ಕವನ: ಸ್ಫೂರ್ತಿ ಚಿಲುಮೆ.!

Must Read

“ಇದು ಒಲವಿನೊಳಗಿನ ಚೈತನ್ಯದ ಕವಿತೆ. ಅನುರಾಗದೊಳಗಿನ ಅಂತಃಶಕ್ತಿಯ ಭಾವಗೀತೆ. ಸಾಧನೆಯ ಹಾದಿಗೆ ದೀಪ್ತಿಯಾಗುವ, ಸ್ಫೂರ್ತಿಯ ಚಿಲುಮೆಯೊಳಗಿನ ಜೀವಜಲವಾಗಿ, ನಿರಂತರವಾಗಿ ಮುನ್ನಡೆಸುವ ಪ್ರೇಮವೆಂಬ ಅನುಭೂತಿಯ ಮಧುರ ಸ್ವರಗಳ ಹೃದ್ಯಗೀತೆ. ಪ್ರಾಂಜಲ ಪ್ರೀತಿಯೆಂದರೆ ಹೀಗೆ. ಚಿರಂತನ ಚಿಮ್ಮುವ ಚಿಲುಮೆಯ ಹಾಗೆ. ಏನಂತೀರಾ..?”

– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಸ್ಫೂರ್ತಿ ಚಿಲುಮೆ.!

ಅನನ್ಯ ಕಾಂತಿಯ ನಿನ್ನೊಂದು
ನೋಟ ಸಾಕು ಗೆಳತಿ
ನಡೆವ ಹಾದಿ ಬೆಳಕಾಗಿಸಲು.!

ಅದಮ್ಯ ಸ್ಫೂರ್ತಿಯ ನಿನ್ನೊಂದು
ನಗೆ ಸಾಕು ಗೆಳತಿ
ಪ್ರತಿಕ್ಷಣ ತನುಮನ ಪುಳಕಿಸಲು.!

ಅಪಾರ ಶಕ್ತಿಯ ನಿನ್ನೊಂದು
ನುಡಿ ಸಾಕು ಗೆಳತಿ
ಹೆಜ್ಜೆಹೆಜ್ಜೆಗು ಹುರುಪು ತುಂಬಲು.!

ಅಪೂರ್ವ ಶೃತಿಯ ನಿನ್ನೊಂದು
ಸ್ವರ ಸಾಕು ಗೆಳತಿ
ನರನರ ಉತ್ಸಾಹದಿ ಪುಟಿದೇಳಲು.!

ಅಮಿತ ಶಾಂತಿಯ ನಿನ್ನೊಂದು
ಮೌನ ಸಾಕು ಗೆಳತಿ
ತಲ್ಲಣಗಳ ನೀಗಿ ನಿರಾಳವಾಗಿಸಲು.!

ಅಗಣಿತ ಛಾತಿಯ ನಿನ್ನೊಂದು
ಹಸ್ತಲಾಘವ ಸಾಕು ಗೆಳತಿ
ಸಾಧನೆಯ ಶೃಂಗ ಮೆಟ್ಟಿನಿಲ್ಲಲು.!

ಅಗಾಧ ಪ್ರೀತಿಯ ನಿನ್ನೊಂದು
ಒಲವು ಸಾಕು ಗೆಳತಿ
ಬಾಳ ಗುರಿಗಮ್ಯ ತಲುಪಿಸಲು.!

ಎ.ಎನ್.ರಮೇಶ್. ಗುಬ್ಬಿ.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group