ಸಿಂದಗಿ; ಈಗಿದ್ದ ತಹಶೀಲ್ದಾರ ಕಚೇರಿಯು ನಿರ್ಮಾಣವಾಗಿ 30 ವರ್ಷಗಳಲ್ಲಿಯೇ ಶಿಥಿಲಾವಸ್ಥೆ ಕಂಡಿದೆ ಆ ಕಾರಣಕ್ಕೆ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ಶಾಶ್ವತವಾಗಿ ಉಳಿಯುವಂತೆ ಕಾಮಗಾರಿ ಮಾಡಬೇಕು ಎಂದು ಲಿಂಬೆ ಅಭಿವೃದ್ದಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ ಗುತ್ತಿಗೆದಾರರಿಗೆ ಸೂಚಿಸಿದರು.
ಪಟ್ಟಣದ ಆಲಮೇಲ ರಸ್ತೆಯಲ್ಲಿರುವ ಕಲ್ಲಕಣಿ ಜಾಗೆಯಲ್ಲಿ ಸುಮಾರು 975 ಲಕ್ಷ ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ಸಮಾರಂಭದಲ್ಲಿ ಅವರು ಮಾತನಾಡಿ, ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾಗಬಾರದು ಎಂದು ಒಂದೇ ಕಡೆ ಎಲ್ಲ ಇಲಾಖೆಗಳ ದೊಡ್ಡ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತೋಷಕರ ಸಂಗತಿ ಎಂದರು.
ಭೂಮಿಪೂಜೆ ನೆರವೇರಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳು 5 ತಾಲೂಕುಗಳ ಕಾಮಗಾರಿಗಳಿಗೆ ಸಾಂಕೇತಿಕವಾಗಿ ಭೂಮಿಪೂಜೆ ಸಲ್ಲಿಸಿದ್ದಾರೆ ಆದರೆ ಈ ಕಟ್ಟಡದ ರೂಪುರೇಷೆ ನೋಡಿದರೆ ರೂ. 10 ಕೋಟಿ ಹಣ ಸಾಕಾಗುವುದಿಲ್ಲ ಇನ್ನೂ 10 ಕೋಟಿ ಅನುದಾನ ಬೇಕು ಎಂದು ಬೇಡಿಕೆ ಇಟ್ಟಿದ್ದು ಅರ್ಧ ಕಾಮಗಾರಿ ಮುಗಿಯುವುದರೊಳಗಾಗಿ ಉಳಿದ ಅನುದಾನ ಮಂಜೂರಾತಿ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದು ಶೀಘ್ರದಲ್ಲಿಯೇ ಹಣ ಬಿಡುಗಡೆ ಮಾಡುವ ವಾಗ್ದಾನ ನೀಡಿದ್ದಾರೆ ಎಂದು ಹೇಳಿದ ಅವರು, ಈ ಕಟ್ಟಡದಲ್ಲಿ ಎಲ್ಲ ಇಲಾಖೆಗಳ ಕಟ್ಟಡ ನಿರ್ಮಾಣವಾಗುತ್ತಿದ್ದು ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಅಲ್ಲದೇ ಆಲಮೇಲದಲ್ಲಿ ಕಾನೂನಾತ್ಮಕ ಎಲ್ಲ ಇಲಾಖೆಗಳು ಆಡಳೀತ ವಿಸ್ತರಣೆಯಾಗಬೇಕು ಎಂದು ಮೊದಲಿನ ಕಟ್ಟಡವನ್ನು ರಿಪೇರಿ ಮಾಡಿ ಕಂದಾಯ ಇಲಾಖೆಯನ್ನು ಪ್ರಾರಂಭಿಸಿ ಅಲ್ಲಿಯೇ ತಹಶೀಲ್ದಾರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ ಎ.ಎಸ್. ತುಂಬಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿಕೊಡಲಾಗಿದ್ದು ಕಟ್ಟಡ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಹಾಗೂ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಂಪೂರ್ಣ ಮಾರ್ಗದರ್ಶನ ನೀಡಲಾಗುವುದು ಎಂದರು.
ಹೆಸ್ಕಾಂ ನಿಗಮದ ನಿರ್ದೇಶಕ ಪುಟ್ಟು ಸಾವಳಸಂಗ, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಗುರು ಗಡಗಿ, ಈರಣ್ಣಾ ರಾವೂರ, ಗುತ್ತಿಗೆದಾರ ಎ.ಎಚ್. ರುಣವಾಲ, ಸಂತೋಷ ಪಾಟೀಲ ಡಂಬಳ, ರವಿ ನಾಯ್ಕೋಡಿ, ಪಿಡ್ಲ್ಯೂಡಿ ಎಇಇ ತಾರಾನಾಥ ರಾಠೋಡ, ಎಸ್ ಬಿ.ಬಿರಾದಾರ ಸೇರಿದಂತೆ ಅನೇಕರಿದ್ದರು.
ಎಇ ನಾಗಾರಾಜ ಅವರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.