ಸಿಂದಗಿ: ಸರ್ಕಾರ ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಉತ್ತಮ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣವೇ ಬದುಕಿನ ಭದ್ರ ಬುನಾದಿ ಆಗಿರುವುದರಿಂದ ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ವಸತಿ, ಯೋಗ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ. ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಅನುದಾನ ಕೊರತೆ ಇದ್ದಲ್ಲಿ ಕೂಡಲೇ ಸಂಪರ್ಕಿಸಿ. ಆಗಾಗ ಮಕ್ಕಳ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವ ಕಾರ್ಯವಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ, ಅಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿ, ಇಲ್ಲಿರುವ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಶಿಕ್ಷಣ ಮತ್ತು ಆರೋಗ್ಯದ ಕಾಳಜಿಯನ್ನು ಮಾಡಬೇಕು ಎಂದು ವಸತಿ ನಿಲಯದ ಮೇಲ್ವಿಚಾರಕ ಸತೀಶ್ ರೆಡ್ಡಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕ ಸತೀಶ್ ರೆಡ್ಡಿ ಮಾತನಾಡಿ, ಈ ವಸತಿ ನಿಲಯವು ಒಟ್ಟು 75 ವಿದ್ಯಾರ್ಥಿಗಳ ಸಂಖ್ಯೆಯನ್ನು ಒಳಗೊಂಡಿದೆ. ಪ್ರಸ್ತುತ 52 ವಿದ್ಯಾರ್ಥಿಗಳು ಈ ನಿಲಯದಲ್ಲಿದ್ದು ಮುಂದಿನ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಮಾಡಲಾಗುವುದು. ಪ್ರಸ್ತುತ ಈಗ 50 ಬೆಡ್ಡುಗಳು ಪೂರೈಕೆ ಆಗಿವೆ ಬಾಕಿ ಉಳಿದ 25 ಬೆಡ್ಡುಗಳ ಕೊರತೆ ಇದೆ ಮತ್ತು ಸಿಬ್ಬಂದಿಗಳ ಕೊರತೆ ಯಾವುದು ಇಲ್ಲ ಆದರೆ ಸಣ್ಣಪುಟ್ಟ ಮೂಲಭೂತ ಸೌಕರ್ಯದ ಕೊರತೆ ಇದೆ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ವೇಳೆ ವಸತಿ ನಿಲಯದ ಸಿಬ್ಬಂದಿಗಳು ಹಾಜರಿದ್ದರು.