Homeಸುದ್ದಿಗಳುದೃಢತೆ ಗಳಿಸಿ ಗೆಲುವು ಸಾಧಿಸಿ

ದೃಢತೆ ಗಳಿಸಿ ಗೆಲುವು ಸಾಧಿಸಿ

ತನ್ನನ್ನು ತಾನು ಗೆಲ್ಲುವ ಶಕ್ತಿ ಹೊಂದಿರುವವನನ್ನು ತಡೆಯುವಂತದ್ದು ಯಾವುದೂ ಇಲ್ಲ. ಎನ್ನುವ ಮಾತು ಎಲ್ಲರಿಗೂ ಗೊತ್ತಿರುವಂತದ್ದೇ ಹಾಗಿದ್ದರೂ ಕೂಡ ತನ್ನನ್ನು ಗೆಲ್ಲಲು ಹರ ಸಾಹಸ ಪಟ್ಟರೂ ಆಗುತ್ತಲೇ ಇಲ್ಲ. ಅದಕ್ಕೆ ಮೂಲ ಕಾರಣ ತನ್ನ ಮೇಲೆ ತನಗೆ ವಿಶ್ವಾಸವಿಲ್ಲದಿರುವದೇ ಆಗಿದೆ. ದೃಡ ವಿಶ್ವಾಸ ಅಥವಾ ನಿಶ್ಚಿತವಾದ ಅಭಿಪ್ರಾಯವನ್ನು ಹೊಂದದೇ ಇರುವವನು ಯಾವುದೇ ನಿಶ್ಚಯಕ್ಕೂ ಬಾರದೇ ನಡು ಮಧ್ಯದಲ್ಲಿ ತ್ರಿಶಂಕುವಿನಂತೆ ಜೋತಾಡುತ್ತಿರುತ್ತಾನೆ. ರಸ್ತೆಯ ಒಂದು ಬದಿ ಹಿಡಿದು ನಡೆದರೆ ಸುರಕ್ಷಿತ ಪ್ರಯಾಣ ಅದೇ ರಸ್ತೆ ನಡುವೆ ನಡೆಯುವವನ ಗತಿ ಏನಾಗುತ್ತದೆಂದು ಹೇಳುವ ಅವಶ್ಯಕತೆಯಿಲ್ಲ.

ದೃಢ ವಿಶ್ವಾಸವಿಲ್ಲದವರಿಗೆ ಧೈರ್ಯಲಕ್ಷ್ಮಿ ಒಲಿಯುವದಿಲ್ಲ. ಹೀಗಾಗಿ ಜನ ತಮ್ಮನ್ನು ಒಪ್ಪಿಕೊಳ್ಳಲಿ ಎಂಬ ಕಾರಣದಿಂದ ಇತರರು ಹೇಳಿದಂತೆ ಹೊಂದಿಕೊಂಡು ಹೋಗುತ್ತಾರೆ. ತಾವು ನಡೆಯುವ ಹಾದಿ ಸರಿಯಿಲ್ಲವೆಂದು ಗೊತ್ತಿದ್ದರೂ ಗೊತ್ತಿಲ್ಲದವರಂತೆ ಒಲ್ಲದ ಮನಸ್ಸಿನಿಂದ ಅದೇ ದಾರಿಯಲ್ಲಿ ಪಯಣಿಸುತ್ತಾರೆ. ಎದೆಯಿದ್ದರೂ ಎದೆಗಾರಿಕೆಯಿಲ್ಲದೇ ಇನ್ನೊಬ್ಬರ ಹಿಂದೆ ಕಾಲೆಳೆದುಕೊಂಡೇ ಹೋಗುತ್ತಾರೆ.

