Homeಕವನಕವನ : ಚಿಂಚಣಿಯ ಚಿಜ್ಯೋತಿ

ಕವನ : ಚಿಂಚಣಿಯ ಚಿಜ್ಯೋತಿ

ಚಿಂಚಣಿಯ ಚಿಜ್ಯೋತಿ

ಗದುಗಿನ ಗುರುಗಳ
ಪಡಿನೆರಳಾಗಿ
ಕನ್ನಡ -ಕನ್ನಡಿಗ-ಕರ್ನಾಟಕ
ಕೈಂಕರ್ಯಕ್ಕೆ ಕಟಿಬದ್ಧರಾಗಿ
ಸಮಾಜ ಸೇವಾ ದೀಕ್ಷೆಗೆ
ಕಂಕಣಬದ್ಧರಾದ
ತಾವು-
ಎರಡೂವರೆ ದಶಕಗಳ ಕಾಲ
ಗಡಿನಾಡಿನ ಗಡಿಗೆಯಲ್ಲಿ
ಕನ್ನಡದ ಅಡುಗೆ ಮಾಡಿ
ಪ್ರೀತಿಯಿಂದ ಉಣಬಡಿಸಿ
ಕನ್ನಡಿಗರಂತರಂಗದಲಿ
ಅಂತಃಕರಣದ
ಭಾಗವಾದಿರಿ.

ನಡೆಯೊಳಗೆ ನುಡಿ
ನುಡಿಯೊಳಗೆ ನಡೆ
ಈ ಉಭಯಗಳಲಿ
ಕನ್ನಡವನೆ ತುಂಬಿ
ಗಡಿಯ ಅಡಿಅಡಿಗಳಲಿ
ಕನ್ನಡ ಡಿಂಡಿಮವ
ಮೊಳಗಿಸುತ
ಅನ್ನ ಭಾಷಿಕರೆದೆಗಳಲಿ
ಕನ್ನಡವ ಬಿತ್ತಿ ಬೆಳೆದು
ಸಂಭ್ರಮಿಸಿದ
ತಾವು
ಚಿಂಚಣಿಯ ಚಿಜ್ಯೋತಿಯಾಗಿ
ಕನ್ನಡಿಗರ ಕಣ್ಮಣಿಯಾಗಿ
ಕಂಗೊಳಿಸಿದಿರಿ.

‘ಬಸವ ಕನ್ನಡ ‘ವೆಂಬ
ಷಡಕ್ಷರಿ ಮಂತ್ರವನು
ಜಪಿಸುತ್ತ, ಅವುಗಳನೆ
ಶ್ರೀ ಮಠದ
ಕಾಯಕವಾಗಿರಿಸಿಕೊಂಡ
ತಾವು
ಕನ್ನಡ ಮಠದ
ಕನ್ನಡದ ಸ್ವಾಮೀಜಿಯಾಗಿ
ಕನ್ನಡ ಸಾರಸ್ವತ
ಲೋಕದಲಿ
ಕನ್ನಡ ಸುವರ್ಣ
ಪುಷ್ಪಗಳನ್ನರಳಿಸಿ
ಧ್ರುವತಾರೆಯಂದದಿ
ಮಿನುಗುತಿರುವಿರಿ.

ಶ್ರೀಪಾದ ಕುಂಬಾರ, ಚಿಕ್ಕೋಡಿ.

RELATED ARTICLES

Most Popular

error: Content is protected !!
Join WhatsApp Group