ಮೂಡಲಗಿ: ನಾವು ಶ್ರಮ ಪಟ್ಟಾಗ ಮಾತ್ರ ಉತ್ತಮ ರೈತನಾಗಲು ಸಾಧ್ಯ, ಮಕ್ಕಳಿಗೆ ಕೂಡ ಚಿಕ್ಕವರಿದ್ದಾಗಿನಿಂದಲೇ ಕೃಷಿಯ ಬಗ್ಗೆ ತಿಳಿವಳಿಕೆ ಕೊಡಬೇಕು. ಸಾವಯವ ಕೃಷಿ ಮಾಡುವುದು ಎಲ್ಲ ರೀತಿಯಿಂದಲೂ ಪ್ರಯೋಜನಕಾರಿ ಎಂದು ಕಲ್ಲೊಳಿಯ ಪ್ರಗತಿಪರ ರೈತ ರಮೇಶ ಬಸಪ್ಪ ಖಾನಗೌಡ್ರ ಹೇಳಿದರು.
ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ವತಿಯಿಂದ ಮೂಡಲಗಿಯ ಆರ್ ಡಿ ಎಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ ವಹಿಸಿಕೊಂಡಿದ್ದರು.
ರೈತರು ಮಿಶ್ರ ಬೆಳೆ ಪದ್ಧತಿ ಅಲ್ಲದೆ ಸಾವಯವ ಪದ್ಧತಿಯನ್ನು ಬಳಸಿ ಬೆಳೆ ಬೆಳೆಯಬೇಕು ಅದಕ್ಕಿಂತ ಮೊದಲು ಮಣ್ಣು ಪರೀಕ್ಷೆ ಮಾಡಿಸಿ ವರದಿಗೆ ತಕ್ಕಂತೆ ಗೊಬ್ಬರ ಕೊಡಬೇಕು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದು ಹೇಳಿ, ತಮ್ಮ ಆಧುನಿಕ ಕೃಷಿ ಪದ್ಧತಿಯ ಅನುಭವಗಳನ್ನು ಹೇಳಿದರು.
ಪತ್ರಕರ್ತ ಉಮೇಶ ಬೆಳಕೂಡ ಮಾತನಾಡಿ, ದೇಶದಲ್ಲಿ ಅತ್ಯಂತ ನಿರ್ಲಕ್ಷಿತ ಸಮುದಾಯವೆಂದರೆ ಅದು ರೈತ ಸಮುದಾಯ. ಸರ್ಕಾರಗಳು, ರಾಜಕಾರಣಿಗಳು ರೈತರಿಗೆ ಎಲ್ಲ ರೀತಿಯ ಸೌಲಭ್ಯ ಕೊಡುವುದಾಗಿ ಹೇಳುತ್ತಾರೆ ಆದರೆ ಅವು ರೈತರಿಗೆ ಸಿಗುವುದಿಲ್ಲ. ಇದು ವಿಪರ್ಯಾಸ. ಪ್ರತಿದಿನವೂ ರೈತರ ದಿನವೇ. ಇದು ವರ್ಷಕ್ಕೊಮ್ಮೆ ಆಗದೆ ಪ್ರತಿದಿನ ಆಚರಣೆಯಾಗಬೇಕು ಎಂದರು.
ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತನಿಗೆ ಇಂದು ಯಾವುದೇ ಥರದ ಬೆಂಬಲ ಸಿಗುತ್ತಿಲ್ಲ. ರೈತನಿಲ್ಲದೆ ಏನೂ ನಡೆಯುವುದಿಲ್ಲ ಆದ್ದರಿಂದ ರೈತನೆಂದರೆ ನಡೆದಾಡುವ ದೇವರು ಇದ್ದಹಾಗೆ. ರೈತನಿಗೆ ಸಿಗಬೇಕಾದ ಮಾನ್ಯತೆ ಸಿಗಬೇಕು ಎಂದರು.
ಸಮಾರಂಭದಲ್ಲಿ ರೈತ ಹಿತರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಭೀಮಪ್ಪ ಶಂಕರ ರೊಡ್ಡನವರ, ಜಿಲ್ಲಾ ಸಂಚಾಲಕ ಪಾರೀಶ ಉಪ್ಪಿನ, ತಾಲೂಕಾ ಗೌರವಾಧ್ಯಕ್ಷ ಮಹಾದೇವ ಬಂಗೆನ್ನವರ, ರೈತರಾದ ಈಶ್ವರ ಮುಗಳಖೋಡ, ಮಲ್ಲಪ್ಪ ಯ. ಕಬ್ಬೂರ, ಸೋಮಲಿಂಗಪ್ಪ ರಬಕವಿ, ಅರ್ಜುನ ಮಾದಗೌಡರ, ಬಸವರಾಜ ಮಾದಗೌಡರ, ಸದಾಶಿವ ರಬಕವಿ, ರೇವಪ್ಪ ರಬಕವಿ, ಪಾಂಡುರಂಗ ರಬಕವಿ, ವಿವೇಕಾನಂದ ಮೋಪಗಾರ ವಕೀಲರು ಉಪಸ್ಥಿತರಿದ್ದರು.
ತಾಲೂಕಾ ಸಂಚಾಲಕ ಸಂಗಪ್ಪ, ಶಿ. ಹಡಪದ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. ಸಮಾರಂಭದಲ್ಲಿ ಪ್ರಗತಿಪರ ರೈತ ರಮೇಶ ಖಾನಗೌಡ್ರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.