ನಾನು ನನ್ನ ಸ್ನೇಹಿತರು ಸೇರಿ ನಮ್ಮ ಸಂಸ್ಥೆಯ ಶಿಕ್ಷಕರೊಬ್ಬರ ತಮ್ಮನ ಮದುವೆಗೆಂದು ರೋಣ ಗೆ ಹೋಗಿದ್ದೆವು. (ಅಲ್ಲಿ ಎರಡು ಮದುವೆ ನಡೆಯಿತು)
ಅಲ್ಲಿ ನಡೆಯುತ್ತಿರುವುದು ಮುಸ್ಲಿಂ ಬಾಂಧವರ ಮದುವೆ. ಹಾಗೆ ನೋಡಿದರೆ ಅಲ್ಲಿ ನೆರೆದಿದ್ದ ಬಹುತೇಕರು ಮುಸ್ಲಿಂ ಸಮುದಾಯದವರಾದರೂ ಅವರೇ ಇವರೆಂದು ಗುರುತಿಸಲೂ ಆಗುತ್ತಿರಲಿಲ್ಲ. ಕಾರಣ ಸಾಮಾನ್ಯ ರೈತಾಪಿ ಜನರು, ಅದೇ ಹಳ್ಳಿ ಸೊಗಡಿನ ಸಾಮಾನ್ಯ ಉಡುಗೆಯಲ್ಲಿ ಹೆಣ್ಣು ಗಂಡು ಇಬ್ಬರೂ ಮಿಂಚುತ್ತಿದ್ದು ವಿಶೇಷ.
ಹಳ್ಳಿಯವರಾದರೂ ಆತ್ಮೀಯತೆಯ ಆದರ್ಶ ಗುಣಗಳು ಕಂಡುಬಂದಿದ್ದು ತುಂಬಾ ವಿಶೇಷ. ಊಟ ಕೂಡ ಪೂರ್ಣ ಸಸ್ಯಾಹಾರಿ ಅಡುಗೆ. ಲಾಡು, ರೊಟ್ಟಿ , ಪಲ್ಯ ಕಾಳು, ಚಟ್ನಿ, ಪುಡಿ, ಉಪ್ಪಿನಕಾಯಿ ಅನ್ನ ಸಾಂಬಾರ್ ಹೀಗೆ ಇತ್ತು.
ನಾವೂ ಹೋಗಿ ಮುಂದಿನ ಕುರ್ಚಿಯಲ್ಲಿ ಕುಳಿತೆವು. ಸ್ವಲ್ಪ ಹೊತ್ತು ಮದುವೆಯ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಮದುವೆಯ ಗಂಡುಗಳು ಮತ್ತು ಮೌಲಿ ಹಾಗೂ ಆಯಾ ವಧು ವರರ ಸಂಬಂಧಿಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇನ್ನು ಮದುವೆ ಆರಂಭ ಆಗಬಹುದು ಎಂದುಕೊಂಡೆವು. ನಾವು ಅಂದುಕೊಂಡಂತೆ ಇನ್ನೂ ಆರಂಭ ಆಗಲಿಲ್ಲ.
ನಂತರ ಗೊತ್ತಾಯಿತು ಅವರು ಯಾರಿಗಾಗಿಯೋ ಕಾಯುತ್ತಿದ್ದರು ಎಂದು.
ಅವರು ಆದಿ ಚುಂಚನಗಿರಿ ಮಠದ ಶ್ರೀ ಗಳಿಗಾಗಿ ಕಾಯುತ್ತಿದ್ದರು. ಆ ಸಮಯಕ್ಕೆ ಸರಿಯಾಗಿ ಸ್ವಾಮಿಗಳು ಬಂದು ಆ ಮದುವೆ ಸಮಯದಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಕುಳಿತರು. ನಮಾಜ ನಂತರ ತಾಳಿ ಮುಗೀತು. ಎಲ್ಲರೂ ಆಶೀರ್ವಾದ ಮಾಡಿ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾಮಿಗಳಿಗೂ ಕೂಡ ಸನ್ಮಾನ ಮಾಡಲಾಯಿತು. ಆ ಶ್ರೀಗಳು ಕೂಡ ವಧು ವರರನ್ನು ಸನ್ಮಾನಿಸಿ ಆಶೀರ್ವಾದ ಮಾಡಿ ಹರಸಿದರು.
