spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಕನ್ನಡಕ್ಕೆ ಬಂದ ಭಿನ್ನ ಶೈಲಿ, ಭಿನ್ನ ವಿಷಯ, ಭಿನ್ನ ಚರ್ಚೆಯ ವಿಶೇಷ ಕೃತಿ

ಪುಸ್ತಕದ ಹೆಸರು : ಚಲತ್ ಚಿತ್ರವ್ಯೂಹ
ಲೇಖಕರು ಮೂಲ ಮರಾಠಿ : ಅರುಣ ಖೋಪಕರ
ಕನ್ನಡಕ್ಕೆ ಅನುವಾದ : ಪ್ರೊ. ಚಂದ್ರಕಾಂತ ಪೋಕಳೆ
ಪ್ರಕಾಶಕರು : ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ, ೨೦೨೩
ಪುಟ : ೨೬೨ ಬೆಲೆ : ರೂ. ೪೧೫
ಲೇಖಕರ ಸಂಪರ್ಕವಾಣಿ : ೯೪೪೯೨೭೩೦೫೯
* * * * * * *
ಪ್ರೊ. ಚಂದ್ರಕಾಂತ ಪೋಕಳೆ ಅವರು ಕನ್ನಡದ ಸಮಕಾಲೀನ ಶ್ರೇಷ್ಠ ಅನುವಾದಕರು. ಮರಾಠಿ ಭಾಷೆಯಿಂದ ಈವರೆಗೆ ೧೫೦ಕ್ಕೂ ಹೆಚ್ಚು ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿ, ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಹೊಸ ಬಗೆಯ ಸಾಹಿತ್ಯ ನಿರ್ಮಾಣದ ಪಥವನ್ನು ತೋರಿದ್ದಾರೆ. ಕನ್ನಡ ಲೇಖಕರಿಗಿಂತ ಹತ್ತು ಪಟ್ಟು ಮರಾಠಿ ಲೇಖಕರ ವಿಚಾರ ಸರಣಿಗಳು ಗುಣಮಟ್ಟದವುಗಳಾಗಿವೆ ಎಂಬುದು ಅವರ ಅನುವಾದ ಕೃತಿಗಳಿಂದ ತಿಳಿದು ಬರುತ್ತದೆ. ವಿಶ್ವಾಸ ಪಾಟೀಲರ ‘ಮಹಾನಾಯಕ’, ಬಾಲಚಂದ್ರ ನೇಮಾಡೆ ಅವರ ‘ಹಿಂದೂ, ರಾ.ಚಿಂ. ಢೇರೆಯವರ ಸಂಶೋಧನಾ ಕೃತಿಗಳಾದ ‘ವಿಠ್ಠಲ ಒಂದು ಮಹಾಸಮನ್ವಯ’, ‘ನಾಥ ಸಂಪ್ರಸಂಪ್ರದಾಯದ ಇತಿಹಾಸ’, ‘ದತ್ತ ಸಂಪ್ರದಾಯದ ಇತಿಹಾಸ’, ‘ತುಳಜಾ ಭವಾನಿ’ ಮೊದಲಾದ ಕೃತಿಗಳು ಕನ್ನಡಕ್ಕೆ ಅಪರೂಪದ ಕಾಣಿಕೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.

ಪ್ರೊ. ಪೋಕಳೆ ಅವರು ಅನುವಾದಿಸುವ ವೇಗವನ್ನು ಕಂಡ ಖ್ಯಾತ ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ ಅವರು ‘ಪೋಕಳೆ ಅವರು ಅನುವಾದ ಲೋಕದ ಪ್ರಿಂಟಿಂಗ್ ಮಶೀನ್ ಇದ್ದಂತೆ, ಅವರ ಕೈಯಲ್ಲಿ ಒಂದು ನೂರು ಪುಟದ ಪುಸ್ತಕ ಒಂದೇ ದಿನದಲ್ಲಿ ಸಿದ್ಧಗೊಳ್ಳುತ್ತದೆ. ಅಂತಹ ಅತುಲ ಸಾಮರ್ಥ್ಯ ಅವರ ಅನುವಾದದಲ್ಲಿದೆ’ ಎಂದು ಹೃದಯತುಂಬಿ ಬಣ್ಣಿಸಿದ್ದರು. ಪ್ರತಿನಿತ್ಯ ಮರಾಠಿಯಲ್ಲಿ ಪ್ರಕಟವಾಗುವ ಶ್ರೇಷ್ಠ ಕೃತಿಗಳನ್ನು ಅವರು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ, ಯಾವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರೆ ಔಚಿತ್ಯ ಎಂಬುದನ್ನು ಮನಗಾಣುತ್ತಾರೆ. ತಕ್ಷಣ ಲೇಖಕರ ಅನುಮತಿ ಪಡೆದು, ಅನುವಾದ ಕಾರ್ಯಕ್ಕೆ ತೊಡಗುತ್ತಾರೆ. ಹೀಗಾಗಿ ಅವರು ನೂರೈವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ತರಲು ಸಾಧ್ಯವಾಗಿದೆ. ಇದೊಂದು ದೊಡ್ಡ ಸಾಧನೆಯೆಂದೇ ಹೇಳಬೇಕು. ಕನ್ನಡದಲ್ಲಿ ಇಷ್ಟು ಸಂಖ್ಯೆಯ ಕೃತಿಗಳನ್ನು ಅನುವಾದಿಸಿದ ಮತ್ತೊಬ್ಬ ಲೇಖಕ ಇರಲಿಕ್ಕಿಲ್ಲ. ಹೀಗಾಗಿ ಪ್ರೊ. ಪೋಕಳೆ ಅವರು ಕನ್ನಡ-ಮರಾಠಿ ಸಾಹಿತ್ಯ ಸಂಸ್ಕೃತಿಯ ಬೆಸುಗೆಯ ಕೊಂಡಿಯಾಗಿದ್ದಾರೆ.

- Advertisement -

ಪ್ರೊ. ಪೋಕಳೆ ಅವರು ಅನುವಾದಿಸಿದ ‘ಚಲತ್ ಚಿತ್ರವ್ಯೂಹ’ ಕೃತಿಯ ಮೂಲ ಮರಾಠಿ ಲೇಖಕರು ಅರುಣ ಖೋಪಕರ. ಅವರು ಭಾರತ ದೇಶ ಕಂಡ ಶ್ರೇಷ್ಠ ಚಲನಚಿತ್ರ ನಟ-ನಿರ್ದೇಶಕರಲ್ಲಿ ಒಬ್ಬರು. ೬೦-೭೦ರ ದಶಕದ ಭಾರತೀಯ ಶ್ರೇಷ್ಠ ನಟ-ನಿರ್ದೇಶಕರೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿದವರು. ಕಲೆ, ಚಿತ್ರಕಲೆ, ಚಲನಚಿತ್ರ-ವರ್ಣಚಿತ್ರ ಲೋಕದ ದಿಗ್ಗಜರೊಂದಿಗೆ ಹೊಂದಿದ ಒಡನಾಟದ ಕ್ಷಣಗಳೊಂದಿಗೆ ಅವರ ಸಾಧನೆಯ ಪರ್ವಗಳನ್ನು ಸಾಧ್ಯಂತವಾಗಿ ವಿವರಿಸುವ ಒಂದು ಅಪರೂಪದ ಕೃತಿ ‘ಚಲತ್ ಚಿತ್ರವ್ಯೂಹ’.

ಕನ್ನಡದಲ್ಲಿ ಈ ಬಗೆಯ ಕೃತಿಗಳು ಬಂದಿರುವುದು ಪ್ರಾಯಶಃ ನನ್ನ ಗಮನಕ್ಕೆ ಬಂದಿಲ್ಲ. ಇತ್ತೀಚಿಗೆ ಅರುಣ ಖೋಪಕರ ಅವರ ಆತ್ಮೀಯ ಗೆಳೆಯರಾದ ಗಿರೀಶ ಕಾಸರವಳ್ಳಿ ಅವರು ಚಲತ್ ಚಿತ್ರವ್ಯೂಹ ಮಾದರಿಯಲ್ಲಿ ‘ಬಿಂಬ-ಬಿಂಬನ’ ಎಂಬ ಕೃತಿಯೊಂದನ್ನು ರಚಿಸಿದ್ದಾರೆ ಎಂಬುದನ್ನು ಕೇಳಿರುವೆ. ಈ ಹಿಂದೆ ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆಯ ಎಂಟು ಕೃತಿಗಳು ರಚನೆಗೊಂಡಿದ್ದವು. ಆದರೆ ಅವು ಸಾಹಿತ್ಯ-ಸಾಮಾಜಿಕ ಕ್ಷೇತ್ರದ ಸಾಧಕರ ಕುರಿತಾಗಿ ಮಾತ್ರ ಇದ್ದ ಸಾಹಿತ್ಯ. ಅರುಣ ಖೋಪಕರ ಅವರು ಮುಖ್ಯವಾಗಿ ಬಣ್ಣದ ಲೋಕದ ಕೆಲವು ಸಾಧಕರ, ಚಲನಚಿತ್ರ ನಿರ್ದೇಶಕರ ಒಡನಾಟದ ಕ್ಷಣಗಳನ್ನು ಮೆಲಕು ಹಾಕುತ್ತಲೇ ಅವರ ಸಾಧನೆಯ ಹೆಜ್ಜೆ ಗುರುತುಗಳು ಅತ್ಯಂತ ಆಪ್ತವಾಗಿ, ಹೃದಯಸ್ಪರ್ಶಿಯಾಗಿ ಇಲ್ಲಿ ಚಿತ್ರಿಸಿದ್ದಾರೆ. ಹನ್ನೊಂದು ಜನ ಸಾಧಕರ ಸಾಧನೆಗಳನ್ನು ತಿಳಿಸುವ ವಿಭಿನ್ನ ಶೈಲಿಯ ಬರಹ ಕನ್ನಡಕ್ಕಂತೂ ಹೊಸ ಬಗೆಯದು. ಈ ಕೃತಿಯನ್ನು ಎರಡು ಬಾರಿ ಓದಿದೆ. ಅದರ ಆಳ-ಅಗಲ ತಿಳಿಯುವುದು ಮೊದಮೊದಲು ಕಷ್ಟವೆನಿಸಿತು. ಕಲೆ-ಚಲನಚಿತ್ರ ಪ್ರಪಂಚದ ನೆಲೆ-ಕಲೆಗಳ ಅರಿವು ಇಲ್ಲದವರಿಗೆ ಇಲ್ಲಿಯ ಬರಹಗಳು ಸ್ವಲ್ಪ ಕಠಿಣ ಎನಿಸಬಹುದಾದರೂ, ಕಲಾಪ್ರಪಂಚದ ಒಳನೋಟಗಳು-ಸೂಕ್ಷ್ಮಚಿಂತನೆಗಳು ಓದುಗರ ಅರಿವಿನ ಬೆಳಕನ್ನು ತೆರೆಯುವಲ್ಲಿ ಸಂಶಯವಿಲ್ಲ.

