ಮೂಡಲಗಿ: ‘ವೇಮನರು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಪದ್ಯಗಳನ್ನು ರಚಿಸಿ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿರುವ ಮಹಾನ್ ದಾರ್ಶನಿಕ’ ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲ್ಲೂಕು ಆಡಳಿತದಿಂದ ಆಚರಿಸಿದ ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಯಕ ತತ್ವವನ್ನು ಬೋಧಿಸಿದ್ದ ವೇಮನರ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವುದು ಅವಶ್ಯವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಮಾತನಾಡಿ, ಮಹಾಯೋಗಿ ವೇಮನರು ಸಿರಿಸಂಪತ್ತನ್ನು ತ್ಯಾಗಮಾಡಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ತ್ಯಾಗಿಯಾಗಿದ್ದರು. ಅವರ ಪದ್ಯಗಳು ಸಮಾಜ ತಿದ್ದುವ ದಿಕ್ಸೂಚಿಯಾಗಿವೆ ಎಂದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಎಫ್.ಜಿ. ಚಿನ್ನನ್ನವರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಹಾಗೂ ಪುರಸಭೆ ಸದಸ್ಯರು, ರಡ್ಡಿ ಸಮಾಜದ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದರು.
ಪರುಶರಾಮ ನಾಯಕ ಸ್ವಾಗತಿಸಿದರು, ಎಂ.ಎಲ್. ಮಾಸ್ತಮರಡಿ ವಂದಿಸಿದರು.