ಲಿ ಒಂದು ಹೆಣ್ಣು ಎಂದರೆ ಕೇವಲ ಪುರುಷನ ಸೇವೆಗೆಂದು ಬಾವಿಸಿರುವ ಆ ದಿನಗಳಲ್ಲಿ ಅದರಲ್ಲೂ ಕಿ.ಶ.೭೪೨ರ ಕಾಲದಲ್ಲಿ ರಾಬಿಯಾ ತೆಗೆದುಕೊಂಡ ನಿರ್ಣಯಗಳು ಮತ್ತು ಬದುಕಿನ ಕಾಲುದಾರಿ ಪಯಣದಲ್ಲಿ ಬಂದು ಮಹತ್ತರವಾದ ಬದಲಾವಣೆಗೆ ತೆರೆದ ಬಾಗಿಲು ಎಂದರೆ ತಪ್ಪಾಗಲಾರದು ಅವರು ಹೇಳಿದರು.
ಲೇಖಕಿ ಮುರ್ತುಜಾ ಬೇಗಂ ಕೊಡಗಲಿ ಮಾತನಾಡಿ, ಧ್ಯಾನದ ಬದುಕಿನ ಈ ಜೀವದ ಬಗ್ಗೆ ಸೂಫಿತ್ವದ ಜೀವಾಳವಾದ ಈ ತಪಸ್ವಿಗೆ ಬಗ್ಗೆ ಯಾವ ಕಾರಣಕ್ಕೆ ನಿರ್ಲಕ್ಷಿಸಲಾಗಿದೆಯೇ ಎಂಬ ಪ್ರಶ್ನೆ ಇಂದಿಗೂ ಕಾಡುತ್ತದೆ. ಸೂಫಿಸಂತರ ಅಧ್ಯಯನದಲ್ಲೂ ಈ ಹೆಸರು ಬಹಳಷ್ಟು ಕಡೆ ಉಲ್ಲೇಖವಾಗದಿರುವದು ದುರಂತವೇ ಸರಿ. ಬಹುಪಾಲು ಸೂಫಿ ಅಧ್ಯಯನಕಾರರಾದರೂ ಈ ದಿವ್ಯ ವ್ಯಕ್ತಿತ್ವವನ್ನು ಮರೆತದಾದ್ದರೂ ಹೇಗೆ? ನಾನರಿಯೆ ಅದರಲ್ಲೂ ನಮ್ಮ ಸಿರಿವಂತ ಕನ್ನಡ ಭಾಷೆಯಲ್ಲಿ ರಾಬಿಯಾಳನ್ನು ಕಟ್ಟುಕೊಡುವ ಭಾಗ್ಯ ನನ್ನದಾಗಿರುವುದೇ ಆನಂದವಾಗಿದೆ. ಎಂದು ಲೇಖಕಿ ಕೊಡಗಲಿ ಹೇಳಿದರು.
ಅಧ್ಯಕ್ಷತೆ ವಹಿಸಿದ ಇಲಕಲ್ಲನ ಹಿರಿಯ ಸಾಹಿತಿ ಕೆ.ಎಚ್. ಬನಹಟ್ಟಿ ಮಾತನಾಡಿ ಕೃತಿಗಳು ಮೌಲ್ಯಧಾರಿತ ಹಾಗಿರಬೇಕು ಎಂದರಲ್ಲದೇ ರಾಬಿಯಾ ಕೃತಿಯು ಮಹಾ ಪ್ರಬಂಧದ ಸರಿಸಾಟಿಯಾಗಬಲ್ಲ ಉತ್ತಮ ಕೃತಿಯನ್ನು ಕೊಡಗಲಿಯವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡಮಾಡಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಹುನಗುಂದದ ಡಾ|| ನಾಗರಾಜ ನಾಡಗೌಡರ, ಶ್ರೀಶೈಲ ಗೋಲಗೊಂಡ, ಗೀತಾ ತಾರಿವಾಳ, ಇಲಕಲ್ಲಿನ ಎ.ಎಮ್.ಕಲ್ಯಾಣಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಹೊಸದಾಗಿ ಆಗಮಿಸಿದ ಸೊಂಡೂರಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಬಿ.ನಾಯ್ಕರ ಹುನಗುಂದ ಹಾಗೂ ಇಲಕಲ್ಲ ತಾಲೂಕಿನ ಸಾಹಿತಿಗಳು ಭಾಗವಹಿಸಿದರು.
ಗೀತಾ ತಾರಿಹಾಳ ಪ್ರಾರ್ಥಿಸಿದರು. ಶಿಕ್ಷಕ ಎಂ.ಬಿ.ಚಿತ್ತರಗಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಜಗದೀಶ ಹಾದಿಮನಿ ವಂದಿಸಿದರು.