ಈ ಕೃತಿಯ ಕುರಿತು ಪ್ರೊ. ಪೋಕಳೆ ಗುರುಗಳಲ್ಲಿ ಮಾತನಾಡಿದಾಗ, ಅವರು ಹೇಳಿದ ಮಾತುಗಳು ಕೃತಿಯನ್ನು ಅರಿಯಲು ನನಗೆ ಸಹಾಯಕವಾದವು. ‘ಚಲತ್ ಚಿತ್ರವ್ಯೂಹ’ ಎಂಬ ಹೆಸರೇ ವಿಲಕ್ಷಣವಾಗಿದೆ ಎಂದು ಅವರನ್ನು ಕೇಳಿದಾಗ ಅವರು ಹೇಳಿದ ನುಡಿಗಳು ಮನನೀಯವಾಗಿವೆ : “ಇದು ಸಾಹಿತ್ಯೇತರ ವಿದ್ಯಮಾನಗಳಿಗೆ ಸಂಬಂಧಿಸಿದ ಕೃತಿ. ಕಲೆ, ಚಿತ್ರಕಲೆ, ಸಾಕ್ಷ್ಯಚಿತ್ರ, ಸಿನಿಮಾದ ಬಗೆಗಿನ ಅನುಭವ ಕಥನ, ಭಿನ್ನ ವಿಷಯ, ಭಿನ್ನ ಚರ್ಚೆ, ಭಿನ್ನ ಶೈಲಿ, ಭಿನ್ನ ಮಾದರಿ…ಹೀಗೆ ಓದುಗರಿಗೆ ಹೊಸ ಜಗತ್ತಿಗೆ ಕರೆದೊಯ್ಯಲು ಸಹಾಯ ಮಾಡುವ ಮಹತ್ವದ ಕೃತಿ. ಅರುಣ ಖೋಪಕರ ಅವರು ಈ ಮೊದಲು ‘ಚಿತ್ರವ್ಯೂಹ’ ಎಂಬ ಹೆಸರಿನ ಕೃತಿಯೊಂದನ್ನು ರಚಿಸಿದ್ದರು. ಅದರ ಮುಂದುವರೆದ ಭಾಗವೆಂಬಂತೆ ‘ಚಲತ್ ಚಿತ್ರವ್ಯೂಹ’ ರಚಿಸಿದರು. ಈ ತಲೆಬರೆಹದಲ್ಲಿ ಆಂತರಿಕ ಸಂಬಂಧವಿದೆ. ಒಳನೋಟವಿದೆ. ಕೆಲವರು ಚಲತ್ ಚಿತ್ರ ಎಂದರೆ ಚಲಚ್ಚಿತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬದಲಾವಣೆ ಮಾಡಿ ಎಂದರು. ಅರುಣ ಅವರಿಗೆ ಕೇಳಿದೆ, ಬೇಡ ಎಂದರು. ಇದನ್ನು ಓದಲು ವಿಶೇಷ ಸಿದ್ಧತೆ ಬೇಕು. ಇದು ನಮ್ಮ ಈ ವರೆಗಿನ ಸಾಹಿತ್ಯಿಕ ಓದಗಿಂತ ಭಿನ್ನ” ಎಂದು ಪೋಕಳೆ ಅವರು ಹೇಳಿದಾಗ, ನನಗೆ ಕೃತಿಯನ್ನು ಓದಲು ಕಲಾಜಗತ್ತಿನ ರುಚಿ-ಅಭಿರುಚಿ ಇದ್ದವರಿಗೆ ಮಾತ್ರ ಈ ಕೃತಿಯ ಅಂತರಾರ್ಥ-ಒಳನೋಟ ದಕ್ಕುತ್ತವೆ ಎಂದು ಅನಿಸಿತು. ಚಲತ್ ಎಂದರೆ ಕನ್ನಡದಲ್ಲಿ ಚಲನಶೀಲ ಎಂದು ಪರಿಭಾವಿಸಿದರೆ, ಕೃತಿಯ ಒಟ್ಟು ನೋಟದ ಗಟ್ಟಿತನ ಅರಿವಿಗೆ ಬರುತ್ತದೆ.

- Advertisement -

ಇಲ್ಲಿಯ ಹನ್ನೊಂದು ಲೇಖನಗಳಲ್ಲಿ ಕೆಲವು ಭಾಷಣಗಳಿವೆ, ಕೆಲವು ಆಯಾ ವ್ಯಕ್ತಿಯ ಸಂಸ್ಮರಣೆಯ ನಿಮಿತ್ಯ ಪತ್ರಿಕೆಗಳಿಗೆ ಬರೆದ ಲೇಖನಗಳಿವೆ. ಮೊದಲ ಲೇಖನ ‘ಅಭಾವದ ಬಣ್ಣ’ ಶ್ರೇಷ್ಠ ಭಾರತೀಯ ವರ್ಣಚಿತ್ರಕಾರ ಜಹಾಂಗೀರ ಸಬಾವಾಲಾ ಅವರ ಕುರಿತಾಗಿದೆ. ಸಬಾವಾಲಾ ಬದುಕಿನುದ್ದಕ್ಕೂ ತಮ್ಮ ವರ್ಣಚಿತ್ರಗಳ ಮೂಲಕ ಸೌಂದರ್ಯವನ್ನು ಹುಡುಕಿದವರು. ತಮ್ಮ ಛಾಯಾಚಿತ್ರಗಳ ಮೂಲಕ ಲೋಕವನ್ನೇ ಬೆರಗುಗೊಳಿಸಿದ ಕಲಾವಿದ. ಇವರ ಚಿತ್ರಗಳ ಒಟ್ಟು ಸಾರವನ್ನು ಲೇಖಕರು ‘ಸಂತೋಷ, ರಸಿಕತೆ, ವಿಕ್ಷಿಪ್ತತೆ ಮತ್ತು ಬದುಕಿನ ಉನ್ಮಾದ’ದಿಂದ ಕೂಡಿತ್ತು ಎನ್ನುತ್ತಾರೆ. ಸಬಾವಾಲಾರ ಶಿಸ್ತು, ಅಧ್ಯಯನದ ಗಂಭೀರತೆ, ಅಕಾಡೆಮಿಕ್ ಒಳನೋಟಗಳು ಅನನ್ಯವಾಗಿದ್ದವು. ಅರುಣ ಅವರು ಕಲರ್ಸ್ ಆಫ್ ಆಬ್ಸೆನ್ಸ್ ಚಿತ್ರವನ್ನು ನಿರ್ಮಿಸುವಾಗ ಸಬಾವಾಲಾರ ಮಾರ್ಗದರ್ಶನ ಪಡೆದರು, ಹೀಗಾಗಿ ೧೯೯೪ರಲ್ಲಿ ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು ಎಂಬುದನ್ನು ಅಭಿಮಾನದಿಂದ ಸ್ಮರಿಸುತ್ತಾರೆ. ಕೊನೆಯಲ್ಲಿ ದೊಸ್ತೋವಸ್ಕಿ ಅವರ ‘ಸೌಂದರ್ಯವೇ ಜಗತ್ತನ್ನು ಕಾಪಾಡಬಲ್ಲುದು’ ಎಂಬುದನ್ನು ಜಹಾಂಗೀರ ಸಬಾವಾಲಾ ತೋರಿಸಿಕೊಟ್ಟರು ಎಂಬುದನ್ನು ವಿವರಿಸುತ್ತಾರೆ.

