spot_img
spot_img

ಆತ್ಮ ವಿಶ್ವಾಸ

Must Read

- Advertisement -

ಒಂದು ಸಣ್ಣದೊಂದು ನೀರಿನ ತೊರೆ ಹರಿಯುತ್ತಿತ್ತು. ಅದು ಎಲ್ಲಿಂದ ಹೊರ ಬಂದಿತ್ತಲ್ಲ. ಆ ಭೂಮಿ ಹೇಳಿತು. “ಹೋಗು ಮುಂದೆ ಮುಂದೆ ಸಾಗು.ಸದಾ ಹರಿಯುತ್ತಿರು”. ಎಂದು. ಆ ಭೂಮಿಯ ಮಾತು ಕೇಳಿದ ತೊರೆ ಅದು ಎಲ್ಲಿದೆ ಎಂದಿತು. ಆಗ ಭೂಮಿ ಸಾವಿರಾರು ಮೈಲು ದೂರ. ಹೋಗು ಎಂದಿತು. ಆಗ ಅಷ್ಟು ದೂರವೇ ಅದು ನನ್ನಿಂದ ಸಾಧ್ಯವೇ ಎಂದಿತು. ಆಗ ಭೂಮಿ ಹೇಳಿತು ಆಕಾಶ ನೋಡು ವಿಶ್ವಾಸ ಹೊಂದು ಮುಂದೆ ಮುಂದೆ ಸಾಗು ನಿನಗೆ ನದಿಗಳು ಕೂಡುತ್ತವೆ.ಅವುಗಳೊಂದಿಗೆ ಹರಿಯುತ್ತ ಸಾಗು. ಜೊತೆಗಾರರು ಸೇರುವರು. ಮಳೆ ಆಗುತ್ತದೆ. ನಿನ್ನ ತೊರೆ ಇನ್ನಷ್ಟು ಬೆಳೆಯುತ್ತದೆ. ಅಷ್ಟರಲ್ಲಿ ಮಳೆಯ ನೀರಿನೊಂದಿಗೆ ಮುಂದೆ ಮುಂದೆ ಸಾಗಿದಂತೆ ಮತ್ತೊಂದು ತೊರೆ ಅಲ್ಲಿ ಸೇರಿತು.ಹೀಗೆಯೇ ಮುಂದೆ ಸಾಗುತ್ತಿರುವಾಗ ಮತ್ತೊಂದು ತೊರೆ ಬಂತು ಹೀಗೆ ಮೂರೂ ಸೇರಿದವು ವಿಸ್ತಾರ ಹೆಚ್ಚಿತು. ಇವುಗಳೆಲ್ಲ ಸೇರಿ ನದಿಯೊಂದು ಸೇರಿತು.ಅದರೊಟ್ಟಿಗೆ ಬೆಳೆಯುತ್ತ ಸಾಗಿದವು.ಹೀಗೆ ಎಲ್ಲವೂ ಸೇರಿ ಸಮುದ್ರವನ್ನು ಸೇರಿದವು. ಇದು ಆತ್ಮವಿಶ್ವಾಸ. ನಮ್ಮ ಬದುಕಿನಲ್ಲಿ ಒಳ್ಳೆಯ ಆಲೋಚನೆ ಕ್ರಿಯಾಶೀಲ ಚಟುವಟಿಕೆಗಳನ್ನು ಯಾವತ್ತೂ ನಿಲ್ಲಿಸಬಾರದು.ಅದು ನಮ್ಮನ್ನು ಜೀವನದ ಸಾರ್ಥಕ ಶಕ್ತಿ ಇರುತ್ತದೆ.ನನಗೆ ಯಾರು ಏನೇ ಅಂದರೂ ನಾನು ಬದುಕಬಲ್ಲೆ ಎಂಬ ಆತ್ಮ ವಿಶ್ವಾಸ ಇದ್ದರೆ ಇದು ಸಾಧ್ಯ.ಇದು ಶ್ರದ್ಧೆ ತನ್ನೊಳಗೆ ಇರಬೇಕು. ತನ್ನಲ್ಲಿ ವಿಶ್ವಾಸ ಇರಬೇಕು.ಇದು ಅವಶ್ಯಕ.ನಮ್ಮ ಕಣ್ಣ ಮುಂದೆ ಬೆಳೆಯುತ್ತಿರುವ ಹುಲ್ಲುಗರಿಕೆ ಮತ್ತೆ ಮತ್ತೆ ಚಿಗಿಯುತ್ತದೆ.ನಾವು ಎಷ್ಟೇ ಭಾರದಿಂದ ಅದರ ಮೇಲೆ ನಡೆದುಕೊಂಡು ಹೋದರೂ ಕೂಡ ಮತ್ತೆ ಚಿಗುರುತ್ತದೆ. ನನ್ನ ಮೇಲೆ ಭಾರವಾಯಿತು ಎಂದು ಚಿಗಿತಿರುವ ಹುಲ್ಲುಗರಿಕೆ ಬೇಸರಿಸಕೊಳ್ಳದು.ಮತ್ತೆ ಬೆಳೆಯುತ್ತದೆ.ಇದು ಆತ್ಮವಿಶ್ವಾಸಕ್ಕೆ ಒಂದು ಉದಾಹರಣೆ.

