ಗುರಿ ಸಾಧನೆ, ಸದ್ವಿಚಾರ ಸನ್ಮಾರ್ಗದಲ್ಲಿ ನಡೆಯಲು ಗುರು ಬೇಕು ” ಬೆಳಗಾವಿ ವಿಭಾಗ ರಾಜ್ಯ ಮಾಹಿತಿ ಆಯುಕ್ತೆ ಬಿ. ವಿ. ಗೀತಾ.
ಬೆಳಗಾವಿ – ಇದೇ ದಿ. 23ರಂದು ಬೆಳಗಾವಿಯ ಕಾರಂಜಿ ಮಠದಲ್ಲಿ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ಕಾರಂಜಿಮಠ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ವಿಶೇಷ ‘ಮಹಿಳಾ ಗೋಷ್ಠಿ ಕಾರ್ಯಕ್ರಮ’ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ. ಮ. ನಿ. ಪ್ರ. ಗುರುಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಎಲ್ಲಿಯವರೆಗೆ ಸಂಸ್ಕಾರಗಳು ಇರುವುದಿಲ್ಲವೋ ಅಲ್ಲಿಯವರೆಗೆ ಕಲಿತ ವಿದ್ಯೆ ವ್ಯರ್ಥ. ನಮ್ಮ ಹುದ್ದೆಗೆ ಗೌರವ ಹೆಚ್ಚಿಸುವುದು ಸದ್ಗುಣಗಳಿಂದ ಅವು ನಮ್ಮಲ್ಲಿ ಬೆಳೆಯಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ವಿಭಾಗದ ರಾಜ್ಯ ಮಾಹಿತಿ ಆಯುಕ್ತೆ ಬಿ. ವಿ. ಗೀತಾ ಮಾತನಾಡಿ ನಮ್ಮ ಗುರಿ ಸಾಧನೆಗೆ ಗುರು ಬೇಕು. ನಾವು ಸದ್ವಿಚಾರ,ಸನ್ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಬೇಕು. ಗುರು ಸಂಪ್ರದಾಯ ಮುಂದುವರಿಸಿಕೊಂಡು ಒಳ್ಳೆಯ ಸಂಪ್ರದಾಯ ಬಿತ್ತೋಣ. ಕಷ್ಟಗಳನ್ನು ತುಳಿದರೆ ಸುಖದ ದಡ ಸಿಗುತ್ತದೆ, ಅದಕ್ಕೆ ಅತಿ ಚಿಕ್ಕ ಹಳ್ಳಿಯಿಂದ ಬಂದು ಶ್ರಮವಹಿಸಿ ಓದಿ ಸಾಧಿಸಿ ಕರ್ನಾಟಕದ ಇತಿಹಾಸದಲ್ಲಿಮೊದಲ ಮಹಿಳಾ ಆಯುಕ್ತೆ ಯಾಗಿರುವ ನಾನೇ ಸಾಕ್ಷಿ.ಇದೆಲ್ಲಾ ಆದದ್ದು ಗುರುವಿನ ಶ್ರೀರಕ್ಷೆಯಿಂದಲೇ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ರಾಣಿ ಚೆನ್ನಮ್ಮ ವಿಶ್ವಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೆಯಿಣಿ ಗದಿಗೆಪ್ಪಗೌಡರ ತಮ್ಮ ಉಪನ್ಯಾಸದಲ್ಲಿ ಮಣ್ಣಿನ ಸಂಸ್ಕೃತಿಯಲ್ಲಿ ಹಬ್ಬಗಳ ಮಹತ್ವ ಕುರಿತು ಮಾತನಾಡುತ್ತಾ, ನಮ್ಮ ಎಲ್ಲ ಹಬ್ಬಗಳು ಕೃಷಿ ಮೂಲದಿಂದ ಬಂದಿವೆ. ಆಯಾ ಕಾಲಾನುಕ್ರಮಣಿಕೆಗೆ ನಮ್ಮ ದೇಹಕ್ಕೆ ಬೇಕಾಗುವ ಆಹಾರ ಕ್ರಮಗಳ ಅನುಸಾರ ದಲ್ಲಿ ನಮ್ಮ ಹಬ್ಬಗಳು ನಿಂತಿವೆ. ಹಬ್ಬಗಳು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಐತಿಹಾಸಿಕವಾಗಿ, ಸಾಂಪ್ರದಾಯಿಕವಾಗಿ, ವೈಜ್ಞಾನಿಕವಾಗಿ ಜೀವನದಲ್ಲಿ ಬೆಸುಗೆಯನ್ನು ಉಂಟುಮಾಡುವ ಮಹತ್ವಗಳನ್ನು ಪಡೆದಿವೆ. ಅದು ಅಲ್ಲದೇ ಹಬ್ಬಗಳು ಅನ್ನಕ್ಕೆ ದಾರಿ ಮಾಡಿಕೊಡುವ, ಆರ್ಥಿಕ ಸಬಲತೆಯ ಹೆಚ್ಚಿಸುವ,ಜ್ಞಾನ, ನೆಮ್ಮದಿ, ಸುಖ,ಶಾಂತಿ ತುಂಬುವ ಮಾರ್ಗದರ್ಶಿಯಾಗಿವೆ ಎಂದರು.