ಎರಡನೆಯ ಲೇಖನ ಸಂತ ಭೂಪೇನ್ ಕೂಡ ಒಬ್ಬ ಅಪ್ರತಿಮ ವರ್ಣಚಿತ್ರಕಾರನ ಅನುಭವ ಕಥನವನ್ನು ಒಳಗೊಂಡಿದೆ. ಇದು ಶ್ರದ್ಧಾಂಜಲಿ ಸಭೆಯಲ್ಲಿ ಮಾಡಿದ ಭಾಷಣದ ರೂಪ. ಭೂಪೇನ್ ಖಕ್ಕರ ಎಷ್ಟು ತನ್ಮಯತೆಯಿಂದ ಚಿತ್ರಗಳನ್ನು ರಚಿಸುತ್ತಿದ್ದ, ತನ್ನ ಕಲಾ ಕೆಲಸದಲ್ಲಿ ಆತ ಎಷ್ಟು ನಿಮಗ್ನನಾಗುತ್ತಿದ್ದ ಎಂಬುದನ್ನು ಲೇಖಕರು ಹೀಗೆ ವಿವರಿಸುತ್ತಾರೆ- ‘ಭೂಪೇನ್ ಚಿತ್ರ ಬಿಡಿಸುವಾಗ ತನ್ನ ಸುತ್ತಮುತ್ತ ಬಂದು ಹೋಗುವವರ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ಸಂದಣಿಯಿದ್ದರೂ ಅವನು ಅದನ್ನು ಲೆಕ್ಕಿಸದೆ ನಿರಾಳವಾಗಿ ಚಿತ್ರ ಬಿಡಿಸಿ, ಬಣ್ಣ ತುಂಬುತ್ತಿರುತ್ತಾನೆ. ಅವನ ವ್ಯಕ್ತಿತ್ವದಲ್ಲಿ ಎಂಥದೊಂದು ಸತ್ವವಿತ್ತೆಂದರೆ, ಅದು ನಿಮ್ಮ ಗಮನಕ್ಕೆ ಸಹಜ ಬರುತ್ತಿತ್ತು ಮತ್ತು ಅದನ್ನು ಸಹಜವಾಗಿಯೇ ಗೌರವಿಸಲಾಗುತ್ತಿತ್ತು. ಅವನು ತೀರ ಮುಕ್ತ ಸ್ವಭಾವದವನಾಗಿದ್ದ.” (ಪು. ೩೪) ಭೂಪೇನ್ ಬಿಡಿಸಿದ ಚಿತ್ರಗಳಿಂದಾಗಿ ಭಾರತೀಯ ಚಿತ್ರಕಲೆಗೆ ಒಂದು ಪ್ರಾಂತ ಪ್ರಾಪ್ತವಾಯಿತು ಎಂದು ಹೇಳುತ್ತಾರೆ. ಭೂಪೇನ್ ಕೇವಲ ಚಿತ್ರಕಲಾವಿದ ಮಾತ್ರ ಆಗಿರಲಿಲ್ಲ. ‘ಮೌಜೀಲಾ ಮಣಿಲಾಲ’ ಎಂಬ ಮೌಲಿಕ ನಾಟಕವೊಂದನ್ನು ಬರೆದಿದ್ದ, ಅಲ್ಲದೆ ಅವರಿಗೆ ಹತ್ತು ಹಲವು ಕಲೆಗಳಲ್ಲಿ ಆಸಕ್ತಿಯಿತ್ತು. ಗುಜರಾತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೆಲವು ಲೇಖನಗಳನ್ನು, ಗ್ರಂಥಗಳನ್ನು ರಚಿಸಿದ್ದ ಮೇಲಾಗಿ ಆತ ಒಬ್ಬ ಸಹೃದಯಿ ಆಗಿದ್ದ. ಆತನ ಘನವ್ಯಕ್ತಿತ್ವವನ್ನು ವಿವರಿಸುತ್ತ- “ಎಲ್ಲ ಭಾರತೀಯ ಚಿತ್ರಕಲಾವಿದರಲ್ಲಿ ಭೂಪೇನ್ ಖಕ್ಕರನಂತರ ಭೂತದಯೆಯಿರುವ ಕಲಾವಿದ ಮತ್ತೊಬ್ಬನಿಲ್ಲ” ಎಂದು ಹೇಳುತ್ತಾರೆ.

ಮೂರನೆಯ ಲೇಖನ ‘ರಸಭರಿತವಾದದ್ದು ರಚಿಸಬೇಕು’ ಎಂಬುದು ರಘುನಾಥ ಕೃಷ್ಣರಾವ ಜೋಶಿ ಅವರನ್ನು ಕುರಿತಾಗಿದೆ. ಅನಾರೋಗ್ಯದಿಂದ ಉಪ್ಪಿಲ್ಲದ ಸಪ್ಪೆ ಊಟ ಮಾಡುವ ಪ್ರಸಂಗ ಬಂದರೂ ರ.ಕೃ.ಜೋಶಿ ಲಿಪಿಗಳ ಮೇಲೆ ಮಾಡಿದ ಶೋಧ ಕಾರ್ಯ ಅನನ್ಯ-ಅಪರೂಪ. ಜೋಶಿ ರೂಪಿಸಿದ ಕಂಪ್ಯೂಟರ್ ಏಡೆಡ್ ಡಿಜೈನ್ ಅಕ್ಷರ ವಿನ್ಯಾಸ ತುಂಬ ಪ್ರಸಿದ್ಧವಾಯಿತು. ಈತನ ಸಾಧನೆಯ ಕುರಿತು ಹೇಳುತ್ತಲೇ- “ರಘೂನಾಥನ ಅಕ್ಷರ ಶ್ರದ್ಧೆಗೆ ಭಾಷೆಯ, ಧರ್ಮದ ಮತ್ತು ಸಂಸ್ಕೃತಿಯ ಸೀಮೆಯಿರಲಿಲ್ಲ. ದುರಾದೃಷ್ಟವೆಂದರೆ ಅವನು ಯಾವ ಸಂಸ್ಕೃತಿಯಲ್ಲಿ ಜನಿಸಿದನೋ ಮತ್ತು ಯಾವ ನಗರದಲ್ಲಿ ಬದುಕಿದನೋ, ಅಲ್ಲಿ ಈ ಸಾಧಕನಿಗೆ ಕೊನೆಯ ವರೆಗೂ ಯೋಗ್ಯವಾದ ಬೆಲೆ ಸಿಗಲಿಲ್ಲ” (ಪು.೫೬) ಎನ್ನುತ್ತಾರೆ. ರ.ಕೃ.ಜೋಶಿ ಅವರು ಟೈಟಲ್ ಇಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಅರುಣ ಅವರು ತಂಬಾಕಿನ ಪರಿಣಾಮದಿಂದ ಕ್ಯಾನ್ಸರ್ ದಂತಹ ಮಾರಕ ಕಾಯಿಲೆ ಬರುತ್ತದೆ ಎಂಬುದನ್ನು ಕುರಿತು ಒಂದು ಕಿರುಚಿತ್ರ ಮಾಡಲು ಮುಂದಾದರು. ಅದಕ್ಕೆ ‘ಟೊಬೆಕೊ ಹೆಬಿಟ್ಸ್ ಎಂಡ್ ಓರಲ್ ಕ್ಯಾನ್ಸರ್’ ಎಂಬ ಟೈಟಲ್ ಕೊಟ್ಟವರು ಜೋಶಿ ಅವರು. ಈ ಚಿತ್ರ ದೇಶದ ೭೦% ಜನರು ತಂಬಾಕು ತಿನ್ನುವುದನ್ನು ನಿಲ್ಲಿಸಲು ಪ್ರೇರಣೆ ನೀಡಿತು. ಟೈಟಲ್ಲನ ಮಹತ್ವ ಮತ್ತು ವಿಶೇಷವಾಗಿ ಶುರುವಾತಿನ ಟೈಟಲ್ಲನ ಪರಿಣಾಮವು ರ.ಕೃ.ಜೋಶಿ ಅವರ ಚಿರಸ್ಮರಣೀಯ ಕಾರ್ಯವಾಗಿತ್ತು ಎಂದು ಅಭಿಮಾನದಿಂದ ವಿವರಿಸುತ್ತಾರೆ.

