ಸಿಂದಗಿ: ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವರು ತಮ್ಮ ತಮ್ಮ ಕುಟುಂಬದ ಸದಸ್ಯರ ಜೊತೆ ಸಮಸ್ಯೆಗಳನ್ನು ಅಥವಾ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ ಹಾಗೂ ಒಳ್ಳೆಯವರ ಸ್ನೇಹ ಬೆಳೆಸಿಕೊಳ್ಳಿ. ಹೆಣ್ಣು ಮಕ್ಕಳು ಸಾಯಂಕಾಲದ ಹೊತ್ತು ದಾರಾವಾಹಿ ನೋಡುವುದನ್ನು ಕಡಿಮೆ ಮಾಡಿ ಅಕ್ಕ ಪಕ್ಕದ ಮನೆಯವರ ಜೊತೆ ತಮ್ಮ ದುಃಖ, ನೋವು ಹಾಗೂ ಸಮಸ್ಯೆಗಳನ್ನು ಹಂಚಿಕೊಳ್ಳುವುದರಿಂದ ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡಬಹುದು. ತಮ್ಮ ವೈಯಕ್ತಿಕ ವ್ಯಕ್ತಿತ್ವದ ಬಗ್ಗೆ ನಮಗೆ ಸಕಾರಾತ್ಮಕ ಆಲೋಚನೆ ಮತ್ತು ಭಾವನೆಗಳು ಇರಬೇಕು ಎಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್ ಹೇಳಿದರು.
ಪಟ್ಟಣದ ಬಸವನಗರದಲ್ಲಿ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕ್ಲಿನಿಕಲ್ ಸೈಕಿಯಾಟ್ರಿಸ್ಟ್ mಆಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಪಿ ಭಾಗವಾನರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ ಕಾರಣ ಟೆನ್ಷೆನ್, ಕುಟುಂಬ ಕಲಹ, ಅತಿಯಾದ ಸಾಲ, ನಿರುದ್ಯೋಗ, ಮಾನಸಿಕ ಖಿನ್ನತೆ, ಬೇಜಾರು ಹಾಗೂ ನಿದ್ರಾಹೀನತೆ. 15 ರಿಂದ 29 ವರ್ಷದಲ್ಲಿರುವ ಯುವಕ/ಯುವತಿಯರು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಕ್ಕಳು ಪರೀಕ್ಷೆಯಲ್ಲಿ ಸರಿಯಾದ ಅಂಕ ಬರದೆ ಇದ್ದಾಗ, ತಂದೆ ತಾಯಿ ಬೈದಾಗ, ಒಡ ಹುಟ್ಟಿದವರ ಜೊತೆ ಸಣ್ಣಪುಟ್ಟ ಜಗಳಗಳು ನಡೆದಾಗ ಹೀಗೆ ಅನೇಕ ಕಾರಣಗಳಿಂದ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮುಕ್ತವಾಗಿ ಕುಟುಂಬದವರ ಜೊತೆ ಅಥವಾ ಅಪ್ತರ ಜೊತೆ ಮಾತನಾಡುವುದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸುವುದು, ಆತ್ಮಸೈರ್ಯ ಹಾಗೂ ಧೈರ್ಯ ತುಂಬುವುದು, ತಂದೆ ತಾಯಿ ಮಕ್ಕಳನ್ನು ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡಿಸುವುದು, ಸಕಾರಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳುವುದು, ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು, ಜೀವನ ಶೈಲಿಯನ್ನು ಬದಲಾಯಿಸುವುದು ಈ ರೀತಿ ಮಾಡುವುದರಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದರು.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, 2023ನೇ ಸಾಲಿನ ಆತ್ಮಹತ್ಯೆ ತಡೆಗಟ್ಟುವಿಕೆ ದಿನದ ಧ್ಯೇಯ ವಾಕ್ಯ ಕ್ರಿಯೆಯ ಮೂಲಕ ಭರವಸೆಯನ್ನು ರಚಿಸುವುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಸಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ಮಹಿಳೆಗೆ ಮೂರು ಪುರುಷರು ಆತ್ಮಹತ್ಯೆ ಮಾಡುವ mವರದಿಯಾಗಿವೆ. ತಿಳಿವಳಿಕೆಯನ್ನು ಉತ್ತೇಜಿಸುವ ಮೂಲಕ ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ, ನಾವು ಜನರಿಗೆ ವಿಶ್ವಾಸವನ್ನು ನೀಡಲು ಬಯಸುತ್ತೇವೆ. ಆತ್ಮಹತ್ಯೆ ತಡೆಗಟ್ಟಲು ನಾವು ನೋವಿನಲ್ಲಿರುವವರಿಗೆ ಬೆಳಕಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ಸೈಕಿಯಾಟ್ರಿಸ್ಟ್ ಕುಮಾರಿ ಭಾಗ್ಯಶ್ರೀ ರಾಯಣ್ಣನವರು, ಸ್ವ-ಸಹಾಯ ಸಂಘದ ಮಹಿಳೆಯರು ಮತ್ತು ವಿಶೇಷ ಚೇತನರು ಉಪಸ್ಥಿತರಿದ್ದರು.
ಸಂಗಮ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ವಿಜಯ ವಿ ಬಂಟನೂರ ಸ್ವಾಗತಿಸಿದರು. ಕಾರ್ಯಕರ್ತ ಬಸವರಾಜ ನಿರೂಪಿಸಿದರು. ಕಾರ್ಯಕರ್ತ ರಾಜೀವ ವಂದಿಸಿದರು. ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ಇವರು ಸಂವಿಧಾನ ಪ್ರಸ್ತಾವನೆಯನ್ನು ಮಂಡಿಸಿದರು.