ಮನುಷ್ಯನಲ್ಲಿ ಆತ್ಮವಿಶ್ವಾಸ ಬೇಕು. ನಮ್ಮಿಂದ ಸಾಧ್ಯವಿದೆ. ಮಾಡುತ್ತೇವೆ ಎಂದು ಮಾಡಲು ಪ್ರಯತ್ನ ಪಟ್ಟರೆ ಆಗದು ಎಂದುಕೊಂಡು ಪ್ರಯತ್ನ ಪಟ್ಟರೆ ಯಾವುದು ಅಸಾಧ್ಯವೋ ಅದು ಸಾಧ್ಯವಾಗುತ್ತದೆ. ಅದಕ್ಕೆ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸ್ಸೊಂದಿದ್ದರೆ ಮಾರ್ಗವೂ ಉಂಟು ಕೆಚ್ಚದೆ ಇರಬೇಕು ಎಂದೆಂದು ಎಂಬ ಗೀತೆಯನ್ನು ಬಂಗಾರದ ಮನುಷ್ಯ ಚಲನಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ಬರೆದ ಹಾಡು ಜಿ.ಕೆ.ವೆಂಕಟೇಶ ಅವರ ಸ್ವರ ಸಂಯೋಜನೆಯಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ಸಿರಿಕಂಠದಲ್ಲಿ ವಿವಿಧ ಉದಾಹರಣೆಗಳ ಮೂಲಕ ಮೂಡಿರುವುದನ್ನು ಒಂದು ಕ್ಷಣ ನೋಡಿದರೆ ಸಾಕು ಯಾವುದು ಆಗುವುದಿಲ್ಲ ಎಂಬ ಭಾವ ನಮ್ಮೊಳಗೆ ಮೂಡಿರುತ್ತದೆಯೋ ಅದು ಆಗುತ್ತದೆ ಎಂಬ ಆತ್ಮವಿಶ್ವಾಸ ನಾವು ಹೊಂದಿದ್ದೇ ಆದರೆ ಜೀವನದಲ್ಲಿ ಒಳ್ಳೆಯ ಸಕಾರಾತ್ಮಕ ಚಟುವಟಿಕೆಗಳಲ್ಲಿ ನಾವು ಸಾಧನೆ ಮಾಡಲು ಸಾಧ್ಯ.

