ಸಿಂದಗಿ: ಇನ್ನೊಬ್ಬರ ದುಃಖದಲ್ಲಿ ದುಃಖವನ್ನು ಅನುಭವಿಸುವರು ಸಂವೇದನಾಶೀಲರಾಗಿರುತ್ತಾರೆ. ಆದರೆ ಆಧುನಿಕತೆಯ ತಳುಕು ತುಂಬಿದ ಈ ಜಗತ್ತಿನಲ್ಲಿ ನಾವು ಮನುಷ್ಯತ್ವವನ್ನೇ ಮರೆಯುವಷ್ಟು ವೇಗದ ಜಗತ್ತಿನಲ್ಲಿ ಮುಂದೆ ಸಾಗುತ್ತಿದ್ದೇವೆ ಎಂದು ಹಿರಿಯ ಪತ್ರಕರ್ತ ಇಂದುಶೇಖರ ಮಣ್ಣೂರ ಹೇಳಿದರು.
ಪಟ್ಟಣದ ಶ್ರೀ ಸಾತವಿರೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿ, ಮಾನವೀಯತೆ, ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮಕಾರ್ಯ ಇನ್ನೊಂದಿಲ್ಲ. ಮಾನವೀಯತೆ ಇದ್ದರೇನೇ ಜೀವ ಮತ್ತು ಜೀವನಕ್ಕೆ ಅರ್ಥ ಸಿಗೋದು. ಈ ನಿಟ್ಟಿನಲ್ಲಿ ಮಾನವೀಯ ಸಂದೇಶ ವೇದಿಕೆ ಹತ್ತಾರು ವರ್ಷಗಳಿಂದ ಕೇವಲ ಮಾನವೀಯತೆ ಆಧಾರದ ಮೇಲೆ ಕಡುಬಡವರಿಗೆ ನೆರವಾಗುತ್ತ, ಜನರಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಅವರು ಆಶೀರ್ವಚನ ನೀಡಿ, ಇಂದಿನ ವಿದ್ಯಾರ್ಥಿಗಳು ನೈತಿಕ ಅಧಃಪತನದತ್ತ ಸಾಗುತ್ತಿದ್ದಾರೆ. ಯುವಪೀಳಿಗೆ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅವರಿಗೆ ಒಳ್ಳೆಯ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ರಾಷ್ಟ್ರ ಕಾರ್ಯದರ್ಶಿ ಮೌಲಾನಾ ಸೈಯದ ಬಿಲಾಲ ಅಬ್ದುಲ್ ಹೈಸಾಬ್, ಅತಿಥಿಗಳಾದ ಹಾಫೀಜ ಫಜಲೆ ಹಕ್, ಡಾ. ಮೆಹಬೂಬ ವಡಗೇರಿ, ವಿ.ವಿ.ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ಉದ್ದೇಶ ಕುರಿತು ಮೌಲಾನಾ ಜುನೈದ ಫಾರೂಕಿ ವಿವರಿಸಿದರು. ಮಹಮ್ಮದ ಇಸ್ಮಾಯಿಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆ ಸಂಚಾಲಕ ದಾವೂದ ನದ್ವಿ ಸ್ವಾಗತಿಸಿ, ನಿರೂಪಿಸಿದರು. ಮಹಮ್ಮದ ಯೂನೂಸ್ ವಂದಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ದಾನಮ್ಮ ಹೆಬ್ಬಾಳ (ಪ್ರಥಮ), ಪ್ರಥ್ವಿ ನೀರಾವರಿ (ದ್ವಿತೀಯ), ಸಿಂಧು ಸ್ಥಾವರಮಠ (ತೃತೀಯ), ಶಿವಲೀಲಾ ದುದ್ದಣಗಿ (ಚತುರ್ಥ) ಇವರಿಗೆ ಪ್ರೌಡ ಶಾಲೆ ವಿಭಾಗದಲ್ಲಿ ಹಾಗೂ ಕಾಲೇಜ್ ವಿಭಾಗದಲ್ಲಿ ಪ್ರದೀಪ ಧರಿ (ಪ್ರಥಮ), ದಾನಮ್ಮ ಅಗಸರ (ದ್ವಿತಿಯ), ಸದಫ್ ಗಣಿಯಾರ (ತೃತಿಯ), ಮಾಳಪ್ಪ ಹಳಿಮನಿ (ಚತುರ್ಥ) ಇವರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.