Homeಕವನವಚನಗಳು

ವಚನಗಳು


ಕೆಂಡದನುಭವ ಮೈಯ ಬೇಯಿಸಿತ್ತು
ಉಂಡನುಭವ ಉದರ ಹೊರೆಯಿತ್ತು
ಗಂಡನುಭವ ರಣದಿ ಜಯವ ತಂದಿತ್ತು
ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು
ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು
ಹಿತಮಿತದನುಭವ ಭವವ ಗೆಲಿಸಿತ್ತಯ್ಯ
ಸೊಗಲ ಸೋಮೇಶ್ವರ


ಸತ್ಯವಂತರೇ ನುಡಿಯಲಿ
ಎಡುವುತಿಹರಯ್ಯ
ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ
ವಿಚಾರಿಗಳೇ ವಾದದಿ
ಕುಯುಕ್ತಿಗಿಳಿದಿಹರಯ್ಯ
ದಾರಿತೋರ್ವ ಗುರುವೇ
ಬಟ್ಟೆಗೆಟ್ಟಿಹರಯ್ಯ
ಪಾಲಿಸಬೇಕಾದವರೇ
ನೇಮ ಮುರಿಯುತಿಹರಯ್ಯ
ಪೋಷಣೆ ಮಾಡಬೇಕಾದಾವರೇ
ಆಪೋಷಿಸುತಿಹರಯ್ಯ
ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ
ಇಂತ ತನು ಮನ ಧನಗೆಟ್ಟಿಹ
ಕಲಿಗಾಲದ ಕೆಸರಲಿ ಸಿಕ್ಕು ಹಲುಬಿ
ಭವವ ನೀಗಲು ಒದ್ದಾಡುತಿಹ ಬಡಜೀವವನೆಂತು ಪೊರೆವೆಯಯ್ಯ
ಸೊಗಲ ಸೋಮೇಶ್ವರ

ಕಣ್ಸೆಳೆವ ಸೌಂದರ್ಯ ಸೃಜಿಸಿದೆ
ಅನುಭವಿಸುವಲ್ಲಿ ಜಿಪುಣನಾಗಿಬಿಟ್ಟೆ
ಸುಗಂಧ ಪರಿಮಳವ ಪಸರಿಸಿದೆ
ಸುವಾಸಿಸುವಲ್ಲಿ ನಾಸಿಕಗೆಡಿಸಿಬಿಟ್ಟೆ
ಕರ್ಣಾನಂದಕೆ ಗಾನಸುಧೆ ಹರಿದಿದೆ
ಕೇಳಿ ಸುಖಿಸಿ ಕರುಬುವಂತಾಗಿಬಿಟ್ಟೆ
ಇಳೆಯ ಬೆಳೆಯಲಿ ಹಲರುಚಿಗಳ ಭರಿಸಿದೆ
ಚಪ್ಪರಿಸಿ ಭೋಗಿಸುವಲ್ಲಿ ಸ್ವಾದಗೆಡಿಸಿಬಿಟ್ಟೆ
ಒಳಿತು ವಚಿಸುವ ಭವದನುಭಾವ ಬಿತ್ತಿದ
ನುಡಿದು ನಡೆವಲ್ಲಿ ಮನವಗೆಡಿಸಿಬಿಟ್ಟೆ
ಇಂತಪ್ಪ ಜಗದ ಸುಖಕೆ ಹುಟ್ಟು ಪಡೆದು
ಅತಿಯಾಗದ ಮಿತಭೋಗದಿ ಯೋಗಿಸಿ
ಭವನೀಗುವ ನರನೇ ನಿಜ ಶರಣನಯ್ಯ
ಸೊಗಲ ಸೋಮೇಶ್ವರ

ನೀಲಾಂಬಿಕಾತನಯ”
*ಡಾ. ಗಜಾನಂದ ಸೊಗಲನ್ನವರ*
ಚಿಕ್ಕಬಾಗೇವಾಡಿ
9591308406

RELATED ARTICLES

Most Popular

error: Content is protected !!
Join WhatsApp Group