‘ದಾದೂ ಇಂದೂರಿಕರ’ ಎಂಬ ನಾಲ್ಕನೆಯ ಲೇಖನವು ದಾದೂ ರಾಘು ಸರೋದೆ ಎಂಬ ಒಬ್ಬ ಶ್ರೇಷ್ಠ ತಮಾಷಾ ಕಲಾವಿದನ ಜೀವನ ಮತ್ತು ವ್ಯಕ್ತಿತ್ವವನ್ನು ವಿವರಿಸುವ ಮಹತ್ವದ ಬರಹ. ದಾದೂ ಇಂದೂರಕರ ಅವರ ಒಟ್ಟು ಬದುಕನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹೀಗೆ ಕಟ್ಟಿಕೊಡುತ್ತಾರೆ- “ದಾದೂ ಇಂದೂರಿಕರ ಎಂಬ ಭಾರತದಲ್ಲಿಯ ಒಬ್ಬ ಶ್ರೇಷ್ಠ ಕಲಾವಿದ ಬಡತನ ಮತ್ತು ಬಟಾಬಯಲಿನ ವಾತಾವರಣದಲ್ಲಿ ಜನಿಸಿದ. ಅಲ್ಲೇ ಹುದುಗಿದ, ಬೆಳೆದ. ಅವನ ಕಲೆಯು ಕೆಸರಿನಲ್ಲಿ ಜನಿಸಿತು ಮತ್ತು ಅಲ್ಲೇ ತಲೆ ಎತ್ತಿ, ಹೊರಬಿದ್ದು ಮೊಳಕೆ ಒಡೆಯಿತು, ಅರಳಿತು, ಫಲಿಸಿತು ಮತ್ತು ಪರಿಮಳ ಬೀರಿತು. ಒಂದು ದಿನ ದಾದೂ ಸತ್ತ. ಕಲೆಯೂ ಹೋಯಿತು. ಇದು ದಾದೂ ಎಂಬ ವ್ಯಕ್ತಿಯ ಕಥೆ” “ಪು. ೬೭) ಇದು ಲೇಖಕರು ಒಬ್ಬ ಸಾಧಕನ ಜೀವನವನ್ನು ಪರಿಚಯಿಸುವ ರೀತಿ. ಇಲ್ಲಿಯ ಪ್ರತಿಯೊಂದು ಲೇಖನಗಳ ಆರಂಭವೂ ಈ ರೀತಿ ಬರಹದಿಂದಲೇ ಆಗುತ್ತದೆ. ದಾದೂ ಒಬ್ಬ ತಮಾಷಾ ಕಲಾವಿದನಾಗಿ ಬೆಳೆದ ಕಥೆಯೇ ರೋಚಕವಾಗಿದೆ. ನವರಸಗಳನ್ನು ಏಕಕಾಲಕ್ಕೆ ಪ್ರಕಟ ಮಾಡುವ ಕಲಾಕೌಶಲ್ಯ ತಮಾಷಾ ಕಲಾವಿದನಲ್ಲಿ ಇರುತ್ತದೆ. ಅಂತಹ ಒಂದು ಸಾಮರ್ಥ್ಯ ದಾದೂನಲ್ಲಿ ಇತ್ತು. ತಮಾಷಾ ಪ್ರಸಂಗದಲ್ಲಿ ಹಾಸ್ಯವನ್ನು ಉಕ್ಕಿಸುವ ಭರದಲ್ಲಿ ಆಡಿದ ಕೆಲವು ಮಾತುಗಳು ಶ್ಲೇಷೆಯಿಂದ ಕೂಡಿದ ಕಾರಣ, ಕೆಲವು ಜನರು ಅದರಲ್ಲಿ ಅಶ್ಲೀಲತೆಯನ್ನು ಹುಡುಕುತ್ತಿದ್ದರು. ಒಂದು ಪ್ರಸಂಗವನ್ನು ಲೇಖಕರು ತುಂಬ ಮಾರ್ಮಿಕವಾಗಿ ದಾಖಲಿಸಿದ್ದಾರೆ. “ಸೆನ್ಸಾರ್ ನವರು ದಾದಾ ಕೊಂಡಕೆಯ ಸಿನಿಮಾ ‘ಅಂಧೇರಿ ರಾತ್ ಮೇ, ದಿಯಾ ತೇರೆ ಹಾಥ ಮೇ’ ಎಂಬ ಹೆಸರನ್ನು ಅಶ್ಲೀಲವೆಂದು ಆಕ್ಷೇಪವೆತ್ತಿದರು. ದಾದಾ ಅಮಾಯಕ ಮುಖ ಮಾಡಿ ‘ರಾತ್ರಿ ಕತ್ತಲೆ ಬಿದ್ದಾಗ, ದೀಪ ಕೈಯಲ್ಲಿ ಹಿಡಿದರು’ ಎಂದರೆ ಅದರಲ್ಲೇನು ತಪ್ಪಿದೆ? ನಿಮ್ಮ ಮನದೊಳಗೆ ಇಂಥ ಹೊಲಸು ವಿಚಾರಗಳು ಹೇಗೆ ಮತ್ತು ಎಲ್ಲಿಂದ ಬರುತ್ತದೋ ಅರ್ಥವೇ ಆಗುವುದಿಲ್ಲಪ್ಪ’ ಎಂದು ದಾದೂ ಉತ್ತರಿಸಿದನಂತೆ. ತಮಾಷಾದಂತಹ ಆಟ ಆಡಲು ಭಾಷೆಯ ಮೇಲೆ ವಿದೂಷಕನಿಗೆ ವಿಶಿಷ್ಟ ಬಗೆಯ ಹಿಡಿತವಿರಬೇಕು. ಆತ ನಿರಕ್ಷರಿಯಾದರೂ ಸಾಕ್ಷರನಿಗಿಂತಲೂ ಹೆಚ್ಚು ಸುಶಿಕ್ಷಿತನಾಗಿ ಸೂಕ್ಷ್ಮ ಏರಿಳಿತಗಳಿಂದ ಒಟ್ಟು ಆಟವನ್ನು ಯಶಸ್ವಿಗೊಳಿಸಬೇಕಾಗುತ್ತದೆ. ಹೀಗಾಗಿ ತಮಾಷೆಯ ಪ್ರಹಸನದಲ್ಲಿ ವಿದೂಷಕನು ವಿಶ್ವಾಮಿತ್ರನಂತೆ ಒಂದು ಪ್ರತಿಸೃಷ್ಟಿ ನಿರ್ಮಿಸಬೇಕಾಗುತ್ತದೆ ಎಂದು ಲೇಖಕರು ಹೇಳುತ್ತಾರೆ. ಕನ್ನಡದಲ್ಲಿ ಗುಬ್ಬಿ ವೀರಣ್ಣನವರು ಒಬ್ಬ ಶ್ರೇಷ್ಠ ವಿದೂಷಕರಾಗಿ ನಾಡಿನ ಜನರನ್ನು ರಂಜಿಸಿದವರು. ಅವರಂತೆಯೇ ದಾದೂ ಇಂದೂರಿಕರ ಅವರು ಮಹಾರಾಷ್ಟçದಲ್ಲಿ ವಿದೂಷಕರಾಗಿ ಜನರ ಮನಸ್ಸನ್ನು ಗೆದ್ದವರು. ಇಬ್ಬರ ಬದುಕಿನಲ್ಲಿ ಕೆಲವು ಸಾಮ್ಯಗಳಿರುವುದನ್ನು ಈ ಲೇಖನ ಓದಿದಾಗ ಗಮನಕ್ಕೆ ಬರುತ್ತವೆ. ದಾದೂ ಅವರ ‘ಕತ್ತೆಯ ಮದುವೆ’ ಒಂದು ಶ್ರೇಷ್ಠ ತಮಾಷಾ ಪ್ರಹಸನವಾಗಿತ್ತು. ಈ ಪ್ರಹಸನದಲ್ಲಿ “ಒಬ್ಬ ಕತ್ತೆಯ ಬಾಲ ಹಿಡಿದು ಸ್ವರ್ಗಕ್ಕೆ ಹೋಗುತ್ತಾನೆ. ಅಲ್ಲಿ ಗದ್ದಲ ಹಾಕುತ್ತಾನೆ. ದೇವರು ತನ್ನ ಬಡಾಯಿ ಕೊಚ್ಚಿಕೊಳ್ಳುವಾಗ ಅವನು ಪುರಾಣದ ಉದಾಹರಣೆಯನ್ನು ಒಂದೇ ಹಾಡಿನೊಳಗೆ ಪೋಣಿಸುತ್ತಾನೆ. ಅದನ್ನು ದೇವರಿಗೆ ಹೇಳುತ್ತಾನೆ. ಆ ಹಾಡಿನಲ್ಲಿ ಒಂದು ದ್ರುಪದ ಬರುತ್ತದೆ. ‘ಎಲ್ಲ ದೇವರು ಲಫಂಗರೆ. ತಮಾಶಾ ಇದೊಂದು ಪ್ರಜಾಶಾಹಿಯ ಜಾನಪದ ಕಲೆ. ಅಲ್ಲಿ ದೇವರನ್ನೂ ಸಹ ಟೀಕಿಸುವ ಅವಕಾಶ ವಿದೂಷಕನಿಗಿರುತ್ತದೆ. ‘ಕತ್ತೆಯ ಮದುವೆ’ ಪ್ರಹಸನವು ಒಂದು ನೂರು ರಂಗಪ್ರಯೋಗಗಳನ್ನು ಕಂಡಿತು. ಸುದೈವಕ್ಕೆ ಆ ಕಾಲದಲ್ಲಿ ಹಿಂದೂಗಳ ಭಾವನೆಗೆ ನೋವಾಯಿತು ಎಂಬ ಆರೋಪ ಕೇಳಿ ಬರಲಿಲ್ಲ” ಎಂದು ವಿವರಿಸುವುದನ್ನು ಓದಿದಾಗ, ಕಲಾವಿದ ಧರ್ಮ ಜಾತಿಗಳನ್ನು ಮೀರಿ ನಿಂತ ಒಬ್ಬ ಅಜಾತನಾಗಿರುತ್ತಾನೆ. ಆತನ ದೃಷ್ಟಿಯಲ್ಲಿ ದೇವರು-ಧರ್ಮಗಳು ವಿಡಂಬನೆಗೆ ಒಳಗಾಗುವುದು ಸ್ವಾಭಾವಿಕ ಎಂಬುದನ್ನು ಈ ಘಟನೆ ತಿಳಿಸುತ್ತದೆ. ಮರಾಠಿಯ ಸಂತ ತುಕಾರಾಮ, ಬಹಿಣಾಬಾಯಿ ಮೊದಲಾದವರು ವಿಠ್ಠಲನ ಕುರಿತು ಆಡಿದ ಮಾತುಗಳು ‘ಪ್ರೇಮದ ಹಗ್ಗದಿಂದ ಪಂಢರಾಪುರದ ಚೋರನನ್ನು ಕಟ್ಟಿಹಾಕಿದೆ’, ವಿಠೂ, ಕಪ್ಪು ಮುಸುಡಿಯವನೆ ನನ್ನ ಮನೆಮಾರು ಹಾಳು ಮಾಡಿದಿಯಲ್ಲೋ’ ಎಂಬ ಮೊದಲಾದ ನುಡಿಗಳನ್ನು ಉಲ್ಲೇಖಿಸಿ ದಾದೂನ ದೇವರು-ಧರ್ಮದ ಬಗೆಗಿನ ಸಂಭಾಷಣೆಗಳು ವಾಸ್ತವ ನೆಲೆಯಲ್ಲಿ ಇರುತ್ತಿದ್ದವು ಎಂಬುದನ್ನು ಸಾರವತ್ತಾಗಿ ವಿಶ್ಲೇಷಿಸಿದ್ದಾರೆ.

ದಾದೂ ಮಹಾರಾಷ್ಟ್ರದ ಜನರ ಪಾಲಿಗೆ ಶ್ರೇಷ್ಠ ತಮಾಷಾ ವಿದೂಷಕನಾಗಿ ಜನಪ್ರಿಯನಾದರೂ ಆತನ ವೈಯಕ್ತಿಕ ಬದುಕು ಸುಗಮವಾಗಿರಲಿಲ್ಲ. ಆತ ಎಂಟು ವರ್ಷಗಳ ಕಾಲ ಒಬ್ಬರ ಮನೆಯಲ್ಲಿ ಪಾತ್ರೆ ತೊಳೆಯುವ ಬಟ್ಟೆ ಒಗೆಯುವ ಮನೆಗೆಲಸ ಮಾಡಿದ್ದ ಎಂಬುದು ಗಮನಾರ್ಹ ಸಂಗತಿ. ಅದನ್ನು ಹೇಳಿಕೊಳ್ಳುವಾಗ ಆತ ಎಂದೂ ಹಿಂಜರಿಕೆ ಸಂಕೋಚ ಪಡುತ್ತಿರಲಿಲ್ಲ ಎಂಬುದನ್ನು ಲೇಖಕರು ಆತನ ಸ್ಥಿತಪ್ರಜ್ಞತ್ವದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ.