ಇಷ್ಟೆಲ್ಲ ಬರೆಯಲು ಕಾರಣ ಇತ್ತೀಚಿಗೆ ಒಂದು ಸಭೆ ಕಾರ್ಯಕ್ರಮ ಸಂಘಟನೆಯ ಹೆಸರಿನಲ್ಲಿ ಸೇರಿತ್ತು. ಅಲ್ಲಿ ಆ ಸಂಘಟನೆಯ ಆಶಯ ಬಹಳ ವಿಶಾಲವಾಗಿತ್ತು. ಅಲ್ಲಿ ಕೂಡಿದ ಎರಡು ವ್ಯಕ್ತಿಗಳ ದೃಷ್ಟಿಕೋನ ಸಂಕುಚಿತವಾಗಿತ್ತು. ಅವರು ಅದನ್ನು ವಿಶಾಲ ಅರ್ಥದಲ್ಲಿ ನೋಡದೇ ಸಂಕುಚಿತ ಮನೋಭಾವದಿಂದ ನೋಡುತ್ತಿದ್ದರು. ಬೇರೆ ಕ್ರಿಯಾಶೀಲ ವ್ಯಕ್ತಿಗಳು ಅದರಲ್ಲಿ ಸೇರಿಸಬಹುದಲ್ಲ ಎಂಬ ನನ್ನ ಕಿರು ಸಲಹೆಗೆ ಅವರು ಆಡಿದ ಮಾತುಗಳು ನನಗೆ ಈ ಬರಹ ಮೂಡಲು ಕಾರಣವಾಯಿತು. ನಾವು ಜಗತ್ತನ್ನು ನೋಡಬೇಕೆ ವಿನಹ ನಮ್ಮ ಮನೆಯ ಅಡುಗೆ ಮನೆಯಲ್ಲಿಯೇ ಕುಳಿತುಕೊಂಡು ಆಗದು ಎಂಬ ಮನೋಭಾವ ತಾಳಬಾರದು.

- Advertisement -

ಇಂತಹ ಸಂದರ್ಭದಲ್ಲಿ ನನಗೆ ನನ್ನ ಹಿರಿಯ ಸಹೋದರಿ ನಾಡಿನ ಖ್ಯಾತ ಹೃದಯರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ನನ್ನಲ್ಲಿ ತುಂಬಿದ ಆತ್ಮವಿಶ್ವಾಸದ ಮಾತುಗಳು ಪ್ರತಿ ದಿನವೂ ನನೆಪಿಗೆ ಬರುತ್ತವೆ.ಅವರ ಬದುಕೇ ಒಂದು ಆತ್ಮವಿಶ್ವಾಸದ ಚಿಲುಮೆ ಎಂದರೆ ಅತಿಶಯೋಕ್ತಿಯಲ್ಲ. ನೀನು ಬೆಳೆಯುತ್ತ ಸಾಗು ನಿನ್ನೊಂದಿಗೆ ಇತರರನ್ನು ಬೆಳವಣಿಗೆ ಹೊಂದುವಂತೆ ಮಾಡು ಎಂಬ ಆದರ್ಶ ನಮ್ಮ ಬದುಕಿನಲ್ಲಿ ಇದ್ದಾಗ ನಾವು ನಮ್ಮೊಂದಿಗೆ ಇತರರನ್ನು ಕೂಡ ಪ್ರೋತ್ಸಾಹಿಸುವ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಇಂತಹ ಮನೋಭಾವನೆ ಬರಲು ಸಾಧ್ಯ.

ಸಹೋದರಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿಯವರ ಬದುಕಿನ ಒಂದು ಘಟನೆ ಇಲ್ಲಿ ಉದಾಹರಣೆ ನೀಡ ಬಯಸುವೆನುವೈದ್ಯಕೀಯ ವೃತ್ತಿ ನನಗೆ ದೇವರು ಕೊಟ್ಟ ವರದಾನ ಎನ್ನುವ ಇವರು ಒಂದು ಘಟನೆಯನ್ನು ನೆನೆಪಿಸುವರು.ಇವರು ಅನೇಕ ಮಕ್ಕಳಿಗೆ ಹೃದಯದಲ್ಲಿರುವ ತೂತನ್ನು ಮುಚ್ಚುವ ಮೂಲಕ ಹೃದಯರೋಗ ತಜ್ಞೆಯಾಗಿದ್ದು.ಇದರಿಂದ ಅವರು ಚೇತರಿಸಿಕೊಂಡು ಇವರಿಗೆ ಕೃತಜ್ಞತೆ ಸಲ್ಲಿಸುವುದು ಸಹಜ ಪ್ರಕ್ರಿಯೆ. ಆದರೆ ೧೯೯೦ ರಲ್ಲಿ ಇವರು ಓರ್ವ ಹುಡುಗಿಯ ಹೃದಯದ (ತೂತನ್ನು) ರಂಧ್ರವನ್ನು ಮುಚ್ಚಿ ಆಕೆಯ ಕುಟುಂಬದವರಿಂದ ಕೃತಜ್ಞತೆ ಸಲ್ಲಿಸಿಕೊಂಡ ಹತ್ತು ಹನ್ನೆರಡು ವರ್ಷಗಳ ನಂತರ ಇವರಿಗೊಂದು ಪತ್ರ ಬರುತ್ತದೆ. ಪತ್ರ ತೆರೆದು ನೋಡಿದಾಗ ಅಂದು ಗುಣಮುಖಳಾದ ಆ ಹುಡುಗಿ ಇಂದು ಪಿ.ಯು.ಸಿ.ಯಲ್ಲಿ ೯೬.೯ ಪ್ರತಿ ಶತ ಅಂಕ ಗಳಿಸಿ ಮೇಡಂ ನಿಮ್ಮ ರೀತಿಯಲ್ಲಿ ನಾನೂ ಎಂ.ಬಿ.ಬಿ.ಎಸ್ ಮಾಡಲು ಸೀಟು ಗಿಟ್ಟಿಸಿರುವೆ.ದೇವರು ಅಂದು ನನ್ನ ಹೃದಯದ ತೂತು ತಮ್ಮಿಂದ ಮುಚ್ಚಲ್ಪಡದೇ ಇದ್ದರೆ ನಾನು ಏನಾಗ್ತಿದ್ದೆನೋ ಗೊತ್ತಿಲ್ಲ.ಇಂದು ನನಗೆ ನೀವು ದಾರಿದೀಪವಾಗಿರುವಿರಿ.ನಿಮ್ಮ ಹಾಗೇ ನಾನೂ ವೈದ್ಯಳಾಗಲು ಪ್ರೇರಣಾ ಶಕ್ತಿಯಾಗಿರುವಿರಿ” ಎಂದೆಲ್ಲ ಪತ್ರದಲ್ಲಿ ಬರೆದಾಗ ಆಗುವ ಆನಂದ ಹೇಳತೀರದ್ದು ಎಂದು ಆ ಘಟನೆಯನ್ನು ನೆನಪಿಸಿಕೊಳ್ಳುವ ಇವರು ಕರ್ನಾಟಕದ ಪ್ರಪ್ರಥಮ ಹೃದಯರೋಗ ತಜ್ಞೆ. ಈ ಸಾಲುಗಳು ಆ ಬಾಲಕಿಯ ಮಾತುಗಳಲ್ಲಿ ತುಂಬಿದ ಆತ್ಮವಿಶ್ವಾಸಕ್ಕೆ ನಿದರ್ಶನ.

ಬಡಿಗತನದ ಅಬ್ರಹಾಂ ಲಿಂಕನ್ ಅಮೇರಿಕದ ಅಧ್ಯಕ್ಷರಾದರೆ ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ ಆಗುವ ನಿದರ್ಶನ ನಮ್ಮ ಮುಂದೆ ಇರುವಾಗ ನಮ್ಮಲ್ಲಿ ಆತ್ಮವಿಶ್ವಾಸ ಈ ರೀತಿಯ ಸಂಗತಿಗಳು ಜರುಗಲು ಸಾಧ್ಯ.

