2018ನೇ ಇಸವಿಯಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಟ್ಟ ಹಿರಿಯ ಸಾಹಿತಿ ಟಿ ಎಲ್ ಸುಬ್ರಹ್ಮಣ್ಯ ಅಡಿಗ ಅವರು ಇಂದಿಗೂ ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.
1959ರಲ್ಲಿ ಭದ್ರಾವತಿಯಲ್ಲಿ ಗೆಳೆಯರ ಬಳಗದಿಂದ ಸನ್ಮಾನ, 1997ರಲ್ಲಿ ಸುವರ್ಣ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಅರಳ ಸುರಳಿ ಗ್ರಾಮ ಪಂಚಾಯಿತಿಯಿಂದ ಸನ್ಮಾನ, ಮಡಿಕೇರಿ ಪತ್ರಿಕಾ ಬಳಗ ಮತ್ತು ಕೋಣಂದೂರಿನ ಕನ್ನಡ ರಾಜ್ಯೋತ್ಸವ ಸನ್ಮಾನ, ಮೈಸೂರಿನ ಕನ್ನಡಿಗರ ಕೂಟ, ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಸಂಘ ತೀರ್ಥಹಳ್ಳಿ ತಾ. ಬ್ರಾಹ್ಮಣ ಸಂಘದಿಂದ ಎರಡು ಬಾರಿ ಸನ್ಮಾನಿತಗೊಂಡಿದ್ದಾರೆ.
ಅರಳ ಸುರಳಿ ಶ್ರೀ ರಾಮ ಸೇವಾ ಸಂಘ, ಅರಳ ಸುರಳಿ ಶ್ರೀ ವಿದ್ಯಾ ಗಣಪತಿ ಸೇವಾ ಸಂಘ, ಅರಳ ಸುರಳಿ ಯುವಕ ರೈತ ಸಂಘ, ಅರಳ ಸುರಳಿಯ ಕಾರ್ಪೋರೇಷನ್ ಬ್ಯಾಂಕ್ ಶಾಖೆ, ಸಾಲಿಗ್ರಾಮದ ರೋಟರ್ಯಾಕ್ಟ್ ಕ್ಲಬ್, ಶಿವಮೊಗ್ಗ ಜಿಲ್ಲೆ ಅರವತ್ತನಾಲ್ಕನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕಾರಣಗಿರಿ ರಾಷ್ಟ್ರೋತ್ಥಾನ ಬಳಗದಿಂದಲೂ ಸುಬ್ರಹ್ಮಣ್ಯ ಅವರು ಸನ್ಮಾನಿತರಾಗಿದ್ದಾರೆ.
ತೀರ್ಥಹಳ್ಳಿ ಪಟ್ಟಣ ನಾಗರಿಕರಿಂದ ವಿಶೇಷ ಸನ್ಮಾನ ಪಡೆದ ಕಾರಣ ಗಿರಿ ಇವರಿಗೆ ‘ ರಾಷ್ಟ್ರೋತ್ಥಾನ ಬಳಗದವರು ಸಾಹಿತ್ಯ ರತ್ನ ‘ ಸಾಹಿತ್ಯ ಪಂಕಜ ‘ ಎಂಬ ಬಿರುದನ್ನು ನೀಡಿ ಫಲಕ ನೀಡಿದ್ದಾರೆ. ಮಲೆನಾಡು ಡೆವೆಲಪ್ ಮೆಂಟಲ್ ಅಸೊಸೀಯೇಶನ್ ಶಿವಮೊಗ್ಗ ಇವರು ಪ್ರಶಸ್ತಿ ನೀಡಿ ಫಲಕ ಕೊಟ್ಟು ಗೌರವಿಸಿದ್ದಾರೆ. 1967ರಲ್ಲಿ ರಾಜ್ಯ ಯುವಜನ ಮೇಳದ ಉತ್ಸವಕ್ಕೆ ತೀರ್ಥಹಳ್ಳಿ ತಾ. ಪ್ರತಿನಿಧಿಯಾಗಿ ಭಾಗವಹಿಸಿ, ಅರಳ ಸುರಳಿ ಯುವಕ ರೈತ ಸಂಘ ರಾಜ್ಯ ಮಟ್ಟದಲ್ಲಿ ಪ್ರಥಮ ಶ್ರೇಣಿ ಎಂಬ ಹೆಸರು ಗಳಿಸಿ ಸನ್ಮಾನ ಗಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇವರ ” ತುಂಗೆಯ ಮಡಿಲು” “ನಾದಿನಿ” ಎಂಬ ಎರಡು ಹೊಸ ಕಾದಂಬರಿಗಳು ಪ್ರಕಟಣೆಗೊಂಡಿವೆ.
ಕನ್ನಡ ನಾಡಿನ ಹೆಚ್ಚಿನ ಪತ್ರಿಕೆಗಳಲ್ಲಿ ಇವರ ವೈಚಾರಿಕ ಬರಹ ಕತೆ, ಕವಿತೆಗಳು ಬೆಳಕು ಕಂಡಿವೆ, ಕನ್ನಡ ನಾಡು ಕಂಡ ಸಹೃದಯಿ, ಸಜ್ಜನ ಕವಿ ಸಾಹಿತಿ ಮಿತ್ರರಾಗಿರುವ ವಯೋವೃದ್ಧರು ಮತ್ತು ಜ್ಞಾನ ವೃದ್ಧರಾಗಿರುವ ಟಿ.ಎಲ್. ಸುಬ್ರಹ್ಮಣ್ಯ ಅಡಿಗರ ಇನ್ನಷ್ಟು ಕೃತಿಗಳು ಹೊರಬಂದು ಕನ್ನಡ ಸಾಹಿತ್ಯ ಲೋಕ ಇನ್ನಷ್ಟು ಶ್ರೀಮಂತವಾಗಬೇಕೆಂಬ ಹಂಬಲ ನಮ್ಮದು.