ಸಿಂದಗಿ– ಮಾನವೀಯತೆಗೆ ಹೊಸ ಭಾಷೆ ಬರೆದ ಸಿಂದಗಿಯ ಸಿರಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಬದುಕೇ ಒಂದು ಇತಿಹಾಸ ಎಂದು ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದ ಊರಿನ ಹಿರಿಯಮಠದಲ್ಲಿ ಗುರುವಾರ ನಡೆದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 44 ನೇ ಪುಣ್ಯ ಸ್ಮರಣೋತ್ಸವ ಮತ್ತು ಗದುಗಿನ ತೋಂಟದಾರ್ಯ ಮಠದ ಲಿಂ ಡಾ.ಸಿದ್ದಲಿಂಗ ಮಹಾಸ್ವಾಮಿಗಳ 6 ನೇ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ ಅವರ ಸಾಹಿತ್ಯದಲ್ಲಿ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಲಾವಿದ ಪಂ.ಶರಣ್ ಚೌಧರಿ ಅವರ ಸಂಗೀತ ನಿರ್ದೇಶನದ ಹಾಗೂ ಪಂಡಿತ ರಾಘವೇಂದ್ರ ಜೋಷಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಸಿಂದಗಿಯ ಶ್ರೀರಕ್ಷೆ ಎನ್ನುವ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಿಂದಗಿಯ ಶ್ರೀಗಳು ಆಸ್ತಿ, ಹಣ, ಅಂತಸ್ತುಗಳ ಬೆನ್ನು ಹತ್ತಲಿಲ್ಲ ಅದರ ಬದಲಿಗೆ ನಡೆದಾಡುವ ಅನೇಕ ಮಠಾಧೀಶರನ್ನು ಬೆಳೆಸಿ ಅವರಿಗೆ ಸಾಮಾಜಿಕ ಕಾಯಕವನ್ನು ಕಲಿಸಿದವರು. ಉತ್ತರ ಕರ್ನಾಟಕದಲ್ಲಿ ಅವರ ಹೆಸರು ಚಿರಸ್ಥಾಯಿ ಅವರ ಬದುಕಿನುದ್ದಕ್ಕೂ ಬಡ, ಅನಾಥ ಮಕ್ಕಳ ಜೀವಕ್ಕಾಗಿಯೆ ದುಡಿದವರು ಎಂದರು.
ಈ ವೇಳೆ ಬೆಂಗಳೂರಿನ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಕಲಾವಿದ ಪಂ.ಶರಣ್ ಚೌಧರಿ, ತಬಲಾವಾದಕ ಪಂ.ರಾಘವೇಂದ್ರ ಜೋಷಿ, ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ, ಹಾಸ್ಯ ಕಲಾವಿದ ಪ್ರಶಾಂತ ಚೌಧರಿ, ಡಾ.ಪ್ರಕಾಶ ರಾಗರಂಜನಿ, ಪೂಜಾ ಹಿರೇಮಠ ಅವರಿಗೆ ಶ್ರೀಮಠದಿಂದ ಗೌರವಿಸಲಾಯಿತು.
ನಂತರ ರಾಗರಂಜನಿ ಸಂಗೀತ ಕೇಂದ್ರದ ತಂಡದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ವೇದಿಕೆ ಮೇಲೆ ಊರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಸಂಶಿಯ ವಿರಕ್ತಮಠದ ಶ್ರೀ ಚೆನ್ನಬಸವ ದೇವರು ಉಪಸ್ಥಿತರಿದ್ದರು.
ಸಂಗೀತಗಾರ ರೇಣುಕಗವಾಯಿಗಳು ಪ್ರಾರ್ಥಿಸಿದರು, ಉಪನ್ಯಾಸಕರಾದ ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು, ಗದಿಗಯ್ಯ ನಂದಿಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತ ಸಮೂಹ ಪಾಲ್ಗೊಂಡಿದ್ದರು.