- Advertisement -

ಜಗತ್ತಿನಲ್ಲಿ ಇಂದಿಗೂ ಅಬ್ರಹಾಂ ಲಿಂಕನ್ ಅವರನ್ನು ಇಂದಿಗೂ ಜಗತ್ತು ಸ್ಮರಿಸುತ್ತಿರುವ ಕಾರಣ ಅವರು ಸವರ್ಣಿಯ ಭಾವವನ್ನು ಹಿಮ್ಮೆಟ್ಟಿಸಿ ಎಲ್ಲರಲ್ಲೂ ಪ್ರೀತಿ ತುಂಬಿದ್ದು.ಕಪ್ಪು ಬಿಳುಪನ್ನು ಕೂಡಿಸುವ ಕೆಲಸವನ್ನು ಅಬ್ರಹಾಂ ಲಿಂಕನ್ ಮಾಡಿದ ಬದುಕಿನ ಆದರ್ಶ ಕಾರಣ ಹಾಗೂ ಇದನ್ನು ನಾನು ಮಾಡಬಲ್ಲೆ ಎಂಬ ಅವರಲ್ಲಿನ ಆತ್ಮವಿಶ್ವಾಸ., ಇನ್ನು ನಮ್ಮ ಕರ್ನಾಟಕದವೇ ಆಗಿ ರಾಷ್ಟ್ರಪತಿ ಹುದ್ದೆಗೇರಿದ್ದ ನನಗೆ ನಾನೇ ಮಾದರಿ ಎಂಬ ವ್ಯಕ್ತಿತ್ವ ಹೊಂದಿದ್ದ ಬಿ.ಡಿ.ಜತ್ತಿಯವರ ಆದರ್ಶ,. ನಿಮ್ಮಲ್ಲಿನ ಆತ್ಮವಿಶ್ವಾಸ ಇಮ್ಮಡಿಗೊಳಿಸಿಕೊಳ್ಳಿ ಅದು ನಿಮ್ಮ ಬದುಕನ್ನು ರೂಪಿಸುತ್ತದೆ ಎಂದು ಹೇಳುತ್ತಿದ್ದ ವೈದ್ಯ ವಿಜ್ಞಾನಿ ಡಾ.ಸ.ಜ.ನಾಗಲೋಟಿಮಠ. ಬಡತನದ ಬೇಗೆಯಲ್ಲಿ ಬೆಂದು ರಾಷ್ಟ್ರ ಕಂಡ ವಿಶಿಷ್ಟ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬದುಕು ನಮ್ಮ ಕಣ್ಣ ಮುಂದೆ ಇದೆ. ಜೊತೆಗೆ ವಿಶ್ವಗುರುವಾಗುವತ್ತ ಭಾರತ ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಯಲ್ಲಿ ದೇಶವನ್ನು ಮುನ್ನಡೆಸುತ್ತಿರುವ ದೇಶ ಕಂಡ ಅದ್ಬುತ ಪ್ರಧಾನಿ ನರೇಂದ್ರ ಮೋದಿಯವರ ಬದುಕಿನ ಆದರ್ಶ.ಈಗ ರಾಷ್ಟ್ರಪತಿ ಹುದ್ದೆಗೇರಿದ ಮಹಿಳೆ ದ್ರೌಪದಿ ಮುರ್ಮು ಅವರ ಬದುಕಿನ ಪುಟಗಳನ್ನು ತೆರೆದು ನೋಡಿದರೆ ಎಷ್ಟು ಕಷ್ಟ ಅನುಭವಿಸಿ ಬುಡಕಟ್ಟು ಜನಾಂಗದಲ್ಲಿ ಜನಿಸಿ ರಾಷ್ಟ್ರದ ಪರಮೋಚ್ಚ ಸ್ಥಾನವನ್ನು ಗಳಿಸುತ್ತಾರೆಂದರೆ ನಮ್ಮ ಮನದಲ್ಲಿ ಯಾಕೆ ಆತ್ಮವಿಶ್ವಾಸ ಮೂಡಬಾರದು.

ನಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಇದೆ. ನಮ್ಮಲ್ಲಿ ಎಷ್ಟು ಪದವಿ ಪಡೆದರೇನು. ಎಷ್ಟು ವೇದಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರೇನು. ಜಗತ್ತಿನ ವಿಶಾಲತೆ ಅರಿಯದೇ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳದೇ ಇದ್ದರೆ ಸಂಕುಚಿತ ಮನೋಭಾವ ನಮ್ಮನ್ನು ಆವರಿಸದೇ ಬಿಟ್ಟೀತೆ.? ದ್ರೌಪದಿ ಮುರ್ಮು ರಾಜಕೀಯಕ್ಕೆ ಬರುವ ಮೊದಲು ಶಿಕ್ಷಕಿಯಾಗಿದ್ದರು.ಪತಿ ಮತ್ತು ಇಬ್ಬರು ಗಂಡು ಮಕ್ಕಳ ಮರಣ ಬದುಕಿನಲ್ಲಿ ಕಷ್ಟದ ದಿನಗಳನ್ನು ಕಂಡ ರೀತಿ ಅವರ ಬದುಕಿನ ಪುಟಗಳನ್ನು ನೋಡುತ್ತ ಹೋದಂತೆ ತಿಳಿಯುತ್ತದೆ. ಇದರ ನಡುವೆಯೂ ಪದವಿ ಪಡೆದು ಉಪನ್ಯಾಸಕಿಯಾಗಿ ನೀರಾವರಿ ಇಲಾಕೆಯಲ್ಲಿ ಕಿರಿಯ ಸಹಾಯಕಿಯಾಗಿ ನಂತರ ರಾಜಕೀಯ ಬದುಕಿನಲ್ಲಿ ವಿವಿಧ ಹುದ್ದೆಗಳಲ್ಲಿ ಅನುಭವ ಹೊಂದಿರುವ ಸರಳ ವ್ಯಕ್ತಿತ್ವ ಹೊಂದಿರುವ ಬುಡಕಟ್ಟು ಜನಾಂಗದ ದೇಶ ಕಂಡ ಮೊತ್ತ ಮೊದಲ ಮಹಿಳಾ ರಾಷ್ಟ್ರಪತಿ ಎಂದರೆ ಇಲ್ಲಿ ಯಾವ ಪಕ್ಷ ಎಂಬುದು ಮುಖ್ಯವಲ್ಲ.ವ್ಯಕ್ತಿ ಮುಖ್ಯ. ಅವರು ಬೆಳೆದು ಬಂದ ಹಾದಿ ಮುಖ್ಯ., ಗಂಡ ಮಕ್ಕಳು ಕಣ್ಣ ಮುಂದೆ ಮರಣ ಹೊಂದಿದಾಗ ಅವರು ತಗೆದುಕೊಂಡ ದೈರ್ಯ ಬದುಕಿನಲ್ಲಿ ನಾನು ಏನನ್ನಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಇದಕ್ಕೆ ಕಾರಣ.ಜೀವನದ ದುರ್ಘಟನೆಗಳನ್ನು ನೆನಸಿಕೊಂಡಿದ್ದರೆ ಅವರು ತಮ್ಮ ಬದುಕನ್ನು ದುರ್ಬಲಗೊಳಿಸಿಕೊಳ್ಳಬಹುದಿತ್ತೇನೋ ಅದು ಹಾಗಾಗಲಿಲ್ಲ. ಅವರಲ್ಲಿನ ಶೃದ್ಧೆ ಮತ್ತು ಆತ್ಮವಿಶ್ವಾಸ ಅವರನ್ನು ಇಂದು ಈ ಮಟ್ಟಿಗೆ ತಂದಿವೆ ಎಂದರೆ ಜಗತ್ತು ಅವರತ್ತ ನೋಡುವಂತಾಗಿದೆ.

ನಮ್ಮ ರಾಜ್ಯವನ್ನೇ ಉದಾಹರಣೆ ತಗೆದುಕೊಂಡರೆ ಬೆಳವಡಿ ಮಲ್ಲಮ್ಮ ಒಂದು ಸಾವಿರ ಮಹಿಳೆಯರನ್ನು ಹೊಂದಿದ್ದ ಮಹಿಳಾ ಸೇನೆಯನ್ನು ಕಟ್ಟುವ ಮೂಲಕ ಅಂದಿನ ಕಾಲದಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದ್ದಳೆಂದರೆ ಕಿತ್ತೂರು ಚನ್ನಮ್ಮ ದತ್ತಕ ಮಕ್ಕಳ ಹಕ್ಕು ವಿರೋಧಿಸಿ ತನ್ನೊಂದಿಗೆ ಶೌರ್ಯವಿರುವ ಪಡೆಯನ್ನು ಹೊಂದಿ ಬ್ರಿಟಿಷರನ್ನು ಎದುರಿಸಿದರೆ ಗಂಡನನ್ನು ಊಟಕ್ಕೆ ಕಳಿಸಿ ವಿರೋಧಿ ಸೈನ್ಯವನ್ನು ನುಚ್ಚು ನೂರು ಮಾಡುವ ದೈರ್ಯ ಹೊಂದಿದ ವೀರ ಮಹಿಳೆ ಒನಕೆ ಓಬವ್ವ ನಮಗೆ ಆತ್ಮ ವಿಶ್ವಾಸದ ಪ್ರತೀಕವಲ್ಲವೇ,?