ನಾನೇನೂ ಕೆಟ್ಟದ್ದನ್ನು ಬೆಂಬಲಿಸುವದಿಲ್ಲ ಹೀಗಾಗಿ ನಾನು ಒಳ್ಳೆಯವನೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಮರ್ಥಿಸಿಕೊಳ್ಳುವದನ್ನೂ ಕಲಿತಿರುತ್ತಾರೆ. ಆದರೆ ವಿರೋಧ ಸೂಚಿಸುವ ಗುಂಡಿಗೆ ಇಲ್ಲ ಕೆಟ್ಟದ್ದು ಅಂತ ತಿಳಿದೂ ಅದನ್ನು ವಿರೋಧಿಸದಿದ್ದರೆ ಅದಕ್ಕೆ ಬೆಂಬಲ ನೀಡಿದಂತೆಯೇ ಸರಿ.

ದೃಢ ವಿಶ್ವಾಸವಿಲ್ಲದವರನ್ನು ಕಂಡಾಗಲೊಮ್ಮೆ ನನಗೆ ಹೆನ್ರಿ ಫೋರ್ಡ್ ಹೇಳಿದ ಮಾತು ನೆನಪಿಗೆ ಬರುತ್ತದೆ. “ ಇದು ಸಾಧ್ಯ ಎಂದು ಯೋಚಿಸಿದರೆ ಅಥವಾ ಅಸಾಧ್ಯ ಅಂತ ಯೋಚಿಸಿದರೂ ನೀವು ಸರಿಯೇ ಆಗಿರುತ್ತೀರಿ.” ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸ ಇಲ್ಲದಿದ್ದರೆ ಸಾಧ್ಯವಾಗುವ ಕೆಲಸವೂ ಅಸಾಧ್ಯವಾಗುವದು. ಎನ್ನುವದೇ ಹೆನ್ರಿ ಫೋರ್ಡ್ನ ಮಾತಿನ ತಾತ್ಪರ್ಯ. ನಾವು ಯಾವ ಬೀಜವನ್ನು ಬಿತ್ತುತ್ತೇವೆಯೋ ಅದೇ ಫಲವನ್ನು ಪಡೆಯುತ್ತೇವೆ. ಎನ್ನುವದು ನಿಸರ್ಗದ ನಿಯಮ. ಉತ್ತಮವಾದುದನ್ನು ಬಿತ್ತಿದರೆ ಉತ್ತಮ ಫಸಲು ಬರುವದು. ನಾವು ದೃಢ ವಿಶ್ವಾಸ ಎಂಬ ಬೀಜ ಬಿತ್ತಿದರೆ ಫಸಲು ಹಲವು ಪಟ್ಟು ಹಲವು ರೀತಿಯಲ್ಲಿ ಉಪಯೋಗಿಸಿಕೊಳ್ಳುವಂತೆ ಬರುತ್ತದೆ.

ದೃಢ ವಿಶ್ವಾಸವಿಲ್ಲದವರನ್ನು ಅವರ ಹೆತ್ತವರು ಹಿತೈಷಿಗಳು ತಿದ್ದಲು ಯತ್ನಿಸಿದರೂ ಕೇಳುವದೇ ಇಲ್ಲ. ಜೇಮ್ ಹಾರ್ವೆ ರಾಬಿನ್‌ಸನ್ ‘ದ ಮೈಂಡಿನ್ ಎ ಮೇಕಿಂಗ್ ‘ಪುಸ್ತಕದಲ್ಲಿರುವ ಮಾತುಗಳು ನೆನಪಿಗೆ ಬರುತ್ತವೆ. “ಕೆಲವೊಮ್ಮೆ ನಾವು ನಮ್ಮ ಮನಸ್ಸನ್ನು ಯಾವುದೇ ಒತ್ತಡವಿಲ್ಲದೆ ಭಾವನೆಗಳ ತಾಕಲಾಟ ಇಲ್ಲದೆಯೇ ಬದಲಾಯಿಸಿಕೊಳ್ಳುವದುಂಟು ಆದರೆ ನಾವೇನೋ ತಪ್ಪು ಮಾಡುತ್ತಿದ್ದೇವೆ ಅದನ್ನು ತಿದ್ದಿಕೊಳ್ಳಬೇಕು ಎಂದು ಯಾರಾದರೂ ಹೇಳಿದರೆ ನಾವು ಅಸಮಾಧಾನಗೊಳ್ಳುತ್ತೇವೆ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಅಷ್ಟೇ ಅಲ್ಲದೇ ನಮ್ಮ ಮನಸ್ಸನ್ನು ಮತ್ತಷ್ಟು ಕಠಿಣಗೊಳಿಸುತ್ತೇವೆ..” ನಮ್ಮ ಅಭಿಪ್ರಾಯ ನಂಬಿಕೆಗಳನ್ನು ರೂಪಿಸುವಲ್ಲಿ ನಾವು ಯಾರ ಮಾತನ್ನು ಕೇಳಲು ಇಚ್ಛಿಸುವದಿಲ್ಲ. ಆ ಅಭಿಪ್ರಾಯ ನಂಬಿಕೆಗಳ ಮೇಲೆ ನಮಗೆ ಅದೇನೋ ವ್ಯಾಮೋಹ! ಇತರರ ಮಾತು ಕೇಳುವ ಮೂಲಕ ನಮ್ಮ ಅಹಂಕಾರವನ್ನು ಬಿಟ್ಟು ಬಿಡಲು ಸಿದ್ಧರಿರುವದಿಲ್ಲ. ಅಹಂ ಬಿಟ್ಟರೆ ದೃಢತೆ ನಮ್ಮ ಅಂಗೈಯಲ್ಲಿರುತ್ತದೆ.