ಬೆಳ್ಳಿಚುಕ್ಕಿ ಅಕಾಡೆಮಿಯ ಅಧ್ಯಕ್ಷೆ ಡಾ. ರಾಜೇಶ್ವರಿ ಹಿರೇಮಠ ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆಯರ ಪ್ರತಿಭೆಯನ್ನು ಜಾಗತಿಕವಾಗಿ ಬಿತ್ತರ ಪಡಿಸುವ ಕೆಲಸ ನಮ್ಮ ಅಕಾಡೆಮಿ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಕಲಾವಿದರಿಂದ ಭಕ್ತಿಸಂಗೀತ ಕಾರ್ಯಕ್ರಮ, ಉಡಿ ತುಂಬುವ ಕಾರ್ಯಕ್ರಮ, ಅಕಾಡೆಮಿಯ ಸದಸ್ಯರು ಮತ್ತು ಹಿತೈಷಿಗಳಿಗೆ ಅಕಾಡೆಮಿಯಿಂದ ಗೌರವ ಸನ್ಮಾನ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಡಾ. ಹೇಮಾ ಸೋನೋಳ್ಳಿ, ಜ್ಯೋತಿ ಬದಾಮಿ, ಸುಮಿತ್ರ ಕುಲಕರ್ಣಿ, ಶ್ರೀದೇವಿ ಅಂಟಿನ, ಮಂಜುಳಾ ಪಟಗುಂದಿ, ದಾಕ್ಷಾಯಿಣಿ ಪೂಜಾರ, ರೂಪಾ ವಸ್ತ್ರದ, ಚಿದಾನಂದ ರೂಗೆ ರವಿ ಶರಣಪ್ಪ, ಎಂ. ವೈ. ಮೆಣಸಿನಕಾಯಿ,ಮೋಹನ ಗುಂಡ್ಲೂರ, ಶಿವಾನಂದ ತಲ್ಲೂರ ಸೇರಿದಂತೆ ಲೇಖಕಿಯರ ಸಂಘ, ಮಾತೃಮಂಡಳಿ ಬಳಗ, ಕಸಾಪ ಬಳಗ,ಅಪ್ಪಾಜಿ ಸಂಗೀತ ಬಳಗ ಸೇರಿದಂತೆ ಸಾಹಿತ್ಯಾಸಕ್ತರು ಮತ್ತು ಮಠದ ಭಕ್ತರು ಉಪಸ್ಥಿತರಿದ್ದರು. ಆರಂಭದಲ್ಲಿ ಡಾ.ಸ್ವಪ್ನ ಕುಲಕರ್ಣಿ ಪ್ರಾರ್ಥನೆ, ಮಾತೃ ಮಂಡಳಿ ವತಿಯಿಂದ ವಚನಗಾಯನ ನಡೆಯಿತು. ಜಯಶ್ರೀ ದುಗ್ಗಾಣಿ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ಪಾಟೀಲ ವಂದಿಸಿದರು.ಡಾ. ಸ್ವಪ್ನ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.