ಇಂತಹ ಶ್ರೇಷ್ಠ ಕಲಾವಿದನೊಬ್ಬ ತೀರಿಕೊಂಡ ನಂತರ “ದಾದೂ ಇಹಲೋಕ ತೊರೆದು ಪರಲೋಕಕ್ಕೆ ಹೋದಾಗ, ಪ್ರಹಸನವೂ ಅವನ ಬೆನ್ನು ಹತ್ತಿ ಮೇಲೆ ಹೋಯಿತು” ಎಂದು ಬರೆದಿರುವುದು, ಆತನೊಂದಿಗೆ ಆತನ ಕಲೆಯೂ ಮಣ್ಣಲ್ಲಿ ಮಣ್ಣಾಯಿತು ಎಂಬುದನ್ನು ಓದುವಾಗ ಎಂತವರ ಹೃದಯವಾದರೂ ಕಲಕುತ್ತದೆ.

ಐದನೆಯ ಲೇಖನ- ನಾರಾಯಣ ಗಂಗಾರಾಮ ಸುರ್ವೇ ತುಂಬ ಮಹತ್ವದ ಬರಹ. ಸುರ್ವೆ ಮಹಾರಾಷ್ಟ್ರದ ಸಮಸ್ತ ಜನರ ಒಬ್ಬ ಆರಾಧ್ಯ ಕವಿ. ತಮ್ಮ ಕವಿತೆಗಳ ಮೂಲಕ ಮಹಾರಾಷ್ಟ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಧೀಮಂತ. ಸುರ್ವೆ ಮರಾಠಿ ಕಾವ್ಯಪ್ರಪಂಚಕ್ಕೆ ಕೊಟ್ಟ ಕೊಡುಗೆಯನ್ನು ಲೇಖಕರು ಹೇಳುವ ರೀತಿ ಹೀಗಿದೆ : “ಸುರ್ವೆಯವರು ಕೇವಲ ಆಡುಭಾಷೆಯ ನಕಲು ಮಾಡಲಿಲ್ಲ. ಅದರೊಳಗಿನ ಛಂದವನ್ನು ಹುಡುಕಿದರು. ಲಯವನ್ನು ಹುಡುಕಿದರು. ಅದರಲ್ಲಿಯ ಒಳಹೊರಗನ್ನು ಅರ್ಥ ಮಾಡಿಕೊಂಡರು. ತನ್ನ ಸ್ವಂತ ಲಯದ ಜಬರ್ದಸ್ತ ಪ್ರಜ್ಞೆಯನ್ನು ಬಳಸಿ, ಈ ಹಲವು ಲಯಗಳನ್ನು ಒಗ್ಗೂಡಿಸಿ ಕಟ್ಟಿಹಾಕಿದರು. ಆ ಮೂಲಕ ಮರಾಠಿ ಕವಿತೆಗೆ ಮತ್ತು ಭಾಷೆಗೆ ಒಂದು ವಿಶಿಷ್ಟ ತಿರುವನ್ನು ತಂದುಕೊಟ್ಟರು” (ಪು. ೮೯)

ನಾರಾಯಣ ಸುರ್ವೆ ಅವರಿಗೆ ದೊರೆತ ಗೌರವ ಪ್ರಾಯಶಃ ಭಾರತದ ಯಾವ ಕವಿಗೂ ದೊರೆತಿಲ್ಲ. ಅಷ್ಟೊಂದು ಗೌರವ ಅವರಿಗೆ ಸಿಕ್ಕಿರುವುದನ್ನು ಸ್ವತಃ ಅಟಲ ಬಿಹಾರಿ ವಾಜಪೇಯಿ ಅವರು ಗಮನಿಸಿ ಒಂದು ಮಾತು ಹೇಳುತ್ತಾರೆ : “ನನ್ನ ಜೀವನದಲ್ಲೇ ಜನರ ಹೃದಯ ಸಿಂಹಾಸನದ ಮೇಲೆ ಆರೂಢನಾಗಿರುವ, ಅವರ ಭಾವನೆಗಳಿಗೆ ತನ್ನ ಕವಿತೆಗಳಲ್ಲಿ ಎರಕ ಹೊಯ್ದ ಇಷ್ಟು ದೊಡ್ಡ ಮರುಪಾವತಿಯನ್ನು ತಾನೆಲ್ಲೂ ಕಾಣಲಿಲ್ಲ”. ಇದು ವಾಜಪೇಯಿ ಅವರ ಒಬ್ಬರ ಅಭಿಪ್ರಾಯವಲ್ಲ. ಇಡೀ ಮಹಾರಾಷ್ಟ್ರದ ಜನರ ಅಭಿಪ್ರಾಯವೂ ಹೌದು. ಇಂತಹ ಮಹಾನ್ ಕವಿಯ ಒಡನಾಟದ ಆಪ್ತ ಕ್ಷಣಗಳನ್ನು ಅರುಣ ಅವರು ಯುಕ್ತ ಶಬ್ದಗಳಲ್ಲಿ ಇಲ್ಲಿ ಹಿಡಿದಿಟ್ಟಿದ್ದಾರೆ.

‘ಖಂಡ ಕ್ರಮಾಂಕ ಶೂನ್ಯ’ ಆರನೆಯ ಲೇಖನ ಚಾರ್ಲಸ್ ಕೋರಿಯಾ ಅವರ ಬದುಕಿನ ಅನೇಕ ಅನೂಹ್ಯವಾದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಸುದೀರ್ಘ ಬರಹವಾಗಿದೆ. ಚಾರ್ಲಸ್ ಕೋರಿಯಾ ಒಬ್ಬ ಶ್ರೇಷ್ಠ ಭಾರತೀಯ ವಾಸ್ತುಶಿಲ್ಪಿ. ಅವರು ಅಹಮದಾಬಾದ ಸಾಬರಮತಿ ಆಶ್ರಮದಲ್ಲಿ ಅಸ್ತಿತ್ವಕ್ಕೆ ತಂದ ‘ಮಹಾತ್ಮಾ ಗಾಂಧಿ ವಸ್ತು ಸಂಗ್ರಹಾಲಯ’, ದೆಹಲಿಯ ರಾಷ್ಟ್ರೀಯ ಕರಕುಶಲ ವಸ್ತು ಸಂಗ್ರಹಾಲಯ, ಜೈಪುರದ ಜವಾಹರ ಕಲಾಕೇಂದ್ರ ಮುಂತಾದ ನಿರ್ಮಾಣ ಕಾರ್ಯಗಳು ದೇಶದ ಗಮನ ಸೆಳೆದಿವೆ. ೭೦-೭೫ರ ದಶಕದ ನವಿ ಮುಂಬೈ ನಿರ್ಮಾಣದ ಮುಖ್ಯ ವಾಸ್ತುಶಿಲ್ಪಿಯಾಗಿ ಕೋರಿಯಾ ಅವರು ನಿರ್ವಹಿಸಿದ ಪಾತ್ರ ಅವಿಸ್ಮರಣೀಯ. ಈ ಲೇಖನವನ್ನು ಓದುವವರಿಗೆ ಭಾರತೀಯ ಧರ್ಮ ಮತ್ತು ದರ್ಶನದ ಅರಿವಿರಬೇಕಾಗುತ್ತದೆ. ಪ್ರಾಚೀನ ಕಾಲದಿಂದ ಬಂದ ಯಾವುದೇ ಕಲೆಗಳಿಗಿಂತ ಸ್ಥಾಪತ್ಯ ಕಲೆಯೊಂದಿಗೆ ಮನುಷ್ಯ ಗಾಢವಾದ ಸಂಬಂಧವನ್ನು ಹೊಂದಿದ್ದಾನೆ ಎಂಬುದನ್ನು ತೋರಿಸಿದ ವ್ಯಕ್ತಿ ಕೋರಿಯಾ. ಇಲ್ಲಿ ಬರುವ ಸಂಗೀತದ ಸ್ಥಾಪತ್ಯ ಕಲೆಯೊಂದಿಗೆ ಪಿಂಡೋತ್ಪತ್ತಿ ಚರ್ಚೆಯ ವಿಷಯ ಸ್ವಾರಸ್ಯಕರವಾಗಿದೆ. ಕೋರಿಯಾ ಅವರು ಗಾಂಧೀಜಿಯ ವ್ಯಕ್ತಿತ್ವದಲ್ಲಿ ಸ್ಥಾಪತ್ಯದ ಪ್ರತಿಬಿಂಬ ಹೇಗಿತ್ತು ಎಂಬುದನ್ನು ವಿವರಿಸುತ್ತ ‘ಕಾಂಚನ್ ಜಂಗಾ’ ಎಂಬ ಬೆರಗಿನ ಬಂಗಲೆಯ ನಿರ್ಮಾಣದ ಹಿಂದಿನ ಕೋರಿಯಾ ಅವರ ಶ್ರಮ-ಶ್ರದ್ಧೆಯ ವಿವರಗಳು ನಿಜಕ್ಕೂ ಬೆರಗುಗೊಳಿಸುತ್ತವೆ.

