ಸಿಂದಗಿ: ಬಣಜಿಗ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಯಾವಾಗಲೂ ನಮ್ಮ ಕುಟುಂಬದ ಬೆನ್ನುಲುಬಾಗಿ ನಿಂತಿದೆ ಎಂದರೆ ತಪ್ಪಾಗಲಾರದು ಎಂದು ನೂತನ ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತಂದೆಯವರು ಶಾಸಕರಾಗಿ, ಸಚಿವರಾಗಲೂ ಜನರು ಪ್ರೀತಿ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಪ್ರಸ್ತುತವೂ ನನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಕನಸನ್ನು ಹೊಂದಿದ್ದೇನೆ ಎಂದರು.
ಡಾ.ಎಂ.ಎಂ.ಪಡಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಲದ ವೃತ್ತಿ ಆಧಾರಿತ ಕಾಯಕಪ್ರಿಯತೆಯ ಜತೆಗೆ ವಿವಿಧ ಸಮಾಜಗಳಿಗೆ ತನು-ಮನದ ದಾಸೋಹ ಮಾಡಿದ ಇತಿಹಾಸ ಹೊಂದಿರುವ ಬಣಜಿಗರ ಪ್ರಾಚೀನತೆ ಹಿರಿದು ಎಂದರು.
ಈ ಹಿಂದೆ ಪುರಸಭೆಯಲ್ಲಿ ಬಸವೇಶ್ವರ ವೃತ್ತದಿಂದ ಚಿಕ್ಕಸಿಂದಗಿ ಬೈಪಾಸ್ ರಸ್ತೆಗೆ ಡಾ.ಎಂ.ಎಂ.ಕಲಬುರ್ಗಿ ಅವರ ಹೆಸರಿಡಲಾಗಿದೆ. ಅಲ್ಲದೇ ಆನಂದ ಚಿತ್ರ ಮಂದಿರ ರಸ್ತೆಗೆ ಡಾ. ಬಮ್ಮಣ್ಣಿ ಅವರ ಹೆಸರಿಡಲಾಗಿತ್ತು, ಆ ರಸ್ತೆಗಳ ನಾಮಕರಣ ಫಲಕಗಳ ಅಳವಡಿಕೆ ಮತ್ತು ಶಾಂತವೀರ ಪಟ್ಟಾಧ್ಯಕ್ಷರ ಉದ್ಯಾನವನ ಹಾಗೂ ಹಂದಿಗನೂರ ಸಿದ್ರಾಮಪ್ಪ ರಂಗ ಮಂದಿರ ಕಾರ್ಯಗಳ ಕುರಿತು ಖುದ್ದು ಕಾಳಜಿಯಿಂದ ಚಾಲನೆಗೆ ತರಬೇಕು ಎಂದು ಶಾಸಕರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಡಾ.ಅರವಿಂದ ಮನಗೂಳಿ, ಜಿಲ್ಲಾ ಕಾಂಗ್ರೆಸ್ ಮುಖಂಡೆ ಮಹಾನಂದ ಬಮ್ಮಣ್ಣಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಈ ವೇಳೆ ಶಾಸಕರ ಪತ್ನಿ ನಾಗರತ್ನ ಮನಗೂಳಿ, ಸಮಾಜದ ತಾಲೂಕಾಧ್ಯಕ್ಷ ಮುತ್ತು ಮುಂಡೇವಾಡಗಿ, ಸೋಮನಗೌಡ ಬಿರಾದಾರ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ವಾರದ, ಶಾಂತೂ ರಾಣಾಗೋಳ, ಶಿವಪ್ಪ ಗೌಸಾನಿ, ಚಂದ್ರಕಾಂತ ಬಮ್ಮಣ್ಣಿ, ರವಿ ನಾಗೂರ್, ಚಂದ್ರಶೇಖರ ಮಣೂರ, ಸಿದ್ದಲಿಂಗಪ್ಪ ವಡ್ಡೋಡಗಿ, ಚನ್ನಪ್ಪ ಗೋಣಿ, ಕಿರಣ ಕೋರಿ, ಮುತ್ತು ಪಟ್ಟಣಶೆಟ್ಟಿ, ಸಿದ್ದಲಿಂಗ ಕಿಣಗಿ, ಸತೀಶ ಕೌಲಗಿ, ಮಹಾಂತೇಶ ನೂಲಾನವರ, ಪ್ರದೀಪ ಕತ್ತಿ, ಮಳೆಂದ್ರ ಕತ್ತಿ, ಕುಮಾರ ಕಿಣಗಿ, ಚನ್ನಪ್ಪ ಗೋಣಿ, ಪ್ರಕಾಶ ಗುಣಾರಿ ಸೇರಿದಂತೆ ತಾಲೂಕು ಘಟಕದ ಪದಾಧಿಕಾರಿಗಳು, ಗಣ್ಯ ವರ್ತಕರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.