ದೃಢ ವಿಶ್ವಾಸ ಎನ್ನುವದೂ ಒಂದು ಸಾಧನೆ. ಸಾಧನೆಯ ಪಟ್ಟಿಯಲ್ಲಿ ದೃಢತೆ ಎಂಬ ಪದವೂ ಉಂಟು. ನಿಜ ಹೇಳಬೇಕೆಂದರೆ ಎಲ್ಲ ಗೆಲುವಿನ ತಾಯಿಯೇ ದೃಢತೆ. ಪರಿಪೂರ್ಣವಾಗಿ ದೃಢತೆಯನ್ನು ಸಾಧಿಸಬೇಕೆಂದರೆ ಬುದ್ಧಿಯನ್ನು ಮನಸ್ಸಿನ ಕೈಗೆ ಕೊಡದೇ ಮೆದುಳಿನ ಕೈಗೆ ಕೊಟ್ಟರೆ ಸಾಕು. ದೃಡತೆಯ ಶ್ವಾಸ ಪ್ರಾರಂಭವಾಗುತ್ತದೆ. ನಿಮ್ಮಲ್ಲಿ ಉಂಟಾಗುವ ದೃಢತೆಯ ಭಾವವೇ ದೃಡ ವಿಶ್ವಾಸ. ದೃಡವಿಶ್ವಾಸವೆನ್ನುವದು ರಾತ್ರೋರಾತ್ರಿ ಗಳಿಸಿಕೊಳ್ಳಲು ಬರುವಂಥದ್ದಲ್ಲ. ಹಂತ ಹಂತವಾಗಿ ಪಳಗಿದಾಗ ಅನುಭವಗಳಿಂದ ಪಾಠ ಕಲಿತು ಅವುಗಳನ್ನು ವಾಸ್ತವತೆಗೆ ಬೆರಿಸಿದಾಗ ದೃಢ ವಿಶ್ವಾಸ ಮೈದಳೆಯುವದು. ಮನಸ್ಸು ಕೊಡುವ ಸೂಚನೆಗಳಿಗಿಂತ ಮೆದುಳು ಕೊಡುವ ಸೂಚನೆಗಳನ್ನು ಪಾಲಿಸಿದರೆ ದೃಢತೆ ನಮ್ಮ ಕಾಲ ಬಳಿ ಬಿದ್ದಿರುತ್ತೆ. ದೃಡವಿಶ್ವಾಸ ಹೆಚ್ಚಿದಷ್ಟು ಕಾರ್ಯ ಕ್ಷಮತೆಯೂ ಹೆಚ್ಚುತ್ತದೆ. ಇದರೊಂದಿಗೆ ಕಾರ್ಯದ ಗುಣಮಟ್ಟವೂ ಹೆಚ್ಚುತ್ತದೆ ಎನ್ನುವದರಲ್ಲಿ ಸಂಶಯವೇ ಇಲ್ಲ.