‘ಬೆಳ್ಳಿ ಪರದೆ, ಬಿಳಿ ಚಾಕ್ ಮತ್ತು ಕಪ್ಪು ಹಲಗೆ ಸತೀಶ ಬಹಾದೂರ್’ ಎಂಬ ಏಳನೆಯ ಲೇಖನ ಭಾರತ ಕಂಡ ಶ್ರೇಷ್ಠ ಚಲನಚಿತ್ರ ವಿಮರ್ಶಕನ ಅನುಭವ ಕಥನವನ್ನು ತಿಳಿಸುತ್ತದೆ. ೧೯೭೦ರ ದಶಕದಲ್ಲಿ ಅರುಣ ಖೋಪಕರ ಅವರು ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಪ್ರವೇಶ ಪಡೆಯುವಾಗ ಮಾರ್ಗದರ್ಶಕ ಗುರುವಾಗಿ ದೊರೆತ ಸತೀಶ ಬಹಾದೂರ್ ಅವರ ಸಿನೇಮಾ ಅಧ್ಯಯನದ ಮಾದರಿಗಳನ್ನು ವಿಶ್ಲೇಷಿಸುತ್ತ ಅವರು ಹೇಗೆ ಒಬ್ಬ ಶ್ರೇಷ್ಠ ಚಲನಚಿತ್ರ ವಿಮರ್ಶಕರಾಗಿ ಬೆಳೆದರೆಂಬ ಸಂಗತಿಯತ್ತ ನಮ್ಮ ಗಮನ ಸೆಳೆಯುತ್ತಾರೆ. ಸಾಹಿತ್ಯ-ನಾಟಕ-ಸಂಗೀತಗಳನ್ನು ವಿಮರ್ಶೆಯ ಕಕ್ಷೆಗೆ ಒಳಪಡಿಸಿದಂತೆ, ಸಿನಿಮಾವನ್ನೂ ಅಧ್ಯಯನ ಮಾಡಬಹುದು, ಅದನ್ನು ಮಾಡಬೇಕಾದ ಅಗತ್ಯವಿದೆ ಎಂಬುದನ್ನು ಲೋಕಕ್ಕೆ ತೋರಿಸಿಕೊಟ್ಟ ಮೊದಲ ವ್ಯಕ್ತಿ ಸತೀಶ ಬಹಾದೂರ್. ಇವರು ಸಿನಿಮಾ ರಂಗಕ್ಕೆ ಬಂದಾಗ, ಭಾರತದಲ್ಲಿ ಸಿನಿಮಾಕ್ಕೆ ಕಲೆ ಎಂಬ ಮಾನ್ಯತೆ ಇನ್ನೂ ಲಭಿಸಿರಲಿಲ್ಲ ಎಂದು ಲೇಖಕರು ಹೇಳುತ್ತಾರೆ. ಇಂತಹ ಒಂದು ಮಾನ್ಯತೆಯನ್ನು ದೊರಕಿಸುವಲ್ಲಿ ಸತೀಶ ಬಹಾದೂರ್ ಅವರಂತಹ ವಿಮರ್ಶಕರು ದುಡಿದ ರೀತಿಯನ್ನು ಎಳೆ ಎಳೆಯಾಗಿ ಇಲ್ಲಿ ಬಣ್ಣಿಸಿದ್ದಾರೆ. “ಫಿಲ್ಮ್ ರಸಗ್ರಹಣವು ಮೂಲತಃ ಭಾರತದಲ್ಲಿ ಹೊಸದಾಗಿತ್ತು. ಜಾಗತಿಕ ಪಾತಳಿಯಲ್ಲೂ ಸಹ ವಿಮರ್ಶೆಗೊಂದು ಸರಿಯಾದ ಚೌಕಟ್ಟು ನಿರ್ಮಾಣಗೊಂಡಿರಲಿಲ್ಲ. ಪರಿಭಾಷೆಯಿರಲಿಲ್ಲ. ಪ್ರಮಾಣಬದ್ಧವಾಗಿ ಹಂತ ಹಂತವಾಗಿ ಹೋಗುವ ಮಾರ್ಗವನ್ನು ರೂಪಿಸಿರಲಿಲ್ಲ. ಅದರಿಂದ ಅವರು ತಮ್ಮದೊಂದು ಇಂಥ ಮಾರ್ಗವನ್ನು ಹುಡುಕಿದರು”(ಪು. ೧೩೩) ಎಂದು ಹೇಳುತ್ತಾರೆ. ಲೇಖನದ ಶಿರ್ಷಿಕೆಯಲ್ಲಿ ಬರುವ ಬಿಳಿ ಚಾಕ್ ಮತ್ತು ಕಪ್ಪು ಹಲಗೆ ಎಂಬ ಪದಗಳ ಕುರಿತು ಓದುಗರಲ್ಲಿ ವಿಶೇಷ ಕುತೂಹಲ ಮೂಡುತ್ತದೆ. ಇಂದು ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಪಾವರ್ ಪ್ರಜೆಂಟೇಶನ್ಸ್ ಬಳಸಿ ತರಗತಿಗಳಲ್ಲಿ ಪಾಠ ಮಾಡಲಾಗುತ್ತದೆ. ಆದರೆ ಸತೀಶ ಬಹಾದೂರ್ ಅವರ ಪ್ರಕಾರ, ಇದಕ್ಕಿಂತ ಹಳೆಯ ಮಾದರಿ ಕಪ್ಪು ಹಲಗೆ, ಬಿಳಿ ಚಾಕ್ ಮುಖ್ಯ ಎನ್ನುತ್ತಾರೆ. ಪಾವರ್ ಪಾಯಿಂಟ್ ಸಿದ್ಧಮಾಡಿ ಪಾಠ ಹೇಳಬೇಕಾಗುತ್ತದೆ, ಆದರೆ ಕೈಯಲ್ಲಿ ಚಾಕ್ ಇದ್ದರೆ ಗಾಳಿಯಲ್ಲಿ ತೇಲುವ ಕಲ್ಪನೆಗೆ ಕ್ಷಣದೊಳಗೆ ಆಕಾರ ನೀಡಬಹುದು ಎಂಬುದು ಬಹಾದೂರ್ ಅವರ ನಿಲುವಾಗಿತ್ತು. “ಕಲೆಯ ಶಿಕ್ಷಣದಲ್ಲಿ, ಮೊದಲೇ ಸಿದ್ಧಪಡಿಸಿದ ಬೇಯಿಸಿದ ಸುಂದರ ಪ್ಯಾಕ್ ನ್ನು ವಿದ್ಯಾರ್ಥಿಗಳ ಕೈಗೆ ನೀಡುವುದಕ್ಕಿಂತ, ಯಾವುದೇ ಮೂರು ಕಲ್ಲುಗಳಿಂದ ಒಲೆಯನ್ನು ಹೇಗೆ ಹೂಡಬಹುದು ಮತ್ತು ಯಾವುದೇ ಖಾದ್ಯದ ರುಚಿಯನ್ನು ನೋಡ ನೋಡುತ್ತ ಅದರ ಪಾಕಕಲೆ ಹೇಗೆ ಅರಿವಿಗೇ ಬರುತ್ತದೆ ಎಂದು ಹೇಳುವುದು ಮಹತ್ವದ್ದು” (ಪು. ೧೩೬) ಈ ವಿಚಾರಗಳು ಪ್ರತಿಯೊಬ್ಬ ಪ್ರಾಧ್ಯಾಪಕನ ಲಕ್ಷ್ಯದಲ್ಲಿರಬೇಕಾದ ಅನಿವಾರ್ಯತೆ ಇದೆ. ಇಂದು ವಿಶ್ವವಿದ್ಯಾಲಯ ಕೇಂದ್ರಿತ ಅಧ್ಯಯನದ ಪರಿಣಾಮವಾಗಿ ಡಾಕ್ಟರೇಟ್ ಪದವಿ ಪಡೆದವರು ಹೆಚ್ಚಾಗುತ್ತಿದ್ದಾರೆ, ಅನುಭವವಿಲ್ಲದ ಈ ಪದವೀಧರರಿಂದ ನಿಜವಾದ ಕಲೆಯು ಹೆಚ್ಚು ರೋಗಗ್ರಸ್ತವಾಗುತ್ತಿದೆ ಎಂಬ ವಿಚಾರವಾಗಿ ಇಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ.

