ಸಿಂದಗಿ:ಭಾರತ ಸ್ತ್ರೀಶಕ್ತಿಯನ್ನು ಪೂಜಿಸುವಂಥ ಸಂಸ್ಕೃತಿಯ ಪ್ರತೀಕ ಮಹಿಳೆಯರು ಅಡುಗೆ ಮನೆಯಿಂದ ವಿಶ್ವದೆಡೆಗೆ ಅಂಗಲಾಚಿ ವಿಶ್ವ ಪರಿವರ್ತನೆಯಲ್ಲಿ ಮಹಿಳೆ ಶಕ್ತಿ ಸ್ವರೂಣಿಯಾಗಿ ಕಾರ್ಯನಿರ್ವಹಿಸಿದ್ದಾಳೆ ಅಲ್ಲದೆ ಸಂವಿಧಾನ ರಚನೆ ಆಗಿ 70 ವರ್ಷ ಕಳೆದರೂ ಪುರುಷ ಪ್ರದಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಸಮಾನವಾದ ಹಕ್ಕು ಸಿಕ್ಕಿಲ್ಲ. ಇವತ್ತಿಗೂ ಕೂಡಾ ಮಹಿಳೆಯರ ಮೇಲೆ ನಡೆಯುತ್ತಿರುವ ಅನೇಕ ದೌರ್ಜನ್ಯ, ಅತ್ಯಾಚಾರ ನಿಂತಿಲ್ಲ. ಇದು ಅಲ್ಲದೆ ಜಾತಿ ಹಾಗೂ ಧರ್ಮದ ಹೆಸರಲ್ಲಿ ನಮ್ಮ ಮೇಲೆ ದೌರ್ಜನ್ಯ ಅಗುತ್ತಿದೆ.
ಇದರಿಂದ ಪ್ರತಿಯೊಬ್ಬರು ಮಾನಸಿಕ ಹಿಂಸೆ, ದೈಹಿಕ ನೋವುವನ್ನು ಅನುಭವಿಸುತಿದ್ದಾರೆ ಅದನ್ನೆಲ್ಲ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮೈಗೂಡಿಸಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಪವಿತ್ರಾ ಜಿ ಹೇಳಿದರು.
ಪಟ್ಟಣದ ಪಟ್ಟಣದ ಜ್ಯೋತಿ ನಗರದ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಿವೇದಿತಾ ಯುವತಿ ಮಂಡಳಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಮಹಿಳಾ ಹಬ್ಬ, ರಕ್ತದಾನ ಶಿಬಿರ ಹಾಗೂ ಮಹಿಳಾ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಾಮಾಯಣ ಮಹಾಭಾರತದ ಇತಿಹಾಸದಲ್ಲಿ ಅಸುರರ ಸಂಹಾರ ಮಾಡುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದ್ದು ಅಂತೆಯೇ ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೆ ತೂಗುವ ಹಂತಕ್ಕೆ ತಲುಪಿದ್ದಾಳೆ ಗೃಹಣಿಯರಿಗಾಗಿ, ವಿಧವೆಯರಿಗಾಗಿ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿವಿಧ ರೀತಿಯ ಸ್ಪರ್ಧೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಮಹಿಳೆಯರು ಮದುವೆಯಾದರೆ ಸಾಕು ಗಂಡ ಮಕ್ಕಳ ಪ್ರಪಂಚದಲ್ಲಿ ಮುಳುಗಿ ಅವರಲ್ಲಿರುವ ಪ್ರತಿಭೆಗಳು ಕಮರಿಹೋಗಿವೆ ಅಂತಹ ಪ್ರತಿಭಾನ್ವಿತ ಮಹಿಳೆಯರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕಿಯರನ್ನು ಗೌರವಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಹನಿಗವನ ಸ್ಪರ್ದೆ, ಗಾಯನ ಸ್ಪರ್ಧೆ, ಆಶುಭಾಷಣಾ ಸ್ಪರ್ಧೆ, ಅಡುಗೆ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಕೇಶವಿನ್ಯಾಸ, ಕಣ್ಣು ಕಟ್ಟಿಕೊಂಡು ಶೃಂಗಾರ ಸೇರಿದಂತೆ ವಿವಿಧ ಸ್ಪರ್ದೆಗಳಲ್ಲಿ ಬಾಗವಹಿಸಿದ ಎಲ್ಲ ಮಹಿಳೆಯರು ಸಾಧಕಿಯರೇ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಬಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ನಿವೇದಿತಾ ಯುವತಿ ಮಂಡಳಿಯ ಅದ್ಯಕ್ಷೆ ಶೈಲಜಾ ಸ್ಥಾವರಮಠ ಮಾತನಾಡಿ, ಸುಮಾರು 21 ವರ್ಷಗಳಿಂದ ಮಹಿಳೆಯರಿಗಾಗಿ, ಕೌಶಲ್ಯಭಿವೃದ್ಧಿ, ಸಾಕ್ಷರತಾ ಆಂದೋಲನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದ್ದು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಬೇಕೆನ್ನುವ ಉದ್ದೇಶದಿಂದ ಮತ್ತು ನನ್ನ ಹಿರಿಯ ಮಗಳು ನಿವೇದಿತಾ ಇವಳ ಪ್ರಥಮ ಪುಣ್ಯ ಸ್ಮರಣೋತ್ಸವ ಸವಿನೆನಪಿಗಾಗಿ ಮಹಿಳಾ ಹಬ್ಬ ಕಾರ್ಯಕ್ರಮದಡಿ ಅವಕಾಶ ವಂಚಿತ ಎಲ್ಲಾ ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 30 ಜನ ಮಹಿಳೆಯರು ರಕ್ತದಾನ ನೀಡಿದರು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಕಸಾಪ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಶೈನಾಜ ಮಸಳಿ, ಎಸ್.ಬಿ.ಚಿಗರಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.