ಬದುಕಿನ ಸುತ್ತೆಲ್ಲ ಅಜ್ಞಾನದ ಕಾರ್ಮೋಡ ಕವಿದು ತನ್ನ ಜೀವಂತಿಕೆಯನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದಾಗ ಜ್ಞಾನ ಜ್ಯೋತಿಯ ಕಿರಣವೊಂದು ಜನಸಾಮಾನ್ಯರ ಪಾಲಿಗೆ ಒಲಿದು ಬಂದಿತ್ತು. ಅಂತರಂಗದ ಅರಿವಿನ ಸಾಮ್ರಾಜ್ಯದ ಪರದೆಯನ್ನು ಅನಾವರಣಗೊಳಿಸಿತ್ತು. ವಚನಗಳ ಮೂಲಕ ಜನ ಜೀವನದಲ್ಲಿ ಭಕ್ತಿಯ ಬೆಳಕು ಚೆಲ್ಲಲು ನೂರಾರು ಶರಣ ಚೇತನಗಳು ದಣಿವರಿಯದೇ ಶ್ರಮಿಸಿದ್ದವು.
ದಿವ್ಯ ಚೈತನ್ಯ ಅಣ್ಣ ಬಸವಣ್ಣನ ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹಂಚಿಕೊಂಡ ದಿಟ್ಟ ಮಹಿಳೆಯರಲ್ಲಿ ಅಕ್ಕ ನಿಜಕ್ಕೂ ಮಹಿಳಾಪರ ದೊಡ್ಡ ದನಿಯಾಗಿದ್ದಳು. ದಾಸೋಹ ಮತ್ತು ಶರಣರ ಕಾಯಕದಲ್ಲಿ ನಿರತಳಾಗಿ ಭೋಗ ಜೀವನ ಬಿಟ್ಟು ಯೋಗಿಯಾಗಿ ಶರಣೆಯಾಗಿ ಸೇವೆ ಸಲ್ಲಿಸುತ್ತಿರುವಾಗ ಕೌಶಿಕ ಮಹಾರಾಜ ಅಕ್ಕನ ಕೆಲಸಗಳಿಗೆ ಅಡ್ಡಿ ಪಡಿಸಿದನು. ಕೌಶಿಕನ ಕೋಪದ ನುಡಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಉಟ್ಟ ಬಟ್ಟೆಗಳನ್ನು ಬಿಚ್ಚಿ ಅರಮನೆಯನ್ನು ಬಿಟ್ಟು ದೇವರ ಮನೆ ಶ್ರೀಶೈಲಮಲ್ಲಿಕಾರ್ಜುನನ್ನು ನೆನಯುತ್ತ ಕದಳಿ ಬನಕ್ಕೆ ಸಾಗಿದಳು.
ಶರಣ ಚಳವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಅಕ್ಕ, ಸ್ತ್ರೀವಾದಿಯ ನಿಜವಾದ ಪ್ರತಿಪಾದಕಿಯಾಗಿ ಮುಂಚೂಣಿಯಲ್ಲಿದ್ದಳು ಅಕ್ಕ, ಕನ್ನಡದ ಪ್ರಥಮ ಮಹಿಳಾ ಕವಯಿತ್ರಿ ಅಷ್ಟೇ ಅಲ್ಲ ಚಿಕ್ಕ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಿಸಿದ ಎಲ್ಲರ ಅಕ್ಕರೆಯ ಅಕ್ಕ. ಲೌಕಿಕ ಜಗತ್ತನ್ನು ದಿಕ್ಕರಿಸಿ ಕೇಶಾಂಬರಿಯಾಗಿ ನಡೆದ ಅಕ್ಕ ಹಲವಾರು ಜನರಿಗೆ ಎತ್ತರದ ಚೇತನ. ಅಕ್ಕನ ಜೀವನ ಕಥನ, ಐತಿಹ್ಯ ವಿಸ್ಮಯ ಪ್ರಭಾವಗಳಿಂದ ಕೂಡಿದ್ದರೂ ವಚನಗಳು ಆಕೆಯ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಯಶಸ್ವಿ ಪಾತ್ರ ವಹಿಸುತ್ತದೆ.
ಅಕ್ಕನ ಜೀವನ ಅಸಾಮಾನ್ಯವಾದ ವೈಶಿಷ್ಟ್ಯತೆಯಿಂದ ವೈಚಾರಿಕ ಅನುಭಾವ ಪೂರ್ಣವಾದ ನಡೆ ನುಡಿಗಳಲ್ಲೊಂದು ಅಕ್ಕ ವಿಶಿಷ್ಟ ಸಂವೇದನೆಯ ವ್ಯಕಿತ್ವ್ತದವಳಾಗಿ ಗಮನ ಸೆಳೆಯುತ್ತಾಳೆ, ಅಕ್ಕನ ವಚನಗಳು ಕನ್ನಡ ಸಾಹಿತ್ಯದಲ್ಲಿ ಮೌಲಿಕ ಬರಹಗಳಾಗಿವೆ. ಆಕೆಯ ವಚನಗಳು ಭಾವೋದ್ವೇಗವನ್ನಷ್ಟೇ ಹೊಂದದೇ ಗೇಯತೆಯನ್ನು ಹೊಂದಿದೆ.