ದೃಢತೆ ಇದ್ದಲ್ಲಿ ಮಾನಸಿಕ ಸುಸ್ತು ಹತ್ತಿರ ಸುಳಿಯುವದು ತುಂಬಾ ವಿರಳ. ದೃಢತೆಯಿಂದ ಶಕ್ತಿಯ ಆಗರವಾಗಿ ಚೈತನ್ಯವಂತರಾಗಿ ಕಾಣಿಸಿಕೊಳ್ಳುವಿರಿ. ಸಕರಾತ್ಮಕವಾಗಿ ಯೋಚಿಸಲು ಪ್ರಾರಂಭಿಸುವಿರಿ. ದೃಢತೆ ನಿಮ್ಮನ್ನು ನೂರು ಮಂದಿಯ ಮಧ್ಯೆ ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ಸಮಾಜ ನಿಮನ್ನು ಗೌರವಿಸಿ ಸತ್ಕರಿಸುವಂತೆ ಮಾಡುವ ಶಕ್ತಿ ದೃಢತೆಗಿದೆ.

ದೃಢತೆ ಎನ್ನುವದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಅದು ನಿಮ್ಮ ಹೃದಯಾಂತರಳದಲ್ಲಿ ಮಲಗಿ ನಿದ್ರಿಸುತ್ತಿದೆ. ಅದನ್ನು ಒಂದು ಬಾರಿ ಧೈರ್ಯದಿಂದ ಬಡೆದಿಬ್ಬಿಸಿ ನೋಡಿ ಎಂಥ ಅತ್ಯದ್ಭುತಗಳೆಲ್ಲ ನಿಮ್ಮ ಕಣ್ಣ ಮುಂದೆ ನೀವೇ ಅಚ್ಚರಿ ಪಡುವಂತೆ ನಡೆಯುತ್ತವೆ. ದೃಢ ವಿಶ್ವಾಸ ಎನ್ನುವದು ಟಾನಿಕ್ ತರ ಕೆಲಸ ಮಾಡುತ್ತದೆ. ದೃಢತೆಯು ಸಿದ್ಧತೆಯಿಂದ ಬರುತ್ತದೆ. ಸಿದ್ಧತೆಯೆಂದರೆ ತಪ್ಪುಗಳಿಂದ ಪಾಠ ಕಲಿಯುವದು. ತಪ್ಪುಗಳನ್ನು ಮಾಡುವದು ಅಪರಾಧವಲ್ಲ. ಒಂದೇ ತಪ್ಪನ್ನು ಎರಡು ಸಲ ಮಾಡುವವನು ಮೂರ್ಖ. ಸಿದ್ಧತೆ ಮಾಡಿಕೊಳ್ಳದಿದ್ದರೆ ಒತ್ತಡಕ್ಕೊಳಗಾಗುವದು ಸಹಜ. ಕೇವಲ ಸಿದ್ಧತೆಯೊಂದೇ ಸ್ಪರ್ಧೆಯಲ್ಲಿ ನಿಮ್ಮನ್ನು ಜೀವಂತವಾಗಿಡಬಲ್ಲದು. “ಪ್ರತಿಯೊಬ್ಬರು ಗೆಲುವನ್ನು ಬಯಸುತ್ತಾರೆ ಆದರೆ ಕೆಲವೇ ಕೆಲವು ಮಂದಿ ಮಾತ್ರ ಗೆಲ್ಲಲು ಸಿದ್ಧತೆ ಮಾಡುವ ಇಚ್ಛೆ ತೋರಿಸುತ್ತಾರೆ. “ ಇದು ವಿನ್ಸ್ ಲೋಂಬಾರ್ಡಿಯ ಮಾತು. ದೃಡತೆ ಒಂದು ನಿರ್ಧಾರ ಇದು ನೀವು ಆರಂಭಿಸಿದ್ದನ್ನು ಪೂರ್ಣಗೊಳಿಸುವ ಬದ್ಧತೆ.

ಇತಿಹಾಸ ಅಧ್ಯಯನದಿಂದ ನಮಗೆ ದೃಡ ಪಟ್ಟಿದ್ದೇನೆಂದರೆ ದೃಢತೆ ಗೆಲುವಿನ ಹಾದಿಯಲ್ಲಿ ನಡೆಯುವಂತೆ ಮಾಡುತ್ತದೆ ಎಂದು ಅದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಕಾಣಸಿಗುತ್ತವೆ ಅದರಲ್ಲಿ ಒಂದು ನೋಡುವದಾದರೆ ಜಪಾನ್. ಹತ್ತೊಂಭತ್ತನೇ ಶತಮಾನದಲ್ಲಿ ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲು ಇಲ್ಲದೆನೇ ಜಪಾನ್ ಜಗತ್ತಿನ ಅತೀ ದೊಡ್ಡ ಉಕ್ಕು ನಿರ್ಯಾತದ ದೇಶವಾಗಿ ಹೊರಹೊಮ್ಮಿತು. ಅದ್ಹೇಗೆ ಗೊತ್ತೆ? ಉಕ್ಕಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಎಲ್ಲಿಂದ ಆಮದು ಮಾಡಿಕೊಳ್ಳಬೇಕೆಂದು ಹಾಗೂ ಸಿದ್ಧಪಡಿಸಿದ ಉಕ್ಕನ್ನು ಎಲ್ಲಿಗೆ ರಫ್ತು ಮಾಡಬೇಕೆಂದು ಅದು ಚೆನ್ನಾಗಿ ಗೊತ್ತು ಮಾಡಿಕೊಂಡಿತ್ತು. ಹೀಗಾಗಿ ಜಗತ್ತಿನ ನಂಬರ್ ಒನ್ ಉಕ್ಕು ನಿರ್ಯಾತದ ದೇಶವಾಗಿ ಹೊರಹೊಮ್ಮಿ ಇತರ ದೇಶಗಳ ಕಣ್ಮನ ಸೆಳೆದಿತ್ತು. ಏನೂ ಇಲ್ಲದೆನೇ ಜಪಾನ್ ಗೆಲುವನ್ನು ಸಾಧಿಸಿದ್ದು ಕೇವಲ ದೃಢತೆಯಿಂದ.
“ಸುತ್ತಿಗೆ ಗಾಜನ್ನು ಚೂರು ಚೂರು ಮಾಡಬಲ್ಲದು. ಹಾಗೆಯೇ ಕುಲುಮೆಯಲ್ಲಿ ಉಕ್ಕಿಗೆ ಆಕಾರವನ್ನೂ ನೀಡಬಲ್ಲದು.” ಇದು ರಷ್ಯಾದಲ್ಲಿ ಚಾಲ್ತಿಯಲ್ಲಿರುವ ಮಾತು. ಸುತ್ತಿಗೆಯಂಥ ದೃಢ ವಿಶ್ವಾಸವನ್ನು ನಾವು ಹೊಂದಿದರೆ ನಮ್ಮಲ್ಲಿರುವ ದೌರ್ಬಲ್ಯಗಳನ್ನು ಚೂರು ಚೂರು ಮಾಡಿ ಹಗಲಿರುಳು ಪರಿತಪಿಸುವ ಗೆಲುವಿಗೆ ಮತ್ತು ಸಮಾಜ ನಿರೀಕ್ಷಿಸುವ ಸದ್ಗುಣಗಳಿಗೆ ಆಕಾರ ಕೊಡಬಹುದು.

ಜಯಶ್ರೀ.ಜೆ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು ಹಿರೇಬಾಗೇವಾಡಿ
ತಾ:ಜಿ: ಬೆಳಗಾವಿ
೫೯೧೧೦೬
೯೪೪೯೨೩೪೧೪೨

RELATED ARTICLES

LEAVE A REPLY

Please enter your comment!
Please enter your name here

Most Popular

close
error: Content is protected !!
Join WhatsApp Group