ನಮಗಿರುವ ಜವಾಬ್ದಾರಿಗಳ ಜೊತೆಗೆ ಮತ್ತೊಂದು ಜವಾಬ್ದಾರಿ ನಮ್ಮ ಹೆಗಲೇರಿದಾಗ ಅದನ್ನು ನಿಭಾಯಿಸಲು ಶಕ್ತರಾಗಬೇಕೇ ವಿನಹ ಬೇರೊಬ್ಬರ ಮಾತು ಕೇಳಿ ಇದು ನನ್ನಿಂದ ಆಗದು ಎಂದುಕೊಂಡು ಇತರರೊಡನೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳದೇ ಹೋದರೆ.ಸಂಕುಚಿತ ಮನೋಭಾವ ನಮ್ಮನ್ನು ಯಾವತ್ತೂ ಉನ್ನತಿಯನ್ನು ಕಾಣಲು ಬಿಡುವುದಿಲ್ಲ. ಅಷ್ಟೇ ಏಕೆ ನಮ್ಮ ಸುತ್ತಮುತ್ತಲೂ ಸಂಕುಚಿತ ಮನೋಭಾವದವರ ಸ್ನೇಹವನ್ನು ಇಟ್ಟುಕೊಂಡರೂ ಕೂಡ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಯಲು ಬಿಡುವುದಿಲ್ಲ. ತಮ್ಮ ಬದುಕಿನ ರೀತಿಯಲ್ಲಿಯೇ ನಮ್ಮನ್ನು ಕಾಣಬಯಸುತ್ತಾರೆ.

ಹೀಗಾಗಿ ನಮ್ಮ ಜೀವನದಲ್ಲಿ ಉತ್ತಮರ ಸಂಗವನ್ನು ಮಾಡಬೇಕು. ಉತ್ತಮ ಆಲೋಚನೆಗಳನ್ನು ಮಾಡಬೇಕು. ಯಾವುದೇ ಕಾರ್ಯವಿರಲಿ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೊಂದಬೇಕು. ಸಾಧನೆ ಎಂಬುವುದೇ ಹಾಗೆ ಅದಕ್ಕೆ ನಂಬಿಕೆ ಮತ್ತು ಆತ್ಮವಿಶ್ವಾಸ.ನಿರ್ದೀಷ್ಟ ಗುರಿ ಎಂಬುದು ಅವಶ್ಯಕ. ಜೀವನದಲ್ಲಿ ನಾವು ಸವಾಲನ್ನು ಸ್ವೀಕರಿಸಬೇಕು.ಅದು ನಮ್ಮ ಬದುಕಿನ ಕೇವಲ ಭಾಗವಾಗಿ ಅಲ್ಲ. ದೈನಂದಿನ ಜೀವನದಲ್ಲಿ ಸವಾಲಿದೆ ಎಂಬ ಅರ್ಥದಲ್ಲಿ. ಯಾರು ಏನೋ ಅನ್ನುತ್ತಾರೆ ಎಂಬ ಕೀಳರಿಮೆ ಬೇಡ. ನಾವು ಸ್ವಾಭಾವಿಕವಾಗಿ ಕಳೆದು ಹೋದ ಘಟನೆಗಳನ್ನು ಮೆಲಕು ಹಾಕುತ್ತೇವೆ.ಅದು ಮರೆತು ಆತ್ಮವಿಶ್ವಾಸದಿಂದ ಬದುಕಿದರೆ ಜೀವನದಲ್ಲಿ ಉನ್ನತಿ ಸಾಧ್ಯ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group