spot_img
spot_img

ಜೋಕುಮಾರನ ಕಥೆ

Must Read

- Advertisement -

ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ”ಜೋಕ”ಎಂಬ ಮುನಿಯ ಮಗನೆಂದೂ,ಜೇಷ್ಟಾದೇವಿಯ ಮಗನೆಂದೂ ಹೇಳಲಾಗುತ್ತದೆ.ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.

ಆತನು ಶಿವನ ಗಣಗಳಲ್ಲಿರುವವನು,ಆತ ಗಣಪತಿಯೊಂದಿಗೆ ಬರುವವನು.ಆದರೆ ಆತನಿಗೆ ಏಳು ದಿನಗಳ ಆಯಸ್ಸು.ಹೀಗೆ ಅನೇಕ ಕಥೆಗಳಿವೆ.

ಒಮ್ಮೆ ಮಳೆ ಹೋಗಿ ಬೆಳೆ ಒಣಗುತ್ತದೆ.ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ.ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂದು ಕಥೆಯಲ್ಲಿ ಉಲ್ಲೇಖವಿದೆ.

- Advertisement -

ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನು ಮೋಹಿಸುತ್ತಾನೆ.ಒಮ್ಮೆ ಮಡಿವಾಳರ ಯುವತಿ ಅವನನ್ನು ಇಷ್ಟಪಡುತ್ತಾಳೆ.ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ.ಆ ತಲೆಯು ಒಬ್ಬ ಬೆಸ್ತನಿಗೆ ಸಿಗುತ್ತದೆ.ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗಿದೆ.

ಮೂರ್ತಿ ನಿರ್ಮಾಣ

ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ
ಮಣ್ಣಿನಿಂದ ತಿದ್ದಿ ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ, ಅಡಿಕೆ.ಉಲುಪಿ( ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ.ಗೌಡರ ಮನೆಯಲ್ಲಿ ಪೂಜೆಯಾದ ನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ, ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆ ಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.

ಮೆರವಣಿಗೆ

ವಾಲ್ಮೀಕಿ ಜನಾಂಗದ, ಕೋಲಕಾರ,ಕಬ್ಬಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ.ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಾರೆ.ಆ ಹಾಡುಗಳಲ್ಲಿ ಆತನ ಜನನ,ಉಡಾಳತನ,ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ,ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತದೆ.ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ.ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ.ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ.ಧಾನ್ಯಗಳಿಗೆ ಹುಳುಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.*

- Advertisement -

ಶಾಪ (ಚೌತಿ ಚಂದ್ರನ ರೀತಿ)

ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ.ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ.ಇಲ್ಲಿಯೂ ಬುಟ್ಟಿ ಕೊಡುವವ ತೆಗೆದುಕೊಳ್ಳುವವ ಪರಸ್ಪರ ಒಬ್ಬರನ್ನೊಬ್ಬರು ನೋಡುವಂತಿಲ್ಲ.ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ.ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.

ಸಾವು (ಆಚರಣೆ ಕಡೆಯ ಕ್ಷಣ, ಹಲವು ವೈವಿಧ್ಯಮಯ ಆಚರಣೆ)

ವೇಶ್ಯೆಯರು ಚಾವಡಿಯಲ್ಲಿ ಕೊಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ “ಜೋಕುಮಾರ ನಮ್ಮನು ಹಿಡಿದುಕೊಳ್ಳಲು ಬಂದ,ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ” ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ.ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ.ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ.ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಜಾಪಾನ್ ತೋಟದಲ್ಲಿ ಬಾವಿಯಲ್ಲಿ ಎಸೆಯುವುದು ಸಂಪ್ರದಾಯ.ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು.ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು.ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿವಿಧಾನಗಳಿವೆ.ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.ಆತನ ಅಳಲು (ಶ್ರಾದ್ಧ)

ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ.ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ.ರೊಟ್ಟಿ ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೋಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿ ಎಲ್ಲರೂ ಸೇರಿ ಉಂಡು ಬರುವುದು ಸಂಪ್ರದಾಯ.ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸ ಬಟ್ಟೆ ಉಡುವಂತಿಲ್ಲ, ಒಡವೆ ವಾಹನ ಖರೀದಿಸುವಂತಿಲ್ಲ, ಶುಭ ಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ಸ್ವಯಂಘೋಷಿತ ಸಂವಿಧಾನ.

ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೂ, ಕೆರೆಯ ಸಮೀಪವೂ,ನದಿಯ ದಂಡೆಗೋ ಒಯ್ದು ಬಿಸಾಕುತ್ತಾರೆ.ಜೋಕುಮಾರನು ಸತ್ತ ಸುದ್ದಿ ಕೇಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ.ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ.

ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ,ಎಡೆ ತೋರಿಸಿ”ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.

ಹಾಡು

ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ,ಗೊಡ್ಡಗಳೆಲ್ಲಾ ಹೈನಾಗಿ ಜೋಕುಮಾರ, ಜೋಕುಮಾರ….
ಜೋಕುಮಾರ… ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತಥ ಚೆಲುವಿನ ತನ್ನ ಮಡದಿಯಂದಾ ಜೋಕುಮಾರ.

ಸಂಗ್ರಹ: ಎಮ್. ವೈ. ಮೆಣಸಿನಕಾಯಿ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group