ಮೈರಾಡ್ ಸಂಸ್ಥೆಯಿಂದ 1999 ರಲ್ಲಿ ರಚನೆಯಾದ ಶ್ರೀ ಗುರು ತಿಪ್ಪೆರುದ್ರಸ್ವಾಮಿ ಮಹಿಳಾ ಸ್ವ-ಸಹಾಯ ಸಂಘದ ಬೆಳ್ಳಿ ಹಬ್ಬವನ್ನು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸ್ವ ಸಹಾಯ ಗುಂಪನ್ನು ರಚಿಸಿ ಎಂಟು ವರ್ಷಗಳ ಅವಧಿಗೆ ಪೋಷಿಸಿ ಅದು ಇಂದು ಹೆಮ್ಮರವಾಗಿ ಬೆಳೆಯಲು ಕಾರಣೀಭೂತರಾಗಿರುವ ರಾಯಚೂರಿನ ಶರಣಬಸಪ್ಪ ಪಟ್ಟೇದ ರವರು ಮಾತನಾಡುತ್ತಾ, 25 ವರ್ಷಗಳ ಹಿಂದೆ ಈ ಹೊಸ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಗ್ರಾಮೀಣ ಮಹಿಳೆಯರಲ್ಲಿ ಪರಸ್ಪರ ಸಹಾಯ ಸಹಕಾರದಿಂದ, ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವೆಂಬುದನ್ನು ಮನಗಾಣಿಸಲು ಹರಸಾಹಸ ಪಡಬೇಕಾಯಿತೆಂದು ಅಂದಿನ ದಿನಮಾನಗಳಲ್ಲಿ ಜರುಗಿದ ವಿಶೇಷ ಘಟನೆಗಳನ್ನು ಮನಮುಟ್ಟುವಂತೆ ಬಿಂಬಿಸಿದರು.
ಅಂದು ಕೇವಲ ಎರಡು ರೂಪಾಯಿ ಉಳಿತಾಯ ಮಾಡುವುದರಿಂದ ಪ್ರಾರಂಭಗೊಂಡ ಉಳಿತಾಯ ಮಾಡುವ ಹವ್ಯಾಸ ಬೃಹದಾಕಾರವಾಗಿ ಬೆಳೆದು ಇಂದು ಈ ಸಂಸ್ಥೆಯ ಸದಸ್ಯರು ರೂ. 65 ಲಕ್ಷಗಳಷ್ಟು ಉಳಿತಾಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದರೆಂದು ಅಭಿಪ್ರಾಯ ಪಟ್ಟರು.
ಪರಸ್ಪರ ವಿಶ್ವಾಸದಿಂದ ಸಾಧನೆಗೈದ ಈ ಮಹಿಳೆಯರು ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವುದು ಹಾಗೂ ಪ್ರತಿಯೊಬ್ಬ ಮಹಿಳೆಯು ಸರ್ವತೋಮುಖ ಅಭಿವೃದ್ಧಿ ಹೊಂದಿರುವುದು ಇವರ ಕರ್ತೃತ್ವಶಕ್ತಿ, ಕ್ರಿಯಾಶೀಲತೆ, ಅಭಿವೃದ್ಧಿ ಪರ ತುಡಿತಗಳಿಗೆ ಕಾರಣೀಭೂತವಾಗಿದೆಯೆಂದು ನುಡಿದರು.
ಇನ್ನೊಬ್ಬ ಅತಿಥಿ ಭಾಲಚಂದ್ರ ಜಾಬಶೆಟ್ಟಿ ಮಾತನಾಡಿ ಸರ್ವತೋಮುಖ ಅಭಿವೃದ್ಧಿ ಜೊತೆಗೆ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಮಹಿಳೆಯರ ಅವಶ್ಯಕತೆಯಾಗಿದ್ದು ಆ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ನಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಯು ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಬೇಕು, ಅದಕ್ಕಾಗಿ ಸೂಕ್ತ ತ್ಯಾಜ್ಯ ನಿರ್ವಹಣೆ ವಿಧಾನಗಳಿಂದ ಹಾಗೂ ಇಂಗಾಲದ ಹೆಜ್ಜೆಗಳನ್ನು ಕಡಿತಗೊಳಿಸಲು ಸೌರಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದಿಸಿ ಪಳಿಯುಳಿಕೆ ಆಧಾರದ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆಮಾಡಬೇಕೆಂದರು.
ಮುಜರಾಯಿ ಇಲಾಖೆಯಿಂದ ನಿಯೋಜಿಸಲ್ಪಟ್ಟಿರುವ ನಾಯಕನಹಟ್ಟ ಶ್ರೀ ಗುರು ತಿಪ್ಪೆರುದ್ರ ಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ ರವರು ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸ್ವಸಹಾಯ ಸಂಘವು ಸುವರ್ಣ ಹಬ್ಬ ಆಚರಿಸಬೇಕೆಂದು ಹಾರೈಸಿದರು.
ಮೈರಾಡ್ ನ ಅಶೋಕ ಹಗೆದಾಳರವರು ಮಾತನಾಡುತ್ತಾ, ಇಂಥ ಯಶಸ್ವಿ ಸಂಘಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು, ಸಾಲ ಸೌಲಭ್ಯ, ಉಳಿತಾಯ ಹಾಗೂ ಪರಸ್ಪರ ಸಹಾಯ ಸಹಕಾರದಿಂದ ಅಭಿವೃದ್ಧಿ ಪಥಕ್ಕೆ ನಾಂದಿ ಹಾಡಬೇಕೆಂದು ಕರೆ ನೀಡಿದರು.
ಪಟ್ಡಣ ಪಂಚಾಯಿತಿಯ ಅಧ್ಯಕ್ಷೆ, ಉಪಾಧ್ಯಕ್ಷೆ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ, ಕೆನರಾ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ, ಎಫ್.ಪಿ.ಓ.ದ ಸಿ.ಇ.ಓ. ಪ್ರಸಾದ, ತಿಪ್ಪೆಸ್ವಾಮಿ ಮುಂತಾದವರು ವೇದಿಕೆ ಮೇಲಿದ್ದರು.
ಎಲ್ಲ ಅತಿಥಿಗಳನ್ನು ಹಾಗೂ ಸಂಘದ ಎಲ್ಲ ಸದಸ್ಯರನ್ನು ಶಾಲು ಹಾಕಿ ಫಲಪುಷ್ಪ ನೀಡಿ ಗೌರವಿಸಲಾಯಿತು
ಮಂಜುನಾಥ ಜಾಗನೂರಹಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು