ಮೂಡಲಗಿ: ಸ್ವತಂತ್ರ್ಯ ಪೂರ್ವದಲ್ಲಿ ದೇಶದಲ್ಲಿದ್ದ ಜಾತಿ, ಪಂಥ, ಮೇಲು-ಕೀಳರಿಮೆಯ ಭಾವನೆಯನ್ನು ತೊಡೆದು ಹಾಕಿ ಸರ್ವರಲ್ಲೂ ಸಮಾನತೆಯನ್ನು ನೀಡಿದ ನಮ್ಮ ಸಂವಿಧಾನವು ಶ್ರೇಷ್ಠವಾದುದು, ನಾವೆಲ್ಲರೂ ಒಂದೇ ಎಂದು ತಿಳಿದು ಸಮಾಜ ಮತ್ತು ದೇಶದ ಪ್ರಗತಿಗಾಗಿ ದುಡಿಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸತೀಶ ಶುಗರ್ಸ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ.ಹಿರೇಮಠ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ 75 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತೀಶ ಶುಗರ್ಸ್ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಉನ್ನತಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯುವ ಮೂಲಕ ಈ ಸಂಸ್ಥೆಯ ಅಭಿವೃದ್ದಿಗಾಗಿ ಶ್ರಮಿಸೋಣ ಎಂದರು.
ಕಾರ್ಖಾನೆಯ ಹಣಕಾಸು ವಿಭಾಗದ ಉಪಾಧ್ಯಕ್ಷ ದಿಲೀಪ ಪವಾರ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ಸ್ವತಂತ್ರ್ಯ ಪೂರ್ವದಲ್ಲಿ ದೇಶದಲ್ಲಿದ್ದ ಹಲವಾರು ಸಮಸ್ಯೆಗಳನ್ನು ಮನಗಂಡು ಅವೆಲ್ಲವುಗಳ ನಿವಾರಣೆಗಾಗಿ ಅಂದಿನ ನಾಯಕರುಗಳೆಲ್ಲರೂ ಸೇರಿ ಎಲ್ಲ ವರ್ಗದ ಜನ ಹಿತಕ್ಕಾಗಿ ಹಾಗೂ ದೇಶದ ಸಮಗ್ರ ಆಡಳಿತ ಮತ್ತು ಅಭ್ಯುದಯಕ್ಕಾಗಿ ಡಾ|| ಬಾಬಾಸಾಹೇಬ ಅಂಬೇಡ್ಕರ ಅವರಿಂದ ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಂಡರು ಹಾಗೂ ಆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಿಗಬೇಕಾದ ಹಕ್ಕು ಮತ್ತು ಅವನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದ ಅವರು ಸತೀಶ ಶುಗರ್ಸ ಕಾರ್ಖಾನೆಯು ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ನುರಿಸುವ ಮೂಲಕ ಸಾಧನೆ ಮಾಡುತ್ತಿದ್ದು, ಸಾಧನೆಗೆ ಸಹಕರಿಸುತ್ತಿರುವ ಕಾರ್ಖಾನೆಯ ರೈತಬಾಂಧವರು ಮತ್ತು ಕಾರ್ಮಿಕ ವರ್ಗದವರಿಗೆ ಕೃತಜ್ಞತೆಗಳನ್ನು ತಿಳಿಸಿದರು.
75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಪ್ರಗತಿ ಪರ ರೈತರಾದ ಮಸಗುಪ್ಪಿಯ ವೆಂಕಣ್ಣಾ ಲಕ್ಷ್ಮಣ ಮಳಲಿ ಮತ್ತು ಬಡಿಗವಾಡದ ರಾಜೇಂದ್ರ ಸರ್ಜೇರಾವ ದೇಶಪಾಂಡೆ ಅವರನ್ನು ಕಾರ್ಖಾನೆಯಿಂದ ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಉಪಾಧ್ಯಕ್ಷರುಗಳಾದ ವೀರು ತಳವಾರ, ಪ್ರಧಾನ ವ್ಯವಸ್ಥಾಪಕರುಗಳಾದ ಸುಭಾಸ ಕೋಟಗಿ, ಮಲ್ಲಿಕಾರ್ಜುನ ಸಸಾಲಟ್ಟಿ ಹಾಗೂ ಅಧಿಕಾರಿ ವರ್ಗದವರು, ಕಾರ್ಮಿಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.