ವಚನಕಾರರಲ್ಲಿ ಅತಿ ಕಿರಿಯ ಅನುಭಾವಿಯಾಗಿದ್ದರೂ ಸಹ ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ ಆಕೆಯ ವಚನಗಳು ಗಮನಾರ್ಹವಾಗಿವೆ. ಶಕ್ತಿ ಶಾಲಿಯಾಗಿವೆ ಇಂದಿಗೂ ಪ್ರಸ್ತುತವಾಗಿವೆ.ಸೂಜಿಗಲ್ಲಿನಂತೆ ಆಕರ್ಷಿಸುವಲ್ಲಿ ಅನುಮಾನವೇ ಇಲ್ಲ.
ಆಡಂಬರ ಅಧಿಕಾರ ವೈಭವ ಸಂಪತ್ತು ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಬದುಕಿನ ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನಜೀವನದಲ್ಲಿ ಬೆರೆತುದು ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಂಡ ಗಟ್ಟಿ ಹೃದಯದ ಬಂಡಾಯ ವಚನಕಾರ್ತಿ.ಮಹಿಳಾ ಪ್ರತಿನಿಧಿಯಾಗಿ ಪುರುಷ ಸಮಾಜದ ದೌರ್ಜನ್ಯವನ್ನು ಖಂಡಿಸಿದಳು. ಬೆಟ್ಟದಾ ಮೇಲೊಂದು ಮನೆಯ ಮಾಡಿ ಎಂಬ ವಚನದಲ್ಲಿ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ತಪ್ಪಿದ್ದಲ್ಲ. ಎಂಬ ಅರಿವಿನ ಸಮಗ್ರ ಸಾರವೇ ಅಕ್ಕನ ವಚನ ಸಾಹಿತ್ಯದಲ್ಲಿ ಅಡಗಿದೆ. ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆಭಾವಿಗಳುಂಟು ಎಂಬ ವಚನದಲ್ಲಿ ಲೋಕಾನುಭವ ಜ್ಞಾನ ಸಂಪನ್ನತೆಗೆ ಸಾಕ್ಷಿ. ನೇರ ದಿಟ್ಟ ಅಭಿವ್ಯಕ್ತಿಯಿಂದ ಪುರುಷ ಸಮಾಜದೊಂದಿಗೆ ಪ್ರತಿಭಟಿಸಿದಳು.
ಚೆನ್ನ ಮಲ್ಲಿಕಾರ್ಜುನ ಆಕೆಯ ವಚನದ ಅಂಕಿತ ನಾಮ. ಯೋಗಾಂಗ ತ್ರಿವಿಧ ಅಕ್ಕನ ಪ್ರಮುಖ ಕೃತಿ.
ಇತ್ತೀಚೆಗೆ ಮಹಿಳಾ ಸಬಲೀಕರಣ ಎಲ್ಲೆಲ್ಲೂ ಸಂಚಲನ ಮೂಡಿಸಿದೆ. ವೈಚಾರಿಕ ಕ್ರಾಂತಿಯಿಂದ ವಚನಗಳಲ್ಲಿ ಜಾಗೃತಿ ಮೂಡಿಸಿ ಮೊದಲ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ವೈರಾಗ್ಯ ನಿಧಿ ಅಕ್ಕ ಮಹಿಳೆಯರ ಬದುಕಿಗೆ ಹೊಸ ಅರ್ಥಪೂರ್ಣ ಅಧ್ಯಾಯವನ್ನು ಬರೆದ ಮಹಾದೇವಿ.
ಆಕೆಯ ವಚನಗಳು ಬದುಕಿನ ಸಮಸ್ಯೆಗಳಿಗೆ ಪರಿಹಾರ, ಅಂತರಂಗದ ತಿಳಿವು ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ. ಅಕ್ಕನ ವಚನಗಳ ಸಾರವನ್ನು ಅರಿತು, ಸುಂದರ ಬದುಕಿನ ಸುಗಮ ಹಾದಿಯನ್ನು ಕಂಡುಕೊಳ್ಳಲು ನಾವು ಮುಂದಾಗಬೇಕಿದೆ.
ಜಯಶ್ರೀ.ಜೆ. ಅಬ್ಬಿಗೇರಿ, ಬೆಳಗಾವಿ 9449234142
Madam very touching literature