‘ಭಾಸ್ಕರ್ ಚಂದಾವರಕರ’ ಎಂಬ ಎಂಟನೆಯ ಲೇಖನ ಅರುಣ ಅವರು ತಮಗೆ ಗುರುಗಳಾಗಿದ್ದ ಭಾಸ್ಕರ್ ಅವರ ಬಗ್ಗೆ ಮಾಡಿದ ಭಾಷಣದ ರೂಪ. ೧೯೭೦ರಲ್ಲಿ ಭಾಸ್ಕರ್ ಅವರು ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಪ್ರಾಧ್ಯಾಪಕರಾಗಿದ್ದರು. ಆಗ ಅರುಣ ಖೋಪಕರ ಅಲ್ಲಿ ವಿದ್ಯಾರ್ಥಿಯಾಗಿದ್ದರು. ಭಾಸ್ಕರ್ ಚಂದಾವರಕರ ಅವರು ಬಹುಶ್ರುತ ವಿದ್ವಾಂಸರು. ಇಂಗ್ಲಿಷ್ ಹಿಂದಿ ಮರಾಠಿ ಭಾಷೆಯಲ್ಲಿ ಅವರಿಗೆ ಅಗಾಧಪ್ರಮಾಣದ ಪಾಂಡಿತ್ಯವಿತ್ತು. ಹಾಗೆಯೇ ಕನ್ನಡದಲ್ಲಿಯೂ ಅವರು ಉಪನ್ಯಾಸ ನೀಡಿದ ಸಂಗತಿಯನ್ನು ಇಲ್ಲಿ ದಾಖಲಿಸಿದ್ದು ಕನ್ನಡಿಗರು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ. ಅಷ್ಟೇ ಅಲ್ಲ, ಚಂದಾವರಕರ ಅವರು ೧೯೭೮ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೆ ಸಂಗೀತ ನೀಡಿದ ಭಾಸ್ಕರ್, ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಮೊದಲ ಅವಕಾಶ ನೀಡಿದ್ದರು. ಭಾಸ್ಕರ್ ಚಂದಾವರ್ಕರ್ ಗೌರವಾನ್ವಿತ ಸಂಗೀತ ಶಿಕ್ಷಕರು. ಸುಮಾರು ೪೦ ಹಿಂದಿ ಚಿತ್ರಗಳಿಗೆ, ಮರಾಠಿ ಮತ್ತು ಮಲಯಾಳಮ್ ಚಲನ-ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿಕೊಟ್ಟಿದ್ದರು. ಹೊಸಬಗೆಯ ಸಂಗೀತವನ್ನು ಸೃಷ್ಟಿಸಿ, ಸಂಗೀತಪ್ರಿಯರೆಲ್ಲರ ಮನರಂಜಿಸಿದ್ದರು. ಹೆಸರಾಂತ, ಮರಾಠಿ ನಾಟಕ ರಚನೆಕಾರ, ವಿಜಯ್ ತೆಂಡುಲ್ಕರ್ ಅವರ ‘ಘಾಶಿರಾಂ ಕೊತ್ವಾಲ್’ ನಾಟಕ ನಿರ್ದೇಶಿಸಿದ್ದರು. ೧೯೭೦ ರ ದಶಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮೇಧಾವಿ, ಹಾಗೂ ಕಠಿಣ ಪರಿಶ್ರಮಿಯಾಗಿದ್ದ ಭಾಸ್ಕರ್ ಚಂದಾವರ್ಕರ್ ಸಂಗೀತವನ್ನು ಪುಣೆಯ ‘ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸಿಟ್ಯೂಟ್ ಆಫ್ ಇಂಡಿಯ’ ದಲ್ಲಿ ಕಲಿಸುತ್ತಿದ್ದರು. ತಮ್ಮ ೧೫ ವರ್ಷಗಳ ಕಾಲದ ಅಧ್ಯಾಪನ ಸಮಯದಲ್ಲಿ ಅವರ ವಿದ್ಯಾರ್ಥಿವೃಂದಕ್ಕೆ ಒಬ್ಬ ಉಚ್ಚಮಟ್ಟದ ಮಾದರಿಯ ಬೋಧಕರಾಗಿ, ಕೆಲಸಮಾಡಿ, ಎಳೆಯರ ಪ್ರೀತ್ಯಾದರ, ಗೌರವಗಳನ್ನು ಗಳಿಸಿದ್ದರು ಎಂಬುದನ್ನು ಲೇಖಕರು ಸ್ವತಃ ಒಬ್ಬ ಶಿಷ್ಯನಾಗಿ ಅತ್ಯಂತ ಆಪ್ತವಾಗಿ ವಿವರಿಸಿದ್ದಾರೆ.

‘ಕೆ.ಕೆ.ಮತ್ತು ಮಾಂತ್ರಿಕ ಗಳಿಗೆ’ ಲೇಖನ ಕೆ.ಕೆ. ಮಹಾಜನ ಅವರನ್ನು ಕುರಿತಾಗಿದೆ. ೧೯೬೦ರ ದಶಕದಲ್ಲಿ ಕೆ.ಕೆ. ಮಹಾಜನ ಒಬ್ಬ ಶ್ರೇಷ್ಠ ಸಿನಿಮಾಟೋಗ್ರಾಫರ್(ಕ್ಯಾಮರಾಮ್ಯಾನ್) ಆಗಿ ಜನಪ್ರಿಯರಾಗಿದ್ದು. ೮೪ಕ್ಕೂ ಹೆಚ್ಚು ಚಲನಚಿತ್ರ ಮತ್ತು ೨೦ಕ್ಕೂ ಹೆಚ್ಚು ಸಾಕ್ಷö್ಯಚಿತ್ರಗಳನ್ನು ನಿರ್ಮಿಸಿ, ಚಲನಚಿತ್ರ ಪ್ರಪಂಚದಲ್ಲಿ ತಮ್ಮದೇ ಆದ ಖ್ಯಾತಿಯನ್ನು ಹೊಂದಿದವರು. ಇಂದು ತಂತ್ರಜ್ಞಾನದ ಪರಿಣಾಮವಾಗಿ ಕ್ಯಾಮಾರ್ ಕ್ಷೇತ್ರದಲ್ಲಿ ಅಪ್ರತಿಮವಾದ ಬದಲಾವಣೆಗಳಾಗುತ್ತಿದ್ದರೂ, ಆ ಕಾಲ ಘಟ್ಟದಲ್ಲಿ ಮಹಾಜನ ಅವರು ನಿರ್ಮಿಸಿದ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಪರಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಇಲ್ಲಿ ವಿವರಿಸುತ್ತಾರೆ.

‘ರವಿ ಕಾಣದೇ ಇರುವುದು…’ ಎಂಬ ಸುದೀರ್ಘ ಲೇಖನ ಮಣಿಕೌಲ್ ಅವರನ್ನು ಕುರಿತು ಬರೆದ ಬರಹ. ಮಣಿಕೌಲ್ ಅವರು ಚಲನಚಿತ್ರದ ನಿರ್ದೇಶಕನೂ, ನಿರ್ಮಾಪಕನೂ ಆಗಿ ಜನಪ್ರಿಯರೆನಿಸಿದವರು. ಮಣಿಕೌಲ್ ಅವರು ಲೇಖಕ ಅರುಣ ಅವರಿಗೆ ಚಲನಚಿತ್ರದಲ್ಲಿ ನಟಿಸಲು ಮೊದಲ ಅವಕಾಶ ಮಾಡಿಕೊಟ್ಟವರು. ಆ ವಿವರಗಳನ್ನು ಲೇಖಕರು ತುಂಬ ಆಪ್ತವಾಗಿ ಇಲ್ಲಿ ಹೇಳಿಕೊಂಡಿದ್ದಾರೆ. ಮಣಿಕೌಲ್ ಅವರು ನಿರ್ದೇಶಿಸಿದ ಚಿತ್ರಕಥನ, ಅರೈವಲ್, ಸಿದ್ಧೇಶ್ವರಿ, ಹಜಾರ ರೇಖಾವೋಂಕಾ ಮರುಖಂಡ (ಸಾವಿರ ರೇಖೆಗಳ ಮರುಖಂಡ), ದ್ರುಪದ್, ಮಾತಿಮಾಣಸ್ (ಮಣ್ಣಿನ ಮನಸ್ಸು) ಮೊದಲ ಚಲನಚಿತ್ರಗಳನ್ನು ವಿಮರ್ಶಿಸುತ್ತಾ, ಇವುಗಳ ನಿರ್ಮಾಣದ ಹಿಂದೆ ಮಣಿಕೌಲ್ ಅವರ ಶ್ರಮ ಸಂಸ್ಕೃತಿಯನ್ನು ಆರಾಧಿಸುವ ಒಂದು ಸೂಕ್ಷ್ಮ ಮನೋಭಾವ ಲೇಖನದುದ್ದಕ್ಕೂ ಕಂಡು ಬರುತ್ತದೆ.

‘ರಾಯಲ್ ಟೈಗರ್ ಆಫ್ ಬೆಂಗಾಲ್ ಋತ್ವಿಕ ಘಟಕ’ ಎಂಬ ಕೃತಿಯ ಕೊನೆಯ ಲೇಖನ ಬಹಳ ಸುದೀರ್ಘವಾಗಿದೆ. ಅದಕ್ಕೆ ಕಾರಣ, ಲೇಖಕರು ಋತ್ವಿಕ ಘಟಕ ಅವರ ಪ್ರಿಯ ಶಿಷ್ಯರಾಗಿ ಅವರ ಪದತಲದಲ್ಲಿ ಕುಳಿತು ವಿದ್ಯೆ ಕಲಿತವರು. ಹೀಗಾಗಿ ಗುರುವಿನ ಬಗ್ಗೆ ಅವರಿಗೆ ವಿಶೇಷವಾದ ಒಲವು ಕಾರಣವಾಗಿ ಎಲ್ಲ ಲೇಖನಗಳಿಗಿಂತ ಇದು ವಿಸ್ತಾರವಾಗಿ ಮೂಡಿದೆ. ಕಲೆ-ಸಾಹಿತ್ಯದಲ್ಲಿ ಸವ್ಯಸಾಚಿ ವ್ಯಕ್ತಿತ್ವ ಹೊಂದಿದ್ದ ಋತ್ವಿಕ್ ಘಟಕ ಅವರು ನಮ್ಮ ದೇಶ ಕಂಡ ಅಪರೂಪದ ವಿದ್ವಾಂಸರೂ ಹೌದು. ಅವರಿಗೆ ಜಾಗತಿಕ ಮಟ್ಟದ ಸಾಹಿತ್ಯದ ಅರಿವಿತ್ತು. ಸಂಸ್ಕೃತ, ಬಂಗಾಲಿ ಇಂಗ್ಲಿಷ್ ಭಾಷೆಗಳ ಜೊತೆಗೆ ಗ್ರೀಕ್, ಫ್ರೆಂಚ್, ಜರ್ಮನ್, ರಶಿಯನ್ ಮೊದಲಾದ ಭಾಷೆಯ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಹೀಗಾಗಿ ಭಾರತೀಯ ಕಲೆಗೆ ಒಂದು ಅತ್ಯಪೂರ್ವವಾದ ಕಾಣಿಕೆಯನ್ನು ಅವರು ನೀಡಲು ಸಾಧ್ಯವಾಯಿತು. ಇಲ್ಲಿ ಅವರ ಜೀವನದ ಪರಿಚಯದೊಂದಿಗೆ ಬಂಗಾಲದ ಆ ಕಾಲಘಟ್ಟದ ವಾಸ್ತವ ಸ್ಥಿತಿಯನ್ನು ಲೇಖಕರು ಬಣ್ಣಿಸುವ ರೀತಿ ಆಪ್ಯಾಯಮಾನವಾಗಿದೆ. ೧೯೪೩ರ ಬರಗಾಲ, ಮಹಾಯುದ್ಧದ ಸಂದರ್ಭದಲ್ಲಿ ಬಂಗಾಲವು ಅನುಭವಿಸಿದ ಯಾತನೆ, ನಷ್ಟಗಳನ್ನು ಈ ಅನುಭವದ ಕಥನದೊಂದಿಗೆ ವಿವರಿಸಿದ ಪರಿ ರೋಚಕವಾಗಿದೆ. ಶೋಕದಿಂದ ಶ್ಲೋಕದವರೆಗೆ ಸಾಗಿ ಬಂದ ವಾಲ್ಮೀಕಿ ರಾಮಾಯಣವನ್ನು ಮುರಿದು ಕಟ್ಟಿದ ಋತ್ವಿಕ ಅವರ ಅದ್ವಯ ಪ್ರತಿಭೆಯ ವಿಲಾಸವನ್ನು ಲೇಖಕರು ವಿವರಿಸಿದ ರೀತಿ ಓದುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಅತಿಭವ್ಯ ಪ್ರಾಚೀನ ಪ್ರತಿಮೆಗಳ ಆಧುನಿಕ ರೂಪಗಳ ವಿನ್ಯಾಸದಲ್ಲಿ ಋತ್ವಿಕ ಅವರು ಸಾಧಿಸಿದ ಪ್ರಗತಿ, ತೋರಿದ ಅಸಾಧಾರಣ ಜಾಣ್ಮೆ ಸಿನಿಮಾ ಜಗತ್ತಿನಲ್ಲಿ ಅವಿಸ್ಮರಣೀಯ ಸಂಗತಿಗಳಾಗಿವೆ.

