ಹರಿದಾಸ ಸಾಹಿತ್ಯದ ಅಧ್ಯಯನ ಅಧ್ಯಾಪನಾದಿಗಳಿಂದ ಸಂಸ್ಕೃತಿ ಸಂವೃದ್ಧಿಸಲಿ- ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

0
339

ಸಂಪನ್ನಗೊಂಡ ಶ್ರೀ ವಿಜಯದಾಸರ ಜೀವನ ಮತ್ತು ಸಾಹಿತ್ಯ ವಿಚಾರ ಸಂಕಿರಣ

ಬೆಂಗಳೂರು – ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ (ರಿ) ಆಶ್ರಯದಲ್ಲಿ ಶ್ರೀ ಶ್ರೀಪಾದರಾಜ ಸಭಾಭವನದಲ್ಲಿ ಹಿರಿಯ ಹರಿದಾಸ ಸಾಹಿತ್ಯ ವಿದ್ವಾಂಸ ಎನ್ ಐ ವಿ ಎಸ್ ನ ನಿರ್ದೇಶಕರಾಗಿದ್ದ ಡಾ. ಕೆ ಗೋಕುಲನಾಥ್ ಸ್ಮರಣಾರ್ಥ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ಆಯೋಜಿಸಲಾಗಿದ್ದ ಶ್ರೀ ವಿಜಯದಾಸರ ಜೀವನ ಮತ್ತು ಸಾಹಿತ್ಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಕರ್ನೂಲ್ ಶ್ರೀನಿವಾಸ್ ಆಚಾರ್ಯ ವಿಜಯರಾಯರ ಸುಳಾದಿಗಳ ಕುರಿತು ಮತ್ತು ವಿದ್ವಾನ್ ಎ.ಬಿ ಶಾಮಾಚಾರ್ಯ ವಿಜಯದಾಸರ ಕರುಣಾಮೃತ ಸುಳಾದಿ ಕುರಿತು ಪ್ರಬಂಧ ಮಂಡಿಸಿದರು.

ಖ್ಯಾತ ಹರಿದಾಸ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥ ಸಾರಥಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವ್ಯಾಸ ಮಧ್ವರ ಸಾಹಿತ್ಯದ ಭಾಷಾನುವಾದ ರೂಪವೇ ದಾಸ ಸಾಹಿತ್ಯ. ಸಂಸ್ಕೃತ ಗಂಗೆ ತತ್ವಜ್ಞಾನ ಕನ್ನಡದ ರೂಪದಲ್ಲಿ ಜನಮನ ತಣಿಸಿತು. ಹರಿದಾಸರ ವಿಚಾರಧಾರೆ ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ವಾಹಿನಿಯಾಗಿ ಹರಿಯಿತು. ಸಂದೇಶಗಳಿಂದ ಸುಮನ ಶುದ್ಧೀಕರಿಸಿ ಬುದ್ಧಿಪ್ರದ ಸಿದ್ದಿ ಸಾಧನವಾಗಿದೆ. ಹರಿದಾಸ ಸಾಹಿತ್ಯದ ಅಧ್ಯಯನ ಅಧ್ಯಾಪನಾದಿಗಳು ಸತತ ನಡೆದು ಸಂಸ್ಕೃತಿ ಸಂವೃದ್ಧಿಸಲಿ ಎಂದು ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಚೀಕಲಪರ್ವಿಯ ವಿಜಯದಾಸರ ವಂಶಸ್ಥರಾದ ಜಗನ್ನಾಥದಾಸ ಮತ್ತು ಮೇಲಗಿರಿ ದಾಸ ಭಾಗವಹಿಸಿದ್ದರು.

ಎನ್ಐವಿಎಸ್ ನ ಕಾರ್ಯದರ್ಶಿ ವಿದ್ವಾನ್ ಹೆಚ್ ಬಿ ಲಕ್ಷ್ಮಿ ನಾರಾಯಣ, ನಿರ್ದೇಶಕ ಡಾ ಸುರೇಶ ಪಾಟೀಲ, ಸಂಘಟಕರಾದ ಡಾ ವಾದಿರಾಜು ಆರ್, ಡಾ ವಾಣಿಶ್ರೀ ಗಿರೀಶ್, ಡಾ ಆನಂದಾಚಾರಿ, ಶ್ರೀಧರ್, ದಾಸವಾಣಿ ಕರ್ನಾಟಕ ದ ಜಯರಾಜ್ ಕುಲಕರ್ಣಿ ಮತ್ತು ಮಾನಸ ಕುಲಕರ್ಣಿ, ಮೈತ್ರಿ ಹರಿದಾಸಿನಿ ಟ್ರಸ್ಟ್ ನ ಡಾ ವೃಂದ ಸಂಗಮ  ಮತ್ತು ಡಾ ಸುಧಾ ದೇಶಪಾಂಡೆ, ಸಂಸ್ಕೃತಿ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

 ಶ್ರೀಪಾದರಾಜ ಮಠದ ಹಯವದನ ವಿಠಲ ಸೇವಾ ಸಂಘ, ಶ್ರೀ ವ್ಯಾಸತೀರ್ಥ ಭಜನಾ ಮಂಡಳಿ ಮತ್ತು ಸ್ವರಾತ್ಮಿಕ ಸಂಗೀತ ವಿದ್ಯಾಲಯದ ಮಾತೆಯರಿಂದ ವಿಜಯದಾಸರ ಕೃತಿಗಳ ಗೋಷ್ಠಿ ಗಾಯನ ನೆರವೇರಿತು.