ಇದೆಲ್ಲವನ್ನು ನೋಡುತ್ತಾ ಕುಳಿತ ನನಗೆ ಆಗ ಯೋಚನೆ ಬಂತು. ಇದು ಎಂತಹಾ ಅವಿಸ್ಮರಣೀಯ ಕ್ಷಣ. ತಮ್ಮ ಸಂಪ್ರದಾಯದಂತೆ ಪಾಲಿಸಿಕೊಂಡು ಮದುವೆ ಮಾಡಿದಾಗಲೂ, ಮತ್ತೊಬ್ಬರರಿಗಾಗಿ ಒಂದು ಗಳಿಗೆ ತಮ್ಮ ಸಂಪ್ರದಾಯ ಮರೆತು (ಈ ಸಮುದಾಯದಲ್ಲಿ ವಧು ವೇದಿಕೆಗೆ ಬಹುತೇಕ ಬರುವುದಿಲ್ಲ) ವಧುವನ್ನು ವೇದಿಕೆಗೆ ಕರೆತರಲಾಯಿತು ಹಾಗೂ ಅವರಿಗೆ ಶ್ರೀಗಳ ಆಶೀರ್ವಾದ ನೀಡಿದ್ದು ವಿಶೇಷವಾಗಿತ್ತು.
ಆಗ ನಾನು ಅಂದುಕೊಂಡೆ, ಹೀಗೆ ನಮ್ಮ ದೇಶದಲ್ಲಿ ಪ್ರತಿ ಸಮುದಾಯದ ಜನರು ಯಾವುದೇ ಜಾತಿ ಧರ್ಮಗಳ ವಿಚಾರ ಮಾಡದೇ, ಯಾವುದೇ ಕಾರ್ಯಕ್ರಮವೇ ಇರಲಿ ಈ ರೀತಿ ಬೆರೆತು ಭಾಗವಹಿಸುವ ಮೂಲಕ ಮಾದರಿಯಾಗಬೇಕು.
ಪರಸ್ಪರರ ಸಮ್ಮಿಲನ ಹಾರೈಕೆ ನಿಜಕ್ಕೂ ಬಾಂಧವ್ಯ ಬೆಸೆಯುವ, ಭಾವೈಕ್ಯತೆ ಸಾರುವ ಕಾರ್ಯ ಎಷ್ಟು ಅರ್ಥಪೂರ್ಣ. ಇದರಿಂದ ಪರಸ್ಪರರಲ್ಲಿ ವೈಮನಸ್ಸು ದೂರವಾಗಿ ಹೊಸ ಉತ್ಸಾಹ ನೆಮ್ಮದಿ ಸಿಗುತ್ತದೆ. ಹಾಗಾಗಿ ಈ ರೀತಿಯ ಯೋಚನೆಗಳು ಎಲ್ಲರಲ್ಲೂ ಬರಲಿ ಎಂಬ ಆಯಶ ನನ್ನದಾಗಿತ್ತು.
ಈ ರೀತಿಯ ಬೆಳವಣಿಗೆಗಳು ಭಾರತದ ತುಂಬೆಲ್ಲ ಹರಡಲಿ, ಭಾರತ
ಭಾ: ಭಾವೈಕ್ಯದ
ರ: ರಸದ
ತ: ತವರೂರು ಆಗಲಿ ಎಂದು ಆಶಿಸುತ್ತೇನೆ.
ಡಾ. ಮಹೇಂದ್ರ ಕುರ್ಡಿ