ಇಲ್ಲಿಯ ಹನ್ನೊಂದು ಜನ ಮಹನೀಯರು ಭಾರತೀಯ ಸಂಸ್ಕೃತಿ ನಿರ್ಮಾಣದಲ್ಲಿ ಯೋಗದಾನ ನೀಡಿದವರು. ಅವರಂತಹ ಮೇರು ಸದೃಶ್ಯ ವ್ಯಕ್ತಿಗಳ ಕುರಿತು ಅರುಣ ಅವರು ಬರೆದ ಇಲ್ಲಿಯ ಬರಹಗಳನ್ನು ಸೂಕ್ಷ್ಮ ಒಳನೋಟಗಳಿಂದ ವಿಶ್ಲೇಷಿಸುತ್ತ ಹೋದರೆ ಅದೇ ಒಂದು ಬೃಹತ್ ಲೇಖನವಾಗುತ್ತದೆ. ಈ ವಿಸ್ತಾರ ಭಯ ಕಾಡುವುದರಿಂದ ಮತ್ತು ಇಲ್ಲಿಯ ಕಲಾವಿವರಗಳನ್ನು ವಿವರಿಸುವ ಸಾಮರ್ಥ್ಯ ನನ್ನಂತಹ ಸಾಮಾನ್ಯನಿಗೆ ಅಸಾಧ್ಯವಾಗಿದೆ ಎಂದು ವಿನಮ್ರವಾಗಿ ಹೇಳಬಯಸುವೆ.

ಹೀಗೆ ಕೃತಿಯಲ್ಲಿ ಒಟ್ಟು ಹನ್ನೊಂದು ಜನ ವಿವಿಧ ಕ್ಷೇತ್ರಗಳ ಅಸಾಧಾರಣ ಪ್ರತಿಭಾವಂತರ ಯಶೋಗಾಥೆಗಳನ್ನು ಸಮಕಾಲೀನ ಸಂದರ್ಭದಲ್ಲಿ ತಾವು ಕಂಡಂತೆ ಲೇಖಕರು ನಿರೂಪಿಸಿದ್ದು ನಿಜಕ್ಕೂ ಔಚಿತ್ಯಪೂರ್ಣವಾಗಿದೆ. ತಮ್ಮ ಸಮಕಾಲೀನ ಆಗು ಹೋಗುಗಳ ನಡುವೆ, ಆಯಾ ಮಹನೀಯರು ತಮ್ಮ ಸಾಧನಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ರೀತಿಯೇ ಒಂದು ಗುಣಗೌರವದ ಪ್ರತೀಕವಾಗಿದೆ. ಅನುವಾದಕರಾದ ಪ್ರೊ. ಪೋಕಳೆ ಅವರು ಗುರುತಿಸಿದಂತೆ ಒಟ್ಟು ಈ ಕೃತಿಯಲ್ಲಿ ತತ್ವಚಿಂತನೆಯಿದೆ, ಅದರ ಹಿಂದೆ ದೇಶ-ದೇಶಗಳ, ವಿವಿಧ ಸಂಸ್ಕೃತಿ ಹಾಗೂ ಭಾಷೆಗಳ, ಸಾಹಿತ್ಯದ, ಕಲೆಯ ಮರ್ಮಗ್ರಾಹೀ ಅನುಭವವಿದೆ. ಪ್ರಾಸಂಗಿಕ ಹಾಸ್ಯವಿದೆ. ವಿಚಾರ ಗಾಂಭಿರ್ಯವಿದೆ. ತಲ್ಲೀನತೆಯಿದೆ. ಜಾಗೃತ ಹಾಗೂ ಸಂವೇದನಶೀಲ ಓದುಗರ ದೃಷ್ಟಿಕ್ಷೇತ್ರವನ್ನು ವಿಶಾಳ ಹಾಗೂ ಆಳವಾಗಿ ಬೇರೂರಿಸುವ ಸಾಮರ್ಥ್ಯವಿದೆ ಎಂಬುದು ಕೃತಿಯ ಒಟ್ಟು ನೋಟವನ್ನು ತಿಳಿಸುತ್ತದೆ.

ಮೂಲ ಮರಾಠಿ ಕೃತಿಯನ್ನು ನೋಡುವ ಅವಕಾಶವಿಲ್ಲದ ಕಾರಣ, ಮೂಲದೊಂದಿಗೆ ತೌಲನಿಕವಾಗಿ ಇದನ್ನು ನೋಡುವುದು ಸ್ವಲ್ಪ ಕಷ್ಟದ ಕೆಲಸವೇ. ಹೀಗಿದ್ದೂ ಕನ್ನಡದಲ್ಲಿಯೇ ಪ್ರೊ. ಪೋಕಳೆ ಅವರು ಮೂಲವನ್ನು ಮರೆಸುವಷ್ಟು ತಾದಾತ್ಮ್ಯ ಭಾವದಿಂದ ಅನುವಾದಿಸಿರುವುದು ಅವರ ಅಪಾರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕೆಲವು ಮೂಲ ಮರಾಠಿಯ ಪದಗಳನ್ನು ಕನ್ನಡದಲ್ಲಿ ಪರಿವರ್ತಿಸಿರುವುದು ಕನ್ನಡಕ್ಕೆ ಹೊಸ ಶಬ್ದಗಳನ್ನು ಕಾಣಿಕೆಯಾಗಿ ಕೊಟ್ಟಂತಾಗಿದೆ ಎಂದು ನಾನು ಭಾವಿಸಿದ್ದೇನೆ. ಕನ್ನಡದಲ್ಲಿ ಈವರೆಗೆ ‘ಸಲ್ಲಿಂಗಿ’ ಎಂಬ ಪದವನ್ನು ಬಳಸುತ್ತಿದ್ದರು. ಪೋಕಳೆ ಅವರು ಈ ಪದಕ್ಕೆ ಪರ್ಯಾಯವಾಗಿ ‘ಸಮಲಿಂಗಿ’ ಎಂಬ ಪದಬಳಿಸಿರುವುದು ಗಮನ ಸೆಳೆಯುತ್ತದೆ. ‘ಲೋಕಮಾನಸ’, ‘ವ್ಯವಚ್ಛೇದಕ’ ಮೊದಲಾದ ಪದಗಳು ಕನ್ನಡ ಓದುಗರಿಗೆ ಹೊಸ ಪದಗಳಾಗಿ ಬಂದಿರುವುದು ಗಮನಾರ್ಹ.

ಪ್ರೊ. ಪೋಕಳೆ ಅವರು ಮರಾಠಿ ಕೃತಿಯ ಶೀರ್ಷಿಕೆಗಳನ್ನು, ಮೂಲದಂತೆಯೇ ಕನ್ನಡಕ್ಕೆ ತರುವುದು ವಿಶೇಷವೆನಿಸಿದೆ. ಇಲ್ಲಿಯೂ ಮರಾಠಿ ಮೂಲದ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸದೆ, ಹಾಗೇ ಇಟ್ಟಿರುವುದು ಕೃತಿಯ ಮಹತ್ವವನ್ನು ತಿಳಿಸುವ ಪ್ರಯತ್ನವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯ ಕನ್ನಡ ಅವತರಣಿಕೆ ತಂದ ಪ್ರೊ. ಪೋಕಳೆ ಅವರ ಶ್ರಮ ಸಾರ್ಥಕವಾಗಿದೆ. ಈ ಬಗೆಯ ಪ್ರಯತ್ನಗಳು ಹೆಚ್ಚು ಹೆಚ್ಚಾದಷ್ಟು, ಕನ್ನಡ ಸಾಹಿತ್ಯ ಕ್ಷಿತಿಜವು ವಿಸ್ತಾರೋನ್ನತವಾಗಿ ಬೆಳಗುವುದರಲ್ಲಿ ಸಂದೇಹವಿಲ್ಲ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group