- Advertisement -
ಮೂಡಲಗಿ – ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬೆಳಗಾವಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಹುಡುಕಾಟ ನಡೆದಿರುವಾಗಲೇ ತಾಲೂಕಿನ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿಯವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದು ಈ ಹಿಂದೆ ಬೆಳಗಾವಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ ಹಾಗೂ ಜಿಲ್ಲೆಯ ಹೊರಗಿನವರಿಗೆ ಬಿಜೆಪಿ ಟಿಕೆಟ್ ಕೊಡಬಾರದು ಎಂದು ಸೂಚ್ಯವಾಗಿ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರಿಗೆ ಕೊರತೆಯಿಲ್ಲ ಅಂದಿರುವ ಅವರು ಕೆಲವು ಪ್ರಶ್ನೆಗಳನ್ನು ಎತ್ತಿ ಬೇರೆ ಜಿಲ್ಲೆಯ ಅಭ್ಯರ್ಥಿ ಬೆಳಗಾವಿಯಿಂದ ಸ್ಪರ್ಧಿಸಲು ಅಭ್ಯಂತರ ವ್ಯಕ್ತಮಾಡಿದ್ದಾರೆ.
ಚೌಕಾಶಿಯವರು ಎತ್ತಿರುವ ಕೆಲವು ಪ್ರಶ್ನೆಗಳು:
- ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಿಯಾಂಡ್ ಬೆಂಗಳೂರು ಕಾರ್ಯಕ್ರಮವನ್ನು ಉತ್ತರ ಕರ್ನಾಟಕದ ತುಂಬ ವಿಸ್ತಾರ ಆಗುವುದನ್ನು ತಡೆದು ಹುಬ್ಬಳ್ಳಿಗೆ ಸೀಮಿತ ಮಾಡಿದ್ದ ಮಹಾನುಭಾವರು ಯಾರು?
- 2019 ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಉದ್ಯಮಗಳ ಸ್ಥಾಪನೆಗಾಗಿ ಬೆಳಗಾವಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ಇನವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದು ಯಾರು?
- ಕರೋನಾ ಸಮಯದಲ್ಲಿ ಬೆಳಗಾವಿಯಲ್ಲಿ ಇನ್ನೂ ಲ್ಯಾಬ್ ಆರಂಭವಾಗದಿದ್ದ ಸಮಯದಲ್ಲಿ ಇಲ್ಲಿನ ಸ್ಯಾಂಪಲ್ ಗಳನ್ನ ಪರೀಕ್ಷೆಗಾಗಿ ಹುಬ್ಬಳ್ಳಿಗೆ ಕಳುಹಿಸುವುದನ್ನು ವಿರೋಧಿಸಿ ನಮ್ಮವೇ ಸಾಕಷ್ಟು ಇರುವಾಗ ಬೆಳಗಾವಿ ಸ್ಯಾಂಪಲ್ ಬೇಡ ಎಂದು ತಡೆದವರಾರು?
- ಬೆಳಗಾವಿಯ ಬಿಮ್ಸ್ ವೈದ್ಯಕೀಯ ಕಾಲೇಜಿಗೆ ಮಂಜೂರಾದ ವೈರಾಲಾಜಿ ಲ್ಯಾಬ್ ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ಕೊಂಡವರಾರು?
- ಆಗ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿಯವರು ಕಿತ್ತೂರು ಬಳಿ ಅಂತಾರಾಷ್ಟ್ರೀಯ ಕಾರ್ಗೋ ವಿಮಾನ ನಿಲ್ದಾಣ ಮಾಡುತ್ತೇವೆ ಅಂದಾಗ ಅದನ್ನ ವಿರೋಧಿಸಿ ಅದೆ ಹಣವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನೀಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ ಅಂದವರಾರು ?
- ಧಾರವಾಡದ ಶ್ರೀನಗರದಲ್ಲಿ ತಿಂಗಳಿಗೆ ಸುಮಾರು 3.5 ಲಕ್ಷ ಬಾಡಿಗೆ ನೀಡುತ್ತಿದ್ದ ಅದು ಕೂಡ ರೈತರಿಗೆ ನೇರವಾಗಿ ಸಂಪರ್ಕಕ್ಕೆ ಬರದೆ ಇರುವ ಕರ್ನಾಟಕ ನೀರಾವರಿ ನಿಗಮದ ಕಛೇರಿಯನ್ನು ಆಗಿನ ನೀರಾವರಿ ಸಚಿವ ರಮೇಶ ಜಾರಕಿಹೊಳಿಯವರು ಸುವರ್ಣ ಸೌಧಕ್ಕೆ ವರ್ಗಾಯಿಸಿ ಆದೇಶ ಮಾಡಿದಾಗ ಅದನ್ನು ರದ್ದು ಮಾಡಿ ಧಾರವಾಡದಲ್ಲೆ ಮುಂದುವರೆಯುವಂತೆ ಮಾಡಿದ್ದು ಯಾರು?
- ಅರಣ್ಯ ಇಲಾಖೆಯು ರಾಜ್ಯ ಮಟ್ಟದ ತನ್ನ ವಿವಿಧ ಕಛೇರಿಗಳನ್ನು ಬೆಂಗಳೂರಿನಿಂದ ಆಚೆಗೆ ಸ್ಥಳಾಂತರಿಸಲು ನಿರ್ಧರಿಸಿದಾಗ ಸುವರ್ಣಸೌಧ ಖಾಲಿ ಇದ್ದರೂ ತುಟ್ಟಿ ಬಾಡಿಗೆ ನೀಡಲು ತಯಾರಾಗಿ ಹುಬ್ಬಳ್ಳಿಗೆ ಎರಡು ಧಾರವಾಡಕ್ಕೆ ಒಂದು ಕಛೇರಿ ಸ್ಥಳಾಂತರವಾದ ಆದೇಶದ ಹಿಂದೆ ಯಾರ ಕೈವಾಡವಿದೆ?
- ಈ ವ್ಯಕ್ತಿ ಯಾರು? ಬೆಳಗಾವಿ ಉಸ್ತುವಾರಿ ಸಚಿವರಾಗಿ ಈ ಜಿಲ್ಲೆಗೆ ನ್ಯಾಯ ಒದಗಿಸದೆ ತಮ್ಮ ಮೂಲ ಊರಿನ ಅಭಿವೃದ್ಧಿಗೆ ಬೆಳಗಾವಿಯನ್ನ ಬಲಿಪಶು ಮಾಡಿದವರು ಯಾರು?
ಈ ಮೇಲಿನ ಪ್ರಶ್ನೆಗಳಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಾಜಕೀಯ ಮುಖಂಡರು, ಬಿಜೆಪಿ ನಾಯಕರು ಉತ್ತರಿಸಬೇಕಾಗಿದೆ.
- Advertisement -
(ಈ ಬಗ್ಗೆ ಚರ್ಚೆ ಮಾಡುವವರು ತಮ್ಮ ಅಭಿಪ್ರಾಯಗಳನ್ನು ವಾಟ್ಸಪ್ ಮಾಡಬಹುದು. 9448863309 ಸಂಪಾದಕರು Times of ಕರ್ನಾಟಕ )