ಮೂಡಲಗಿ: ನಿಜಗುಣ ದೇವರು ಒಬ್ಬ ಅಪರೂಪದ ಸಾಹಿತಿಯಾಗಿದ್ದಾರೆ, ನಿಜಗುಣ ದೇವರು ಓದಿದ್ದು ಒಂದಿಷ್ಟು ಆದರೆ ಬರೆದಿದ್ದು ಬಹಳಷ್ಟು ಇದೆ ಎಂದು ಸುತ್ತೂರು ವೀರಸಿಂಹಾಸನಮಠ ಜಗದ್ಗುರು ಡಾ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜಗುಣ ದೇವರ ಷಷ್ಟ್ಯಬ್ದಿ ಸಂಭ್ರಮದ ಕಾರ್ಯಕ್ರಮದಲ್ಲಿ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಗೌರವ ಸಂಪಾದಕತ್ವದಲ್ಲಿ ಮತ್ತು ಬೆಳಗಾವಿಯ ಹಿರಿಯ ಸಾಹಿತಿ ಡಾ: ರಾಮಕೃಷ್ಣ ಮರಾಠೆ ಅವರ ಸಂಪಾದಕತ್ವದಲ್ಲಿ ವಿಚಾರ ಸಂಕಿರಣದಿಂದ ಮಂಡಿಸಲಾದ ಪ್ರಬಂಧದ ಕೃತಿ ‘ನಿಜಗುಣ ದೇವರ ಬದುಕು-ಬರಹ’ ಕೃತಿ ಬಿಡುಗೊಳಿಸಿ ಮಾತನಾಡಿ, ತಮ್ಮ ಗುರುಗಳ ಆಶೀರ್ವಾದದಿಂದ ಒಬ್ಬ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪಿಎಚ್ಡಿ ಮಾಡುವಷ್ಟು ಪುಸ್ತಕಗಳನ್ನು ಮತ್ತು ಕವಿತೆಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯ ಇನ್ನೂಬ್ಬರಿಗೆ ಮಾರ್ಗದರ್ಶನವಾಗಿದೆ ಎಂದರಲ್ಲದೇ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರರು ಆಧುನಿಕ ವಚನಕಾರರು, ಶ್ರೇಷ್ಠ ಸಾಹಿತಿಗಳು ಆಗಿದ್ದಾರೆ. ಇವರ ಗೌರವ ಸಂಪಾದಕತ್ವದಲ್ಲಿ ಅದ್ಭುತವಾದ ಕೃತಿ ಬಂದಿದೆ ಎಂದು ಮನದುಂಬಿ ಮಾತನಾಡಿದರು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ಮಹಾತ್ಮರು ಹೇಳಿದ್ದಾರೆ. ಆದರೆ ಗುರುವಿನ ಗುಲಾಮನಾದರೆ ಸಾಕು ಒಬ್ಬ ಶ್ರೇಷ್ಠ ಸಾಹಿತಿಯೂ ಕೂಡಾ ಆಗಬಹುದು ಎನ್ನವುದಕ್ಕೆ ನಿದರ್ಶನ ನಿಜಗುಣ ದೇವರು ಎಂದರು.
ಇಂಚಲದ ಡಾ: ಶಿವಾನಂದ ಭಾರತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಕುರಿತು ವಿಜಯಪುರದ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿದರು. ಮಾದಾರ ಚನ್ನಯ್ಯಪೀಠದ ಚನ್ನಯ್ಯ ಮಹಾಸ್ವಾಮಿಗಳು, ಚಿತ್ರದುರ್ಗದ ಶಿವಲಿಂಗಾನಂದ ಮಹಾಸ್ವಾಮಿಗಳು ಸೇರಿದಂತೆ 50ಕ್ಕೂ ಹೆಚ್ಚು ಸ್ವಾಮಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. ಬೀದರಿನ ಗಣೇಶಾನಂದ ಮಹಾರಾಜರು ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.